‘2023ರಲ್ಲಿ ಹೆಚ್​.ಡಿ.ಕುಮಾರಸ್ವಾಮಿ ಅವರಿಗೆ ನೀಡುವ ಮತವೇ ಉಡುಗೊರೆ’; ವಿವಾಹ ಆಹ್ವಾನ ಪತ್ರಿಕೆಯ ಫೋಟೋ ವೈರಲ್

| Updated By: shivaprasad.hs

Updated on: May 06, 2022 | 1:14 PM

JDS | HD Kumaraswamy | Viral News: ಚಿತ್ರದುರ್ಗ ಜಿಲ್ಲೆಯ ವ್ಯಕ್ತಿಯೋರ್ವರು ವಿವಾಹದ ಆಹ್ವಾನ ಪತ್ರಿಕೆಯಲ್ಲಿ ಅವರ ನೆಚ್ಚಿನ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿಯವರ ಭಾವಚಿತ್ರವನ್ನು ಮುದ್ರಿಸಿದ್ದಾರೆ. ಇದರೊಂದಿಗೆ ಆಹ್ವಾನಿತರಲ್ಲಿ ವಿಶೇಷ ಕೋರಿಕೆಯೊಂದನ್ನೂ ಮುಂದಿಟ್ಟಿದ್ದಾರೆ. ಏನದು?

‘2023ರಲ್ಲಿ ಹೆಚ್​.ಡಿ.ಕುಮಾರಸ್ವಾಮಿ ಅವರಿಗೆ ನೀಡುವ ಮತವೇ ಉಡುಗೊರೆ’; ವಿವಾಹ ಆಹ್ವಾನ ಪತ್ರಿಕೆಯ ಫೋಟೋ ವೈರಲ್
ವೈರಲ್ ಆಗಿರುವ ಆಮಂತ್ರಣ ಪತ್ರಿಕೆ (ಎಡ ಚಿತ್ರ), ಬಲ ಚಿತ್ರದಲ್ಲಿ ಕೆಳಭಾಗದಲ್ಲಿ ವಧು-ವರರಾದ ಜಯಕುಮಾರ್ ಹಾಗೂ ಜ್ಯೋತಿಲಕ್ಷ್ಮಿ
Follow us on

ಸಾಮಾನ್ಯವಾಗಿ ವಿವಾಹಕ್ಕೆ ಆಮಂತ್ರಣ ನೀಡುವ ಆಹ್ವಾನ ಪತ್ರಿಕೆಗಳಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ವಧು-ವರರಿಗೆ ಆಶೀರ್ವಾದ ಮಾಡಬೇಕೆಂದು ವಿನಂತಿ ಮಾಡಿರುತ್ತಾರೆ. ಉಡುಗೊರೆಗಳನ್ನು ಸ್ವೀಕರಿಸಲು ನಿರಾಕರಿಸುವವರು ‘ಆಶೀರ್ವಾದವೇ ಉಡುಗೊರೆ’ ಎಂದು ಆಹ್ವಾನ ಪತ್ರಿಕೆಯಲ್ಲೇ ಮುದ್ರಿಸಿರುತ್ತಾರೆ. ಇತ್ತೀಚೆಗೆ ವಿವಾಹ ಆಮಂತ್ರಣದ ಪತ್ರಿಕೆಗಳಲ್ಲಿ ತಮ್ಮ ನೆಚ್ಚಿನ ನಾಯಕರ ಬಗ್ಗೆ ಬರೆಯುವ ಟ್ರೆಂಡ್ (Trend) ಹೆಚ್ಚುತ್ತಿದೆ. ಇತ್ತೀಚೆಗೆ ಹಲವಾರು ಅಭಿಮಾನಿಗಳು ತಮ್ಮ ಆಹ್ವಾನ ಪತ್ರಿಕೆಗಳಲ್ಲಿ ಪುನೀತ್ ರಾಜ್​ಕುಮಾರ್ ಅವರ ಹೆಸರನ್ನು ಹಾಗೂ ಭಾವಚಿತ್ರವನ್ನು ಮುದ್ರಿಸಿದ್ದನ್ನು ನೀವು ನೋಡಿರಬಹುದು. ಇದೀಗ ಚಿತ್ರದುರ್ಗ ಜಿಲ್ಲೆಯ ವ್ಯಕ್ತಿಯೋರ್ವರು ವಿವಾಹದ ಆಹ್ವಾನ ಪತ್ರಿಕೆಯಲ್ಲಿ (Wedding Card) ಅವರ ನೆಚ್ಚಿನ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿಯವರ (HD Kumaraswamy) ಭಾವಚಿತ್ರವನ್ನು ಮುದ್ರಿಸಿದ್ದಾರೆ. ಇದರೊಂದಿಗೆ ಆಹ್ವಾನಿತರಲ್ಲಿ ವಿಶೇಷ ಕೋರಿಕೆಯೊಂದನ್ನೂ ಮುಂದಿಟ್ಟಿದ್ದಾರೆ. ಏನದು?

ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಪಿ.ಗೌರೀಪುರದವರಾದ ಜಯಕುಮಾರ್.ಎನ್ ಶೀಘ್ರದಲ್ಲೇ ವಿವಾಹವಾಗುತ್ತಿದ್ದಾರೆ. ಜೆಡಿಎಸ್ ಪಕ್ಷದ ಕಾರ್ಯಕರ್ತರಾಗಿರುವ ಅವರು ಆಹ್ವಾನ ಪತ್ರಿಕೆಯಲ್ಲಿ ನೆಚ್ಚಿನ ನಾಯಕರಾದ ಹೆಚ್​.ಡಿ.ಕುಮಾರಸ್ವಾಮಿ ಅವರ ಭಾವಚಿತ್ರವನ್ನು ಮುದ್ರಿಸಿದ್ದಾರೆ. ಅದರಲ್ಲಿ ‘‘2023ರ ಚುನಾವಣೆಯಲ್ಲಿ ಹೆಚ್​.ಡಿ.ಕುಮಾರಸ್ವಾಮಿಯವರಿಗೆ ನೀಡುವ ಮತವೇ ನಮಗೆ ನೀವು ನೀಡುವ ಉಡುಗೊರೆ’’ ಎಂದು ಬರೆಯಲಾಗಿದೆ. ಆಹ್ವಾನ ಪತ್ರಿಕೆಯ ಮತ್ತೊಂದು ಭಾಗದಲ್ಲಿ ‘ನವಕರ್ನಾಟಕ ನಿರ್ಮಾಣಕ್ಕಾಗಿ ಜೆಡಿಎಸ್’ ಎಂಬ ಘೋಷವಾಕ್ಯವನ್ನು ಬರೆಯಲಾಗಿದೆ.

ಆಮಂತ್ರಣ ಪತ್ರಿಕೆಯಲ್ಲಿ ವಿಶೇಷ ಕೋರಿಕೆ ಮುಂದಿಟ್ಟಿರುವ ಈ ವಿಚಾರ ಸದ್ಯ ವೈರಲ್ ಆಗಿದೆ. ವಿವಾಹವಾಗಲಿರುವ ವರ ಜಯಕುಮಾರ್ ಅವರನ್ನು ಟಿವಿ9 ಡಿಜಿಟಲ್ ಸಂಪರ್ಕಿಸಿತ್ತು. ಈ ವೇಳೆ ಅವರು ಆಮಂತ್ರಣ ಪತ್ರಿಕೆಯಲ್ಲಿ ಹೀಗೆ ಮುದ್ರಿಸಿದ್ದೇಕೆ ಎಂದು ವಿವರಿಸಿದ ಅವರು, ‘‘ಜನರು ಎಲ್ಲಾ ಪಕ್ಷಗಳ ಆಡಳಿತ ನೋಡಿದ್ದಾರೆ. 2023ರಲ್ಲಿ ಸಂಪೂರ್ಣ ಕುಮಾರಸ್ವಾಮಿಯವರ ಸರ್ಕಾರ ಬರಬೇಕು. ಆಗ ಕಷ್ಟದಲ್ಲಿರುವ ರೈತರಿಗೆ, ನಿರುದ್ಯೋಗಿಗಳಿಗೆ ಸಹಾಯಕವಾಗುತ್ತದೆ. ಇತ್ತೀಚೆಗೆ ಅವರು ಉಚಿತ ಶಿಕ್ಷಣವನ್ನೂ ಘೋಷಿಸಿದ್ದಾರೆ. ಅಂತಹ ಹಲವು ಯೋಜನೆಗಳು ಜಾರಿಗೆ ಬಂದು ಎಲ್ಲರಿಗೂ ಉಪಕಾರವಾಗುತ್ತದೆ’’ ಎಂದಿದ್ದಾರೆ.

ಇದನ್ನೂ ಓದಿ
ಎ.ಆರ್​. ರೆಹಮಾನ್​ ಪುತ್ರಿ ಖತಿಜಾ ಮದುವೆ; ಅಳಿಯ ರಿಯಾಸ್ದೀನ್​ ಶೇಖ್​ ಮೊಹಮ್ಮದ್​ ಹಿನ್ನೆಲೆ ಏನು?
ಮೃತ ವ್ಯಕ್ತಿಯ ಆಸ್ತಿ ಲಪಟಾಯಿಸಿದ ಆರೋಪ; ಹೊಳಲ್ಕೆರೆ ಬಿಜೆಪಿ ಶಾಸಕ ಎಂ ಚಂದ್ರಪ್ಪ ಪತ್ನಿ, ಪುತ್ರರ ವಿರುದ್ಧ ಎಫ್ಐಆರ್ ದಾಖಲು
ಐದು ಕೆಜಿಯ ಕೇಕ್ ಕತ್ತರಿಸಿ ಸಾಕು ಕುರಿಯ ಹುಟ್ಟುಹಬ್ಬ ಆಚರಿಸಿದ ಕುರಿ ವ್ಯಾಪಾರಿ; ಫೋಟೋಗಳು ಇಲ್ಲಿವೆ

ಜತೆಗೆ ಕುಮಾರಸ್ವಾಮಿಯವರು ಐದು ವರ್ಷ ಪೂರ್ಣ ಆಡಳಿತ ಮಾಡಬೇಕು ಎನ್ನುವ ಬಯಕೆಯನ್ನೂ ವ್ಯಕ್ತಪಡಿಸಿದ್ದಾರೆ ಜಯಕುಮಾರ್. ‘‘ಹೆಚ್​ಡಿಕೆ ಇದುವರೆಗೆ ಸಣ್ಣ ಅವಧಿಯಲ್ಲಿ ಸರ್ಕಾರ ನಡೆಸಿದ್ದಾರೆ. ಅವರಿಗೆ ಪೂರ್ಣ ಅವಧಿ ಸಿಗಬೇಕು. ಆಗ ಹಲವು ಅಭಿವೃದ್ಧಿ ಯೋಜನೆಗಳು ಜಾರಿಯಾಗಲಿವೆ’’ ಎಂದು ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಆಹ್ವಾನ ಪತ್ರಿಕೆಯ ಒಳಭಾಗ

ಆಹ್ವಾನ ಪತ್ರಿಕೆ ವೈರಲ್ ಆಗಿದ್ದರ ಬಗ್ಗೆ ಖುಷಿ ಹಂಚಿಕೊಂಡ ಜಯಕುಮಾರ್, ತಮ್ಮ ನೆಚ್ಚಿನ ನಾಯಕನ ವಿಚಾರಗಳು ಜನರಿಗೆ ತಲುಪಬೇಕು. ಮುಂದಿನ ಬಾರಿ ಅವರೇ ಅಧಿಕಾರದಲ್ಲಿ ಬರಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಮೇ 18ರಂದು ಜ್ಯೋತಿಲಕ್ಷ್ಮಿ ಎನ್ನುವವರೊಂದಿಗೆ ಜಯಕುಮಾರ್ ವಿವಾಹವಾಗಲಿದ್ದಾರೆ.

ಇನ್ನಷ್ಟು ಕುತೂಹಲಕರ ವಿಚಾರ ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ