
ಚಿಕ್ಕಮಗಳೂರು (ಮಾರ್ಚ್.18): ಜಿಲ್ಲೆಯಲ್ಲಿ ಬಿಜೆಪಿ (BJP) ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು, ಮುಸ್ಲಿಂ ಘಟನೆಯ ಸದಸ್ಯರು ಸೇರಿ ಒಟ್ಟು 15 ಜನರಿಗೆ ಗಡಿಪಾರು ನೋಟಿಸ್ (externment Notice) ನೀಡಲಾಗಿದೆ. ಚಿಕ್ಕಮಗಳೂರು (Chikkamagaluru) ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ , ಬಜರಂಗದಳ ಹಾಸನ ವಿಭಾಗದ ಸಹ ಸಂಯೋಜಕ ಶ್ಯಾಮ್ ವಿ ಗೌಡ, ಮುಸ್ಲಿಂ ಸಂಘಟನೆಯ ನಾಲ್ವರು ಸೇರಿದಂತೆ 15 ಜನರಿಗೆ ಪೊಲೀಸ್ ಕಾಯ್ದೆ1963 ಕಲಂ 58ರ ಅಡಿಯಲ್ಲಿ ಜಿಲ್ಲಾಡಳಿತದಿಂದ ಗಡಿಪಾರು ನೋಟಿಸ್ ಜಾರಿ ಮಾಡಲಾಗಿದ್ದು, ಈ ಸಂಬಂಧ ವಿಚಾರಣೆಗೆ ಬರುವಂತೆ ಹಾಜರಾಗುವಂತೆ ಸೂಚಿಸಲಾಗಿದೆ.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಅವರ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 14 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಇಲಾಖೆ ತನ್ನ ಶಿಫಾರಸ್ಸು ಪತ್ರದಲ್ಲಿ ಉಲ್ಲೇಖಿಸಿದೆ. ಈ ಪ್ರಕರಣಗಳನ್ನು ಆಧಾರವಾಗಿಟ್ಟುಕೊಂಡು ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಇವರನ್ನು ಜಿಲ್ಲೆಯಿಂದ ಹೊರಹಾಕುವಂತೆ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅದರಂತೆ ಇದೀಗ ನೋಟಿಸ್ ನೀಡಲಾಗಿದೆ.
ಮುಸ್ಲಿಂ ಸಮುದಾಯದ 10 ಜನ ಹಾಗೂ ಹಿಂದೂ ಧರ್ಮದ 05 ಒಟ್ಟು 15 ಜನರಿಗೆ ನೋಟಿಸ್ ನೀಡಲಾಗಿದೆ. ಪೊಲೀಸ್ ಇಲಾಖೆ ನೀಡಿರುವ ಪಟ್ಟಿಯಲ್ಲಿ ಪ್ರಮುಖವಾಗಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಹಾಗೂ ಭಜರಂಗದಳದ ಹಾಸನ ವಿಭಾಗದ ಸಂಯೋಜಕ ಶ್ಯಾಮ್ ವಿ ಗೌಡ ಅವರ ಹೆಸರುಗಳಿವೆ. ನೂರ್ ಅಹಮದ್, ಫಾರೂಕ್,ಇಬ್ರಾಹಿಂ ಅಲಿಯಾಸ್ ಇಬ್ಬು, ಇಮ್ರಾನ್,ಚಾoದ್ ಪಾಷಾ, ಜೋಹಾರ್ ಅಂಜುಮ್, ಮೊಹಮ್ಮದ್ ಇದ್ರಿಶ್, ಫಾಜಿಲ್ ಅಹಮದ್, ಜಾವೀದ್ ಖುರೇಶಿ, ಮೊಹಮ್ಮದ್ ಫಾಜಿಲ್, ಮೂಡಿಗೆರೆ ಕೌಶಿಕ್.
ವಿವಿಧ ಕೋಮು ಸಂಘರ್ಷ ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ನಾಲ್ವರು ಮುಸ್ಲಿಂ ಮುಖಂಡರ ಹೆಸರನ್ನೂ ಶಿಫಾರಸ್ಸು ಮಾಡಲಾಗಿದೆ. ಜೋಹರ್, ಚಾಂದ್, ಇಬ್ರಾಹಿಂ ಹಾಗೂ ಇಮ್ರಾನ್ ಎಂಬುವವರಿಗೂ ಗಡಿಪಾರು ಭೀತಿ ಎದುರಾಗಿದೆ.
ಪೊಲೀಸ್ ಇಲಾಖೆಯ ಶಿಫಾರಸ್ಸನ್ನು ಸ್ವೀಕರಿಸಿರುವ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿಗಳು (AC) ವಿಚಾರಣೆ ನಡೆಸಲಿದ್ದಾರೆ. ಈ ವಿಚಾರಣೆಯ ವೇಳೆ ಆರೋಪಿಗಳು ಅಥವಾ ಅವರ ಪರ ವಕೀಲರು ತಮ್ಮ ವಾದ ಮಂಡಿಸಲು ಅವಕಾಶವಿರುತ್ತದೆ. ವಿಚಾರಣೆಯ ನಂತರ, ಜಿಲ್ಲೆಯಲ್ಲಿ ಇವರಿಂದ ಶಾಂತಿಗೆ ಭಂಗ ಉಂಟಾಗುತ್ತದೆಯೇ ಎಂಬುದನ್ನು ಪರಿಶೀಲಿಸಿ, ಎಸಿ ಅವರು ಗಡಿಪಾರು ಮಾಡುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
Published On - 5:06 pm, Wed, 18 March 26