ಮಳೆ ನಿಂತರೂ ನಿಲ್ಲದ ಗುಡ್ಡ ಕುಸಿತ, ಶೃಂಗೇರಿ ಶಾರದಾ ದೇಗುಲ ಸುತ್ತಮುತ್ತ ನಿಷೇಧಾಜ್ಞೆ ಜಾರಿ

| Updated By: ರಮೇಶ್ ಬಿ. ಜವಳಗೇರಾ

Updated on: Aug 04, 2024 | 11:44 AM

ಕಳೆದೊಂದು ತಿಂಗಳಿನಿಂದ ಸುರಿಯುತ್ತಿರುವ ಮಳೆ ಇದೀಗ ಕೊಂಚ ಬಿಡುವು ಕೊಟ್ಟಿದೆ. ಆದ್ರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಗುಡ್ಡ ಕುಸಿತ ನಿಲ್ಲುತ್ತಿಲ್ಲ. ಮೊನ್ನೆ ಅಷ್ಟೇ ಶಿರಾಢಿ ಘಾಟ್ ಹಾಗೂ ಚಾರ್ಮಾಡಿ ಘಾಟಿನಲ್ಲಿ ಗುಡ್ಡ ಕುಸಿತವಾಗಿತ್ತು. ಇದೀಗ ಶೃಂಗೇರಿ ಭಾಗದಲ್ಲೂ ಭಾರೀ ಗುಡ್ಡ ಕುಸಿತವಾಗಿದೆ. ಅಲ್ಲದೇ ಶೃಂಗೇರಿ ಶಾರದಾ ದೇಗುಲ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಮಳೆ ನಿಂತರೂ ನಿಲ್ಲದ ಗುಡ್ಡ ಕುಸಿತ, ಶೃಂಗೇರಿ ಶಾರದಾ ದೇಗುಲ ಸುತ್ತಮುತ್ತ ನಿಷೇಧಾಜ್ಞೆ ಜಾರಿ
Follow us on

ಚಿಕ್ಕಮಗಳೂರು, (ಆಗಸ್ಟ್​ 04): ಚಿಕ್ಕಮಗಳೂರು ಜಿಲ್ಲೆಯಲ್ಲಿ ಗುಡ್ಡ ಕುಸಿತ ನಿಲ್ಲುತ್ತಿಲ್ಲ. ಮೊನ್ನೆ ಅಷ್ಟೇ ಶಿರಾಢಿ ಘಾಟ್ ಹಾಗೂ ಚಾರ್ಮಾಡಿ ಘಾಟಿನಲ್ಲಿ ಗುಡ್ಡ ಕುಸಿತವಾಗಿತ್ತು. ಇದೀಗ ಶೃಂಗೇರಿ ಭಾಗದಲ್ಲೂ ಭಾರೀ ಗುಡ್ಡ ಕುಸಿತವಾಗಿದೆ. ಶೃಂಗೇರಿ ಪಟ್ಟಣದ ಹೃದಯ ಭಾಗದಲ್ಲಿರುವ ಗೋರಿ ಗುಡ್ಡ ಕುಸಿತವಾಗಿದೆ. ಗುಡ್ಡದ ಮೇಲಿರುವ ಹಜರತ್ ಮೆಹಬೂಬ್ ಝಹೂರ್ ಷಾಹ ದರ್ಗಾ ಕೇಳ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ಈ ಹಿನ್ನೆಲೆಯಲ್ಲಿ ಇದೀಗ ದರ್ಗಾ ಕುಸಿದು ಮನೆಗಳ ಮೇಲೆ ಬಿಳುವ ಆತಂಕ ಸೃಷ್ಟಿಯಾಗಿದೆ.

ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ಗುಡ್ಡ ಕುಸಿತವಾಗುತ್ತಿದೆ. ಒಂದು ವೇಳೆ ಹಂತ ಹಂತವಾಗಿ ಮಣ್ಣು ಕುಸಿದರೆ ದರ್ಗಾ, ಹತ್ತಾರು ಮನೆಗಳ ಮೇಲೆ ಬಿಳಲಿದೆ. ಸದ್ಯ ಸ್ಥಳೀಯರು ಮಣ್ಣು ಕುಸಿದ ಸ್ಥಳದಲ್ಲಿ ಪ್ಲಾಸ್ಟಿಕ್ ಟಾರ್ಪಲ್ ಹಾಕಿದ್ದಾರೆ.

ಇದನ್ನೂ ಓದಿ: Karnataka Rains: ಕರ್ನಾಟಕದಾದ್ಯಂತ ಮುಂದುವರೆದ ಮಳೆ, ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ಶೃಂಗೇರಿ ಶಾರದಾ ದೇಗುಲ ಸುತ್ತಮುತ್ತ ನಿಷೇಧಾಜ್ಞೆ ಜಾರಿ

ಇನ್ನೊಂದೆಡೆ ಶೃಂಗೇರಿ ಶಾರದಾ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಶೃಂಗೇರಿ ಶಾರದಾ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆರೆ ಆತಂಕ ಶುರುವಾಗಿದೆ. ಹೀಗಾಗಿ ನೆರೆ ಪೀಡಿತ ಪ್ರದೇಶಗಳಲ್ಲಿ ಅಂದರೆ ಶೃಂಗೇರಿ ದೇವಾಲಯದ ಗಾಂಧಿ ಮೈದಾನ, ಪ್ಯಾರಲ್ ‌ರೋಡ್, ಪಾರ್ಕಿಂಗ್ ಸ್ಥಳ ಸೇರಿದಂತೆ ನದಿ ತೀರದಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸುರಿದ ಮಳೆಯಿಂದಾಗಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಶೃಂಗೇರಿ ದೇವಾಲಯ ಸುತ್ತಮುತ್ತಲಿನ ಪ್ರದೇಶ ಎರಡು ಭಾರಿ ಮುಳುಗಡೆಯಾಗಿತ್ತು. ಇದೀಗ ಮತ್ತೆ ಮಳೆ ಹೆಚ್ಚಾದಂತೆ ಏಕಾಏಕಿ ತುಂಗಾ ನದಿ ಒಳ ಹರಿವಿನಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ತುಂಗಾ ನದಿಯಿಂದ ನೆರೆ ಆತಂಕ ಭೀತಿ ಶುರುವಾಗಿದ್ದರಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಸ್ಥಳೀಯರು ,ಪ್ರವಾಸಿಗರು ಸೇರಿದಂತೆ ವಾಹನ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಅಲ್ಲದೇ ಗಾಂಧಿ ಮೈದಾನದಲ್ಲಿದ್ದ ಅಂಗಡಿ ಮುಂಗಟ್ಟುಗಳನ್ನ ತೆರೆಯದಂತೆ ಸೂಚನೆ ನೀಡಲಾಗದೆ. ಅಲ್ಲದೇ ವಾಹನಗಳ ಪಾರ್ಕಿಂಗ್ ಮಾಡದಂತೆ ನಿರ್ಬಂಧ ಹೇರಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ