ಬೆಳ್ತಂಗಡಿ: ಕಾಡಿಗೆ ಹೋಗಿ ನಾಪತ್ತೆಯಾಗಿದ್ದ ವೃದ್ಧ ಆರು ದಿನಗಳ ಬಳಿಕ ಪತ್ತೆ

| Updated By: ಆಯೇಷಾ ಬಾನು

Updated on: May 30, 2024 | 8:12 AM

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಐಂಗುಡ ಎಂಬಲ್ಲಿ 82 ವರ್ಷದ ವೃದ್ಧರೊಬ್ಬರು ಕಟ್ಟಿಗೆ ತರಲು ಕಾಡಿಗೆ ಹೋಗಿ ನಾಪತ್ತೆಯಾಗಿದ್ದರು. ಸದ್ಯ ಈಗ 6 ದಿನಗಳ ಬಳಿಕ ಸಿಕ್ಕಿದ್ದಾರೆ. ಕಾಡಲ್ಲಿ ಆಹಾರವಿಲ್ಲದೆ ಕೇವಲ ನೀರು ಸೇವಿಸಿ ಜೀವ ಉಳಿಸಿಕೊಂಡಿದ್ದು ಯಾರೋ ನನ್ನನ್ನು ಬಾ ಬಾ ಎಂದು ಕರೆದರು. ಹೀಗಾಗಿ ಹೋದೆ ಎಂದು ತಿಳಿಸಿದ್ದಾರೆ. ಇದೊಂದು ದೈವದ ಪವಾಡವೇ ಇರಬೇಕು ಎಂದು ಅಲ್ಲಿನ ಜನ ಮಾತಾಡುತ್ತಿದ್ದಾರೆ.

ಬೆಳ್ತಂಗಡಿ: ಕಾಡಿಗೆ ಹೋಗಿ ನಾಪತ್ತೆಯಾಗಿದ್ದ ವೃದ್ಧ ಆರು ದಿನಗಳ ಬಳಿಕ ಪತ್ತೆ
ವಾಸು ರಾಣ್ಯ
Follow us on

ಮಂಗಳೂರು, ಮೇ.30: ತಮ್ಮ ಮನೆಗೆ ಹತ್ತಿರ ಇರುವ ಕಾಡಿನಲ್ಲಿ ದಾರಿತಪ್ಪಿದ್ದ ವೃದ್ಧರೊಬ್ಬರು ಆರು ದಿನಗಳ ಬಳಿಕ ಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಐಂಗುಡ ಎಂಬಲ್ಲಿ ನಡೆದಿದೆ. ಶಿಬಾಜೆ ಗ್ರಾಮದ 82 ವರ್ಷದ ವಯೋವೃದ್ಧ ವಾಸು ರಾಣ್ಯ ಎಂಬುವವರು ಕಟ್ಟಿಗೆ ತರಲು ಹೋಗಿ ನಾಪತ್ತೆಯಾಗಿದ್ದರು. ಸದ್ಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ತಂಡ ಅವರನ್ನು ಪತ್ತೆ ಹಚ್ಚಿ ಮನೆಗೆ ಸೇರಿಸಿದೆ.

ವಾಸು ರಾಣ್ಯ ಅವರು ಮೇ 21ರ ಬೆಳಗ್ಗೆ ಕೈಯಲ್ಲೊಂದು ಕತ್ತಿ ಹಿಡಿದು ಕಟ್ಟಿಗೆ ತರಲು ಎಂದು ಮನೆ ಸಮೀಪವಿರುವ ಗುಡ್ಡಕ್ಕೆ ತೆರಳಿದ್ದರು. ಮಧ್ಯಾಹ್ನದವರೆಗೂ ವಾಸು ರಾಣ್ಯ ಅವರು ಮನೆಗೆ ಬಂದಿರಲಿಲ್ಲ. ಹೀಗಾಗಿ ಕಟುಂಬಸ್ಥರು ಸ್ಥಳೀಯರ ಜೊತೆ ಸೇರಿಕೊಂಡು ಹುಡುಕಾಡಿದರು. ಸುಮಾರು ಐದು ದಿನಗಳ ಕಾಲ ಸುತ್ತಮುತ್ತ ಹುಡುಕಿದರೂ ವಾಸು ರಾಣ್ಯ ಅವರು ಪತ್ತೆಯಾಗಿರಲಿಲ್ಲ.

ಇದನ್ನೂ ಓದಿ: ಮತ್ತೆ ಹಾಟ್ ಸಿಟಿಯಾಗುತ್ತಿದೆ ಬೆಂಗಳೂರು: ಹವಾಮಾನ ತಜ್ಞರು ಹೇಳುವುದೇನು?

ಮೇ 26ರ ಬೆಳಗ್ಗೆ ಮನೆಯವರು ಆಡು ಮೇಯಿಸಲೆಂದು ಮನೆ ಸಮೀಪವಿರುವ ಗುಡ್ಡೆಗೆ ತೆರಳಿದಾಗ ಕೂ…ಕೂ.. ಎಂಬ ಕೂಗು ಕೇಳಿ ಬಂತೆನ್ನಲಾಗಿದೆ. ಈ ಕೂಗಿನ ಜಾಡು ಹಿಡಿದು ಸ್ಥಳೀಯರು ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ತಂಡದವರು ಹುಡುಕಾಟ ನಡೆಸಿದಾಗ ಭಂಡಿಹೊಳೆ ಕಾಡಿನ ಸುಮಾರು 2.5 ಕಿ. ಮೀ. ದೂರದಲ್ಲಿ ವಾಸು ರಾಣ್ಯ ಅವರು ಪತ್ತೆಯಾಗಿದ್ದಾರೆ. ಬಳಿಕ ಅವರನ್ನು ಕೊಕ್ಕಡ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ವಾಸು ರಾಣ್ಯ ಆರೋಗ್ಯವಾಗಿದ್ದು, ತನ್ನನ್ನು ಯಾರೋ ಬಾ.. ಬಾ.. ಎಂದು ಕರೆದಂತಾಯಿತು. ಹಾಗಾಗಿ ಧ್ವನಿಯ ಹಿಂದೆ ನಾನು ಹೋದೆ. ಕಾಡಲ್ಲಿ ನನಗೆ ಆಹಾರ ಸಿಗಲಿಲ್ಲ. ಹಾಗಾಗಿ ಆಹಾರವನ್ನೇನೂ ತಾನು ತೆಗೆದುಕೊಂಡಿಲ್ಲ. ಕೇವಲ ನೀರು ಮಾತ್ರ ಕುಡಿಯುತ್ತಿದ್ದೆ ಎಂದು ವಾಸು ಅವರು ತಿಳಿಸಿದ್ದಾರೆ.

ವಾಸು ಅವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿ ಶೌರ್ಯ ವಿಪತ್ತು ತಂಡದ ಅವಿನಾಶ್ ಭಿಡೆ, ಶೀನಪ್ಪ, ಗಂಗಾಧರ ಶಿಶಿಲ, ಕುಶಾಲಪ್ಪ ಶಿಶಿಲ, ಪ್ರವೀಣ್ ಪತ್ತಿಮಾರು, ಮತ್ತು ಸ್ಥಳೀಯರಾದ ಗೋವಿಂದ, ಗಣೇಶ್, ಸುರೇಶ, ಪುನೀತ್, ಶರತ್, ಶಶಿಕಾಂತ್, ವಿಶ್ವನಾಥ್, ಕೃಷ್ಣ ನಾಯ್ಕ ಮತ್ತು ವಾಸು ರಾಜ್ಯರ ಪುತ್ರರಾದ ಕಮಲಾಕ್ಷ ಮತ್ತು ಸುರೇಶ್ ಮತ್ತು ರಾಣ್ಯ ಕುಟುಂಬಸ್ಥರು ಸಹಕರಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ