ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಕಾಫಿ ತೋಟದ ಕಾರ್ಮಿಕ ಸಾವು!

ಚಿಕ್ಕಮಗಳೂರಿನ ಹುಣಸೆಹಳ್ಳಿ ಕಾಫಿ ತೋಟದಲ್ಲಿ ಕಾಡಾನೆ ದಾಳಿಯಿಂದ 50 ವರ್ಷದ ಕಾರ್ಮಿಕ ಯಲ್ಲಪ್ಪ ಮೃತಪಟ್ಟಿದ್ದಾರೆ. ಬಾಳೆಹೊನ್ನೂರು ಅರಣ್ಯ ವಿಭಾಗದಲ್ಲಿ ಒಂದು ವಾರದಿಂದ ಓಡಾಡುತ್ತಿದ್ದ ಆನೆ ಈ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಕಳೆದ 5 ವರ್ಷಗಳಲ್ಲಿ ಕರ್ನಾಟಕದಲ್ಲಿ ಸುಮಾರು 170 ಜನರು ಆನೆ ದಾಳಿಗೆ ಬಲಿಯಾಗಿದ್ದು, ಮಾನವ-ವನ್ಯಜೀವಿ ಸಂಘರ್ಷ ತೀವ್ರಗೊಂಡಿದೆ. ಇದು ಕಾರ್ಮಿಕರಲ್ಲಿ ಆತಂಕ ಮೂಡಿಸಿದೆ.

ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಕಾಫಿ ತೋಟದ ಕಾರ್ಮಿಕ ಸಾವು!
ಸಾಂದರ್ಭಿಕ ಚಿತ್ರ
Edited By:

Updated on: Feb 17, 2026 | 6:35 AM

ಚಿಕ್ಕಮಗಳೂರು, ಫೆಬ್ರವರಿ 16: ಚಿಕ್ಕಮಗಳೂರು ತಾಲ್ಲೂಕಿನ ಹುಣಸೆಹಳ್ಳಿ ಗ್ರಾಮದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ 50 ವರ್ಷದ ಕಾರ್ಮಿಕ ಯಲ್ಲಪ್ಪ ಆನೆ ದಾಳಿಗೆ (elephant attack) ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ತಿರುವಳ್ಳಿ ಗ್ರಾಮದ ನಿವಾಸಿ ಯಲ್ಲಪ್ಪ, ನಾಗೇಶ್ ಗೌಡ ಅವರ ತೋಟದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಕಾಡಾನೆ ದಾಳಿ ನಡೆಸಿದೆ.

ಬಾಳೆಹೊನ್ನೂರು ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಸುತ್ತಾಡುತ್ತಿದ್ದ ಕಾಡಾನೆ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕನ ಮೇಲೆ ದಾಳಿ ಮಾಡಿತ್ತು.ಈ ವೇಳೆ ಸ್ಥಳದಲ್ಲೇ ಯಲ್ಲಪ್ಪ ಮೃತಪಟ್ಟಿದ್ದು, ಪ್ರಾಥಮಿಕ ಪರಿಶೀಲನೆ ಮತ್ತು ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳ ಪರಿಶೀಲನೆಯ ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಘಟನೆ ನಂತರ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಕಾಡಾನೆ ಸಂಚಾರವನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದೆ.

ಇದನ್ನೂ ಓದಿ ಕರ್ನಾಟಕದ ಈ ನಾಲ್ಕು ಜಿಲ್ಲೆಗಳಲ್ಲಿ ಅತಿ ಹೆಚ್ಚು ಜನ ಸಾಯುವುದೇ ಕಾಡು ಪ್ರಾಣಿ ದಾಳಿಯಿಂದ!

ಎಲ್ಲೆಲ್ಲಿ ಕಾಡಾನೆ ದಾಳಿಯಿಂದ ಸಾವು ನೋವು?

  • ಹನುಮಂತ, ಹಾಸನ ಸಮೀಪದ ರಾಮನಾಥಪುರದಲ್ಲಿ ಖಾಸಗಿ ಕಾಫಿ ತೋಟದಲ್ಲಿ ಆನೆ ದಾಳಿಗೆ ಬಲಿಯಾಗಿ ಮೃತಪಟ್ಟರು. ಎದೆ ಮತ್ತು ಹೊಟ್ಟೆಯ ಮೇಲೆ ತೀವ್ರ ಗಾಯಗಳಾಗಿದ್ದು, ನವೆಂಬರ್ 11, 2025 ರಂದು ಘಟನೆ ನಡೆದಿದೆ.
  • ಆಗಸ್ಟ್ 12, 2025 ರಂದು ನಂಜನಗೂಡು ಮೂಲದ ಬಸವರಾಜು ಬಂಡೀಪುರ ರಸ್ತೆಯಲ್ಲಿ ಕಾಡಾನೆ ಜತೆ ಸೆಲ್ಫಿ ತೆಗೆಯಲು ಹೋಗಿ ದಾಳಿಗೆ ಒಳಗಾದರು. ಅರಣ್ಯ ಇಲಾಖೆ ನಂತರ ಪತ್ತೆ ಮಾಡಿ 25 ಸಾವಿರ ರೂ. ದಂಡ ವಿಧಿಸಿದೆ.
  • ರೈತ ಮಹೇಶ್, ಜಮೀನಿನಲ್ಲಿ ಕಾವಲು ಕಾಯುತ್ತಿದ್ದಾಗ 9 ಕಾಡಾನೆಗಳ ಹಿಂಡು ದಾಳಿಗೆ ಬಲಿಯಾಗಿದ್ದರು. ಈ ಹಿನ್ನೆಲೆ  ಫೆಬ್ರವರಿ 8, 2026 ರಂದು ಚಾಮರಾಜನಗರದ ಗ್ರಾಮಸ್ಥರಿಂದ ರಸ್ತೆ ತಡೆ ಪ್ರತಿಭಟನೆ ನಡೆದಿತ್ತು.
  • ತಮಿಳುನಾಡಿನ ಮಾಕಪಾಳ್ಯ ನಿವಾಸಿ ಶಿವಮೂರ್ತಿ, ಹನೂರು ತಾಲ್ಲೂಕಿನ ಜಲ್ಲಿಪಾಳ್ಯ ಸಮೀಪ ಕಾಡಾನೆ ದಾಳಿಗೆ ಬಲಿಯಾಗಿದ್ದು ಸ್ಥಳದಲ್ಲೇ ಸಾವನ್ನಪ್ಪಿದರು.
  • ಜನವರಿ 13ರಂದು ಮೋಗಲಿ ಗ್ರಾಮದಲ್ಲಿ ಕಾರ್ಮಿಕ ಮಹಿಳೆ ಶೋಭಾ (40) ಕಾಫಿ ತೋಟದಲ್ಲಿ ದುರ್ಘಟನೆಗೆ ಬಲಿಯಾಗಿದ್ದಾರೆ. ಪುತ್ರಿಯರಾದ ಶೋಭ ಮತ್ತು ರಾಗಿಣಿ ಜೊತೆ ಕೆಲಸಕ್ಕೆ ತೆರಳಿದ್ದರು.
  • ಡಿಸೆಂಬರ್ 14 ರಂದು ದುನ್ನಸಂದ್ರದಲ್ಲಿ ರೈತ ದುಂಡಮಾದ (50), ಬೆಳಗಿನ ಜಾವ ಜಮೀನಿಗೆ ನೀರು ಹಾಯಿಸಲು ಹೋಗಿ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.
  • ಚಿಕ್ಕಮಗಳೂರಿನ ಕೆರೆಕಟ್ಟೆ ಗ್ರಾಮದಲ್ಲಿ ಆನೆ ತುಳಿತದ ವೇಳೆ ವಸಂತ್ (36) ಮತ್ತು ಮತ್ತೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ ಚಾಮರಾಜನಗರ: 9 ಕಾಡಾನೆಗಳ ಹಿಂಡು ದಾಳಿಗೆ ರೈತ ಬಲಿ; ರೊಚ್ಚಿಗೆದ್ದ ಗ್ರಾಮಸ್ಥರಿಂದ ಪ್ರತಿಭಟನೆ

ಕಳೆದ ನಾಲ್ಕು ವರ್ಷಗಳಲ್ಲಿ ಮೈಸೂರು, ಚಾಮರಾಜನಗರ, ಕೊಡಗು ಮತ್ತು ಹಾಸನಗಳ ಜಿಲ್ಲೆಗಳಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ಸುಮಾರು 60% ರಷ್ಟು ಸಾವುಗಳು ಮಾನವ-ವನ್ಯಜೀವಿ ಸಂಘರ್ಷಣೆಯಿಂದಲೇ ಸಂಭವಿಸಿವೆ ಎಂದು ಹೇಳಲಾಗಿದೆ. ಕಳೆದ 5 ವರ್ಷಗಳಲ್ಲಿ ಕರ್ನಾಟಕದಲ್ಲಿ ಸುಮಾರು 170 ಜನರು ಆನೆ ದಾಳಿಯಿಂದ ಮೃತಪಟ್ಟಿದ್ದಾರೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:40 pm, Mon, 16 February 26

Follow Us