
ಚಿತ್ರದುರ್ಗ, ಸೆಪ್ಟೆಂಬರ್ 7: ಲಿಂಗಾಯತ ಮತ್ತು ಮುಸ್ಲಿಂ ಧರ್ಮ ಒಂದೇ ಎಂಬರ್ಥದಲ್ಲಿ ಸಾಣೇಹಳ್ಳಿ ತರಳಬಾಳು ಮಠದ ಪಂಡಿತಾರಾಧ್ಯ ಶ್ರೀಗಳು (Taralabalu Mutt Seer) ನೀಡಿದ ಹೇಳಿಕೆಯನ್ನು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಬಲವಾಗಿ ವಿರೋಧಿಸಿದ್ದಾರೆ. ಲಿಂಗಾಯತ ತತ್ವವೇ ಬೇರೆ, ಮುಸ್ಲಿಂ ಧರ್ಮವೇ ಬೇರೆ. ಜನರಲ್ಲಿ ನಾಸ್ತಿಕವಾದ ವಿತ್ತಲು ಹೋಗಬೇಡಿ ಎಂದು ವಚನಾನಂದ ಶ್ರೀಗಳು ಆಗ್ರಹಿಸಿದ್ದಾರೆ.
ಬಸವಣ್ಣ ಸಾಕಾರ ಮತ್ತು ನಿರಾಕಾರ ಈ ಎರಡೂ ತತ್ವಗಳನ್ನು ಒಪ್ಪಿಕೊಂಡವರು. ತಾವೆಲ್ಲಾ ಹಿಂದೂಗಳೇ. ಯಾವಾಗಲೂ ಕೂಡ ಹಿಂದೂಗಳ ಜೊತೆಗಿದ್ದದ್ದು ಲಿಂಗಾಯತರು. ಮುಸ್ಲಿಂ ಧರ್ಮದ ಜೊತೆ ಲಿಂಗಾಯತ ತತ್ವದ ಹೋಲಿಕೆ ಶುದ್ಧ ತಪ್ಪು. ಲಿಂಗಾಯತರದ್ದು ಅಹಿಂಸಾ ತತ್ವ. ಅದರಲ್ಲಿ ಗೋಮಾಂಸ ಸೇವನೆ ಇಲ್ಲ ಎಂದು ಪಂಚಮಸಾಲಿ ಪೀಠದ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಸವ ಸಂಸ್ಕೃತಿ ಯಾತ್ರೆಯ ಸಂದರ್ಭದಲ್ಲಿ ಸಾಣೆಹಳ್ಳಿ ತರಳಬಾಳು ಮಠದ ಶ್ರೀಗಳು ಲಿಂಗಾಯತ ಮತ್ತು ಮುಸ್ಲಿಂ ಧರ್ಮಗಳು ಒಂದೇ ಎನ್ನುವ ಅನಿಸಿಕೆ ವ್ಯಕ್ತಪಡಿಸಿದ್ದರು. ಈ ಯಾತ್ರೆಗೆ ತಮ್ಮ ವಿರೋಧ ಇಲ್ಲ. ಆದರೆ, ಅಲ್ಲಿ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡಬೇಡಿ ಎಂದು ಯಾತ್ರೆಯ ಭಾಗಿದಾರರಿಗೆ ಪಂಚಮಸಾಲಿ ಮಠದ ಶ್ರೀಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಗಣೇಶ ಮೆರವಣಿಗೆ ವೇಳೆ ಹಸಿರು ಧ್ವಜ ತಂದು ಮುಸ್ಲಿಂ ಯುವಕ ಗಲಾಟೆ: ಹಿಂದೂ ಯುವಕನಿಗೆ ಚಾಕು ಇರಿತ
ವಚನಾನಂದ ಶ್ರೀಗಳ ಹೇಳಿಕೆಗೆ ಇತರ ಹಲವು ಲಿಂಗಾಯತ ಸ್ವಾಮಿಗಳು ಧ್ವನಿ ಗೂಡಿಸಿದ್ದಾರೆ. ಬಸವ ಸಂಸ್ಕೃತಿ ಯಾತ್ರೆ ಮೂಲಕ ಸಮಾಜ ಒಡೆಯುವ ಕೆಲಸ ಮಾಡಲಾಗುತ್ತಿದೆ. ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪಿಸುವ ಹುನ್ನಾರ ಇದೆ ಎಂದು ಶಿರಹಟ್ಟಿ ಮಠದ ದಿಂಗಾಲೇಶ್ವರ ಶ್ರೀ, ಮಹಾರಾಷ್ಟ್ರದ ಬೊಮ್ಮಲಿಂಗೇಶ್ವವ ಮಠದ ಶ್ರೀಕಂಠ ಶಿವಾಚಾರ್ಯರು, ಆಂಧ್ರದ ಸೋಮಲಿಂಗ ಶಿವಾಚಾರ್ಯರು, ಸಿಂದಗಿ ಸಾರಂಗ ಮಠದ ಪ್ರಭು ಸಾರಂಗದೇವ ಶಿವಾಚಾರ್ಯರು, ಮುಕ್ತಿಮಂದಿರ ಸ್ವಾಮಿಗಳು, ಹಾವೇರಿ ಹುಕ್ಕೇರಿ ಮಠದ ಶ್ರೀಗಳು ಮೊದಲಾದವರೂ ಕೂಡ ಬಸವ ಸಂಸ್ಕೃತಿ ಯಾತ್ರೆಯನ್ನು ವಿರೋಧಿಸಿದ್ದಾರೆ.
ಸೆಪ್ಟೆಂಬರ್ 19ರಂದು ವೀರಶೈವ ಲಿಂಗಾಯತ ಏಕತಾ ಸಮಾವೇಶ ನಡೆಸಿ, ಅಲ್ಲಿ ವೀರಶೈವ ಮತ್ತು ಲಿಂಗಾಯತ ಒಂದೇ ಎನ್ನುವ ಸಂದೇಶ ಸಾರಲಾಗುವುದು ಎಂದು ಈ ಶ್ರೀಗಳೆಲ್ಲರೂ ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಕೊನೆಗೂ MLC ನಾಮನಿರ್ದೇಶನಕ್ಕೆ ಗ್ರೀನ್ ಸಿಗ್ನಲ್ ನೀಡಿದ ರಾಜ್ಯಪಾಲರು, ನಾಲ್ವರು ನೂತನ ಪರಿಷತ್ ಸದಸ್ಯರು ಯಾರು?
ಸಾಣೆಹಳ್ಳಿ ತರಳಬಾಳು ಮಠದ ಪಂಡಿತಾರಾಧ್ಯ ಶಿವಾಚಾರ್ಯರು ಈ ಹಿಂದೆಯೂ ಲಿಂಗಾಯ ಕುರಿತಾಗಿ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದುಂಟು. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿರುವ ಶ್ರೀಗಳು, ಕಳೆದ ವರ್ಷ ಕೂಡ ಲಿಂಗಾಯ ಮತ್ತು ಮುಸ್ಲಿಂ ಧರ್ಮಗಳ ನಡುವಿರುವ ಸಾಮ್ಯತೆ ಬಗ್ಗೆ ಹೇಳಿದ್ದರು. ಆಗಲೂ ಕೂಡ ಅನೇಕ ಲಿಂಗಾಯತ ಮಠದ ಸ್ವಾಮೀಜಿಗಳು ಆ ಹೇಳಿಕೆಯನ್ನು ವಿರೋಧಿಸಿದ್ದರು.
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ