AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ 13 ಜಿಲ್ಲೆಗಳಲ್ಲಿ ಪ್ರವಾಹ; ರಾಜ್ಯ ಸರ್ಕಾರದಿಂದ 510 ಕೋಟಿ ರೂ. ಬಿಡುಗಡೆ: ಬಸವರಾಜ ಬೊಮ್ಮಾಯಿ ಘೋಷಣೆ

Basavaraj Bommai: ಕಳೆದ ವರ್ಷದ ಬಾಕಿ ಪರಿಹಾರ ಹಣ ಬಿಡುಗಡೆ ಮಾಡ್ತೇವೆ ಎಂದೂ ಈ ವೇಳೆ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಬೆಳೆ ಹಾನಿ ಸಮೀಕ್ಷೆಗೆ ತಂಡವನ್ನು ಕಳಿಸಲು ಕೇಂದ್ರ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಕರ್ನಾಟಕದ 13 ಜಿಲ್ಲೆಗಳಲ್ಲಿ ಪ್ರವಾಹ; ರಾಜ್ಯ ಸರ್ಕಾರದಿಂದ 510 ಕೋಟಿ ರೂ. ಬಿಡುಗಡೆ: ಬಸವರಾಜ ಬೊಮ್ಮಾಯಿ ಘೋಷಣೆ
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
TV9 Web
| Updated By: ganapathi bhat|

Updated on: Aug 01, 2021 | 2:53 PM

Share

ಬೆಂಗಳೂರು: ರಾಜ್ಯದ 13 ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. 466 ಗ್ರಾಮಗಳಲ್ಲಿ ತೊಂದರೆ ಉಂಟಾಗಿದೆ. 13 ಜನರು ಪ್ರವಾಹಕ್ಕೆ ಬಲಿಯಾಗಿದ್ದಾರೆ. ಸಂಪರ್ಕ ರಸ್ತೆ, ಸೇತುವೆ ದುರಸ್ತಿಗೆ ಸಭೆ ಮಾಡಿದ್ದೇನೆ. ಅಧಿಕಾರಿಗಳ ಜತೆ ಸಭೆ ಮಾಡಿದ್ದೇನೆ. ಪರಿಹಾರ ಕೆಲಸಕ್ಕೆ ರಾಜ್ಯ ಸರ್ಕಾರದಿಂದ510 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಇಂದು (ಆಗಸ್ಟ್ 1) ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಎನ್​ಡಿಆರ್​ಎಫ್​ನಿಂದ 150 ಕೋಟಿ ರೂಪಾಯಿ ಖರ್ಚು ಮಾಡಲು ತೀರ್ಮಾನ ಮಾಡಲಾಗಿದೆ. 700 ಕೋಟಿಗೂ ಹೆಚ್ಚು ಹಣ ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ. ತುರ್ತು ಕಾಮಗಾರಿಗೆ 600 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಮನೆ, ಬೆಳೆ ನಾಶ ಬಗ್ಗೆ 15 ದಿನದಲ್ಲಿ ಸಮೀಕ್ಷೆಗೆ ಸೂಚನೆ ನೀಡಲಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಮನೆ ಕಳೆದುಕೊಂಡವರಿಗೆ 10 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು. ರಾಜ್ಯದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಮನೆ ಸಂಪೂರ್ಣ ಹಾನಿಯಾಗಿದ್ದರೆ 5 ಲಕ್ಷ ರೂಪಾಯಿ ಹಾಗೂ ಭಾಗಶಃ ಹಾನಿಯಾಗಿದ್ದರೆ 3 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಅಲ್ಪ ಹಾನಿಗೆ 50 ಸಾವಿರ ರೂಪಾಯಿ ನೀಡಲಾಗುತ್ತಿದೆ. ಈಗಲೂ ಅದೇ ರೀತಿ ಪರಿಹಾರ ಹಣ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಕಳೆದ ವರ್ಷದ ಬಾಕಿ ಪರಿಹಾರ ಹಣ ಬಿಡುಗಡೆ ಮಾಡ್ತೇವೆ ಎಂದೂ ಈ ವೇಳೆ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಬೆಳೆ ಹಾನಿ ಸಮೀಕ್ಷೆಗೆ ತಂಡವನ್ನು ಕಳಿಸಲು ಕೇಂದ್ರ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ನೆರೆ ಸಂತ್ರಸ್ತರಿಗೆ ಪರಿಹಾರ ನೀಡದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ನೆರೆ ವಿಚಾರದಲ್ಲಿ ನಮ್ಮ ಸರ್ಕಾರ ಶೀಘ್ರವಾಗಿ ಸ್ಪಂದಿಸಿದೆ. ಅಗತ್ಯ ಪರಿಹಾರವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ‌. ಅವರ ಕಾಲದಲ್ಲಿ ಏನಾಗಿತ್ತು ಎಂದು ನಾನು ಮಾತಾಡಬಹುದು. ಅವರ ಕಾಲದಲ್ಲಿ ಎಷ್ಟು ವಿಳಂಬ ಆಗಿತ್ತು ಎಂಬ ಮಾಹಿತಿ ಇದೆ ಎಂದು ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಶಾಲೆ ತೆರೆಯುವ ಬಗ್ಗೆ ಮಾತುಕತೆ ರಾಜ್ಯದಲ್ಲಿ ಶಾಲೆ ತೆರೆಯುವ ಸಂಬಂಧ ಖಾಸಗಿ ಶಿಕ್ಷಣ ಸಂಸ್ಥೆಗಳ ಜೊತೆ ಮಾತನಾಡಿದ್ದೇನೆ. ದೆಹಲಿಗೆ ಹೋಗಿ ಬಂದ ಬಳಿಕ ಆ ಬಗ್ಗೆ ಚರ್ಚೆ ಮಾಡುವೆ. ಸೌಹಾರ್ದಯುತವಾಗಿ ನಿರ್ಧಾರ ಮಾಡಲಾಗುವುದು ಎಂದು ಬೊಮ್ಮಾಯಿ ಹೇಳಿದ್ದಾರೆ.

ಸಚಿವ ಸಂಪುಟ ರಚನೆ ಸಂಬಂಧ ಹೈಕಮಾಂಡ್‌ನಿಂದ ಇಂದು ಅಥವಾ ನಾಳೆ ಕರೆ ಬರಬಹುದು. ಹೈಕಮಾಂಡ್‌ನಿಂದ ಕರೆ ಬಂದ ಕೂಡಲೇ ಚರ್ಚಿಸುತ್ತೇವೆ. ಹೈಕಮಾಂಡ್ ಜತೆ ಚರ್ಚೆ ಬಳಿಕ ಸಂಪುಟದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ನಾಳೆಯಿಂದ 8 ಗಂಟೆಗೆ ಕೆ.ಕೆ. ಗೆಸ್ಟ್ ಹೌಸ್‌ಗೆ ಬರುತ್ತೇನೆ ಸರ್ಕಾರಿ ನಿವಾಸಕ್ಕೆ ತೆರಳದೆ ಕೆಲಸ ಮಾಡಲು ಸಿಎಂ ಚಿಂತನೆ ನಡೆಸಿದ್ದಾರೆ. ಗೃಹ ಕಚೇರಿ ಕೃಷ್ಣಾ, ಕೆ.ಕೆ.ಗೆಸ್ಟ್ ಹೌಸ್​ನಿಂದ ಸಿಎಂ ಬೊಮ್ಮಾಯಿ ಕೆಲಸ ಮಾಡಲು ಯೋಚಿಸಿದ್ದಾರೆ. ಆರ್​.ಟಿ. ನಗರ ನಿವಾಸ ಬದಲಿಸದಂತೆ ಬೊಮ್ಮಾಯಿ ಕುಟುಂಬ ಒತ್ತಾಯ ಮಾಡಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಅತಿಥಿ ಗೃಹದಿಂದ ಕಾರ್ಯ ನಿರ್ವಹಿಸುವ ಬಗ್ಗೆ ಸಿಎಂ ಚಿಂತನೆ ನಡೆಸಿದ್ದಾರೆ. ಕುಮಾರಕೃಪಾದಿಂದ ಗೃಹ ಕಚೇರಿಗೆ ಆಗಮಿಸಲು ಅನುಕೂಲ ಆಗಲಿದೆ. ಅತಿಥಿ ಗೃಹದಲ್ಲಿ ಸಾರ್ವಜನಿಕರ ಭೇಟಿ ಬಗ್ಗೆ ಸಿಎಂ ಯೋಜಿಸಿದ್ದಾರೆ.

ಸದ್ಯ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕಾವೇರಿ ನಿವಾಸದಲ್ಲಿ ವಾಸವಿದ್ದಾರೆ. ಯಡಿಯೂರಪ್ಪ ಕಾವೇರಿ ನಿವಾಸವನ್ನ ಖಾಲಿ ಮಾಡಿದರೆ, ಕಾವೇರಿ ನಿವಾಸಕ್ಕೆ ಸಿಎಂ ಬೊಮ್ಮಾಯಿ ಶಿಫ್ಟ್ ಆಗುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರಿ ನಿವಾಸದ ಬಗ್ಗೆ ಸಿಎಂ ಬೊಮ್ಮಾಯಿ ಚಿಂತಿಸಿದಂತಿಲ್ಲ.

ಮುಖ್ಯಮಂತ್ರಿ ಬೊಮ್ಮಾಯಿ ನಿವಾಸದ ಬಳಿ ಜಾಗದ ಸಮಸ್ಯೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ನಾಳೆಯಿಂದ 8 ಗಂಟೆಗೆ ಕೆ.ಕೆ.ಗೆಸ್ಟ್ ಹೌಸ್‌ಗೆ ಬರುತ್ತೇನೆ. ಕೆ.ಕೆ.ಗೆಸ್ಟ್ ಹೌಸ್‌ನಿಂದಲೇ ಕೆಲಸ ಮಾಡುತ್ತೇನೆ. ನಾಳೆಯಿಂದ ಬೆಂಗಳೂರಿನ ಆರ್.ಟಿ. ನಗರದಲ್ಲಿರುವ ಖಾಸಗಿ ನಿವಾಸಕ್ಕೆ ಯಾರೂ ಬರುವುದು ಬೇಡ. ನಾಳೆಯಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇನ್ನೂ ಮುಗಿಯದ ಸಂಪುಟ ರಚನೆ ಕಸರತ್ತು, ಬಿ.ಎಸ್. ಯಡಿಯೂರಪ್ಪ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಚರ್ಚೆ

ಸಿಎಂ ಬೊಮ್ಮಾಯಿ ಸಾಹೇಬ್ರೇ.. ದೆಹಲಿಗೆ ಹೋಗೋದು ಬಿಡಿ, ನಮ್ಮ ಕಷ್ಟ ಸ್ವಲ್ಪ ನೋಡಿ ಸ್ವಾಮಿ: ಅನ್ನದಾತರ ಆಕ್ರೋಶ

(CM Basavaraj Bommai announces 510 Cr Fund to Flood relief in Karnataka 13 districts)