AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾತಿ ಕಾರಣಕ್ಕೆ ನಮ್ಮನ್ನ ಚನ್ನಕೇಶವ ದೇಗುಲದ ಗರ್ಭಗುಡಿಗೆ ಬಿಟ್ಟಿರಲಿಲ್ಲ – ಕನಕ ಪೀಠದ ಈಶ್ವರಾನಂದಪುರಿ ಶ್ರೀ

ಜಾತಿ ಕಾರಣಕ್ಕೆ ಬಾಗೂರು ಗ್ರಾಮದ ಚನ್ನಕೇಶವ ದೇಗುಲದಲ್ಲಿ ನಮಗೂ ಗರ್ಭಗುಡಿ ಪ್ರವೇಶಕ್ಕೆ ಬಿಡಲಿಲ್ಲ. ನಾವು ದೇಗುಲಕ್ಕೆ ಹೋಗಿದ್ದೆವೆಂಬ ಕಾರಣಕ್ಕೆ ದೇವಾಲಯ ಸ್ವಚ್ಛಗೊಳಿಸಿದ್ದಾರೆ ಎಂದು ಕನಕ ಪೀಠದ ಈಶ್ವರಾನಂದಪುರಿ ಶ್ರೀ ಬೇಸರ ವ್ಯಕ್ತಪಡಿಸಿದ್ದಾರೆ. ನಾವು ಹೋಗಿದ್ದಕ್ಕಾಗಿ ದೇಗುಲ ಸ್ವಚ್ಛವಾಯಿತೆಂದು ವ್ಯಂಗ್ಯವಾಡಿದ್ದಾರೆ. ಇನ್ನು ಮುಂದೆ ಚನ್ನಕೇಶವ ದೇಗುಲಕ್ಕೆ ನಾವು ಹೋಗಲ್ಲ ಎಂದರು.

Follow us
ಬಸವರಾಜ ಮುದನೂರ್, ಚಿತ್ರದುರ್ಗ
| Updated By: ಆಯೇಷಾ ಬಾನು

Updated on:Feb 03, 2024 | 12:14 PM

ಚಿತ್ರದುರ್ಗ, ಫೆ.03: ಜಾತಿ ಕಾರಣಕ್ಕೆ ಬಾಗೂರು ಗ್ರಾಮದ ಚನ್ನಕೇಶವ ದೇಗುಲದಲ್ಲಿ (Bagur Chennakeshava Temple) ನಮಗೂ ಗರ್ಭಗುಡಿ ಪ್ರವೇಶಕ್ಕೆ ಬಿಡಲಿಲ್ಲ. ನಾವು ದೇಗುಲಕ್ಕೆ ಹೋಗಿದ್ದೆವೆಂಬ ಕಾರಣಕ್ಕೆ ದೇವಾಲಯ ಸ್ವಚ್ಛಗೊಳಿಸಿದ್ದಾರೆ ಎಂದು ಸಾಣೇಹಳ್ಳಿಯಲ್ಲಿ ಕನಕ ಪೀಠದ ಈಶ್ವರಾನಂದಪುರಿ ಶ್ರೀ (Eshwaranandapuri Sri) ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಆಯೋಜಿಸಿದ್ದ ಅಂತರ್ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶುಕ್ರವಾರ ನಡೆದ ಪರಿವರ್ತನೆಯ ಹಾದಿಯಲ್ಲಿ ಮಠಗಳು ಗೋಷ್ಠಿಯಲ್ಲಿ ಈಶ್ವರಾನಂದಪುರಿ ಶ್ರೀ ಬೇಸರ ವ್ಯಕ್ತಪಡಿಸಿದ್ದಾರೆ.

ಕುರುಬರ ಸ್ವಾಮೀಜಿ ಒಳಗೆ ಬಂದರೆಂಬ ಕಾರಣಕ್ಕೆ ಸ್ವಚ್ಛತೆ ಮಾಡಿದ್ದಾರೆ. ನಾವು ಹೋಗಿದ್ದಕ್ಕಾಗಿ ದೇಗುಲ ಸ್ವಚ್ಛವಾಯಿತೆಂದು ವ್ಯಂಗ್ಯವಾಡಿದ್ದಾರೆ. ಇನ್ನು ಮುಂದೆ ಚನ್ನಕೇಶವ ದೇಗುಲಕ್ಕೆ ನಾವು ಹೋಗಲ್ಲ. ಮುಜರಾಯಿ ದೇಗುಲ ಎಂದು ಗೊತ್ತಿದ್ದರೆ ಪ್ರತಿಭಟನೆ ಮಾಡುತ್ತಿದ್ದೆವು. ಉಡುಪಿಯಲ್ಲಿ ಕನಕದಾಸರು ಪ್ರತಿಭಟಿಸಿದಂತೆ ಪ್ರತಿಭಟಿಸುತ್ತಿದ್ದೆವು. ಆಗ ನಮಗೆ ಮುಜರಾಯಿ ದೇಗುಲ ಎಂಬುದು ತಿಳಿದಿರಲಿಲ್ಲ. ವೈಕುಂಠ ಏಕಾದಶಿಗೆ ಹೋದಾಗ ನರಕ ತೋರಿಸಿಬಿಟ್ಟರು. ಪೂಜಾರಿ ಹೆಣ್ಣು ಮಕ್ಕಳಿಗೆಲ್ಲಾ ಗರ್ಭಗುಡಿಗೆ ಬಿಟ್ಟರು. ಮಠಾಧೀಶರಾದ ನಮಗೇ ಗರ್ಭಗುಡಿಯ ಒಳಗೆ ಬಿಡಲಿಲ್ಲ ಎಂದು ಕನಕ ಪೀಠದ ಈಶ್ವರಾನಂದಪುರಿ ಶ್ರೀ ಜಾತಿಯಿಂದ ಅನುಭವಿಸಿದ ಕಹಿ ಘಟನೆಯನ್ನು ನೆನಪಿಸಿಕೊಂಡರು.

ಗೋಷ್ಠಿಯಲ್ಲಿ ಸಾಣೇಹಳ್ಳಿ ತರಳಬಾಳು ಮಠದ ಡಾ.ಪಂಡಿತಾರಾಧ್ಯಶ್ರೀ, ಶಿವಶರಣ ಮಾದಾರ ಚನ್ನಯ್ಯ ಮಠದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಕುಂಚಿಟಿಗ ಮಠದ ಶಾಂತವೀರಶ್ರೀ, ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಶ್ರೀ ಉಪಸ್ಥಿತರಿದ್ದರು.

ಶ್ರೀಗಳು ಹೇಳಿದಂತೆ ಜಾತಿ ಕಾರಣಕ್ಕೆ ತಾರತಮ್ಯ ನಡೆದಿಲ್ಲ

ಇನ್ನು ಈಶ್ವರಾನಂದಪುರಿ ಶ್ರೀಗಳ ಹೇಳಿಕೆಗೆ ಬಾಗೂರು ಚನ್ನಕೇಶವ ದೇಗುಲದ ಅರ್ಚಕ ಶ್ರೀನಿವಾಸ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಶ್ರೀಗಳು ಹೇಳಿದಂತೆ ಜಾತಿ ಕಾರಣಕ್ಕೆ ತಾರತಮ್ಯ ನಡೆದಿಲ್ಲ. ಈಶ್ವರಾನಂದಪುರಿಶ್ರೀ ತೆರಳಿದ ಬಳಿಕ ದೇಗುಲ ಸ್ವಚ್ಛಗೊಳಿಸಿಲ್ಲ. ಈಶ್ವರಾನಂದಪುರಿಶ್ರೀ ಹಲವು ವರ್ಷಗಳಿಂದ ಬರುತ್ತಿದ್ದಾರೆ. ಕಳೆದ ತಿಂಗಳು ನಡೆದ ವೈಕುಂಠ ಏಕಾದಶಿಗೂ ಶ್ರೀಗಳು ಬಂದಿದ್ದರು. ಸ್ವಾಮೀಜಿ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದರು.

ಇದನ್ನೂ ಓದಿ: ಗ್ರಾಮಸ್ಥರೆಲ್ಲ ಸೇರಿ ದಲಿತ ಯುವಕನಿಗೆ ದೇವಸ್ಥಾನದಲ್ಲಿ ಜಾತ್ಯತೀತವಾಗಿ ಅದ್ದೂರಿ ಮದುವೆ ಮಾಡಿಸಿದರು! ಏನಿದರ ವಿಶೇಷ?

ಇದು ಸಾಮಾಜಿಕ ವಿಚಾರ, ಇದನ್ನು ಬಗೆಹರಿಸಬೇಕು -ಡಾ.ಜಿ.ಪರಮೇಶ್ವರ್‌

ಕನಕಪೀಠದ ಈಶ್ವರಾನಂದಪುರಿಶ್ರೀ ಹೇಳಿಕೆಗೆ ಗೃಹ ಇಲಾಖೆಯ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು ಇದು ಸಾಮಾಜಿಕ ವಿಚಾರ, ಇದನ್ನು ಬಗೆಹರಿಸಬೇಕು. ಇದು ನನ್ನ ಇಲಾಖೆಯ ವ್ಯಾಪ್ತಿಗೆ ಬರಲ್ಲ, ಹೆಚ್ಚಿನ ಮಾಹಿತಿ ಪಡೆಯುತ್ತೇನೆ ಎಂದರು.

ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು ಮಾಧ್ಯಮಗಳ ಮೂಲಕ ನನಗೂ ಈ ವಿಚಾರ ಗೊತ್ತಾಗಿದೆ. ಈ ಬಗ್ಗೆ ಮುಜರಾಯಿ ಇಲಾಖೆಯಿಂದ ಮಾಹಿತಿ ಪಡೆಯುತ್ತೇನೆ. ನಮ್ಮಲ್ಲಿ ಎಲ್ಲರೂ ಒಂದೇ ಎಂಬ ಭಾವನೆ ಇದೆ. ಎಲ್ಲಾ ಧರ್ಮದವರಿಗೆ ದೇವಸ್ಥಾನಗಳಿಗೆ ಪ್ರವೇಶಿಸಲು ಅವಕಾಶವಿದೆ ಎಂದರು.

ಶ್ರೀಗಳು ಬಂದ ನಂತರ ಗರ್ಭಗುಡಿ ಶುಚಿಗೊಳಿಸಿದ್ದರೆ ಅದು ತಪ್ಪು

ದಾವಣಗೆರೆಯಲ್ಲಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿದ್ದು, ದೇವಸ್ಥಾನಗಳ ಪ್ರವೇಶಕ್ಕೆ ಅವಕಾಶ ಕುರಿತು ಮೊದಲಿಂದಲೂ ಇದೆ. ಶ್ರೀಗಳಿಗೆ ಗರ್ಭಗುಡಿಯಲ್ಲಿ ಪೂಜೆ ಮಾಡುವುದಕ್ಕೆ ಅವಕಾಶ ಕೊಟ್ಟಿಲ್ಲ. ನಾನು ಚಾಮುಂಡಿ ಬೆಟ್ಟಕ್ಕೆ ಹೋದಾಗ ಗರ್ಭಗುಡಿವರೆಗೆ ಮಾತ್ರ ಅವಕಾಶ. ಕೆಲ ದೇವಸ್ಥಾನಗಳಲ್ಲಿ ಗರ್ಭಗುಡಿ ಒಳಗೆ ನಮ್ಮಿಂದ ಪೂಜೆ ಮಾಡಿಸುತ್ತಾರೆ. ಆದ್ರೆ ಶ್ರೀಗಳು ಬಂದ ನಂತರ ಗರ್ಭಗುಡಿ ಶುಚಿಗೊಳಿಸಿದ್ದರೆ ಅದು ತಪ್ಪು. ಈ ಬಗ್ಗೆ ಮುಜರಾಯಿ ಆಯುಕ್ತರಿಗೆ ವರದಿ ಕೇಳಿದ್ದೇನೆ. 100 ರಾಮಮಂದಿರ ಕಟ್ಟಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವೆ. ಬಿಜೆಪಿಯವರು ಈಗ ರಾಮ ರಾಮ ಅಂತಾ ಓಡಾಡುತಿದ್ದಾರೆ. ದೇವಸ್ಥಾನಗಳ ಅನುದಾನ ಕುರಿತು ಬಗ್ಗೆ ಪಟ್ಟಿ ಬಿಡುಗಡೆಗೊಳಿಸುತ್ತೇನೆ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:58 am, Sat, 3 February 24