ಕರ್ನಾಟಕದಲ್ಲಿ 15,441 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ: 5,277 ಉದ್ಯೋಗ ಸೃಷ್ಟಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡುವ ಸಮಿತಿಯ 65 ನೇ ಸಭೆಯಲ್ಲಿ 4 ಹೊಸ ಬಂಡವಾಳ ಹೂಡಿಕೆ ಯೋಜನೆಗಳು ಹಾಗೂ 2 ಹೆಚ್ಚುವರಿ ಬಂಡವಾಳ ಹೂಡಿಕೆ, ತಿದ್ದುಪಡಿ ಪ್ರಸ್ತಾವಗಳಿಗೆ ಅನುಮೋದನೆ ನೀಡಲಾಗಿದೆ. ಇದರಿಂದ ರಾಜ್ಯದಲ್ಲಿ 15,441.17 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, ಸುಮಾರು 5,277 ಜನರಿಗೆ ಉದ್ಯೋಗಾವಕಾಶಗಳು ಲಭ್ಯವಾಗಲಿವೆ.

ಕರ್ನಾಟಕದಲ್ಲಿ 15,441 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ: 5,277 ಉದ್ಯೋಗ ಸೃಷ್ಟಿ
Siddaramaiah

Updated on: May 28, 2025 | 9:23 PM

ಬೆಂಗಳೂರು, (ಮೇ.28) : ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ 15,441.17 ಕೋಟಿ ರೂ.ಗಳ ಬಂಡವಾಳ ಹೂಡಿಕೆಯ 6 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳಿಂದಾಗಿ ರಾಜ್ಯದಲ್ಲಿ 5,277 ಜನರಿಗೆ ಉದ್ಯೋಗಾವಕಾಶಗಳು  (Jobs) ಸೃಷ್ಟಿಯಾಗಲಿದ್ದು, ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ದೊರೆಯಲಿದೆ. ಹೆಚ್ಚುವರಿಯಾಗಿ ಕೆಲವು ಯೋಜನೆಗಳ ಅನುಷ್ಠಾನಕ್ಕೆ ಸಮಯ ವಿಸ್ತರಣೆ ಮತ್ತು ಭೂಮಿ ಸ್ವಾಧೀನಕ್ಕೆ ಅನುಮತಿ ನೀಡಲಾಗಿದೆ.

ಯಾವುದರಿಂದ ಎಷ್ಟು ಉದ್ಯೋಗ?

ಶ್ರೀ ಸಿಮೆಂಟ್ ಲಿಮಿಟೆಡ್ ಸಂಸ್ಥೆಯ 2406 ಕೋಟಿ ರೂ.ಗಳ ಹೊಸ ಬಂಡವಾಳ ಹೂಡಿಕೆಯ ಯೋಜನೆಯಿಂದ 300 ಉದ್ಯೋಗ, ದಾಲ್ಮಿಯಾ ಸಿಮೆಂಟ್‌ (ಭಾರತ್‌) ಲಿ.ನ 3,000 ಕೋಟಿ ರೂ.ಹೂಡಿಕೆಯಿಂದ 570 ಉದ್ಯೋಗ, ದಾಲ್ಮಿಯಾ(ಭಾರತ್) ಲಿ. ಸಂಸ್ಥೆಯ 3020 ಕೋಟಿ ರೂ. ಹೂಡಿಕೆಯಿಂದ 570 ಉದ್ಯೋಗ ಸೃಷ್ಠಿಯಾಗಲಿವೆ. ಇನ್ನು ಎಂವೀ ಎನರ್ಜಿ ಪ್ರೈ.ಲಿ ಸಂಸ್ಥೆಯ 5495 ಕೋಟಿ ರೂ. ಹೂಡಿಕೆಯಿಂದ 2508 ಉದ್ಯೋಗ ಸೃಷ್ಟಿಯಾಗಲಿವೆ. ಒಟ್ಟಾರೆ 13,921 ಕೋಟಿ ಮೊತ್ತದ ಹೊಸ ಬಂಡವಾಳ ಹೂಡಿಕೆಯ ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಇವುಗಳಿಂದ ರಾಜ್ಯದಲ್ಲಿ ಒಟ್ಟಾರೆ 3,948 ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ.

ಇದನ್ನೂ ಓದಿ: KPTCL ಎಇ, ಜೆಇ ಹುದ್ದೆಗಳ ಆಯ್ಕೆಪಟ್ಟಿ ರದ್ದು: ಮರುಪರೀಕ್ಷೆಗೆ ಹೈಕೋರ್ಟ್ ಆದೇಶ

ಹೆಚ್ಚುವರಿ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು

ಕಲರ್‌ಟೋನ್‌ ಟೆಕ್ಸ್‌ಟೈಲ್ಸ್‌ ಪ್ರೈ.‌ ಲಿ.ನ 190.17 ಕೋಟಿ ರೂ., ಬಾಷ್‌ ಅಟೊಮೋಟಿವ್‌ ಎಲೆಕ್ಟ್ರಾನಿಕ್ಸ್‌ ಇಂಡಿಯಾ ಪ್ರೈ.‌ ಲಿ.ನ 1,330 ಕೋಟಿ ರೂ. ಸೇರಿದಂತೆ ಒಟ್ಟು 1,520.17 ಕೋಟಿ ರೂ. ಮೊತ್ತದ ಹೆಚ್ಚುವರಿ ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೂ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇದರಿಂದ 1,329 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ.

ತಿದ್ದುಪಡಿ ಯೋಜನೆಗಳ ಪ್ರಸ್ತಾವನೆಗಳನ್ನು ಕಾರ್ಯಗತಗೊಳಿಸಲು ಸಮಯ ವಿಸ್ತರಣೆಗೆ ಮತ್ತು ಹೆಚ್ಚುವರಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಸಮಿತಿಯು ಒಪ್ಪಿಗೆ ನೀಡಿದೆ.

  • ಜೆಎಸ್‌ಡಬ್ಲ್ಯು ನಿಯೊ ಎನರ್ಜಿ ಲಿಮಿಟೆಡ್ – 300 ಮೆಗಾವಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಯೋಜನೆ.
  • ಎಕ್ಸೈಡ್ ಇಂಡಸ್ಟ್ರೀಸ್ ಲಿಮಿಟೆಡ್ -ಅತ್ಯಾಧುನಿಕ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್- ಹಂತ-2 ರಲ್ಲಿ 20 ಎಕರೆ ಹೆಚ್ಚುವರಿ ಭೂಮಿ ಹಂಚಿಕೆ.
  • ಎಸ್‌ಎಲ್‌ಆರ್ ಮೆಟಾಲಿಕ್ಸ್ ಲಿಮಿಟೆಡ್ – 2027-28 ರವರೆಗೆ 2 ಹಂತಗಳಲ್ಲಿ ಯೋಜನೆಯ ಅನುಷ್ಠಾನ
    ರಸಶ್ರೀ ಟೆಕ್ ಪಾರ್ಕ್ ಎಲ್‌ಎಲ್‌ಪಿ – ಇಂಟಿಗ್ರೇಟೆಡ್ ಟೌನ್‌ಶಿಪ್ ಸ್ಥಾಪನೆ.
  • ವನ್ಯಾ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್ – ಮೃದು ಕಬ್ಬಿಣ, ರೋಲಿಂಗ್ ಮಿಲ್, 34 ಮೆಗಾವಾಟ್‌ ಸಾಮರ್ಥ್ಯದ ವಿದ್ಯುತ್‌ ಉತ್ಪಾದನಾ ಸ್ಥಾವರ ಸ್ಥಾಪನೆ.
  • ಇಂಡಿಯನ್ ಕೇನ್ ಪವರ್ ಲಿಮಿಟೆಡ್‌- ಸಕ್ಕರೆ ಕಾರ್ಖಾನೆ ಹಾಗೂ 70 ಮೆಗಾವಾಟ್‌ ಸಾಮರ್ಥ್ಯದ ವಿದ್ಯುತ್‌ ಉತ್ಪಾದನಾ ಸ್ಥಾವರ ಸ್ಥಾಪನೆ.
  • ಖಯಾತಿ ಪೈಪ್ಸ್ ಆ್ಯಂಡ್‌ ಪವರ್ ಪ್ರೈವೇಟ್ ಲಿಮಿಟೆಡ್‌ನ ಸಮಗ್ರ ಉಕ್ಕು ಸ್ಥಾವರ
    ಜಿಎಂ ಶುಗರ್ ಆ್ಯಂಡ್‌ ಎನರ್ಜಿ ಲಿಮಿಟೆಡ್‌ನ ಉತ್ಪಾದನಾ ಸಾಮರ್ಥ್ಯ ಹೆಚ್ಚಳ.
  • ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್‌ನ – ಲೈಮ್‌ಸ್ಟೋನ್ ಉತ್ಪಾದನಾ ಘಟಕ ಸ್ಥಾಪನೆ.
  • ಯುಫ್ಲೆಕ್ಸ್ ಲಿಮಿಟೆಡ್‌ನ – ಪಾಲಿಯೆಸ್ಟರ್ ಫಿಲ್ಮ್ ತಯಾರಿಕಾ ಘಟಕ ಸ್ಥಾಪನೆ.

ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ, ಇಂಧನ ಸಚಿವ ಕೆ. ಜೆ. ಜಾರ್ಜ್‌, ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ, ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ ಸಿಂಗ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Published On - 9:17 pm, Wed, 28 May 25

Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Follow Us