ಅದು 11 ಗ್ರಾಮಗಳಿಗೆ (villages) ಕುಡಿಯುವ ನೀರು (Drinking Water) ಸರಬರಾಜು ಮಾಡುವ ನೀರಾವರಿ ಅಣೆಕಟ್ಟೆ. ಆದ್ರೆ ದುರಂತ ಅಂದ್ರೆ ಇಲ್ಲಿ ಗ್ರಾಮಗಳಿಗೆ ಶುದ್ದ ನೀರು ಸಪ್ಲೈ ಆಗುವ ಬದಲು ವಿಷಪೂರಿತ ಕೊಳಚೆ ನೀರು ಸಾವಿರಾರು ಮನೆಗಳನ್ನು ಸೇರುತ್ತಿದೆ. ಕೊಳಚೆ ಮಿಶ್ರಿತ ನೀರು (chemical contamination) ಕುಡಿಸುತ್ತಿರುವ ಅಧಿಕಾರಿಗಳಿಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ. ಒಂದು ಕಡೆ ಹರಿಯುತ್ತಿರುವ ಕಲುಷಿತ ನೀರಿನಲ್ಲಿ ಉಕ್ಕುತ್ತಿರುವ ನೊರೆ. ಇನ್ನೊಂದು ಕಡೆ ತೆರೆದ ತೋಡಿನಲ್ಲೆ ಹರಿದು ಕುಡಿಯುವ ನೀರಿನ ಡ್ಯಾಂಗೆ ಸೇರುತ್ತಿರುವ ವಿಷಕಾರಿ ನೀರು. ಹೌದು.. ಇದು ಮಂಗಳೂರಿನ (mangalore) ಫಲ್ಗುಣಿ ನದಿ (phalguni river) ಮಲಿನವಾಗುತ್ತಿರುವ ದುರಂತದ ದೃಶ್ಯಗಳು. 11 ಗ್ರಾಮಗಳಿಗೆ ಕುಡಿಯಲು ಬಳಸುವ ಇಲ್ಲಿನ ಮರವೂರು ಅಣೆಕಟ್ಟಿಗೆ ಈ ತ್ಯಾಜ್ಯ ನೀರು ಸೇರುತ್ತಿದ್ದು ಮರವೂರು, ಮೂಡುಶೆಡ್ಡೆ, ಕಂದಾವರ, ಬಜಪೆ, ಪೆರ್ಮುದೆ, ಗುರುಪುರ, ಕೈಕಂಬ, ಸುಂಕದಕಟ್ಟೆ, ಕಳವಾರು, ವಾಮಂಜೂರು, ಕೆಂಜಾರು ಗ್ರಾಮದ ಗ್ರಾಮಸ್ಥರಿಗೆ ಇದೇ ಮಲಿನವಾದ ನೀರನ್ನು ಕುಡಿಯುವುದಕ್ಕೆ ಸರಬರಾಜು ಮಾಡಲಾಗುತ್ತಿದೆ. ಈ ಗ್ರಾಮಗಳಲ್ಲಿ ಸಾವಿರಾರು ಮನೆಗಳಿದ್ದು ಈ ಎಲ್ಲಾ ಮನೆಗಳಿಗೂ ಕುಡಿಯಲು ಯೋಗ್ಯವಲ್ಲದ ಈ ಕಲುಷಿತ ನೀರನ್ನು ಕೊಳವೆಗಳ ಮೂಲಕ ನೀಡುತ್ತಿದ್ದು ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಸ್ಥರು ಅನಾರೋಗ್ಯದಿಂದ ಬಳಲುವಂತಾಗಿದೆ ಎಂದು ಪಚ್ಚನಾಡಿ ಗ್ರಾಮಸ್ಥ ರಾಕೇಶ್ ತಿಳಿಸಿದ್ದಾರೆ.
ಮಂಗಳೂರಿನ ಪಚ್ಚನಾಡಿಯಲ್ಲಿ ಜಲತ್ಯಾಜ್ಯ ಘಟಕವಿದೆ. ಈ ಘಟಕಕ್ಕೆ ಮಂಗಳೂರು ನಗರದ ಕೊಳಚೆ ನೀರು ಬಂದು ಬೀಳುತ್ತದೆ. ಈ ನೀರನ್ನು ಶುದ್ದಿಕರಿಸಿ ಬಿಡಬೇಕಾದುದು ಪಾಲಿಕೆಯ ಕರ್ತವ್ಯ. ಆದ್ರೆ ಇಲ್ಲಿ ಈ ಕೊಳಚೆ ನೀರನ್ನು ಶುದ್ದಿಕರೀಸದೆ ನೇರವಾಗಿ ಹರಿಯುವ ನೀರಿಗೆ ಬಿಡಲಾಗುತ್ತಿದೆ ಎಂಬ ಆರೋಪ ಸ್ಥಳೀಯರದ್ದು. ತೆರೆದ ತೋಡಿಗೆ ಈ ನೀರು ಬಿಡುತ್ತಿರುವುದರಿಂದ ಈ ಭಾಗದಲ್ಲಿ ಮೂಗು ಮುಚ್ಚಿಕೊಂಡೆ ಹೋಗಬೇಕಾದ ಪರಿಸ್ಥಿತಿಯಿದೆ.
ವಿಪರೀತ ಸೊಳ್ಳೆಗಳ ಕಾಟದಿಂದ ಅನಾರೋಗ್ಯವು ಇಲ್ಲಿನ ಜನರನ್ನು ಕಾಡುತ್ತಿದೆ. ಈ ತೋಡಿನಲ್ಲಿ ಹರಿಯುವ ಈ ವಿಷಪೂರಿತ ನೀರು ನೇರವಾಗಿ ಕುಡಿಯುವ ನೀರಿನ ಡ್ಯಾಂಗೆ ಸೇರುತ್ತಿರುವುದರಿಂದ ಜನರು ಸಹ ಇದೇ ಕೊಳಚೆ ಮಿಶ್ರಿತ ನೀರು ಕುಡಿಯುವಂತಾಗಿದೆ. ಈಗಾಗಲೇ ಇಲ್ಲಿನ ನಾಗರಿಕರು ಹಲವು ಹೋರಾಟ ಮಾಡಿದ್ದು ಪ್ರಧಾನಿ ಕಾರ್ಯಲಯಕ್ಕೂ ದೂರು ನೀಡಿದ್ದಾರೆ. ಆದ್ರೆ ಈವರೆಗೆ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸುವ ಮನಸ್ಸು ಮಾಡಿಲ್ಲ ಸಂತ್ರಸ್ಥರಾದ ಪಚ್ಚನಾಡಿಯ ಸುಜಯ್ ಹೇಳುತ್ತಾರೆ.
ಇದನ್ನೂ ಓದಿ:
ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಘಟಕದಿಂದಲೂ ಕೆಮಿಕಲ್ ನೀರು ನದಿ ಸೇರುತ್ತಿದೆ ಎಂಬ ಆರೋಪವು ಇದೆ. ಸದ್ಯ ಜನಪ್ರತಿನಿಧಿ ಅಧಿಕಾರಿಗಳು ಪೈಪ್ ಮೂಲಕ ಅಣೆಕಟ್ಟಿಗಿಂತ ಮುಂದೆ ಈ ಡ್ರೈನೇಜ್ ನೀರನ್ನು ಬಿಡುವ ಭರವಸೆ ನೀಡಿದ್ದು, ಅನುದಾನ ಮೀಸಲಿಟ್ಟಿರುವುದಾಗಿಯು ಹೇಳಿದ್ದಾರೆ. ಈ ಬಾರಿಯಾದರೂ ಭರವಸೆ ಈಡೇರಿ ಜನ ಕಲುಷಿತ ನೀರು ಕುಡಿಯುವುದು ತಪ್ಪುತ್ತಾ ಎಂದು ಕಾದುನೋಡಬೇಕಿದೆ.
ವರದಿ: ಅಶೋಕ್, ಟಿವಿ 9, ಮಂಗಳೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ