ಚಿಕ್ಕಮಗಳೂರು: ರಾಜ್ಯದಲ್ಲಿ ಉಳಿದಿದ್ದ ಏಕೈಕ್ ನಕ್ಸಲ್ ಶರಣಾಗತಿ, ಪೊಲೀಸ್ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಘೋಷಣೆ
18 ವರ್ಷಗಳಿಂದ ಭೂಗತವಾಗಿದ್ದ ನಕ್ಸಲ್ ರವೀಂದ್ರ ಶರಣಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಅಂತ್ಯಗೊಂಡಿದೆ. ಮೂಲಭೂತ ಹಕ್ಕುಗಳಿಗಾಗಿ ನಕ್ಸಲ್ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದ ರವೀಂದ್ರ, ಸರ್ಕಾರದ ಶರಣಾಗತಿ ಪ್ಯಾಕೇಜ್ ಒಪ್ಪಿಕೊಂಡು ಮುಖ್ಯವಾಹಿನಿಗೆ ಮರಳಿದ್ದಾರೆ. ರವೀಂದ್ರರ ಶರಣಾಗತಿಯನ್ನು ಸರ್ಕಾರ ಸ್ವಾಗತಿಸಿದೆ. ನಕ್ಸಲ್ ರವೀಂದ್ರ ಶರಣಾಗತಿ ಒಳ್ಳೆಯ ಲಕ್ಷಣ, ಉತ್ತಮ ಬೆಳವಣಿಗೆ ಎಂದು ಸಚಿವ ಹೆಚ್ ಕೆ ಪಾಟೀಲ್ ಹೇಳಿದ್ದಾರೆ.

ಚಿಕ್ಕಮಗಳೂರು, ಫೆಬ್ರವರಿ 01: ಇತ್ತೀಚಿಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮುಂದೆ ಆರು ಮಂದಿ ನಕ್ಸಲ್ರು (Naxal) ಶರಣಾಗಿದ್ದರು. ಇದರ ಬೆನ್ನಲ್ಲೇ ರಾಜ್ಯದಲ್ಲಿ ಉಳಿದಿದ್ದ ಏಕೈಕ ನಕ್ಸಲ್ ಕೂಡ ಚಿಕ್ಕಮಗಳೂರು (Chikkamagaluru) ಜಿಲ್ಲಾಡಳಿತದ ಮುಂದೆ ಶರಣಾಗಿದ್ದಾರೆ. ಕಳೆದ 18 ವರ್ಷಗಳಿಂದ ಭೂಗತರಾಗಿದ್ದ ನಕ್ಸಲ್ ರವೀಂದ್ರ, ಎಸ್ಪಿ ವಿಕ್ರಮ್ ಆಮ್ಟೆ, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮುಂದೆ ಶರಣಾಗಿದ್ದಾರೆ.
ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕೋಟೆಹೊಂಡ ನಿವಾಸಿಯಾಗಿರುವ ರವೀಂದ್ರ ಕಳೆದ 18 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ನಕ್ಸಲ್ರ ನಾಯಕ ವಿಕ್ರಮ್ ಗೌಡ ಎನ್ಕೌಂಟರ್ ಬಳಿಕ ರವೀಂದ್ರ ನಾಪತ್ತೆಯಾಗಿದ್ದರು. ರವೀಂದ್ರ ಶರಣಾಗತಿಗೆ ನಕ್ಸಲ್ ಶರಣಾಗತಿ ಕಮಿಟಿ ಹರಸಾಹಸ ಪಟ್ಟಿತ್ತು. ಕೊನೆಗೂ ರಾಜ್ಯ ಸರ್ಕಾರದ ನಕ್ಸಲ್ ಶರಣಾಗತಿ ಪ್ಯಾಕೇಜ್ ಒಪ್ಪಿ ರವಿಂದ್ರ ಶರಣಾಗಿದ್ದಾರೆ.
ನಕ್ಸಲ್ ರವೀಂದ್ರ ಒಟ್ಟು 26 ಪ್ರಕರಣಗಳಲ್ಲಿ ಬೇಕಾಗಿದ್ದಾರೆ. ನಕ್ಸಲ್ ರವೀಂದ್ರ ವಿರುದ್ಧ ಕರ್ನಾಟಕದಲ್ಲಿ 17, ಕೇರಳದಲ್ಲಿ 9 ಕೇಸ್ ದಾಖಲಾಗಿವೆ. ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ 14 ಪ್ರಕರಣಗಳು ದಾಖಲಾಗಿವೆ.
ಮೂಲಭೂತ ಹಕ್ಕಿಗಾಗಿ ನಕ್ಸಲ್ ಚಳುವಳಿಯಲ್ಲಿ ಧುಮುಕಿದ್ದೆ: ರವೀಂದ್ರ
17 ವರ್ಷಗಳ ಹಿಂದೆ ಮೂಲಭೂತ ಹಕ್ಕಿಗಾಗಿ ನಕ್ಸಲ್ ಚಳುವಳಿಯಲ್ಲಿ ಧುಮುಕಿದ್ದೆ. ಮನೆ ಸೇರಿದಂತೆ ಮೂಲಭೂತ ಸೌಕರ್ಯ ನೀಡಲು ಸರ್ಕಾರ ವಿಫಲವಾಗಿತ್ತು. ಈಗ ಸ್ವಲ್ಪ ಬದಲಾವಣೆ ಕಾಣುತ್ತಿದೆ. ಇದರಿಂದ ಸಮಾಜದ ಮುಖ್ಯ ವಾಹಿನಿಗೆ ಬರಲು ನಿರ್ಧಾರ ಮಾಡಿದ್ದೇನೆ. ಸರ್ಕಾರಕ್ಕೆ ನನ್ನ ಬೇಡಿಕೆಯ ಕುರಿತು ಪತ್ರ ನೀಡಿದ್ದೇನೆ ಎಂದು ನಕ್ಸಲ್ ರವೀಂದ್ರ ಹೇಳಿದ್ದಾರೆ.
ಇದನ್ನೂ ಓದಿ: ಮಾರ್ಚ್ 2026ರೊಳಗೆ ಭಾರತದಿಂದ ನಕ್ಸಲಿಸಂ ನಿರ್ಮೂಲನೆ; ಛತ್ತೀಸ್ಗಢದಲ್ಲಿ ನಕ್ಸಲ್ ದಾಳಿ ಬಳಿಕ ಅಮಿತ್ ಶಾ ಭರವಸೆ
ನಕ್ಸಲ್ ಶರಣಾಗತಿ ಒಳ್ಳೆಯ ಲಕ್ಷಣ, ಉತ್ತಮ ಬೆಳವಣಿಗೆ: ಹೆಚ್ಕೆ ಪಾಟೀಲ್
ನಕ್ಸಲ್ ರವೀಂದ್ರ ಶರಣಾಗತಿ ವಿಚಾರವಾಗಿ ಕಾನೂನು ಸಂಸದೀಯ ಸಚಿವ ಹೆಚ್.ಕೆ ಪಾಟೀಲ್ ಮಾತನಾಡಿ, ಒಳ್ಳೆಯ ಲಕ್ಷಣ, ಉತ್ತಮ ಬೆಳವಣಿಗೆ. ಮನಸ್ಸು ಪರಿವರ್ತನೆ, ಬದಲಾವಣೆ ಮಾಡಿಕೊಂಡು ಮುಖ್ಯ ವೇದಿಕೆಗೆ ಬರುವುದು ಅಗತ್ಯ. ನಮ್ಮ ನಿರೀಕ್ಷೆಗಳು ಬಹಳ ಇರುತ್ತವೆ. ಸಂವಿಧಾನದ ಅಡಿ ಕೆಲಸ ಮಾಡಬೇಕಿರುವುದು ಅತ್ಯಂತ ಮಹತ್ವದ್ದು. ಆ ಹಿನ್ನೆಯಲ್ಲಿ ಅವರು ಬಂದಿರುವುದನ್ನು ನಾನು ಸ್ವಾಗತ ಮಾಡುತ್ತೇನೆ. ಕಾನೂನು ತೊಡಕುಗಳ ಬಗ್ಗೆ ಗೃಹ ಸಚಿವರು ಹೇಳುತ್ತಾರೆ. ಕಾನೂನು ಬಾಹಿರ ಹೋದವರು, ಕಾನೂನು, ಸಂವಿಧಾನ, ಸರ್ಕಾರವನ್ನ ಒಪ್ಪಿಕೊಂಡು ಬಂದಿರುವುದು ನನಗೆ ಸಂತೋಷ, ಸಮಾಧಾನವಾಗಿದೆ ಎಂದರು.
22 ಪೊಲೀಸ್ ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಪದಕ
ಕರ್ನಾಟಕದಲ್ಲಿ ನಕ್ಸಲ್ ಶರಣಾಗತಿ ಆಪರೇಷನ್ ಮುಕ್ತಾಯಗೊಂಡಿದೆ. ನಕ್ಸಲ್ ಶರಣಾಗತಿ ಸಂಬಂಧ ಕಾರ್ಯ ನಿರ್ವಹಿಸಿರುವ 22 ಪೊಲೀಸ್ ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಪದಕ ಘೋಷಣೆ ಮಾಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:30 pm, Sat, 1 February 25