ನೀವೇ ದೇಗುಲ ನಿರ್ಮಿಸಿಕೊಳ್ಳಿ, ನೀವೇ ಪೂಜಾರಿಗಳಾಗಿ: ಶೋಷಿತ ಸಮುದಾಯದಕ್ಕೆ ಸಿದ್ದರಾಮಯ್ಯ ಕರೆ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ನಡೆದ ಉಪ್ಪಾರ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಗರ್ಭಗುಡಿಗೆ ಶ್ರೀಗಳಿಗೆ ನಿರ್ಬಂಧ ವಿಚಾರ ತಿಳಿದು ಬೇಸರವಾಯಿತು. ಶೋಷಿತ ಸಮುದಾಯದ ಜನರು ನೀವೇ ದೇಗುಲ ನಿರ್ಮಿಸಿಕೊಳ್ಳಿ. ನೀವೇ ದೇವಸ್ಥಾನಗಳಲ್ಲಿ ಪೂಜಾರಿಗಳಾಗಿ ಎಂದು ಕರೆ ನೀಡಿದ್ದಾರೆ. ದಾರ್ಶನಿಕರು ಜಾಗೃತಿ ಮೂಡಿಸಿದಾಗ ಜಾತಿ ವ್ಯವಸ್ಥೆ ತಿಳಿಯಾಗಿದೆ. ಬಳಿಕ ಮತ್ತೆ ಜಾತಿ ವ್ಯವಸ್ಥೆ ಗಟ್ಟಿ ಆಗುತ್ತಲೇ ಸಾಗಿದೆ ಎಂದು ಜಾತಿ ವ್ಯವಸ್ಥೆ ಬಗ್ಗೆ ಪಾಠ ಮಾಡಿದ್ದಾರೆ. 

ನೀವೇ ದೇಗುಲ ನಿರ್ಮಿಸಿಕೊಳ್ಳಿ, ನೀವೇ ಪೂಜಾರಿಗಳಾಗಿ: ಶೋಷಿತ ಸಮುದಾಯದಕ್ಕೆ ಸಿದ್ದರಾಮಯ್ಯ ಕರೆ
ಸಿಎಂ ಸಿದ್ದರಾಮಯ್ಯ
Edited By:

Updated on: Feb 09, 2024 | 3:30 PM

ಚಿತ್ರದುರ್ಗ, ಫೆಬ್ರವರಿ 9: ಗರ್ಭಗುಡಿಗೆ ಶ್ರೀಗಳಿಗೆ ನಿರ್ಬಂಧ ವಿಚಾರ ತಿಳಿದು ಬೇಸರವಾಯಿತು. ಶೋಷಿತ ಸಮುದಾಯದ ಜನರು ನೀವೇ ದೇಗುಲ ನಿರ್ಮಿಸಿಕೊಳ್ಳಿ. ನೀವೇ ದೇವಸ್ಥಾನಗಳಲ್ಲಿ ಪೂಜಾರಿಗಳಾಗಿ ಎಂದು  ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ನಡೆದ ಉಪ್ಪಾರ ಸಮಾವೇಶದಲ್ಲಿ  ಚನ್ನಕೇಶವ ದೇವಸ್ಥಾನದಲ್ಲಿ ಕುರುಬ ಸ್ವಾಮೀಜಿಗೆ ನಿರ್ಬಂಧ ವಿಚಾರವಾಗಿ ಮಾತನಾಡಿದ ಅವರು, ಪಟ್ಟಭದ್ರರಿಂದ ಎಚ್ಚರವಾಗಿರಿ, ಬಿಕೇರ್ ಫುಲ್. ಶಿಕ್ಷಣದಿಂದ ವಂಚಿತರನ್ನಾಗಿಸುವ ಕೆಲಸ ಹಿಂದಿನಿಂದಲೂ ನಡೆದಿದೆ. ಮೊದಲು ಶಿಕ್ಷಿತರಾಗಿ ಬಳಿಕ ಸಾಮಾಜಿಕ, ಆರ್ಥಿಕವಾಗಿ ಸಬಲರಾಗಿರಿ. ನಾನು ಚಿಕ್ಕಂದಿನಲ್ಲಿ ಬಾವಿ ನೀರು ತರಲು ಹೋಗುತ್ತಿದ್ದೆನು. ಕಸ ತಿಳಿಗೊಳಿಸಿ ಕೊಡದಲ್ಲಿ ನೀರು ತುಂಬಿಕೊಳ್ಳುತ್ತಿದ್ದೆನು. ಬಳಿಕ ಮತ್ತೆ ನೀರ ಮೇಲೆ‌ ಕಸ‌ ಮುಚ್ಚಿಕೊಳ್ಳುತ್ತಿತ್ತು. ದಾರ್ಶನಿಕರು ಜಾಗೃತಿ ಮೂಡಿಸಿದಾಗ ಜಾತಿ ವ್ಯವಸ್ಥೆ ತಿಳಿಯಾಗಿದೆ. ಬಳಿಕ ಮತ್ತೆ ಜಾತಿ ವ್ಯವಸ್ಥೆ ಗಟ್ಟಿ ಆಗುತ್ತಲೇ ಸಾಗಿದೆ ಎಂದು ಜಾತಿ ವ್ಯವಸ್ಥೆ ಬಗ್ಗೆ ಪಾಠ ಮಾಡಿದ್ದಾರೆ.

ಪ್ರತಿಭೆ ಯಾರ ಸ್ವತ್ತಲ್ಲ, ಜಾತಿಯಿಂದ ಬರುವಂಥದಲ್ಲ. ಮಹಾನ್ ವಿದ್ವಾಂಸ ಅಂಬೇಡ್ಕರ್ ಯಾವ ಜಾತಿಯಲ್ಲಿ ಹುಟ್ಟಿದವರು? ಭಗೀರಥ ಮಹರ್ಷಿ ಶಿವನಿಗೆ ಒಲಿಸಿ ನೀರು ತರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಗ್ಯಾರಂಟಿ ಬಗ್ಗೆ ಟೀಕೆ ಮಾಡ್ತಾರೆ

ಜನಪರ ಯೋಜನೆಗಳನ್ನ ಮಾಡದವರು ಗ್ಯಾರಂಟಿ ಟೀಕಿಸುತ್ತಾರೆ. ಗ್ಯಾರಂಟಿ ಬಗ್ಗೆ ಬಿಜೆಪಿಯವರು ಟೀಕೆ ಮಾಡ್ತಾರೆ, ಹೀಯಾಳಿಸುತ್ತಾರೆ. ಗ್ಯಾರಂಟಿ ಯೋಜನೆಗಳನ್ನ ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. ನಾವೆಲ್ಲಾ ಶ್ರೀರಾಮನ ಭಕ್ತರಲ್ಲವೇ, ರಾಮಾಯಣ ಓದಿಲ್ಲವೇ. ಪಿತೃ ವಾಕ್ಯ ಪರಿಪಾಲನೆ, ರಾಮರಾಜ್ಯ ನಿರ್ಮಿಸಿದ್ದಕ್ಕೆ ಶ್ರೀರಾಮನ ಪೂಜಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಡಿಕೆ ಸುರೇಶ್​ಗೆ ಗುಂಡಿಕ್ಕಬೇಕು; ಕಾನೂನು ಮೀರಿ ನಡೆಯುವವರಿಗೆ ಖಡಕ್​ ಎಚ್ಚರಿಕೆ ಕೊಟ್ಟ ಗೃಹ ಸಚಿವ

ಭಗೀರಥ ಪೀಠಕ್ಕೆ ಜಮೀನು ಮಂಜೂರಾತಿ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಉಪ್ಪಾರ ಸಮಾಜಕ್ಕೆ ಮೀಸಲಾತಿ ಬಗ್ಗೆ ಕೇಂದ್ರಕ್ಕೆ ಶಿಫಾರಸು ಭರವಸೆ ನೀಡಿದ್ದಾರೆ. ಇನ್ನು ಎಸ್ಟಿ ಮೀಸಲಾತಿಗೆ ಉಪ್ಪಾರ ಸಮಾಜ ಮನವಿ ಮಾಡಿದೆ. ಕುರಿ ಕಾಯುವನ ಮಗ ಸಿಎಂ ಆಗಿದ್ದನ್ನು ಕೆಲವರು ಸಹಿಸಲ್ಲ. ನಿಮ್ಮ ಆಶೀರ್ವಾದ ನನ್ನ ಮೇಲೆ ಸರ್ಕಾರದ ಮೇಲೆ ಇರಲಿ ಎಂದಿದ್ದಾರೆ.

ಇದನ್ನೂ ಓದಿ: ಜನರ ವಿರೋಧ ಅರಿತು ಧ್ವಜ ಪ್ರಕರಣದಿಂದ ಹಿಂದೆ ಸರಿದ ಬಿಜೆಪಿ, ಜೆಡಿಎಸ್; ಚೆಲುವರಾಯಸ್ವಾಮಿ

ನನ್ನ ತಂದೆ ಪ್ರತಿಯೊಂದಕ್ಕೂ ಶಾನುಭೋಗರ ಬಳಿ ಕೇಳುತ್ತಿದ್ದರು. ಕಾನೂನು ಪದವಿ ಅಭ್ಯಾಸಕ್ಕೆಂದು ಕೇಳಿದಾಗ ಬೇಡ ಅಂದಿದ್ದರು. ನಾನು ಊರ ಪಂಚಾಯಿತಿ ಸೇರಿಸಿ ಕಾನೂನು ಪದವಿ ಓದಿದೆ. ಕಾನೂನು ಪದವಿ ಓದಿದ್ದಕ್ಕೆ ನಾನು ಈಗ ಮುಖ್ಯಮಂತ್ರಿ ಆಗಿದ್ದೇನೆ. ಅವಕಾಶ ಸಿಕ್ಕರೆ ಎಲ್ಲವೂ ಸಾಧ್ಯ. ಮಾತಿನ ಮಧ್ಯೆ ಸಚಿವ ಡಿ. ಸುಧಾಕರ್​ಗೆ ನೀನು ಮೇಲ್ಜಾತಿಯವನು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us