
ಮಂಗಳೂರು, ಜೂನ್ 13: ಧರ್ಮಸ್ಥಳದ (Dharmasthala Case) ವಿರುದ್ಧ ಹೆಣೆದಿದ್ದ ಕರಾಳ ಷಡ್ಯಂತ್ರ ಬಯಲಾಗುತ್ತಿದೆ. ಧರ್ಮಸ್ಥಳದಲ್ಲಿ ಶವ ಸಿಗುತ್ತೆ ಅಂತಾ SIT ಅಧಿಕಾರಿಗಳಿಂದ ಗುಂಡಿ ತೋಡಿಸಿದ್ದ ಮಾಸ್ಕ್ಮ್ಯಾನ್ ಚಿನ್ನಯ್ಯ, ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸುವ ಮೂಲಕ ತಮ್ಮದೇ ಬುರುಡೆ ಗ್ಯಾಂಗ್ ವಿರುದ್ಧ ತಿರುಗಿ ಬಿದ್ದಿದ್ದಾನೆ. ನಿನ್ನೆ ಯಾರು ಪ್ರೊಡ್ಯೂಸರ್? ಎಷ್ಟು ಕೋಟಿ ಫಂಡಿಂಗ್? ಅನ್ನೋದೆಲ್ಲ ರಿವೀಲ್ ಆಗಿತ್ತು. ಜೊತೆ ನಟ ಪ್ರಕಾಶ್ರಾಜ್ ಹೆಸರನ್ನು ಉಲ್ಲೇಖಿಸಿದ್ದ. ಆದರೆ ಇಂದು ಧರ್ಮಸ್ಥಳ ಬುರುಡೆ ರಹಸ್ಯದ ಹಿಂದೆ ಸ್ವಾಮೀಜಿ ಸಂಪರ್ಕ ಇರುವುದು ರಿವೀಲ್ ಆಗಿದೆ.
ಧರ್ಮಸ್ಥಳ ಬುರುಡೆ ಗ್ಯಾಂಗ್ ಮುಲ್ಕಿ ಆಶ್ರಮದ ಚಂದ್ರಶೇಖರ್ ಸ್ವಾಮೀಜಿಯನ್ನ ಭೇಟಿಯಾದ ಬಗ್ಗೆಯೂ ಚಿನ್ನಯ್ಯನ ತನ್ನ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ. ಷಡ್ಯಂತ್ರಕಾರರ ಮನವಿ ಮೇರೆಗೆ ಸ್ವಾಮೀಜಿಯೂ ಪೊಲೀಸರನ್ನು ಭೇಟಿಯಾಗಿದ್ದರಂತೆ. ಮಂಗಳೂರು ಪೊಲೀಸ್ ಅಧೀಕ್ಷಕರರನ್ನು ಸ್ವಾಮೀಜಿ ಭೇಟಿ ಮಾಡಿದ್ದರು. ಜೊತೆಗೆ ಬೆಂಗಳೂರಿನ ಹಿರಿಯ ಪೊಲೀಸರನ್ನೂ ಸ್ವಾಮೀಜಿ ಸಂಪರ್ಕಿಸಿದ್ದರು. ಪೊಲೀಸರಿಗೆ ಅರ್ಜಿದಾರರು ದೂರು ದಾಖಲಿಸಿದ್ದಾರೆಂದು ತಿಳಿಸಿದ್ದರು. ಚಿನ್ನಯ್ಯನ ದೂರು ಸ್ವೀಕರಿಸುವಂತೆ ಸ್ವಾಮೀಜಿ ಪ್ರಭಾವ ಬೀರಿದ್ದಾರೆ ಎಂದು ಚಿನ್ನಯ್ಯ ತನ್ನ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.
ಇನ್ನು ಚಂದ್ರಶೇಖರ್ ಸ್ವಾಮೀಜಿ ಭೇಟಿ ಬಗ್ಗೆ ಗಿರೀಶ್ ಮಟ್ಟಣ್ಣನವರ್ ಪ್ರತಿಕ್ರಿಯಿಸಿದ್ದು, ಚಿನ್ನಯ್ಯನ ಬೇಡಿಕೆಯಂತೆ ಚಂದ್ರಶೇಖರ್ ಸ್ವಾಮೀಜಿ ಬಳಿ ಹೋಗಿದ್ವಿ ಅಂತ ಹೇಳಿದ್ದಾರೆ. ಮತ್ತೊಂದ್ಕಡೆ 200 ಕೋಟಿ ರೂ ಫಂಡಿಂಗ್ ಸುಳ್ಳು, ಕೋಮುಗಲಭೆ ಎಬ್ಬಿಸುವ ಹುನ್ನಾರ ಎಂದು ಈ ಬಗ್ಗೆಯೂ ಗಿರೀಶ್ ಮಟ್ಟಣ್ಣನವರ್ ಸ್ಪಷ್ಟನೆ ನೀಡಿದ್ದಾರೆ.
ಧರ್ಮಸ್ಥಳ ಬುರುಡೆ ಪ್ರಕರಣದ ಬಗ್ಗೆ ಹೈಕೋರ್ಟ್ ವರದಿ ಕೇಳಿದೆ. ಈ ಬೆನ್ನಲ್ಲೇ SIT ಅಲರ್ಟ್ ಆಗಿದೆ. ಇವತ್ತು ಗೃಹ ಸಚಿವರನ್ನು ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೋಹಂತಿ ಭೇಟಿಯಾಗಿದ್ದಾರೆ. ಸುಮಾರು 20 ನಿಮಿಷಗಳ ಮಹತ್ವದ ಸಮಾಲೋಚನೆ ನಡೆಸಿದ್ದಾರೆ. ಪ್ರಕರಣದ ತನಿಖೆ ಪ್ರಗತಿ ಕುರಿತು ಸಚಿವರಿಗೆ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.