ಕೃಷಿಹೊಂಡದಲ್ಲಿ ಯುವಕರ ಶವ ಪತ್ತೆ: ಈಜಲು ಹೋಗಿ ಇಬ್ಬರು ಕಾರ್ಮಿಕರ ದುರಂತ ಅಂತ್ಯ?

ಬಿಸಿಲಿನ ತಾಪಕ್ಕೆ ತಂಪು ಅರಸಿ ತೆರಳುವವರು ಕೃಷಿಹೊಂಡ, ನದಿ, ಕೆರೆಗಳಲ್ಲಿ ಮುಳುಗಿ ಸಾಯುತ್ತಿರುವ ಘಟನೆಗಳು ರಾಜ್ಯದಲ್ಲಿ ಹೆಚ್ಚುತ್ತಿವೆ. ಈ ನಡುವೆ ಚಿಕ್ಕಮಗಳೂರು ತಾಲೂಕಿನ ಬನ್ನೂರು ಗ್ರಾಮದ ಕೃಷಿಹೊಂಡದಲ್ಲಿ ಇಬ್ಬರು ಕಾರ್ಮಿಕರ ಮೃತದೇಹ ಪತ್ತೆಯಾಗಿದೆ. ಈಜಲು ಹೋಗಿ ಇಬ್ಬರೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಕೃಷಿ ಹೊಂಡದ ಸಮೀಪ ಪತ್ತೆಯಾಗಿದ್ದ ಚಪ್ಪಲಿಗಳನ್ನು ಆಧರಿಸಿ ಶೋಧ ನಡೆಸಲಾಗಿತ್ತು. ನಿನ್ನೆ ಭದ್ರಾ ಹಿನ್ನೀರಿನಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಯುವಕ ನಿತಿನ್ ಶವವೂ ಇಂದು ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕೃಷಿಹೊಂಡದಲ್ಲಿ ಯುವಕರ ಶವ ಪತ್ತೆ: ಈಜಲು ಹೋಗಿ ಇಬ್ಬರು ಕಾರ್ಮಿಕರ ದುರಂತ ಅಂತ್ಯ?
ಯುವಕರಿಬ್ಬರ ದಾರುಣ ಅಂತ್ಯ
Image Credit source: Tv9 Kannada
Edited By:

Updated on: Apr 19, 2026 | 2:07 PM

ಚಿಕ್ಕಮಗಳೂರು, ಏಪ್ರಿಲ್​​ 19: ತೀವ್ರ ಬಿಸಿಲಿನ ಪರಿಣಾಮ ಕೂಲ್​​ ಆಗೋಣ ಎಂದು ಸಿಕ್ಕ ಸಿಕ್ಕಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ. ಈಜಲು ಹೋಗಿ ಭದ್ರಾ ಹಿನ್ನೀರಿನಲ್ಲಿ ನಿನ್ನೆಯಷ್ಟೇ ಯುವಕನೋರ್ವ ಮೃತಪಟ್ಟ ಘಟನೆ ಮಾಸುವ ಮುನ್ನವೇ ಕಾಫಿನಾಡು ಚಿಕ್ಕಮಗಳೂರಲ್ಲಿ (Chikkamagaluru) ಮತ್ತೊಂದು ಅವಘಡ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಬನ್ನೂರು ಗ್ರಾಮದ ಕೃಷಿಹೊಂದಲ್ಲಿ ಇಬ್ಬರು ಕಾರ್ಮಿಕರ ಮೃತದೇಹ ಪತ್ತೆಯಾಗಿದೆ. ರಮೇಶ್(27), ಮಹೇಶ್ (34) ಮೃತರಾಗಿದ್ದು, ಈಜಲು ತೆರಳಿ ಮುಳುಗಿ  ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಮೃತರು ಕೊಪ್ಪ ತಾಲೂಕಿನ ಜಯಪುರ ಗ್ರಾಮದವರಾಗಿದ್ದು, ಬನ್ನೂರಿನ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಕೃಷಿ ಹೊಂಡದ ಸಮೀಪ ಇವರ ಚಪ್ಪಲಿ ಪತ್ತೆಯಾಗಿದ್ದ ಹಿನ್ನೆಲೆ ನೀರಿನಲ್ಲಿ ಮುಳುಗಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಕೃಷಿ ಹೊಂಡದಲ್ಲಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಕಾರ್ಮಿಕರು ಶವವಾಗಿ ಪತ್ತೆಯಾಗಿದ್ದು, ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದೆ. ಅಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಕುರಿ ಮೈತೊಳೆಯಲು ಕೆರೆಗೆ ಹೋಗಿದ್ದ ಸಹೋದರರು ನೀರುಪಾಲು; ಬದುಕು ದುರಂತ ಅಂತ್ಯ

ಯುವಕನ ಶವ ಪತ್ತೆ

ನಿತಿನ್​​ ಮೃತದೇಹ ಪತ್ತೆ

ಮತ್ತೊಂದು ಕಡೆ ಎನ್​​.ಆರ್​​.ಪುರ ತಾಲೂಕಿನ ಹಂದೂರು ಬಳಿಯ ಸಿದ್ದರಾಮಯ್ಯ ಸೇತುವೆ ಬಳಿ ನಿನ್ನೆ ಸ್ನೇಹಿತರ ಜೊತೆ ಈಜಲು ತೆರಳಿ ಭದ್ರಾ ಹಿನ್ನೀರಿನಲ್ಲಿ  ನಾಪತ್ತೆಯಾಗಿದ್ದ ಯುವಕ ನಿತಿನ್‌(34) ಶವ ಪತ್ತೆಯಾಗಿದೆ. ಮೃತ ನಿತಿನ್​ ಶಿಗುವಾನೆ ಗ್ರಾಮದವರಾಗಿದ್ದು, ನಾಪತ್ತೆಯಾಗಿದ್ದ ನಿತಿನ್​​ಗಾಗಿ ಸತತ ಶೋಧ ಕಾರ್ಯಾಚರಣೆ ನಡೆಸಿದ್ದ ಅಗ್ನಿಶಾಮಕದಳದ ಸಿಬ್ಬಂದಿ ಇಂದು ಬೆಳಿಗ್ಗೆ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಎನ್​​.ಆರ್​​.ಪುರ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us