AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸರ ಕಿರುಕುಳ ಆರೋಪ; ಚಿತ್ರದುರ್ಗದಲ್ಲಿ ನಡುರಸ್ತೆಯಲ್ಲಿ ಬೆಂಕಿ ಹಚ್ಚಿಕೊಂಡ ಆಟೋ ಚಾಲಕ

ಚಿತ್ರದುರ್ಗದಲ್ಲಿ ಪೊಲೀಸರ ಕಿರುಕುಳದಿಂದ ಬೇಸತ್ತ ಆಟೋ ಚಾಲಕ ತಿಪ್ಪೇಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕುಡಿದು ವಾಹನ ಚಲಾಯಿಸಿದ್ದಾನೆಂದು ಪೊಲೀಸರು ಆತನ ಕಾಲರ್ ಹಿಡಿದು ಅವಮಾನಿಸಿದ್ದಾರೆಂದು ಆರೋಪಿಸಿದ ಆತ ಮನನೊಂದು, ಗಾಂಧಿ ವೃತ್ತದಲ್ಲಿ ಬೆಂಕಿ ಹಚ್ಚಿಕೊಂಡಿದ್ದಾನೆ. ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಪೊಲೀಸರ ಕಿರುಕುಳಕ್ಕೆ ಪಾಠ ಕಲಿಸಲು ಹೀಗೆ ಮಾಡಿದ್ದಾಗಿ ಚಾಲಕ ಹೇಳಿದ್ದಾನೆ.

ಪೊಲೀಸರ ಕಿರುಕುಳ ಆರೋಪ; ಚಿತ್ರದುರ್ಗದಲ್ಲಿ ನಡುರಸ್ತೆಯಲ್ಲಿ ಬೆಂಕಿ ಹಚ್ಚಿಕೊಂಡ ಆಟೋ ಚಾಲಕ
ಚಿತ್ರದುರ್ಗದಲ್ಲಿ ಪೊಲೀಸರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ತಿಪ್ಪೇಸ್ವಾಮಿ
ಬಸವರಾಜ ಮುದನೂರ್, ಚಿತ್ರದುರ್ಗ
| Edited By: |

Updated on: Nov 23, 2025 | 11:37 AM

Share

ಚಿತ್ರದುರ್ಗ,ನವೆಂಬರ್ 23:  ಪೊಲೀಸರ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಕೋಟೆನಾಡು ಚಿತ್ರದುರ್ಗದಲ್ಲಿ (Chitradurga) ಆಟೋ ಚಾಲಕನೋರ್ವ ಆತ್ಮಹತ್ಯೆಗೆ ಯತ್ನಿಸಿದ (Auto Driver Attempted)ಘಟನೆ ನಡೆದಿದೆ. ಆಟೋ ಚಲಾಯಿಸುತ್ತಿದ್ದ ಚಾಲಕ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಪೊಲೀಸರು ಆತನ ಕಾಲರ್ ಹಿಡಿದು, ತಳ್ಳಿ ಅವಮಾನ ಮಾಡಿದರೆಂಬ ಕಾರಣಕ್ಕೆ ಮನನೊಂದ ಆಟೋ ಚಾಲಕ ಗಾಂಧಿ ವೃತ್ತದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಆತನ್ನು ರಕ್ಷಿಸಿದ ಸ್ಥಳೀಯರು, ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕುಡಿದು ಆಟೋ ಚಾಲನೆ ಮಾಡಿದ ಆರೋಪ

ಚಿತ್ರದುರ್ಗ ತಾಲೂಕಿನ ಮಾಳಪ್ಪನಹಟ್ಟಿ ಗ್ರಾಮದ ತಿಪ್ಪೇಸ್ವಾಮಿ(35) ಸುಮಾರು ವರ್ಷಗಳಿಂದ ಕಾರು, ಆಟೋ ಚಾಲನೆ‌ ಮಾಡಿಕೊಂಡು ಬದುಕು‌ಕಟ್ಟಿಕೊಂಡಿದ್ದರು. ನ.22ರ ಸಂಜೆ ತಿಪ್ಪೇಸ್ವಾಮಿ ಗಾಂಧಿ ವೃತ್ತ ಬಳಿ ‌ಆಟೋ ಚಾಲನೆ ಮಾಡುವ ವೇಳೆ‌ ಪೊಲೀಸರು ತಡೆದು ಪರಿಶೀಲನೆ ನಡೆಸಿದ್ದರು. ಕುಡಿದು ಆಟೋ ಚಾಲನೆ ಮಾಡುತ್ತಿರುವುದಾಗಿ ಶಂಕೆ ವ್ಯಕ್ತಪಡಿಸಿದ ಪೊಲೀಸರು, ಚಾಲಕನನ್ನು ತಡೆಹಿಡಿದಿದ್ದರು. ತಿಪ್ಪೇಸ್ವಾಮಿ ಯುನಿಫಾರ್ಮ್ ಹಾಕದಿರುವುದನ್ನು ಪ್ರಶ್ನಿಸಿದ್ದರಲ್ಲದೇ ನಿಯಮ ಮೀರಿ ಆಟೋ ಚಾಲಾಯಿಸಿದ್ದಾಗಿಯೂ ಆರೋಪಿಸಿದ್ದರು.

ಕೊರಳಪಟ್ಟಿ ಹಿಡಿದು ತಳ್ಳಿದ್ದ ಪೊಲೀಸರು

ಇದೇ ವೇಳೆ ಆಟೋ ಚಾಲಕ ತಿಪ್ಪೇಸ್ವಾಮಿ ಸಹ ಮೊಬೈಲ್ ಕ್ಯಾಮೆರಾ ಆನ್ ಮಾಡಿಕೊಂಡು ಮಂಜುನಾಥ್ ಮತ್ತು ದೇವರಾಜ್ ಎಂಬ ಪೊಲೀಸರ ಜತೆ ವಾಗ್ವಾದಕ್ಕಿಳಿದಿದ್ದ. ಪೊಲೀಸರು ಕಾಲರ್ ಹಿಡಿದು ತಳ್ಳಿಕೊಂಡು ಹೋಗಿರುವ ದೃಶ್ಯ ಮೊಬೈಲ್‌ ಕ್ಯಾಮರಾದಲ್ಲಿ‌ ಸೆರೆ ಆಗಿದ್ದು, ಅವರ ಈ ವರ್ತನೆಯನ್ನು ಚಾಲಕ ವಿರೋಧಿಸಿದ್ದ. ಅವರೊಂದಿಗಿನ ವಾಗ್ವಾದದಲ್ಲಿ ತಾನು ಕುಡಿದಿರುವುದಾಗಿಯೂ ಒಪ್ಪಿಕೊಂಡಿದ್ದ. ಆದರೂ ಪೊಲೀಸರು ವಾಗ್ವಾದ ಮುಂದುವರಿಸಿದ್ದರು. ಇದಲ್ಲದೇ ಪೊಲೀಸರು, ಆತ ಕುಡಿತ ಮತ್ತಿನಲ್ಲಿ ಇತರರ ಮೇಲೆ ಗಾಡಿ ಹಾಯಿಸುವಂತೆ ಹೋಗಿದ್ದಾನೆಂಬ ಅಪವಾದವನ್ನೂ ಮಾಡಿದ್ದರು. ಇದೆಲ್ಲದರಿಂದ ಮನ ನೊಂದ ತಿಪ್ಪೇಸ್ವಾಮಿ ಗಾಂಧಿವೃತ್ತದಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು ಸ್ಥಳೀಯರು‌ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಪೊಲೀಸರ ಕಿರುಕುಳದಿಂದ ಬೇಸತ್ತು ಪಾಠ ಕಲಿಸಲು ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದು ಗಾಯಾಳು ತಿಪ್ಪೇಸ್ವಾಮಿ ಹೇಳಿದ್ದಾರೆ.

ತಿಪ್ಪೇಸ್ವಾಮಿ ಸೆರೆಹಿಡಿದ ವೀಡಿಯೋ ಇಲ್ಲಿದೆ

ಇನ್ನು ಈ ಘಟನೆಯ ಸುದ್ದಿ‌ ಹಬ್ಬುತ್ತಿದ್ದಂತೆಯೇ ಆಸ್ಪತ್ರೆ ಬಳಿ ಜನ ಜಮಾಯಿಸಿ, ಪೊಲೀಸರ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ಆಟೋ ಚಾಲಕ ತಿಪ್ಪೇಸ್ವಾಮಿ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಆತ ಅನೇಕ ಸಲ ಪೊಲೀಸರು ಹಣ ಕೇಳಿದಾಗ ಕೊಟ್ಟು ಬಂದಿರುವುದು ನಾವೇ ನೋಡಿದ್ದೇವೆ. ಈ ಬಾರಿ ಹಣ ಇಲ್ಲದಿರುವ ಕಾರಣ ಪೊಲೀಸರಿಗೆ ಕೊಟ್ಟಿರಲಿಕ್ಕಿಲ್ಲ ಎಂದು ತಿಪ್ಪೇಸ್ವಾಮಿ ಪತ್ನಿ ಲಕ್ಷ್ಮೀ ಅಳಲು ತೋಡಿಕೊಂಡಿದ್ದಾರೆ‌.

ಆಟೋ ಚಾಲಕರ ಪ್ರತಿಭಟನೆ

ಚಾಲಕನ ಆತ್ಮಹತ್ಯೆ ಯತ್ನಕ್ಕೆ ಪೊಲೀಸರೇ ಕಾರಣವೆಂದು ಆರೋಪಿಸಿ ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಆಟೋ ಚಾಲಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆ ವೃತ್ತದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಘಟನೆ ಬಗ್ಗೆ ಎಸ್ಪಿ ಹೇಳಿದ್ದೇನು?

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ರಂಜಿತ್ ಕುಮಾರ್, ನಿನ್ನೆ ರಾತ್ರಿ 8:30ಕ್ಕೆ ಆಟೋ ಚಾಲಕನನ್ನು ಪೊಲೀಸರು ತಡೆದಿದ್ದಾರೆ.ಡ್ರಂಕ್ ಅಂಡ್ ಡ್ರೈವ್ ಬಗ್ಗೆ ಪ್ರಶ್ನಿಸಿದಾಗ ವಾಗ್ವಾದ ನಡೆದಿದೆ. PSI ಬಂದು ಪರಿಶೀಲಿಸುತ್ತಾರೆ ಎಂದು ಸೂಚಿಸಿದರೂ ಚಾಲಕ ತಿಪ್ಪೇಸ್ವಾಮಿ ಆಟೋ ಬಿಟ್ಟು ಹೋಗಿದ್ದಾರೆ. ನಂತರ ರಾತ್ರಿ 9:50ಕ್ಕೆ ತಿಪ್ಪೇಸ್ವಾಮಿ ಗಾಂಧಿ ವೃತ್ತಕ್ಕೆ ಬಂದು, ಸುತ್ತಲೂ ಪೆಟ್ರೋಲ್ ಸುರಿದು ಬೆಂಕಿಯಿಟ್ಟಿದ್ದಾರೆ. ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆದರಿಸಲು ಮುಂದಾದಾಗ ಆಕಸ್ಮಿಕ ಬೆಂಕಿ ತಗುಲಿದೆ.

ಇದನ್ನೂ ಓದಿ ಧಾರವಾಡದಲ್ಲೊಂದು ಘೋರ ದುರಂತ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ದೌರ್ಜನ್ಯ ಎಂದು ಬಿಂಬುಸಲಾಗುತ್ತಿದೆ.ಇದು ಪೊಲೀಸ್ ದೌರ್ಜನ್ಯ ಅಲ್ಲ, ಸಾರ್ವಜನಿಕರ ಉದಾಸೀನತೆ. ತಿಪ್ಪೇಸ್ವಾಮಿಯನ್ನು ಗಮನಿಸಿ ಜನ ಈ ಘಟನೆ ತಡೆಯಬಹುದಿತ್ತು. ಬೆಂಕಿ ಹಚ್ಚಿಕೊಂಡಾಗಲೂ ಜನರಿಂದ‌ ರಕ್ಷಣೆ ತಡವಾಗಿದೆ. ತಿಪ್ಪೇಸ್ವಾಮಿ ದೇಹ ಶೇ.50ರಷ್ಟು ಸುಟ್ಟಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಯಿಂದ ದಾವಣಗೆರೆ ಎಸ್ ಎಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us