ಉಂಡ ಮನೆಗೇ ಕನ್ನ ಹಾಕಿದ BSNL ಅಧಿಕಾರಿಗಳು: 70 ಲಕ್ಷ ಮೌಲ್ಯದ ಕಾಪರ್ ಕೇಬಲ್ ಕಳವು

ಮಂಗಳೂರಿನಲ್ಲಿ 70 ಲಕ್ಷ ರೂ. ಮೌಲ್ಯದ ಬಿಎಸ್‌ಎನ್‌ಎಲ್ ಕಾಪರ್ ಕೇಬಲ್ ಕಳವು ಪ್ರಕರಣದಲ್ಲಿ ಮೂವರು ಅಧಿಕಾರಿಗಳು ಬಂಧಿತರಾಗಿದ್ದಾರೆ. ಉಂಡ ಮನೆಗೇ ಕನ್ನ ಹಾಕಿದವರೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಮತ್ತೊಂದೆಡೆ ಬೆಂಗಳೂರಿನಲ್ಲಿ 100 ಕೋಟಿ ರೂ. CSR ನಿಧಿ ನೀಡುವ ನೆಪದಲ್ಲಿ 35 ಲಕ್ಷ ರೂ. ವಂಚಿಸಿದ ಆರೋಪ ಹಿನ್ನೆಲೆ 6 ಜನರ ವಿರುದ್ಧ ದೂರು ದಾಖಲಾಗಿದೆ.

ಉಂಡ ಮನೆಗೇ ಕನ್ನ ಹಾಕಿದ BSNL ಅಧಿಕಾರಿಗಳು: 70 ಲಕ್ಷ ಮೌಲ್ಯದ ಕಾಪರ್ ಕೇಬಲ್ ಕಳವು
ಸಾಂದರ್ಭಿಕ ಚಿತ್ರ
Image Credit source: Google
Edited By:

Updated on: Feb 20, 2026 | 8:00 AM

ಮಂಗಳೂರು/ಬೆಂಗಳೂರು, ಫೆಬ್ರವರಿ 20:  ಬಿಎಸ್​ಎನ್ಎಲ್​​​​​ ಕಚೇರಿಯಲ್ಲಿ ಅಧಿಕಾರಿಗಳೇ 70 ಲಕ್ಷ ಮೌಲ್ಯದ ಕಾಪರ್ ಕೇಬಲ್ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ಮಂಗಳೂರು ದಕ್ಷಿಣ ಪೊಲೀಸರಿಂದ ಮೂವರು ಆರೋಪಿಗಳ ಬಂಧಿಸಲಾಗಿದ್ದು, BSNL ಅಸಿಸ್ಟೆಂಟ್​​ ಆಫೀಸ್​​ ಸೂಪರಿಂಟೆಂಡೆಂಟ್ ತನ್ವೀರ್ ಪಾಷಾ(50), ಟೆಲಿಕಾಂ ಟೆಕ್ನಿಶಿಯನ್ ಕೆ.ಕೆ.ಚಾಮಿ(59) ಹಾಗೂ L&T ಕಂಪನಿ ಕೇಬಲ್ ಜಾಯಿಂಟರ್ ಡಿ.ಮಂಜುನಾಥ್ ಬಂಧಿತರಾಗಿದ್ದಾರೆ. ಆರೋಪಿಗಳಿಂದ 2.5 ಲಕ್ಷ ರೂ. ಮೌಲ್ಯದ ಕಾಪರ್ ಕೇಬಲ್ ಮತ್ತು 10 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ. ಉಂಡ ಮನೆಗೇ ಕನ್ನ ಹಾಕಿದವರೀಗ ಕಂಬಿ ಹಿಂದೆ ಸೇರಿದ್ದಾರೆ.

ಹಣದ ಸಹಾಯ ಮಾಡುವ ನೆಪದಲ್ಲಿ ವಂಚನೆ ಆರೋಪ

ಎಜುಕೇಷನ್ ಟ್ರಸ್ಟ್​​ಗೆ ಹಣದ ಸಹಾಯ ಮಾಡುವ ನೆಪದಲ್ಲಿ ವಂಚನೆ ನಡೆಸಿದ ಆರೋಪ ಹಿನ್ನೆಲೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಒಟ್ಟು 6 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. CSR ಫಂಡ್​​ನಲ್ಲಿ ಬರೋಬ್ಬರಿ 100 ಕೋಟಿ ನೀಡುವುದಾಗಿ ಬೆಂಗಳೂರಿನ ಹೆಣ್ಣೂರಿನಲ್ಲಿರುವ ಖಾಸಗಿ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿಯೋರ್ವರಿಗೆ ನಂಬಿಸಿದ್ದ ಆರೋಪಿಗಳು, ಹಣ ರಿಲೀಸ್​​ ಮಾಡುವ ನೆಪದಲ್ಲಿ ಹಂತ ಹಂತವಾಗಿ ಸುಮಾರು 35 ಲಕ್ಷ ರೂಪಾಯಿ ಪಡೆದು ವಂಚಿಸಿರೋದಾಗಿ ದೂರುದಾರೆ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಕೋಮುವಾದದಿಂದ ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಮೋಹನ್ ದಾಸ್ ಪೈ ಕೆಂಡಾಮಂಡಲ

ಟ್ರಸ್ಟ್​​ ಅಭಿವೃದ್ಧಿ ಮಾಡುವ ಉದ್ದೇಶದ ಹಿನ್ನೆಲೆ ಅಮರಪಲ್ಲಿ ಸುರೇಶ್ ಎಂಬುವವರನ್ನು ದೂರುದಾರೆ ಭೇಟಿಯಾಗಿದ್ದರು. ಸುರೇಶ್​​ ದೂರುದಾರರ ಸ್ವಂತ ಊರು ತೀರ್ಥಹಳ್ಳಿಯವರೇ ಆಗಿರುವ ವಿಚಾರ ತಿಳಿದು ವೈಯಕ್ತಿಕ ಸಮಸ್ಯೆ ಕೂಡ ಹೇಳಿಕೊಂಡಿದ್ದರು ಎನ್ನಲಾಗಿದೆ. ಇನ್ನು ನೂರು ಕೋಟಿ ಹಣ ಕೊಡಿಸೋದಾಗಿ ನಂಬಿಸಿದ್ದ ಸುರೇಶ್​​, ನಂತರ ಸಹಾಯದ ನೆಪದಲ್ಲಿ ವೆಂಕಟರಾಮ ಭಟ್, ಹೈದರಾಬಾದ್​​ನಲ್ಲಿರುವ ಅತುಲ್ ಕುಮಾರ್​​ ಎಂಬುವವರ ಪರಿಚಯ ಮಾಡಿಸಿದ್ದರು. ಈ ವೇಳೆ 100 ಕೋಟಿ ಹಣ ಟ್ರಸ್ಟ್​​ಗೆ ನೀಡುವ ಸಂಬಂಧ ದಾಖಲೆಗಳ ಪರಿಶೀಲನೆ ಮಾಡಬೇಕು ಎಂದು ಅತುಲ್ ಹೇಳಿದ್ದರು.  ವೆಂಕಟರಾಮ ಭಟ್​​ ಕೂಡ ದೂರುದಾರೆಗೆ ಕರೆ ಮಾಡಿ ಕೆಲ ದಾಖಲೆ ಮಿಸ್ ಆಗಿದೆ ಎಂದಿದ್ದರು. ಅಲ್ಲದೆ ಅತುಲ್ ಬೆಂಗಳೂರಿಗೆ ಬರೋದಾಗಿ ತಿಳಿಸಿದ್ದ ಕಾರಣ ಫ್ಲೈಟ್ ಟಿಕೆಟ್, ಉಳಿದುಕೊಳ್ಳುವ ಹೋಟೆಲ್ ಖರ್ಚುವೆಚ್ಚವನ್ನು ದೂರುದಾರರೇ ಭರಿಸಿದ್ದರು. ಆದರೆ ಹಣ ರಿಲೀಸ್ ನೆಪದಲ್ಲಿ ಲಕ್ಷಾಂತರ ರೂಪಾಯಿ ಪಡೆದಿರುವ ಆರೋಪಿಗಳು, ಬಳಿಕ ದೂರುದಾರರ ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗಾಗಿ ಪ್ಲ್ಯಾನ್​​ ಮಾಡಿ ವಂಚಿಸಿರೋದಾಗಿ ಆರೋಪಿಸಿ ಖಾಸಗಿ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 7:59 am, Fri, 20 February 26