ಮದುವೆ ಸಂಭ್ರಮದಲ್ಲಿ ಕೊರಗಜ್ಜನಿಗೆ ಅವಮಾನ: ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 07, 2022 | 10:44 PM

ವರ ತಲೆಗೆ ಅಡಿಕೆ ಹಾಳೆಯ ಟೋಪಿ, ಮುಖಕ್ಕೆ ಕಪ್ಪುಬಣ್ಣ ಹಚ್ಚಿಕೊಂಡಿದ್ದ ವರ, ಕೊರಗಜ್ಜನ ವೇಷಭೂಷಣ ಧರಿಸಿದ್ದ. ವಧುವಿನ ಮನೆ ಮುಂದಿನ ರಸ್ತೆಯಲ್ಲಿ ಹಾಡು ಹೇಳಿಕೊಂಡು ಈ ತಂಡ ಕುಣಿಯುತ್ತಿತ್ತು.

ಮದುವೆ ಸಂಭ್ರಮದಲ್ಲಿ ಕೊರಗಜ್ಜನಿಗೆ ಅವಮಾನ: ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ
ಕೊರಗಜ್ಜನ ವೇಷ ಧರಿಸಿದ್ದ ಯುವಕ
Follow us on

ಮಂಗಳೂರು: ಮದುವೆ ಸಂಭ್ರಮದಲ್ಲಿದ್ದ ಮದುಮಗ ತುಳುನಾಡಿನ ಆರಾಧ್ಯದೈವ ಕೊರಗಜ್ಜನ ವೇಷ ಧರಿಸಿ ಕುಣಿದಿರುವ ಘಟನೆ ಬಂಟ್ವಾಳ ತಾಲ್ಲೂಕಿನ ಕೊಳ್ನಾಡು ಗ್ರಾಮದಲ್ಲಿ ನಡೆದಿದೆ. ಯುವಕನ ಜೊತೆಗೆ ಅವನ ಸ್ನೇಹಿತರೂ ಹೆಜ್ಜೆ ಹಾಕಿದ್ದಾರೆ. ಈ ಪ್ರಕರಣದಿಂದ ಕೊರಗಜ್ಜನಿಗೆ ಅವಮಾನವಾಗಿದೆ. ಕೊರಗಜ್ಜನ ಪ್ರಾಮುಖ್ಯತೆ ಮತ್ತು ಭಕ್ತರ ಭಾವನೆಗಳನ್ನು ಅರ್ಥ ಮಾಡಿಕೊಳ್ಳದ ಯುವಕನ ಕೃತ್ಯ ಖಂಡನೀಯ ಎಂದು ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕೊಳ್ನಾಡು ಗ್ರಾಮದ ಅಝೀಝ್ ಅವರ ಮಗಳ‌ ಮದುವೆ‌ ಉಪ್ಪಳ ಗ್ರಾಮದ ಯುವಕನ ಜೊತೆ ನಿಶ್ಚಯವಾಗಿತ್ತು. ವಧುವಿನ‌ ಮನೆಗೆ ವರನ ಸ್ನೇಹಿತರ ಬಳಗ ಹಿಂದಿನ ದಿನ ರಾತ್ರಿಯೇ ಬಂದಿತ್ತು. ಈ ವೇಳೆ ವರ ತಲೆಗೆ ಅಡಿಕೆ ಹಾಳೆಯ ಟೋಪಿ, ಮುಖಕ್ಕೆ ಕಪ್ಪುಬಣ್ಣ ಹಚ್ಚಿಕೊಂಡಿದ್ದ ವರ, ಕೊರಗಜ್ಜನ ವೇಷಭೂಷಣ ಧರಿಸಿದ್ದ. ವಧುವಿನ ಮನೆ ಮುಂದಿನ ರಸ್ತೆಯಲ್ಲಿ ಹಾಡು ಹೇಳಿಕೊಂಡು ಈ ತಂಡ ಕುಣಿಯುತ್ತಿತ್ತು.

ಮದುವೆಯ ದಿನ ಕೊರಗಜ್ಜನ ವೇಷಭೂಷಣ ಧರಿಸಿದ್ದ ಮದುಮಗ ಕುಣಿಯುತ್ತಿದ್ದ. ಈ ವಿಡಿಯೊ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮದುವೆ ಸಂಭ್ರಮದಲ್ಲಿ ನಡೆದಿರುವ ಕೃತ್ಯದಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಹಲವರು ಆಕ್ಷೇಪಿಸಿದ್ದಾರೆ.

ಮುಸ್ಲಿಮರು ಸಹ ಈ ಕೃತ್ಯವನನ್ನು ಖಂಡಿಸಿದ್ದಾರೆ. ಕೃತ್ಯವನ್ನು ಖಂಡಿಸಿರುವ ಆಡಿಯೊ ಸಹ ವೈರಲ್​ ಆಗಿದೆ. ಹುಚ್ಚಾಟ ಪ್ರದರ್ಶಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿದೆ. ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಧುವಿನ ಮನೆಗೆ ಬಜರಂಗದಳ ಕಾರ್ಯಕರ್ತರ ಮುತ್ತಿಗೆ
ಕೊರಗಜ್ಜ ದೈವಕ್ಕೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳದ ಕಾರ್ಯಕರ್ತರು ವಧುವಿನ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಮುತ್ತಿಗೆ ಹಾಕಿದ್ದ ವಿಟ್ಲ ಪ್ರಖಂಡ ಭಜರಂಗದಳ ಮತ್ತು ವಿಎಚ್​ಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಪರಿಸ್ಥಿತಿ ನಿಯಂತ್ರಿಸಿದರು.

ಪೊಲೀಸ್ ಠಾಣೆಗೆ ದೂರು
ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ಅವಮಾನ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅವಮಾನ ಮಾಡಿದ ವರ ಮತ್ತು ಇತರರ ವಿರುದ್ಧ ವಿಟ್ಲ ಪೊಲೀಸ್ ಠಾಣೆಗೆ ಚೇತನ್ ದೂರು ನೀಡಿದ್ದಾರೆ. ವಧು, ವರನ ಮನೆಯವರ ವಿರುದ್ಧ ಐಪಿಸಿ ಸೆಕ್ಷನ್​ 153A, 295ರ ಅಡಿ ಪ್ರಕರಣ ದಾಖಲಿಸಲಾಗಿದೆ. ಉಮರುಲ್ಲಾ ಬಾಷಿತ್ ಅವರನ್ನೂ ಪ್ರಕರಣದಲ್ಲಿ ಹೆಸರಿಸಲಾಗಿದೆ.ಇದನ್ನೂ ಓದಿ: ಕಾರಣಿಕ ದೈವ ಕೊರಗಜ್ಜನಿಗೆ ಖಾಸಿಂ ಸಾಹೇಬರ ಪೂಜೆ; 19 ವರ್ಷಗಳಿಂದ ಧಾರ್ಮಿಕ ಸಾಮರಸ್ಯ ಮೆರೆದ ಕೇರಳ ಮೂಲದ ವ್ಯಕ್ತಿ
ಇದನ್ನೂ ಓದಿ: ಕರಾವಳಿಯ ಶಕ್ತಿದೇವತೆ ಕೊರಗಜ್ಜನ ಪರಮ ಭಕ್ತ ಕೇರಳದ ಈ ಮುಸ್ಲಿಂ ವ್ಯಕ್ತಿ; ಮನೆಯ ಬಳಿಯೇ ಗುಡಿ ಕಟ್ಟಿದ್ದಾರೆ..

Published On - 3:59 pm, Fri, 7 January 22