ಕಾಫಿನಾಡಲ್ಲಿ ಮೂರೇ ದಿನಕ್ಕೆ ಮೂರು ಕೋಟಿಯಷ್ಟು ವಿವಿಧ ಸಾಮಾಗ್ರಿಗಳು ಸೀಜ್

ಚುನಾವಣಾ ನಿಮಿತ್ತ ನೀತಿ ಸಂಹಿತೆ ಜಾರಿಗೂ ಮೊದಲೇ ಜಿಲ್ಲೆಯಲ್ಲಿ ಸುಮಾರು 3 ಕೋಟಿಯಷ್ಟು ವಿವಿಧ ಸಾಮಾಗ್ರಿಗಳನ್ನ ವಶಪಡಿಸಿಕೊಂಡಿರುವ ಕಾಫಿನಾಡ ಜಿಲ್ಲಾಡಳಿತ ಜಿಲ್ಲಾದ್ಯಂತ ಹೈಅಲರ್ಟ್ ಘೋಷಿಸಿದೆ.

ಕಾಫಿನಾಡಲ್ಲಿ ಮೂರೇ ದಿನಕ್ಕೆ ಮೂರು ಕೋಟಿಯಷ್ಟು ವಿವಿಧ ಸಾಮಾಗ್ರಿಗಳು ಸೀಜ್
ಸೀಜ್ ಮಾಡಿದ ಸಾಮಾಗ್ರಿಗಳು

Updated on: Mar 23, 2023 | 10:22 PM

ಚಿಕ್ಕಮಗಳೂರು: ಚುನಾವಣಾ (Election) ನಿಮಿತ್ತ ನೀತಿ ಸಂಹಿತೆ ಜಾರಿಗೂ ಮೊದಲೇ ಜಿಲ್ಲೆಯಲ್ಲಿ ಸುಮಾರು 3 ಕೋಟಿಯಷ್ಟು ವಿವಿಧ ಸಾಮಾಗ್ರಿಗಳನ್ನ ವಶಪಡಿಸಿಕೊಂಡಿರುವ ಕಾಫಿನಾಡ ಜಿಲ್ಲಾಡಳಿತ ಜಿಲ್ಲಾದ್ಯಂತ ಹೈಅಲರ್ಟ್ ಘೋಷಿಸಿದೆ. ಚುನಾವಣೆಯಲ್ಲಿ ಅಕ್ರಮಗಳನ್ನ ತಡೆಯಲೆಂದೇ ಈಗಾಗಲೇ ಎಸ್ಪಿ-ಡಿಸಿ ಹಾಗೂ ಚುನಾವಣಾ ಅಧಿಕಾರಿಗಳು ಜಿಲ್ಲೆಯಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ. ಜಿಲ್ಲೆಯಲ್ಲಿ 18 ಚೆಕ್ ಫೋಸ್ಟ್​​, 67 ಮೊಬೈಲ್ ಫ್ಲೈಯಿಂಗ್ ಸ್ಕ್ವಾಡ್, 126 ನೋಡಲ್ ಅಧಿಕಾರಿಗಳನ್ನ ನೇಮಿಸಲಾಗಿದೆ. ಕಳೆದ ಮೂರು ದಿನಗಳಲ್ಲಿ ಸುಮಾರು ಮೂರು ಕೋಟಿ ರೂ. ಮೌಲ್ಯದ ಭಾರೀ ಪ್ರಮಾಣದ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ. ಚಿನ್ನ, ಸೀರೆ, ಕುಕ್ಕರ್, ಫ್ಯಾನ್, ಮದ್ಯ, ಗಾಂಜಾ ಸೇರಿದಂತೆ ಹಲವು ವಸ್ತುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ತರೀಕೆರೆಯಲ್ಲಿ 2.58 ಕೋಟಿ ಚಿನ್ನ ಸಿಕ್ಕಿದ್ದರೆ, ಚಿಕ್ಕಮಗಳೂರು ನಗರದಲ್ಲಿ 666 ಸೀರೆ, ಶೃಂಗೇರಿಯಲ್ಲಿ 235 ಸೀರೆ, 281 ಕುಕ್ಕರ್ ವಶಪಡಿಸಿಕೊಂಡಿದ್ದಾರೆ.

ಮೂರೇ ದಿನಕ್ಕೆ ಶೃಂಗೇರಿ ತಾಲ್ಲೂಕಿನಲ್ಲಿ 21984 ರೂ. ಬೆಲೆಯ 56,49 ಲೀಟರ್, ಮೂಡಿಗೆರೆಯಲ್ಲಿ 21, 395 ರೂ ಬೆಲೆಯ 49 ಲೀಟರ್, ಚಿಕ್ಕಮಗಳೂರು ತಾಲ್ಲೂಕಿನಲ್ಲಿ 34204 ಮೌಲ್ಯದ 87 ಲೀಟರ್, ತರೀಕೆರೆ ತಾಲ್ಲೂಕಿನಲ್ಲಿ 25181 ರೂ. ಮೌಲ್ಯದ 67 ಲೀಟರ್ ಹಾಗೂ ಕಡೂರು ತಾಲ್ಲೂಕಿನಲ್ಲಿ 28, 632 ರೂ. ನ 63 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲಿ ಫುಲ್ ಅಲರ್ಟ್ ಆದ ಪೊಲೀಸರು; ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ಅಕ್ಕಿ ಚೀಲ, ಮದ್ಯ ವಶ

ಮತಗಟ್ಟೆಗಳಿಗೆ ಸೂಕ್ತ ಭದ್ರತೆ 

ಇದೇ ಅವಧಿಯಲ್ಲಿ ಶೃಂಗೇರಿ ತಾಲ್ಲೂಕಿನಲ್ಲಿ 5 ಸಾವಿರ, ಮೂಡಿಗೆರೆ ತಾಲ್ಲೂಕಿನಲ್ಲಿ 40 ಸಾವಿರ, ಚಿಕ್ಕಮಗಳೂರು ತಾಲ್ಲೂಕಿನಲ್ಲಿ 4.33 ಲಕ್ಷ ರೂ. ಮೌಲ್ಯದ ಗಾಂಜ ಮತ್ತು ಎಂಡಿಎಂಎ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ನಕ್ಸಲ್ ಚಟುವಟಿಕೆ ಸ್ಥಗಿತಗೊಂಡಿದೆ. 57 ಮತಗಟ್ಟೆಗಳನ್ನು ದುರ್ಬಲ ಎಂದು ಪರಿಗಣಿಸಿ ಅದಕ್ಕೆ ಸೂಕ್ತ ಭದ್ರತೆ ಒದಗಿಸಲಾಗುತ್ತಿದೆ.

ಚುನಾವಣೆ ಬಹಿಷ್ಕಾರಕ್ಕೆ ಮುಂದಾದ ಜನ

10 ರಿಂದ 12 ಸೆಕ್ಟರಲ್ ಅಧಿಕಾರಿಗಳನ್ನು ಹಾಗೂ ಕೇಂದ್ರದ ಪ್ಯಾರಾಮಿಲಿಟರಿ ಪಡೆಗಳನ್ನು ನಿಯೋಜಿಸಲಾಗುವುದು. ಗುಪ್ತಚರ ಇಲಾಖೆ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಚುನಾವಣಾ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಜಿಲ್ಲಾದ್ಯಂತ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ 13ಕ್ಕೂ ಹಳ್ಳಿಗಳ ಜನ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಆ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ಮತದಾರರ ಮನವೊಲಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ: AICC ಹೆಸರಲ್ಲಿ ಕರೆ ಮಾಡಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ವಂಚನೆ ಯತ್ನ; ಎಚ್ಚರವಹಿಸುಂತೆ ಸೂಚನೆ

ಮಂಡ್ಯ ಜಿಲ್ಲೆಯಲ್ಲಿ ಮತ್ತೆ ಮುನ್ನೆಲೆಗೆ ಬಂದ ಗಿಫ್ಟ್​ ಪಾಲಿಟಿಕ್ಸ್​

ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಮತ್ತೆ ಗಿಫ್ಟ್ ಪಾಲಿಟಿಕ್ಸ್ ಮುನ್ನಲೆಗೆ ಬಂದಿದೆ. ಮತದಾರರ ಮನ ಸೆಳೆಯಲು ರಾಜಕೀಯ ಮುಖಂಡರ ಭರ್ಜರಿ ಗಿಫ್ಟ್ ನೀಡುತ್ತಿದ್ದಾರೆ. ಮಹಿಳಾ ಮತದಾರರ ಮನ ಗೆಲ್ಲಲು ಲೋಡ್ ಗಟ್ಟಲೆ ಸೀರೆ, ಅರಿಶಿಣ ಕುಂಕುಮ ಬೊಟ್ಟಲು ನೀಡಲು ಸಿದ್ದತೆ ಮಾಡಲಾಗಿದೆ. ಶ್ರೀರಂಗಪಟ್ಟಣ ಬಿಜೆಪಿ ಅಭ್ಯರ್ಥಿ ಇಂಡವಾಳು ಸಚ್ಚಿದಾನಂದರಿಂದ ಮಹಿಳಾ ಮತದಾರರಿಗೆ ಆಮೇಷ ಒಡ್ಡಲಾಗುತ್ತಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಂಡ್ಯ ಗ್ರಾಮಾಂತರ ಠಾಣಾ ಪೊಲೀಸರು ಜಪ್ತಿ ಮಾಡಿದ್ದಾರೆ.

ಅಕ್ರಮವಾಗಿ ಸಂಗ್ರಹಿಸಿದ್ದ 22.5 ಲಕ್ಷ ಮೌಲ್ಯದ ಮದ್ಯ ವಶಕ್ಕೆ

ಕೋಲಾರ: ಚುನಾವಣೆ ಹಿನ್ನೆಲೆ ಜಿಲ್ಲೆಯ ಮಾಲೂರು ತಾಲೂಕು ಮಾಸ್ತಿ ಗ್ರಾಮದ MSIL ಶಾಪ್​​ನಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹ ಮಾಡಲಾಗಿದ್ದು ಅಬಕಾರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 22.5 ಲಕ್ಷ ಮೌಲ್ಯದ ಮದ್ಯ ವಶಕ್ಕೆ ಪಡೆದಿದ್ದಾರೆ. ದಾಖಲೆ ಪುಸ್ತಕದಲ್ಲಿ ಇದ್ದ ಲೆಕ್ಕಕ್ಕಿಂತ ಹೆಚ್ಚು ಮದ್ಯ ಸಂಗ್ರಹ ಹಿನ್ನೆಲೆ ಅಕ್ರಮವಾಗಿ ಸಂಗ್ರಹಿಸಿದ್ದ ಮದ್ಯ ವಶಕ್ಕೆ ಪಡೆಯಲಾಗಿದೆ. ಮತ್ತು ಅಬಕಾರಿ ಪೊಲೀಸರು ವೇಣು ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:22 pm, Thu, 23 March 23

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us