ಐಎಎಎಸ್ vs ಐಎಎಸ್​: ಮೈಸೂರಿಗೆ ಮುಖ್ಯಕಾರ್ಯದರ್ಶಿ ಭೇಟಿ, ಶಿಲ್ಪಾ ನಾಗ್​ಗೆ ಪಾಲಿಕೆ ಸದಸ್ಯರ ಬೆಂಬಲ

|

Updated on: Jun 04, 2021 | 3:26 PM

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮಹಾನಗರಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನಡುವಣ ಜಟಾಪಟಿ ಶುಕ್ರವಾರ ಮತ್ತೊಂದು ಮಗ್ಗುಲಿಗೆ ಹೊರಳಿಕೊಂಡಿದೆ. ಹಲವು ಪ್ರಮುಖ ಬೆಳವಣಿಗೆಗಳು ನಡೆದಿವೆ.

ಐಎಎಎಸ್ vs ಐಎಎಸ್​: ಮೈಸೂರಿಗೆ ಮುಖ್ಯಕಾರ್ಯದರ್ಶಿ ಭೇಟಿ, ಶಿಲ್ಪಾ ನಾಗ್​ಗೆ ಪಾಲಿಕೆ ಸದಸ್ಯರ ಬೆಂಬಲ
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್
Follow us on

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮಹಾನಗರಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನಡುವಣ ಜಟಾಪಟಿ ಶುಕ್ರವಾರ ಮತ್ತೊಂದು ಮಗ್ಗುಲಿಗೆ ಹೊರಳಿಕೊಂಡಿದೆ. ಹಲವು ಪ್ರಮುಖ ಬೆಳವಣಿಗೆಗಳು ನಡೆದಿವೆ. ರಾಜ್ಯದ ಮುಖ್ಯ ಕಾರ್ಯದರ್ಶಿ ರವಿಕುಮಾರ್​ ಮೈಸೂರಿಗೆ ಭೇಟಿ ನೀಡಿದ್ದು ಕೊವಿಡ್ ಪರಿಸ್ಥಿತಿ ಪರಾಮರ್ಶನೆಗಾಗಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನೂ ರವಿಕುಮಾರ್ ಭೇಟಿ ಮಾಡಲಿದ್ದಾರೆ.

ಮೈಸೂರು ನಗರಪಾಲಿಕೆಯ ಕಾರ್ಪೊರೇಟರ್​ಗಳು ಮುಖ್ಯಕಾರ್ಯದರ್ಶಿಯನ್ನು ಭೇಟಿಯಾಗಿ ಆಯುಕ್ತೆ ಶಿಲ್ಪಾ ನಾಗ್ ಅವರನ್ನು ವರ್ಗಾವಣೆ ಮಾಡದಂತೆ ಮನವಿ ಮಾಡಲು ನಿರ್ಧರಿಸಿದ್ದರು. ಆದರೆ ಮುಖ್ಯಕಾರ್ಯದರ್ಶಿ ಭೇಟಿ ಸಾಧ್ಯವಾಗದ ಹಿನ್ನೆಲೆಯಲ್ಲಿ ತಹಶೀಲ್ದಾರ್ ರಕ್ಷಿತ್​ಗೆ ಮನವಿ ಪತ್ರ ನೀಡಿ ಹಿಂದಿರುಗಿದರು.

ಮೈಸೂರು ಜಿಲ್ಲೆಯ ಕೊವಿಡ್ ನಿರ್ವಹಣೆ ಸಂಬಂಧ ಮುಖ್ಯಕಾರ್ಯದರ್ಶಿ ಕರೆದಿದ್ದ ಸಭೆಗೆ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಒಂದು ಗಂಟೆ ತಡವಾಗಿ ಆಗಮಿಸಿದರು. ಸಭೆಗೂ ಮೊದಲು ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ್ದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಶಿಲ್ಪಾನಾಗ್ ರಾಜೀನಾಮೆ ವಿಚಾರ ನನಗೆ ಗೊತ್ತಿಲ್ಲ. ರಾಜೀನಾಮೆ ಪತ್ರ ನನಗೆ ತಲುಪಿಲ್ಲ. ನಾನು ಕೊವಿಡ್ ನಿರ್ವಹಣೆ ಸಭೆ ನಡೆಸಲು ಬಂದಿದ್ದೇನೆ ಎಂದು ತಿಳಿಸಿದರು.

ಮೈಸೂರು IAS ಅಧಿಕಾರಿಗಳ ಜಟಾಪಟಿಗೆ ತಡೆಯೊಡ್ಡಲು ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ಸರ್ಕಾರದ ಮಟ್ಟದಲ್ಲಿ ವ್ಯಕ್ತವಾಗಿದೆ. ಈ ವಿಚಾರದ ಬಗ್ಗೆ ಸರ್ಕಾರ ಇಂದು ಸಂಜೆಯ ವೇಳೆಗೆ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.

ಶೀಘ್ರ ಗೊಂದಲ ಪರಿಹಾರ: ಯಡಿಯೂರಪ್ಪ ಭರವಸೆ
ಮೈಸೂರಿನಲ್ಲಿ ಐಎಎಸ್ ಅಧಿಕಾರಿಗಳ ಜಟಾಪಟಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೊಂದಲ ಪರಿಹರಿಸಲು ಏನು ಮಾಡಬೇಕೋ ಅದನ್ನು ಮಾಡ್ತೀವಿ. ಜಿಲ್ಲಾ ಉಸ್ತುವಾರಿ ಸಚಿವರು ಮೈಸೂರಿಗೆ ಹೋಗಿದ್ದಾರೆ ಎಂದು ಹೇಳಿದರು.

ಯಥಾ ರಾಜಾ ತಥಾ ಪ್ರಜಾ: ಡಿಕೆಶಿ ವ್ಯಂಗ್ಯ
ದಾವಣಗೆರೆ:
ಮೈಸೂರು ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರ ಜಟಾಪಟಿ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ಯಥಾ ರಾಜಾ ತಥಾ ಪ್ರಜಾ, ಯಥಾ ರಾಜಾ ತಥಾ ಅಧಿಕಾರಿ’ ಎಂದು ವ್ಯಂಗ್ಯವಾಡಿದರು. ಆಳ್ವಿಕೆ ಮಾಡುವವರು ಇದ್ದಂತೆ ಅಧಿಕಾರಿಗಳು ಕೂಡ ಇರುತ್ತಾರೆ. ಅಧಿಕಾರಕ್ಕಾಗಿ ಶಾಸಕರು, ಮಂತ್ರಿಗಳು ಏನು ಮಾಡುತ್ತಿದ್ದಾರೆ? ಅವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೈಕೋರ್ಟ್​ನಲ್ಲಿ ವಿಚಾರಣೆ ಸಾಧ್ಯತೆ
ಈ ನಡುವೆ ರೋಹಿಣಿ ಸಿಂಧೂರಿಗೂ ಮೊದಲು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ.ಶರತ್ ತಮ್ಮ ವರ್ಗಾವಣೆ ಪ್ರಶ್ನಿಸಿ ಹೈಕೋರ್ಟ್​ಗೆ ಸಲ್ಲಿಸಿರುವ ಅರ್ಜಿಯು ಇಂದು ವಿಚಾರಣೆಗೆ ಬರುವ ಸಾಧ್ಯತೆಯಿದೆ. ಸಿಎಟಿ ಆದೇಶ ರದ್ದುಪಡಿಸಲು ಮತ್ತು ರೋಹಿಣಿ ಸಿಂಧೂರಿ ಅವರ ನೇಮಕ ರದ್ದುಪಡಿಸಲು ಶರತ್ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸುವ ಸಾಧ್ಯತೆಯಿದೆ.

(CS Ravikumar Visits Mysuru may Talk with DC Rohini Sindhuri and Shilpa Nag)

ಇದನ್ನೂ ಓದಿ: ರೋಹಿಣಿ ಸಿಂಧೂರಿ ಅಂತಹ ದುರಹಂಕಾರಿ ಜಿಲ್ಲಾಧಿಕಾರಿ ಯಾರಿಗೂ ಸಿಗುವುದು ಬೇಡ -ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಕೆಲಸಕ್ಕೆ ಗುಡ್​ಬೈ

ಇದನ್ನೂ ಓದಿ: ಮೈಸೂರಿನಲ್ಲಿ ಐಎಎಸ್​ vs ಐಎಎಸ್​: ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಆರೋಪಕ್ಕೆ ಡಿಸಿ ರೋಹಿಣಿ ಸಿಂಧೂರಿ ಸ್ಪಷ್ಟನೆ