ಚಿಕ್ಕಮಗಳೂರು: ಗೇರಮರಡಿ ಗ್ರಾಮದಲ್ಲಿ ದಲಿತರ ಪ್ರತಿಭಟನೆ ತೀವ್ರ, ಉದ್ವಿಗ್ನ ಪರಿಸ್ಥಿತಿ

| Updated By: ಗಣಪತಿ ಶರ್ಮ

Updated on: Jan 02, 2024 | 2:14 PM

ದಲಿತ ಯುವಕರ ಪ್ರತಿಭಟನೆ ತೀವ್ರಗೊಂಡಿರುವುದರಿಂದ ಹಳ್ಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ತಹಶೀಲ್ದಾರ್, ಪಿ.ಎಸ್.ಐ. ದಲಿತ ಮುನ್ನೆಚ್ಚರಿಕಾ ಕ್ರಮಗಳ ನೇತೃತ್ವ ವಹಿಸಿಕೊಂಡಿದ್ದಾರೆ.

ಚಿಕ್ಕಮಗಳೂರು: ಗೇರಮರಡಿ ಗ್ರಾಮದಲ್ಲಿ ದಲಿತರ ಪ್ರತಿಭಟನೆ ತೀವ್ರ, ಉದ್ವಿಗ್ನ ಪರಿಸ್ಥಿತಿ
ಗೇರಮರಡಿ ಗ್ರಾಮದಲ್ಲಿ ದಲಿತರ ಪ್ರತಿಭಟನೆ ತೀವ್ರ, ಉದ್ವಿಗ್ನ ಪರಿಸ್ಥಿತಿ
Follow us on

ಚಿಕ್ಕಮಗಳೂರು, ಜನವರಿ 2: ಚಿಕ್ಕಮಗಳೂರು (Chikkamagaluru) ಜಿಲ್ಲೆ ತರೀಕೆರೆ ತಾಲೂಕಿನ ಗೇರಮರಡಿ ಗ್ರಾಮದ ಗೊಲ್ಲರ ಬೀದಿಯಲ್ಲಿ ಹೊಸ ವರ್ಷದಂದು ದಲಿತ ಯುವಕನ (Dalit Youth) ಮೇಲೆ ಹಲ್ಲೆ ನಡೆದಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಭಟನೆ ತೀವ್ರಗೊಂಡಿದೆ. ಇದೇ ವೇಳೆ ದೇವಸ್ಥಾನಕ್ಕೆ ನುಗ್ಗಲು ದಲಿತ ಯುವಕರ ಯತ್ನಿಸಿ ಕೆಲ ಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು.

ದಲಿತ ಸಂಘಟನೆ ಕಾರ್ಯಕರ್ತರು ಊರಿನ ತುಂಬಾ ಮೆರವಣಿಗೆ ನಡೆಸಿದರು. ಗೊಲ್ಲರಹಟ್ಟಿ ತುಂಬಾ ಓಡಾಡಿದ ದಲಿತ ಯುವಕರು ಬಳಿಕ ದೇವಸ್ಥಾನಕ್ಕೆ ಹೋಗಲೇಬೇಕು ಎಂದು ದಲಿತ ಯುವಕರು ಪಟ್ಟು ಹಿಡಿದಿದ್ದಲ್ಲದೆ, ಒಳ ಪ್ರವೇಶಿಸಲು ಮುಂದಾದರು. ಆದರೆ, ದೇವಸ್ಥಾನ ಪ್ರವೇಶಕ್ಕೆ ದಲಿತರಿಂದಲೇ ವಿರೋಧ ವ್ಯಕ್ತವಾಯಿತು. ಬಾಗಿಲು ಹಾಕಿದೆ ಬೇಡ, ಇನ್ನೊಮ್ಮೆ ಬರೋಣ ಎಂದು ಕೆಲವರು ಮನವಿ ಮಾಡಿದರು. ಆದಾಗ್ಯೂ ಕೆಲ ದಲಿತ ಯುವಕರು ದೇವಸ್ಥಾನಕ್ಕೆ ಹೋಗಲೇ ಬೇಕು ಅಂತ ಪಟ್ಟು ಹಿಡಿದರು. ಬಳಿಕ ತಹಶೀಲ್ದಾರ್, ಪೊಲೀಸರ ಮಧ್ಯ ಪ್ರವೇಶದಿಂದ ವಾತಾವರಣ ತಿಳಿಯಾಯಿತು.

ದಲಿತ ಯುವಕರ ಪ್ರತಿಭಟನೆ ತೀವ್ರಗೊಂಡಿರುವುದರಿಂದ ಹಳ್ಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ತಹಶೀಲ್ದಾರ್, ಪಿ.ಎಸ್.ಐ. ದಲಿತ ಮುನ್ನೆಚ್ಚರಿಕಾ ಕ್ರಮಗಳ ನೇತೃತ್ವ ವಹಿಸಿಕೊಂಡಿದ್ದಾರೆ.

ಊರೊಳಗೆ ಬಂದಿದ್ದಕ್ಕೆ ದಲಿತ ಯುವಕನ ಮೇಲೆ ಗೊಲ್ಲರಹಟ್ಟಿ ಜನ ಹಲ್ಲೆ ಮಾಡಿದ್ದರು. ದೇವರಿಗೆ ಮೈಲಿಗೆ ಆಗಿದೆ‌ ಎಂದು ಹಲ್ಲೆಗೈದಿದ್ದರು. ಇದರಿಂದ ದಲಿತ ಯುವಕರ ಆಕ್ರೋಶ ಕಟ್ಟೆ ಒಡೆದಿದೆ.

ಇದನ್ನೂ ಓದಿ: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ, ಗೊಲ್ಲರ ಬೀದಿಗೆ ಕೆಲಸಕ್ಕೆ ಬಂದ ದಲಿತ ಯುವಕನ ಮೇಲೆ ಹಲ್ಲೆ

ಗೇರಮರಡಿ ಗ್ರಾಮದ ಗೊಲ್ಲರ ಬೀದಿಯಲ್ಲಿ ನಡೆದಿದ್ದೇನು?

ದಲಿತ ಯುವಕ ಮಾರುತಿ ಗೊಲ್ಲರ ಬೀದಿಗೆ ಜೆಸಿಬಿ ಜೊತೆ ಕೆಲಸಕ್ಕೆ ಬಂದಿದ್ದ. ಮಾರುತಿ ದಲಿತ ಯುವಕ ಎಂದು ತಿಳಿಯುತ್ತಿದ್ದಂತೆ ಗೊಲ್ಲರ ಬೀದಿ ನಿವಾಸಿಗಳು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಯುವಕನಿಗೆ ತರೀಕೆರೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ