
ಹಾಸನ, ಏಪ್ರಿಲ್ 16: ಶಾಲೆಗೆ ರಜೆಯಿದ್ದ ಕಾರಣ ಕುರಿ ತೊಳೆಯಲು ತೆರಳಿದ್ದ ಇಬ್ಬರು ಸಹೋದರರು ಕೆರೆಯಲ್ಲಿ ಮುಳುಗಿ (drowning) ಸಾವನ್ನಪ್ಪಿರುವಂತಹ (death) ದಾರುಣ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಜಾವಗಲ್ ಗ್ರಾಮದಲ್ಲಿ ನಡೆದಿದೆ. ಇಮ್ರಾನ್ (15) ಮತ್ತು ಯಾಸಿನ್ (13) ಮೃತ ದುರ್ದೈವಿಗಳು. ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
ಜಾವಗಲ್ ಗ್ರಾಮದ ಇಮ್ರಾನ್ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರೆ, ಯಾಸಿನ್ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದ. ಬೇಸಿಗೆ ರಜೆ ಹಿನ್ನೆಲೆ ಮನೆಯಲ್ಲಿದ್ದ ಬಾಲಕರು, ತಾವು ಸಾಕಿದ್ದ ಕುರಿಗಳನ್ನು ಮೈತೊಳೆಯಲೆಂದು ನಿನ್ನೆ ಸಂಜೆ ಗ್ರಾಮದ ಸಮೀಪವಿರುವ ಜಾವಗಲ್ ದೊಡ್ಡಕೆರೆಗೆ ತೆರಳಿದ್ದರು.
ಇದನ್ನೂ ಓದಿ: ಅರಹಳ್ಳಿ ಕೆರೆಯಲ್ಲಿ ದುರಂತ: ಮಕ್ಕಳನ್ನು ರಕ್ಷಿಸಲು ಹೋಗಿ ಜೀವ ತೆತ್ತ ಮಹಿಳೆಯರು
ಕುರಿಗಳ ಮೈತೊಳೆಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ಆಳದ ಸ್ಥಳಕ್ಕೆ ಬಿದ್ದಿದ್ದಾರೆ. ಒಬ್ಬರನ್ನು ರಕ್ಷಿಸಲು ಹೋಗಿ ಮತ್ತೊಬ್ಬರು ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. ಸ್ಥಳೀಯ ಕುರಿಗಾಹಿಗಳು ತಕ್ಷಣ ಸಹಾಯಕ್ಕೆ ಧಾವಿಸಿದ್ದಾರೆ. ನಂತರ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ಸತತ ಕಾರ್ಯಾಚರಣೆಯ ಮೂಲಕ ಬಾಲಕರ ಶವಗಳನ್ನು ಕೆರೆಯಿಂದ ಹೊರತೆಗೆಯಲಾಗಿದೆ.
ಚಿಗುರು ಮೀಸೆಯ ಸಹೋದರರು ಸಾವನ್ನಪ್ಪಿರುವುದು ಜಾವಗಲ್ ಗ್ರಾಮದಲ್ಲಿ ಮೌನ ಆವರಿಸುವಂತೆ ಮಾಡಿದೆ. ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮಿನಿ ಬಸ್ ಹಾಗೂ ಟ್ರ್ಯಾಕ್ಟರ್ ಮಧ್ಯೆ ಪರಸ್ಪರ ಡಿಕ್ಕಿ ಸಂಭವಿಸಿ ಓರ್ವ ಮಹಿಳೆ ಸಾವನ್ನಪ್ಪಿದ್ದರೆ ಆರು ಜನರಿಗೆ ಗಂಭೀರ ಗಾಯಗಳಾಗಿರುವಂತಹ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದ ಹೊರವಲಯದ ಆಂಜನೇಯ ದೇವಸ್ಥಾನ ಬಳಿ ನಡೆದಿದೆ. ರತ್ನಮ್ಮ (32) ಮೃತ ಮಹಿಳೆ.
ಇದನ್ನೂ ಓದಿ: ಜಲ ಕಂಟಕ: ಕರ್ನಾಟಕದಲ್ಲಿ ಸೋಮವಾರ ಒಂದೇ ದಿನ 10 ಮಂದಿ ನೀರು ಪಾಲು
ಇನ್ನು ಗಂಭೀರವಾಗಿ ಗಾಯಗೊಂಡವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ತಿರುಪತಿಯಿಂದ ಕೊಪ್ಪಳ ಕಡೆಗೆ ಮಿನಿ ಬಸ್ ಹೊರಟಿತ್ತು. ಕಂಪ್ಲಿಯಿಂದ ಕುರುಗೋಡು ಕಡೆ ಬರುತ್ತಿದ್ದ ಟ್ರಾಕ್ಟರ್ ಡಿಕ್ಕಿ ಹೊಡೆದಿವೆ. ಇಬ್ಬರು ಚಾಲಕರ ನಿರ್ಲಕ್ಷ್ಯದಿಂದಲೇ ಅಪಘಾತ ನಡೆದಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಕುರುಗೋಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.