ಚಿಕ್ಕಮಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ: ಮುಸ್ಲಿಂ ಹುಡುಗಿ ಪಕ್ಕ ಕುಳಿತ್ತಿದ್ದಕ್ಕೆ ಹಿಂದೂ ಯುವಕರ ಮೇಲೆ ಹಲ್ಲೆ
ಕರ್ನಾಟಕದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸರು ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಸಹ ಮತ್ತೆ ಮತ್ತೆ ಮರುಕಳಿಸುತ್ತಲೇ ಇವೆ. ಹೀಗಾಗಿ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯನವರು ಸಹ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದಾಗ ಈ ನೈತಿಕ ಪೊಲೀಸ್ ಗಿರಿ ಬಗ್ಗೆ ಪ್ರಸ್ತಾಪಿಸಿ, ಇದಕ್ಕೆ ಕಡಿವಾಣ ಹಾಕಬೇಕೆಂದು ಖಡಕ್ ಸೂಚನೆ ನೀಡಿದ್ದಾರೆ. ಆದರೂ ನಿಲ್ಲುತ್ತಿಲ್ಲ. ಇದೀಗ ಚಿಕ್ಕಮಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಪ್ರಕರಣ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು, (ಫೆಬ್ರವರಿ 27): ಚಿಕ್ಕಮಗಳೂರಿನಲ್ಲಿ (Chikkamagaluru:) ಮತ್ತೊಂದು ನೈತಿಕ ಪೊಲೀಸ್ ಗಿರಿ (moral policing) ನಡೆದಿದೆ. ಮೊನ್ನೇ ಅಷ್ಟೇ ಚಿಕ್ಕಮಗಳೂರಿನ ಮಾರ್ಕೆಟ್ ರಸ್ತೆಯಲ್ಲಿ ಮುಸ್ಲಿಂ ಯುವತಿಯೊಂದಿಗೆ ಹೋಗುತ್ತಿದ್ದಾಗ ದಲಿತ ಕ್ರಿಶ್ಚಿಯನ್ ಬಾಲಕನೋರ್ವನನ್ನು ಅಡ್ಡಗಟ್ಟಿ ಹಲ್ಲೆ ನಡೆಸಲಾಗಿತ್ತು. ಈ ಪ್ರಕರಣ ಮಾಸುವ ಮುನ್ನೇನಗರದ ಸಹ್ಯಾದ್ರಿ ಕಾಲೇಜಿನಲ್ಲಿ ನೈತಿಕ ಪೊಲೀಸ್ಗಿರಿ ನಡೆದಿದೆ. ಚಿಕ್ಕಮಗಳೂರು ನಗರದ ಸಹ್ಯಾದ್ರಿ ಕಾಲೇಜು ಬಸ್ನಲ್ಲಿ ಮುಸ್ಲಿಂ (Muslim) ವಿದ್ಯಾರ್ಥಿನಿಯ ಪಕ್ಕ ಕುಳಿತಿದ್ದಕ್ಕೆ ಹಿಂದೂ (Hindu) ವಿದ್ಯಾರ್ಥಿಗಳಿಬ್ಬರ ಮೇಲೆ ಹಲ್ಲೆ ಮಾಡಲಾಗಿದೆ.
ಇಂದು (ಫೆಬ್ರವರಿ 27) ಬೆಳಗ್ಗೆ ಓರ್ವ ಮುಸ್ಲಿಂ ಹುಡುಗಿ ಹಾಗೂ ಇಬ್ಬರು ಹಿಂದೂ ಹುಡುಗರು ಬಸ್ನ ಒಂದೇ ಸೀಟಿನಲ್ಲಿ ಕುಳಿತು ಕಾಲೇಜಿಗೆ ಆಗಮಿಸಿದ್ದರು. ಹೀಗಾಗಿ ಮುಸ್ಲಿಂ ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದು, ಮುಸ್ಲಿಂ ವಿದ್ಯಾರ್ಥಿನಿಯ ಪಕ್ಕದಲ್ಲಿ ಏಕೆ ಕುಳಿತಿದ್ದೀಯಾ ಎಂದು ಯೋಗೇಶ್ ಮೇಲೆ ಹಲ್ಲೆ ಮಾಡಿ ಮೊಬೈಲ್ ಕಿತ್ತುಕೊಂಡಿದ್ದಾರೆ. ಇನ್ನು ಜಗಳ ಬಿಡಿಸಲು ಹೋದ ಜಯಂತ್ ಮೇಲೂ ಸಹ ಸಾಲಿದ್, ರಶೀದ್ ಎನ್ನುವ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್ ಗಿರಿ: ಬೈಕ್ ಅಡ್ಡಗಟ್ಟಿ ದಲಿತ ಕ್ರಿಶ್ಚಿಯನ್ ಬಾಲಕನ ಮೇಲೆ ಹಲ್ಲೆ
ಎಲ್ಲರೂ ಒಂದೇ ಸಹ್ಯಾದ್ರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದರಿಂದ ಯೋಗೇಶ್ ಹಾಗೂ ಜಯಂತ್, ಮುಸ್ಲಿಂ ವಿದ್ಯಾರ್ಥಿನಿ ಸ್ನೇಹಿತರಾಗಿದ್ದು, ಕಾಲೇಜು ಬಸ್ನಲ್ಲೇ ಒಂದೇ ಸೀಟಿನಲ್ಲಿ ಕುಳಿತುಕೊಂಡಿದ್ದರು. ಇದರಿಂದ ಕೆರಳಿದ ಸಾಲಿದ್ ಹಾಗೂ ರಶೀದ್, ಯೋಗೇಶ್ ಮತ್ತು ಜಯಂತ್ ಮೇಲೆ ಹಲ್ಲೆ ನಡೆಸಿದ್ದಾರೆ.
ಇನ್ನು ಈ ಗಲಾಟೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಕಾಲೇಜು ಆಡಳಿತ ಮಂಡಳಿ, ಬಸವನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಬಸವನಹಳ್ಳಿ ಪೊಲೀಸರು, ಯೋಗೇಶ್, ಜಯಂತ್ ,ರಶೀದ್ ನನ್ನ ಠಾಣೆಗೆ ಕರೆದೊಯ್ದ ವಿಚಾರಣೆಗೊಳಪಡಿಸಿದ್ದಾರೆ.
ಒಂದೇ ಕಾಲೇಜಿನಲ್ಲಿ ಓದುತ್ತಿದ್ದರೆ ಸಾಮಾನ್ಯವಾಗಿ ಎಲ್ಲರೂ ಒಂದೇ ಎನ್ನುವ ಭಾವನೆ ಇರುತ್ತೆ. ಯಾವುದೇ ಭೇದ-ಭಾವ ಇಲ್ಲದ ಗೆಳೆತನ, ಒಬ್ಬರಿಗೊಬ್ಬರ ನಡುವೆ ಅನ್ಯೂನ್ಯತೆ ಇರುತ್ತೆ. ಇದನ್ನೇ ಕೆಲವರು ತಪ್ಪಾಯಿ ಅರ್ಥೈಸಿಕೊಂಡು ಪ್ರಶ್ನಿಸಿವುದು ವಿಪರ್ಯಾಸವೇ ಸರಿ.
