ಪದೇಪದೆ ಬಿಜೆಪಿಗರ ಮೇಲೆ ದಬ್ಬಾಳಿಕೆ ಸಹಿಸಲಾಗದು: ಹರೀಶ್ ಪೂಂಜಾ ಬಂಧನ ಯತ್ನಕ್ಕೆ ವಿಜಯೇಂದ್ರ ಕಿಡಿ

ಠಾಣೆಯಲ್ಲೇ ಪ್ರತಿಭಟನೆ ನಡೆಸಿ ಪೊಲೀಸರಿಗೆ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಹರೀಶ್ ಪೂಂಜಾರನ್ನು ಬಂಧಿಸಲು ಪೊಲೀಸರು ಬೆಳ್ತಂಗಡಿಯ ನಿವಾಸಕ್ಕೆ ಆಗಮಿಸಿದ್ದಾರೆ. ಇದೇ ವೇಳೆ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ವಾಗ್ವಾದವೂ ನಡೆದಿದೆ. ಈ ವಿಚಾರವಾಗಿ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.

ಪದೇಪದೆ ಬಿಜೆಪಿಗರ ಮೇಲೆ ದಬ್ಬಾಳಿಕೆ ಸಹಿಸಲಾಗದು: ಹರೀಶ್ ಪೂಂಜಾ ಬಂಧನ ಯತ್ನಕ್ಕೆ ವಿಜಯೇಂದ್ರ ಕಿಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
Updated By: Ganapathi Sharma

Updated on: May 22, 2024 | 2:49 PM

ಬೆಂಗಳೂರು, ಮೇ 22: ಬೆಳ್ತಂಗಡಿಯ ಬಿಜೆಪಿ (BJP) ಶಾಸಕ ಹರೀಶ್ ಪೂಂಜಾ (Harish Poonja) ಬಂಧನ ಸಾಧ್ಯತೆ ವಿಚಾರವಾಗಿ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಪ್ರತಿಕ್ರಿಯೆ ನೀಡಿದ್ದು, ಪದೇಪದೆ ಬಿಜೆಪಿಗರ ಮೇಲೆ ದಬ್ಬಾಳಿಕೆ ಸಹಿಸಲಾಗದು ಎಂದಿದ್ದಾರೆ. ಹರೀಶ್ ಪೂಂಜಾ ಬಂಧನಕ್ಕೆ ಯತ್ನಿಸುತ್ತಿರುವುದು ಖಂಡನೀಯ. ಪೂಂಜಾ ಭಾಷಣ ನೋಡಿದ್ದೇನೆ, ಅವರ ಜತೆ ಚರ್ಚಿಸಿದ್ದೇನೆ. ವಿಷಯ ಮರೆಮಾಚುವ ಕೆಲಸ ಪೊಲೀಸರು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಶಾಸಕರು ಉದ್ವೇಗದಲ್ಲಿ ಕೆಲವು ಮಾತುಗಳನ್ನು ಹೇಳಿದ್ದಾರೆ. ಅದು ಸರಿ ಅಲ್ಲ ಎಂಬುದು ಪೂಂಜಾರಿಗೂ ಕೂಡ ಗೊತ್ತಾಗಿದೆ. ಹಾಗೆಂದು ಪದೇಪದೆ ಬಿಜೆಪಿಗರ ಮೇಲೆ ದಬ್ಬಾಳಿಕೆ ಸಹಿಸಲು ಆಗಲ್ಲ. ಶಾಸಕರನ್ನು ಅರೆಸ್ಟ್ ಮಾಡುವ ದುಸ್ಸಾಹಸಕ್ಕೆ ಕೈಹಾಕಿದರೆ ಮುಂದಾಗುವುದಕ್ಕೆಲ್ಲ ಸರ್ಕಾರ, ಇಲಾಖೆ ಹೊಣೆ ಆಗಬೇಕಾಗುತ್ತದೆ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

ಕಾನೂನು ಸುವ್ಯವಸ್ಥೆ ಹದಗೆಡಲು ನೀವೇ ಕುಮ್ಮಕ್ಕು ಕೊಡುತ್ತಿದ್ದೀರಿ. ಶಶಿರಾಜ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಶಾಸಕರ ಬಂಧನಕ್ಕೆ ಮುಂದಾಗುವುದನ್ನು ಕೈ ಬಿಡಬೇಕು. ಗೃಹ ಸಚಿವರು ಎಸ್​​ಪಿ ಜತೆ ಮಾತನಾಡಿ ಸೂಚನೆ ಕೊಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

ಠಾಣೆಯಲ್ಲೇ ಪ್ರತಿಭಟನೆ ನಡೆಸಿ ಪೊಲೀಸರಿಗೆ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಹರೀಶ್ ಪೂಂಜಾರನ್ನು ಬಂಧಿಸಲು ಪೊಲೀಸರು ಬೆಳ್ತಂಗಡಿಯ ನಿವಾಸಕ್ಕೆ ಆಗಮಿಸಿದ್ದಾರೆ. ಇದೇ ವೇಳೆ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ವಾಗ್ವಾದವೂ ನಡೆದಿದೆ.

ಹರೀಶ್ ಪೂಂಜಾ ನಿವಾಸದ ಹೊರಗೆ ಜಮಾಯಿಸಿರುವ ಬಿಜೆಪಿ ಕಾರ್ಯಕರ್ತರು

ಈ ಮಧ್ಯೆ, ಬೆಳ್ತಂಗಡಿಯತ್ತ ಬಿಜೆಪಿ ನಾಯಕರು ದೌಡಾಯಿಸಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ, ಗಣೇಶ್ ಕಾರ್ಣಿಕ್ ಹಾಗೂ ಇತರರು ಪೂಂಜಾ ನಿವಾಸದತ್ತ ದೌಡಾಯಿಸಿದ್ದಾರೆ. ಪೂಂಜಾ ನಿವಾಸಕ್ಕೆ ವಕೀಲರಾದ ಶಂಭು ಶರ್ಮ, ಅಜಯ್ ಸುವರ್ಣ ಕೂಡ ಆಗಮಿಸಿದ್ದು, ಸಮಾಲೋಚನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಮತ್ತೊಂದು FIR

ಕೆಲ ದಿನಗಳ ಹಿಂದಷ್ಟೇ ಹರೀಶ್ ಪೂಂಜಾ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಗೆ ನುಗ್ಗಿ ದರ್ಪ ಪ್ರದರ್ಶಿಸಿದ ಆರೋಪದಡಿ ಎಫ್ಐಆರ್ ದಾಖಲಾಗಿತ್ತು. ಪೊಲೀಸರಿಗೆ ಜೀವ ಬೆದರಿಕೆ ಒಡ್ಡಿದ ಹಾಗೂ ತಾಲೂಕು ಕಚೇರಿಗೆ ಬರುವ ಸಾರ್ವಜನಿಕರನ್ನು ತಡೆದ ಆರೋಪದ ಮೇಲೆ ಮಂಗಳವಾರ ಮತ್ತೊಂದು ಎಫ್ಐಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ ಶಾಸಕರ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ