ಉಚ್ಚಾಟಿತ ಈಶ್ವರಪ್ಪ ಮನೆಯಲ್ಲಿ ಭಿನ್ನಮತೀಯ ಶಾಸಕರ ಸಭೆಯನ್ನು ಪ್ರೇಮಸಲ್ಲಾಪ ಎನ್ನೋಣವೇ? ಮೋದಿಗೆ ಸಿಎಂ ತಿರುಗೇಟು

| Updated By: ಗಂಗಾಧರ​ ಬ. ಸಾಬೋಜಿ

Updated on: Sep 26, 2024 | 6:53 PM

ಹರಿಯಾಣದ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರವನ್ನು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದರು. ಇದೀಗ ಆ ವಿಚಾರವಾಗಿ ಸಿದ್ದರಾಮಯ್ಯ ಹೇಳಿಕೆ ಬಿಡುಗಡೆ ಮಾಡಿದ್ದು, ಉಚ್ಚಾಟಿತ ಈಶ್ವರಪ್ಪ ಮನೆಯಲ್ಲಿ ಭಿನ್ನಮತೀಯ ಶಾಸಕರ ಸಭೆಯನ್ನು ಪ್ರೇಮಸಲ್ಲಾಪ ಎನ್ನೋಣವೇ? ಎಂದು ಪ್ರಧಾನಿ ಮೋದಿಗೆ ತಿರುಗೇಟು ನೀಡಿದ್ದಾರೆ.

ಉಚ್ಚಾಟಿತ ಈಶ್ವರಪ್ಪ ಮನೆಯಲ್ಲಿ ಭಿನ್ನಮತೀಯ ಶಾಸಕರ ಸಭೆಯನ್ನು ಪ್ರೇಮಸಲ್ಲಾಪ ಎನ್ನೋಣವೇ? ಮೋದಿಗೆ ಸಿಎಂ ತಿರುಗೇಟು
ಉಚ್ಚಾಟಿತ ಈಶ್ವರಪ್ಪ ಮನೆಯಲ್ಲಿ ಭಿನ್ನಮತೀಯ ಶಾಸಕರ ಸಭೆಯನ್ನು ಪ್ರೇಮಸಲ್ಲಾಪ ಎನ್ನೋಣವೇ? ಮೋದಿಗೆ ಸಿಎಂ ತಿರುಗೇಟು
Follow us on

ಬೆಂಗಳೂರು, ಸೆಪ್ಟೆಂಬರ್​ 26: ಉಚ್ಚಾಟಿತ ಬಿಜೆಪಿ ನಾಯಕ ಈಶ್ವರಪ್ಪ ಮನೆಯಲ್ಲಿಯೇ ಕೂತು ಭಿನ್ನಮತೀಯ ಶಾಸಕರು ಸಭೆ ನಡೆಸಿದ್ದಾರೆ. ಇದನ್ನು ಅಂತರ್‌ಕಲಹ ಎಂದು ಕರೆಯದೆ ಪ್ರೇಮಸಲ್ಲಾಪ ಎನ್ನೋಣವೇ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಕಿಡಿಕಾರಿದ್ದಾರೆ. ಆ ಮೂಲಕ ಹರಿಯಾಣ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರವನ್ನು ಟೀಕಿಸಿದ್ದ ಪ್ರಧಾನಿ ಮೋದಿಗೆ ಸಿಎಂ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿ ಅವರು ಕರ್ನಾಟಕದ ಕಾಂಗ್ರೆಸ್​ನಲ್ಲಿ ಅಂತರ್‌ಕಲಹ ನಡೆಯುತ್ತಿದೆ ಎಂದು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ. ಬಹುಶಃ ಪ್ರಧಾನಿಯವರು ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳಲ್ಲಿ ಉಲ್ಲೇಖಗೊಳ್ಳುತ್ತಲಿರುವ ಪಕ್ಷಗಳ ಹೆಸರಲ್ಲಿ ಗೊಂದಲ ಮಾಡಿಕೊಂಡು, ಬಿಜೆಪಿ ಬದಲಿಗೆ ಕಾಂಗ್ರೆಸ್​ ಎಂದು ತಿಳಿದುಕೊಂಡು ಈ ಅಭಿಪ್ರಾಯ ವ್ಯಕ್ತಪಡಿಸಿರಬಹುದು. ಈ ಗೊಂದಲ ನಿವಾರಣೆಗಾಗಿ ಅವರು ತಕ್ಷಣ ಸ್ಪಷ್ಟೀಕರಣ ನೀಡಬೇಕೆಂದು ಮನವಿ ಮಾಡಿದ್ದಾರೆ.

ಬಿಜೆಪಿ ಪಕ್ಷದ ರಕ್ತದಲ್ಲಿ ಹೇಗೆ ಕೋಮುವಾದ ಸೇರಿಕೊಂಡಿದೆಯೋ, ಅದೇ ರೀತಿ ಅಂತರ್‌ಕಲಹವೂ ಸೇರಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಬಿಜೆಪಿ ನಾಯಕರು ಪರಸ್ಪರ ಕೆಸರೆರಚಾಟ ಮಾಡಿಕೊಳ್ಳದ ದಿನವೇ ಸಿಗಲಾರದು. ಪ್ರತಿನಿತ್ಯ ಬಿಜೆಪಿ ನಾಯಕರು ಆರೋಪ – ಪ್ರತ್ಯಾರೋಪ, ಪರಸ್ಪರ ದೂಷಣೆ – ನಿಂದನೆಯ ಧಾರವಾಹಿ ಮೂಲಕ ಜನರನ್ನು ರಂಜಿಸುತ್ತಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ನೈತಿಕತೆ ಇದೆಯಾ? ಸರಣಿ ಟ್ವೀಟ್ ಮೂಲಕ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಸನ್ಮಾನ್ಯ ನರೇಂದ್ರ ಮೋದಿ ಅವರೇ, ದಯವಿಟ್ಟು ತಾವು ಬೆಳಿಗ್ಗೆ ಎದ್ದು ಕರ್ನಾಟಕದಿಂದ ಪ್ರಕಟವಾಗುವ ಪತ್ರಿಕೆಗಳ ಮೇಲೆ ಕಣ್ಣಾಡಿಸಿದರೆ ಬಿಜೆಪಿ ಪಕ್ಷದಲ್ಲಿ ನಡೆಯುವ ಅಂತರ್‌ಕಲಹದ ಒಂದು ಅಂದಾಜು ಸಿಗಬಹುದು. ಇದರ ನಂತರವಾದರೂ ನೀವು ನಮ್ಮ ಪಕ್ಷದ ಕಡೆ ಬೊಟ್ಟು ಮಾಡುವುದನ್ನು ನಿಲ್ಲಿಸಿ, ನಿಮ್ಮ ಪಕ್ಷದ ಅಂತರ್‌ಕಲಹದ ಬೆಂಕಿಯನ್ನು ಶಮನ ಮಾಡಲು ಪ್ರಯತ್ನ ನಡೆಸಬಹುದು ಎಂದಿದ್ದಾರೆ.

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬೆಳಿಗ್ಗೆ ಎದ್ದ ಕೂಡಲೇ ಯಡಿಯೂರಪ್ಪ ಮತ್ತು ಅವರ ಮಕ್ಕಳ ವಿರುದ್ಧ ಸಾವಿರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ಇವರ ಆರೋಪಗಳಿಗೆ ಶಾಸಕರಾದ ರಮೇಶ್ ಜಾರಕಿಹೊಳಿ, ಸಿ.ಟಿ.ರವಿ ಮೊದಲಾದವರು ದನಿಗೂಡಿಸಿ ಅಪ್ಪ-ಮಕ್ಕಳ ವಿರುದ್ದ ಬಗೆಬಗೆಯ ಆರೋಪಗಳನ್ನು ಮಾಡಿದ್ದಾರೆ. ಇದೀಗ ಉಚ್ಚಾಟಿತ ಬಿಜೆಪಿ ನಾಯಕ ಈಶ್ವರಪ್ಪನವರ ಮನೆಯಲ್ಲಿಯೇ ಕೂತು ಭಿನ್ನಮತೀಯ ಶಾಸಕರು ಸಭೆ ನಡೆಸಿದ್ದಾರೆ. ಇದನ್ನು ಅಂತರ್‌ಕಲಹ ಎಂದು ಕರೆಯದೆ ಪ್ರೇಮಸಲ್ಲಾಪ ಎನ್ನೋಣವೇ ಎಂದು ಪ್ರಶ್ನೆ ಮಾಡಿದ್ದಾರೆ.

ಕರ್ನಾಟಕದ ಬಿಜೆಪಿಯಲ್ಲಿನ ಅಂತರ್‌ಕಲಹ ಇತ್ತೀಚಿನ ಬೆಳವಣಿಗೆಯೇನಲ್ಲ, ಇದಕ್ಕೊಂದು ಇತಿಹಾಸವಿದೆ.
ಕರ್ನಾಟಕದ ಜನತೆ ಎಂದೂ ಬಿಜೆಪಿಗೆ ಪೂರ್ಣಬಹುಮತ ನೀಡಿ ಅಧಿಕಾರಕ್ಕೆ ತಂದಿಲ್ಲ. ಅಕ್ರಮ ದುಡ್ಡಿನ ಬಲದಿಂದ ಆಪರೇಷನ್ ಕಮಲ ನಡೆಸಿ ಅಧಿಕಾರಕ್ಕೆ ಬಂದರೂ ಯಾರೇ ಒಬ್ಬ ಮುಖ್ಯಮಂತ್ರಿ ಪೂರ್ಣಾವಧಿ ಆಳಿಲ್ಲ. 2008 ರಿಂದ 2013ರ ವರೆಗೆ ಮೂವರು ಮುಖ್ಯಮಂತ್ರಿಗಳು, 2019ರಿಂದ 2023ರ ಅವಧಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳು. ಕರ್ನಾಟಕದ ಬಿಜೆಪಿಯೊಳಗಿನ ಅಂತರ್‌ಕಲಹ ನಮ್ಮಲ್ಲಿ ಮನೆಮನೆಮಾತಾಗಿದೆ. ಇದರಲ್ಲಿ ನಮ್ಮ ಪಕ್ಷದ ಯಾವುದೇ ಪಾತ್ರ ಇಲ್ಲ. ಇವೆಲ್ಲ ಸ್ವಯಂಕೃತ ಅಪರಾಧದ ಹಳವಂಡಗಳು.

ಇದನ್ನೂ ಓದಿ: ಪ್ರಧಾನಿ ಮೋದಿ ಕುರಿತು ಸಿಎಂ ಸಿದ್ದರಾಮಯ್ಯ ಟ್ವೀಟ್: ಹೆಚ್​ಡಿ ಕುಮಾರಸ್ವಾಮಿ ಅಚ್ಚರಿಯ ಪ್ರತಿಕ್ರಿಯೆ

2011ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಜೈಲಿಗೆ ಹೋಗಲು ಪಕ್ಷದೊಳಗಿನ ಅಂತರ್‌ಕಲಹವೂ ಕಾರಣ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರೂ ಮರೆತು ಬಿಟ್ಟಿದ್ದಾರೆ. ಅದರ ನಂತರ ಬಿಜೆಪಿ ತೊರೆದು ಸ್ವಂತ ಪಕ್ಷ ಕಟ್ಟಿದ್ದ ಯಡಿಯೂರಪ್ಪನವರು ವಾಜಪೇಯಿ – ಅಡ್ವಾಣಿಯವರನ್ನು ಸೇರಿದಂತೆ ಯಾರನ್ನೂ ಬಿಡದೆ ಕೀಳು ಮಟ್ಟದ ಭಾಷೆಯಲ್ಲಿ ನಿಂದಿಸಿದ್ದಾರೆ. ಕೊನೆಗೆ ಅವರನ್ನೇ ಕರೆತಂದು ಮುಖ್ಯಮಂತ್ರಿ ಮಾಡಿದ್ದಾಯಿತು, ನಂತರ ಅವರನ್ನು ಪದಚ್ಯುತಿಗೊಳಿಸಿಯೂ ಆಯಿತು. ಇವೆಲ್ಲದರ ಹಿಂದೆ ಪಕ್ಷದ ಅಂತರ್‌ಕಲಹ ಕಾರಣ ಅಲ್ಲವೇ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೇ, ಗಾಜಿನ ಮನೆಯಲ್ಲಿ ಕೂತು ಕಲ್ಲು ಹೊಡೆಯಲು ಹೋಗಬೇಡಿ. ನಮ್ಮ ಪಕ್ಷದ ಅಂತರ್‌ಕಲಹದ ಬಗ್ಗೆ ಚಿಂತೆ ಮಾಡಬೇಡಿ. ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗೆಲ್ಲ ಪೂರ್ಣಾವಧಿಯನ್ನು ಮುಗಿಸಿದ್ದೇವೆ. ದೇವರಾಜ ಅರಸು ನಂತರ ಪೂರ್ಣ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ನಾನು ಇದೀಗ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನಮ್ಮೊಳಗೆ ಜಗಳ ಹುಟ್ಟುಹಾಕುವ ನಿಮ್ಮೆಲ್ಲರ ನಿರಂತರ ಪ್ರಯತ್ನದ ಹೊರತಾಗಿಯೂ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.