ಬಿ.ಎಸ್.ಯಡಿಯೂರಪ್ಪ ಅವರಿಗೆ ಜ್ವರ, ಸುಸ್ತು; ವಾಸ್ತವ್ಯ ಹೂಡಿದ ಹೊಟೇಲ್​ ಸುತ್ತಮುತ್ತ ಸ್ಯಾನಿಟೈಸೇಶನ್​

ನಿನ್ನೆಯೇ ಬಿ.ಎಸ್.ಯಡಿಯೂರಪ್ಪ ಅವರಿಗೆ ಜ್ವರ ಕಾಣಿಸಿಕೊಂಡಿತ್ತಾದರೂ ಅದರ ನಡುವೆಯೇ ಅವರು ಗೋಕಾಕ, ಮೂಡಲಗಿಯಲ್ಲಿ ಪ್ರಚಾರ ನಡೆಸಿದ್ದರು. ಗೋಕಾಕದಲ್ಲಿ ನಡೆದ ರೋಡ್​ ಶೋದಲ್ಲಿ ಭಾಗವಹಿಸಿ ಮತ ಯಾಚಿಸಿದ್ದರು.

ಬಿ.ಎಸ್.ಯಡಿಯೂರಪ್ಪ ಅವರಿಗೆ ಜ್ವರ, ಸುಸ್ತು; ವಾಸ್ತವ್ಯ ಹೂಡಿದ ಹೊಟೇಲ್​ ಸುತ್ತಮುತ್ತ ಸ್ಯಾನಿಟೈಸೇಶನ್​
ಬಿ.ಎಸ್​.ಯಡಿಯೂರಪ್ಪ
Edited By:

Updated on: Apr 15, 2021 | 8:51 AM

ಬೆಳಗಾವಿ: ರಾಜ್ಯದಲ್ಲಿ ಉಪಚುನಾವಣೆ ಕಾವು ಜೋರಾಗಿದ್ದು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರೂ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಪಣ ತೊಡ್ಡು ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕೆಂಬ ಕಾರಣಕ್ಕೆ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಅಖಾಡಕ್ಕಿಳಿದು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ಪ್ರಚಾರದ ಸಂದರ್ಭದಲ್ಲಿ ಯಡಿಯೂರಪ್ಪ ಅವರಿಗೆ ಜ್ವರ ಹಾಗೂ ಸುಸ್ತು ಕಾಣಿಸಿಕೊಂಡಿದ್ದು, ಸದ್ಯ ಖಾಸಗಿ ಹೊಟೇಲ್​ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ನಿನ್ನೆ ರಾತ್ರಿ ಕೆಎಲ್​ಇ ವೈದ್ಯರು ಆಗಮಿಸಿ ಮುಖ್ಯಮಂತ್ರಿಗಳ ಆರೋಗ್ಯ ತಪಾಸಣೆ ನಡೆಸಿದ್ದು ಮಾತ್ರೆಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆಯೇ ಬಿ.ಎಸ್.ಯಡಿಯೂರಪ್ಪ ಅವರಿಗೆ ಜ್ವರ ಕಾಣಿಸಿಕೊಂಡಿತ್ತಾದರೂ ಅದರ ನಡುವೆಯೇ ಅವರು ಗೋಕಾಕ, ಮೂಡಲಗಿಯಲ್ಲಿ ಪ್ರಚಾರ ನಡೆಸಿದ್ದರು. ಗೋಕಾಕದಲ್ಲಿ ನಡೆದ ರೋಡ್​ ಶೋದಲ್ಲಿ ಭಾಗವಹಿಸಿ ಮತ ಯಾಚಿಸಿದ್ದರು. ಪರಿಣಾಮವಾಗಿ ಮತ್ತಷ್ಟು ಸುಸ್ತು ಕಾಣಿಸಿಕೊಂಡಿದ್ದು ವಿಶ್ರಾಂತಿ ಪಡೆಯಲಿಕ್ಕಾಗಿ ಖಾಸಗಿ ಹೊಟೇಲ್​ಗೆ ಆಗಮಿಸಿದ್ದಾರೆ. ಸದ್ಯ ಮುಖ್ಯಮಂತ್ರಿಗಳು ವಾಸ್ತವ್ಯ ಹೂಡಿರುವ ಆಸ್ಪತ್ರೆ ಸುತ್ತ ಸ್ಯಾನಿಟೈಸೇಶನ್​ ಸಹ ಮಾಡಲಾಗಿದ್ದು, ಮುಂಜಾಗ್ರತೆ ವಹಿಸಲಾಗಿದೆ.

ಸ್ಯಾನಿಟೈಸೇಶನ್​​

ಈ ನಡುವೆ ಇಂದು ಸಹ ಬೆಳಗಾವಿಯಲ್ಲಿ ಚುನಾವಣಾ ಪ್ರಚಾರ ನಡೆಯಲಿದ್ದು, ಯಡಿಯೂರಪ್ಪ ಅದರಲ್ಲಿ ಭಾಗಿಯಾಗಲಿದ್ದಾರೆ. ಬೆಳಗ್ಗೆ 9 ಗಂಟೆಗೆ ನಾಗನೂರು ರುದ್ರಾಕ್ಷಿಮಠಕ್ಕೆ ಭೇಟಿ ನೀಡಿ ನಂತರ 10.30ರಿಂದ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ತೆರೆದ ವಾಹನದಲ್ಲಿ ಪ್ರಚಾರ ನಡೆಸಲಿದ್ದಾರೆ. ಮಧ್ಯಾಹ್ನದ ನಂತರ 4.30ಕ್ಕೆ ಹಿಂಡಲಗಾದಲ್ಲಿ ನಡೆಯಲಿರುವ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗಿಯಾದ ಬಳಿಕ ಸಂಜೆ 6.15ಕ್ಕೆ ಬೆಳಗಾವಿಯಿಂದ ಬೆಂಗಳೂರಿಗೆ ತೆರಳಲಿದ್ದಾರೆ.

ಇಷ್ಟೆಲ್ಲಾ ಒತ್ತಡಗಳ ಮಧ್ಯೆ ಮುಖ್ಯಮಂತ್ರಿಗಳಿಗೆ ಜ್ವರ, ಸುಸ್ತು ಕಾಣಿಸಿಕೊಂಡಿರುವುದು ಕೆಲವರಿಗೆ ಆತಂಕ ಹುಟ್ಟುಹಾಕಿದೆ. ಇದೀಗ ಬಿಮ್ಸ್ ಆಸ್ಪತ್ರೆಯ ವೈದ್ಯರು ಮುಂಜಾನೆಯೇ ಆಗಮಿಸಿ ಯಡಿಯೂರಪ್ಪ ಅವರ ಆರೋಗ್ಯ ತಪಾಸಣೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸ್ಯಾನಿಟೈಸೇಶನ್​​

ಇದನ್ನೂ ಓದಿ:
ಕೊರೊನಾ ನಿಯಂತ್ರಿಸಲು ಹೋಗಿ ಹೊಸ ವೈರಸ್​ಗೆ ಆಹ್ವಾನ ನೀಡುತ್ತಿದ್ದೇವಾ? ಅತಿಯಾದ ಸ್ಯಾನಿಟೈಸರ್​ ಬಳಕೆಯೇ ತಿರುಗುಬಾಣವಾಗಬಹುದು ಎಚ್ಚರ! 

ಜ್ವರದ ನಡುವೆಯೂ ಸಿಎಂ ಬಿ.ಎಸ್.ಯಡಿಯೂರಪ್ಪ ಚುನಾವಣಾ ಪ್ರಚಾರ

(CM BS Yediyurappa suffering from Fever and Tiredness amid of Belagavi ByElection 2021 Campaign)