AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೇಣೂರು ಸ್ಫೋಟದ ಬಳಿಕ ಎಚ್ಚೆತ್ತ ದಕ್ಷಿಣ ಕನ್ನಡ ಜಿಲ್ಲಾಡಳಿತ: ಬೆಳ್ತಂಗಡಿ ತಾಲೂಕಿನ 9 ಪಟಾಕಿ ಮಳಿಗೆ ಮೇಲೆ ದಾಳಿ

ಅಗ್ನಿಶಾಮಕ ದಳದ ರಿಜಿನಲ್ ಫೈರ್ ಅಧಿಕಾರಿ ರಂಗನಾಥ್ ಮತ್ತು ತಹಶೀಲ್ದಾರ್ ಪೃಥ್ವಿ ಸಾನಿಕಂ ನೇತೃತ್ವದಲ್ಲಿ ಕಾರ್ಯಾಚರಣೆ‌‌ ನಡೆಸಲಾಗಿದೆ. ಇದೇ ವೇಳೆ ಎರಡು ಅಂಗಡಿಯಲ್ಲಿ ಅಧಿಕ ಮಟ್ಟದ ಪಟಾಕಿ ದಾಸ್ತಾನು ಮಾಡಿರುವುದು ದಾಳಿ ವೇಳೆ ತಿಳಿದುಬಂದಿದೆ.

ವೇಣೂರು ಸ್ಫೋಟದ ಬಳಿಕ ಎಚ್ಚೆತ್ತ ದಕ್ಷಿಣ ಕನ್ನಡ ಜಿಲ್ಲಾಡಳಿತ: ಬೆಳ್ತಂಗಡಿ ತಾಲೂಕಿನ 9 ಪಟಾಕಿ ಮಳಿಗೆ ಮೇಲೆ ದಾಳಿ
ಬೆಳ್ತಂಗಡಿ ತಾಲೂಕಿನ 9 ಪಟಾಕಿ ಮಳಿಗೆ ಮೇಲೆ ದಾಳಿ
ಅಶೋಕ್​ ಪೂಜಾರಿ, ಮಂಗಳೂರು
| Updated By: Ganapathi Sharma|

Updated on: Jan 31, 2024 | 10:05 AM

Share

ಮಂಗಳೂರು, ಜನವರಿ 31: ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರು ಬಳಿ ಪಟಾಕಿ ತಯಾರಿಕಾ ಘಟಕದಲ್ಲಿ ಭೀಕರ ಸ್ಫೋಟ (Venur Blast) ಸಂಭವಿಸಿದ ಘಟನೆಯ ನಂತರ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಬೆಳ್ತಂಗಡಿ (Belthangady) ಕಂದಾಯ ಇಲಾಖೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಬೆಳ್ತಂಗಡಿ ತಾಲೂಕಿನ 9 ಪಟಾಕಿ ಮಳಿಗೆ ಮೇಲೆ ದಾಳಿ ನಡೆಸಿದ್ದಾರೆ. ಬೆಳ್ತಂಗಡಿಯ ಪ್ರಭಾತ್ ಸ್ಟೋರ್ ಮತ್ತು ಉಜಿರೆಯ ಪ್ರಭಾತ್ ಸ್ಟೋರ್ ಪಟಾಕಿ ಗೋಡೌನ್​ಗಳನ್ನು ಸೀಜ್ ಮಾಡಲಾಗಿದೆ.

ಅಗ್ನಿಶಾಮಕ ದಳದ ರಿಜಿನಲ್ ಫೈರ್ ಅಧಿಕಾರಿ ರಂಗನಾಥ್ ಮತ್ತು ತಹಶೀಲ್ದಾರ್ ಪೃಥ್ವಿ ಸಾನಿಕಂ ನೇತೃತ್ವದಲ್ಲಿ ಕಾರ್ಯಾಚರಣೆ‌‌ ನಡೆಸಲಾಗಿದೆ. ಇದೇ ವೇಳೆ ಎರಡು ಅಂಗಡಿಯಲ್ಲಿ ಅಧಿಕ ಮಟ್ಟದ ಪಟಾಕಿ ದಾಸ್ತಾನು ಮಾಡಿರುವುದು ದಾಳಿ ವೇಳೆ ತಿಳಿದುಬಂದಿದೆ. ಮಂಗಳವಾರದಿಂದಲೇ ಆರಂಭವಾಗಿರುವ ಕಾರ್ಯಾಚರಣೆ ಬುಧವಾರ ಬೆಳಗ್ಗೆ ಸಹ ಮುಂದುವರಿದಿದೆ.

ಈ ಮಧ್ಯೆ, ವೇಣೂರು ಸ್ಫೋಟ ಪ್ರಕರಣದ ಆರೋಪಿ ಕುಚ್ಚೋಡಿ ನಿವಾಸಿ ಬಶೀರ್, ಕೆಲಸಗಾರ ಹಾಸನದ ಕಿರಣ್ ಅವರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಮಂಗಳವಾರ ಹಾಜರುಪಡಿಸಲಾಗಿತ್ತು. ಸರ್ಕಲ್‌ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಅವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೇ ವೇಳೆ, ಆರೋಪಿಗಳಿಬ್ಬರನ್ನು 6 ದಿನ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಧೀಶರು ಆದೇಶ ಮಾಡಿದ್ದಾರೆ. ಆರೋಪಿಗಳ ಪರ ವಕೀಲ ಅರುಣ್ ಬಂಗೇರ ವಾದ ಮಂಡಿಸಿದ್ದರು.

ಇದನ್ನೂ ಓದಿ: ವೇಣೂರು ದುರಂತ: ನಿಯಮ ಮೀರಿ ಗನ್ ಪೌಡರ್ ದಾಸ್ತಾನು ಮಾಡಿದ್ದೇ ಭೀಕರ ಸ್ಫೋಟಕ್ಕೆ ಕಾರಣವಾಯ್ತ?

ವೇಣೂರು ಸ್ಫೋಟದ ಹಿನ್ನೆಲೆ

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರು ಬಳಿ ಕುಕ್ಕೇಡಿ ಎಂಬಲ್ಲಿ ಜನವರಿ 28ರ ಸಂಜೆ 5.30 ಸುಮಾರಿಗೆ ಪಟಾಕಿ ತಯಾರಿಕಾ ಘಟಕದಲ್ಲಿ ಭೀಕರ ಸ್ಫೋಟವಾಗಿತ್ತು. ಅಲ್ಲಿ 9 ಮಂದಿ ಕೂಲಿ ಕಾರ್ಮಿಕರು ಸ್ಫೋಟಕ ತಯಾರಿಸುತ್ತಿದ್ದರು. ಈ ಪೈಕಿ ಕೇರಳದ ವರ್ಗೀಸ್ (68), ಹಾಸನದ ಚೇತನ್ (25) ಕೇರಳದ ಸ್ವಾಮಿ (60) ಮೃತಪಟ್ಟಿದ್ದರು. ಉಳಿದಂತೆ ದಿನೇಶ ಹಾಸನ, ಕಿರಣ ಹಾಸನ, ಕುಮಾರ ಅರಸೀಕೆರೆ, ಕಲ್ಲೇಶ ಚಿಕ್ಕಮಾರಹಳ್ಳಿ, ಪ್ರೇಮ್ ಕೇರಳ, ಕೇಶವ ಕೇರಳ ಕೆಲಸ ನಿರ್ವಹಿಸುತ್ತಿದ್ದರು. ಮೃತಪಟ್ಟ ಮೂವರು ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟಕ ತಯಾರಿಸುತ್ತಿದ್ದರು. ಕುಚ್ಚೋಡಿ ನಿವಾಸಿ ಬಶೀರ್ ಎಂಬುವರು 2011-12 ರಲ್ಲಿ ಸ್ಟೋಟಕ ತಯಾರಿಕೆಗೆ ಲೈಸೆನ್ಸ್ ಪಡೆದುಕೊಂಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ