AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದುರ್ಗ: ಪ್ರೀತಿಸುತ್ತಿದ್ದ ಯುವತಿಯ ಸಂಬಂಧಿಯಿಂದ ಟಾರ್ಚರ್​; ಮನನೊಂದ ಯುವಕ ನೇಣಿಗೆ ಶರಣು

ಆ ಯುವಕ ಪ್ರಾಣಕ್ಕಿಂತೂ ಹೆಚ್ಚಾಗಿ ತನ್ನ ಪ್ರೇಯಸಿಯನ್ನು ಪ್ರೀತಿಸುತ್ತಿದ್ದನು. ಆದರೆ ಈ ಜೋಡಿಗೆ ಗ್ರಾಮದ ಮತ್ತೋರ್ವ ಯುವಕ ವಿಲನ್ ಆಗಿ ಕಾಡಿದ್ದನು. ಕೊನೆಗೆ ಯುವ ಪ್ರೇಮಿ ಸಾವಿಗೆ ಶರಣಾದ ದಾರುಣ ಘಟನೆ ಕೋಟೆನಾಡಿನಲ್ಲಿ ನಡೆದಿದೆ.

ಚಿತ್ರದುರ್ಗ: ಪ್ರೀತಿಸುತ್ತಿದ್ದ ಯುವತಿಯ ಸಂಬಂಧಿಯಿಂದ ಟಾರ್ಚರ್​; ಮನನೊಂದ ಯುವಕ ನೇಣಿಗೆ ಶರಣು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Feb 09, 2023 | 7:24 AM

Share

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನಿಂದ ಸುಮಾರು 17 ಕಿ.ಮೀ ದೂರದಲ್ಲಿರುವ ಕುರುಬರಹಳ್ಳಿ ಎಂಬ ಗ್ರಾಮದಲ್ಲಿ ವಾಸವಾಗಿದ್ದ ಗೌರಿಬಾಯಿ ಎಂಬ ಮಹಿಳೆಯು ಕೆಲ ವರ್ಷಗಳ ಹಿಂದೆ ತನ್ನ ಪತಿಯನ್ನ ಕಳೆದುಕೊಂಡಿದ್ದಳು. ಇದ್ದೂಬ್ಬ ಮಗ ಗಣೇಶ ನಾಯ್ಕ್​ನನ್ನು ಪ್ರೀತಿಯಿಂದ ಸಾಕಿದ್ದಳು. ಮಗ ಓದಿ ದೊಡ್ಡ ವಿದ್ಯಾವಂತ ಆಗಲಿ, ಅಧಿಕಾರಿ ಆಗಲಿ ಎಂದು ಕನಸು ಕಟ್ಟಿಕೊಂಡಿದ್ದಳು. ಅಂತೆಯೇ ಓದಿನಲ್ಲಿ ಮುಂದಿದ್ದ ಗಣೇಶ ನಾಯ್ಕ್ ಸದ್ಯ ಹಿರಿಯೂರಿನ ಪದವಿ ಕಾಲೇಜಿನಲ್ಲಿ ಬಿ.ಎ ಓದುತ್ತಿದ್ದನು. ಗ್ರಾಮದಿಂದ ಪಟ್ಟಣದ ಕಾಲೇಜಿಗೆ ನಿತ್ಯ ಹೋಗಿ ಬರುವಾಗ ಗ್ರಾಮದ ಓರ್ವ ಯುವತಿ ಪರಿಚಯವಾಗಿದ್ದಳು. ಕಣ್ಣು ಕಣ್ಣು ಬೆರೆತಿತ್ತು. ಪರಿಚಯವಾಗಿ ಸ್ನೇಹ ಬೆಸೆದಿತ್ತು. ಸ್ನೇಹ ಗಾಢ ಪ್ರೇಮದತ್ತ ತಿರುಗಿತ್ತು. ಆದರೆ ಇದೀಗ ಗಣೇಶ ನಾಯ್ಕ್ ನೇಣಿಗೆ ಶರಣಾಗಿದ್ದಾನೆ.

ಯುವ ಪ್ರೇಮಿಗಳು ನಿತ್ಯ ಹಿರಿಯೂರಿಗೆ ಓಡಾಡುವುದನ್ನು ಗ್ರಾಮದ ಆಟೋ ಚಾಲಕ ಮನು ಎಂಬಾತ ಗಮನಿಸಿದ್ದನು. ಅಷ್ಟೇ ಅಲ್ಲದೆ ಯುವತಿ ನನ್ನ ಸಂಬಂಧಿ, ನಾನೇ ಅವಳನ್ನು ಮದುವೆ ಆಗುತ್ತೇನೆ. ನೀನು ಅವಳ ಸಹವಾಸವನ್ನು ಬಿಟ್ಟು ಬಿಡು ಎಂದು ಗಣೇಶ ನಾಯ್ಕ್​ನಿಗೆ ಧಮ್ಕಿ ಹಾಕ ತೊಡಗಿದ್ದನು. ಆದರೆ ಕಳೆದ 6 ತಿಂಗಳುಗಳಿಂದ ಗಾಢ ಪ್ರೇಮಕ್ಕೆ ಒಳಗಾಗಿದ್ದ ಪ್ರೇಮಿ ಗಣೇಶ್ ನಾಯ್ಕ್ ಮಾತ್ರ ಪ್ರಾಣ ಬಿಟ್ಟರು ಆಕೆಯನ್ನ ಬಿಡೆನು ಎಂದಿದ್ದಾನೆ. ಮನು ನಾಯ್ಕ್ ತನ್ನ ಗೆಳೆಯರ ಗುಂಪು ಕಟ್ಟಿಕೊಂಡು ಗಣೇಶ್ ನಾಯ್ಕ್ ಮೇಲೆ ಆಗಾಗ ಹಲ್ಲೆ ನಡೆಸಿದ್ದಾನೆ. ಇಲ್ಲದ ನೆಪವೊಡ್ಡಿ ಪೀಡಿಸ ತೊಡಗಿದ್ದಾನೆ. ಮನೆ ಬಳಿ ತೆರಳಿ ಗಲಾಟೆ ಮಾಡುವುದು. ಯುವತಿಯ ಮನೆಯವರಿಗೆ ಹೇಳಿ ಗಲಾಟೆ ಮಾಡಿಸುತ್ತೇನೆಂದು ಬೆದರಿಸುವುದು ಆರಂಭಿಸಿದ್ದಾನೆ. ಹೀಗಾಗಿ, ತಿಂಗಳ ಹಿಂದಷ್ಟೇ ಮನು ನಾಯ್ಕ್ ಮತ್ತು ಗುಂಪಿನಿಂದ ಹಲ್ಲೆಗೊಳಗಾಗಿದ್ದ ಗಣೇಶ ನಾಯ್ಕ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ವಿಷಯ ಬೇಗ ತಿಳಿದ ಕಾರಣ ಸಂಬಂಧಿಕರು ಹಿರಿಯೂರು ಆಸ್ಪತ್ರೆಗೆ ದಾಖಲಸಿ ಚಿಕಿತ್ಸೆ ಕೊಡಿಸಿದ್ದಾರೆ. ಇಬ್ಬರಿಗೂ ಬುದ್ಧಿವಾದ ಹೇಳಿ ಗಲಾಟೆ ಮಾಡಿಕೊಳ್ಳದಂತೆ ತಿಳಿಸಿದ್ದಾರೆ. ಆದ್ರೆ ಮನು ನಾಯ್ಕ್ ಮಾತ್ರ ತನ್ನ ಚಾಳಿ ಮುಂದುವರೆಸಿದ್ದಾನೆ. ಗಣೇಶ ನಾಯ್ಕ್ ಸೂಕ್ಷ್ಮ ಸ್ವಭಾವದವನಾಗಿದ್ದು ಈಗಾಗಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನೆಂಬುದನ್ನು ಮರೆತು ದರ್ಪ ತೋರಿದ್ದಾನೆ. ಅಲ್ಲದೆ ಯುವತಿಗೂ ಬೆದರಿಸಿ ಗಣೇಶ ನಾಯ್ಕ್ ಜತೆ ಮಾತನಾಡದಂತೆ ಪಿತೂರಿ ನಡೆಸಿದ್ದಾನೆ. ಹೀಗಾಗಿ, ಕೆಲ ದಿನಗಳಿಂದ ಗಣೇಶ್ ನಾಯ್ಕ್​ಗೆ ಯುವತಿ ಫೋನ್ ಮಾಡಿಲ್ಲ, ಮೆಸೇಜು ಸಹ ಮಾಡದಂತೆ ಆಗಿದ್ದಾಳೆ. ಗಣೇಶ್ ನಾಯ್ಕ್ ಎಷ್ಟೆಲ್ಲಾ ಪ್ರಯತ್ನಿಸಿದರೂ ಪ್ರೇಯಸಿಯ ಮುಖ ನೋಡಲು ಸಹ ಆಗಿಲ್ಲ. ಫೋನ್ ಸಂಪರ್ಕವೂ ಸಾಧ್ಯವಾಗಿಲ್ಲ. ಪರಿಣಾಮ ಪ್ರೇಯಸಿಯನ್ನೇ ಸರ್ವಸ್ವ ಎಂದು ಭಾವಿಸಿದ್ದ ಗಣೇಶ ನಾಯ್ಕ್ ಮಾನಸಿಕವಾಗಿ ನೊಂದಿದ್ದಾನೆ. ಒಂದು ಕಡೆ ಮನು ನಾಯ್ಕ್ ದೌರ್ಜನ್ಯ ಮತ್ತೊಂದು ಕಡೆ ಪ್ರೇಯಿಸಿಯೂ ದೂರಾಗಿರುವ ಕಾರಣ ತಿವ್ರ ನೊಂದಿದ್ದು, ತಾಯಿ ಗೌರಿಬಾಯಿ ಕೂಲಿಗೆ ಹೋಗಿದ್ದ ಸಮಯದಲ್ಲಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.

ಇದನ್ನೂ ಓದಿ:ಉತ್ತರ ಕನ್ನಡ: ನೇಣು ಬಿಗಿದುಕೊಂಡು ಪೊಲೀಸ್ ಕಾನ್ಸ್​ಟೇಬಲ್ ಆತ್ಮಹತ್ಯೆ

ತಾಯಿ ಫೆಬ್ರವರಿ 5ನೇ ತಾರೀಖು ಸಂಜೆ ವೇಳೆಗೆ ಕೂಲಿ ಕೆಲಸ ಮುಗಿಸಿ ಮನೆಗೆ ಹಿಂದುರಿಗಿದಾಗ ಮನೆಯಲ್ಲೇ ಮುದ್ದು ಮಗ ನೇಣಿಗೆ ಶರಣಾಗಿದ್ದು ಕಂಡು ಕಂಗಾಲಾಗಿದ್ದಾಳೆ. ಗ್ರಾಮಸ್ಥರು ಸಹ ವಿದ್ಯಾವಂತ ಯುವಕ ಏಕಾಏಕಿ ನೇಣಿಗೆ ಶರಣಾದ ವಿಷಯ ತಿಳಿದು ಶಾಕ್​ಗೆ ಒಳಗಾಗಿದ್ದಾರೆ. ಆದ್ರೆ, ಗಣೇಶ್ ನಾಯ್ಕ್ ಪ್ರೀತಿಸುತ್ತಿದ್ದ ಪ್ರೇಮಿಗಳಿಗೆ ಮನು ಹಿಂಸೆ ನೀಡಿದ್ದನು. ನನ್ನ ಪ್ರೇಯಸಿ ನನಗೆ ಫೋನ್., ಮೆಸೇಜ್ ಮಾಡದಂತಾಗಲು ಮನು ಕಾರಣ. ಹೀಗಾಗಿ, ನನ್ನ ಸಾವಿಗೆ ಮನುನೇ ಕಾರಣ. ಅಮ್ಮ ನನ್ನ ಕ್ಷಮಿಸು ಎಂದು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ. ಆದ್ರೂ ತಾಯಿ ಹೃದಯ ಮಗನ ಉಸಿರು ಗಟ್ಟಿಯಾಗಿರಲಿ ಎಂದು ಭಾವಿಸಿ ಹಿರಿಯೂರು ಆಸ್ಪತ್ರೆಗೆ ಕರೆತಂದಿದ್ದಾಳೆ. ಹಿರಿಯೂರು ಆಸ್ಪತ್ರೆಯ ವೈದ್ಯರು ಆಗಲೇ ಗಣೇಶ್ ನಾಯ್ಕ್ ಉಸಿರು ಚೆಲ್ಲಿದ್ದಾನೆಂದು ತಿಳಿಸಿದ್ದಾರೆ. ಹೀಗಾಗಿ, ಫೆಬ್ರವರಿ 6ರ ಬೆಳಗ್ಗೆ ಹಿರಿಯೂರು ಗ್ರಾಮಾಂತರ ಠಾಣೆ ಬಳಿ ಮೃತನ ತಾಯಿ ಮತ್ತು ಸಂಬಂಧಿಕರು ಧರಣಿ ನಡೆಸಿದರು. ಕೂಡಲೇ ಆರೋಪಿ ಮನು ಮತ್ತು ಇತರರನ್ನು ಬಂಧಿಸುವಂತೆ ಆಗ್ರಹಿಸಿದರು. ಆರೋಪಿಗಳ ಬಂಧನ ಆಗುವವರೆಗೆ ಧರಣಿ ಬಿಡುವುದಿಲ್ಲ. ಶವ ಊರಿಗೆ ಕೊಂಡೊಯ್ಯುವುದಿಲ್ಲ ಎಂದು ಪಟ್ಟು ಹಿಡಿದರು. ಕೊನೆಗೆ ಹಿರಿಯೂರು ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಜರುಗಿಸುತ್ತೇವೆಂದು ಭರವಸೆ ನೀಡಿ ಸಮಾಧಾನ ಪಡಿಸಿದರು.

ಪ್ರೇಮಿಗಳ ಪಾಲಿಗೆ ವಿಲನ್ ಆಗಿದ್ದ ಮನುಗೆ ಗಣೇಶ್ ಪ್ರೇಮಿಸುತ್ತಿದ್ದ ಯುವತಿಯನ್ನೇ ಮದುವೆ ಆಗುವ ಆಸೆ ಇತ್ತು. ಹೀಗಾಗಿ. ಗಣೇಶ್ ನಾಯ್ಕ್ ಮತ್ತು ಹುಡುಗಿಗೆ ಬೆದರಿಸಿ ಇಬ್ಬರನ್ನೂ ದೂರಾಗಿಸಲು ಯತ್ನಿಸಿದ್ದಾನೆ. ಆದ್ರೆ ಪ್ರಾಣವನ್ನೇ ಬಿಟ್ಟೇನು ಪ್ರೇಯಸಿಯನ್ನ ಬಿಡೆನು ಎಂದ ಮುಗ್ಧ ಯುವಕ ಗಣೇಶ್ ಪ್ರಾಣ ತ್ಯಾಗ ಮಾಡಿದ್ದಾನೆ. ಆರೋಪಿ ಮನು ಸದ್ಯ ನಾಪತ್ತೆ ಆಗಿದ್ದಾನೆ. ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಣೇಶನ ಪ್ರಾಣ ಬಲಿ ಪಡೆದ ಪಾಪಿ ಮನು ವಿರುದ್ಧ ಪೊಲೀಸ್ರು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕಿದೆ.

ವರದಿ: ಬಸವರಾಜ ಮುದನೂರ್ ಟಿವಿ9 ಚಿತ್ರದುರ್ಗ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us