ಕರಾವಳಿ ಜಿಲ್ಲೆಗಳಲ್ಲಿ ಜೂ.1ರಿಂದ ಜು.31ರ ವರೆಗೆ ಮೀನುಗಾರಿಕೆ ನಿಷೇಧ: ಪ್ರತಿ ವರ್ಷ 2 ತಿಂಗಳು ಬಂದ್ ಆಗುವುದ್ಯಾಕೆ? ಇಲ್ಲಿದೆ ಅಸಲಿ ಕಾರಣ

ಪ್ರತಿವರ್ಷದಂತೆ ಈ ವರ್ಷವು ಕೂಡ ಕರವಾಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೀನುಗಾರಿಕೆ ನಿಷೇಧಿಸಲಾಗಿದೆ. ಪ್ರತಿ ಬಾರಿ ಜೂನ್​ ಆರಂಭದಿಂದ ಎರಡು ತಿಂಗಳು ಯಾಕೆ ಮೀನುಗಾರಿಕೆ ಬಂದ್ ಆಗಲಿದೆ ಎನ್ನುವ ಕಾರಣ ಇಲ್ಲಿದೆ ನೋಡಿ.

ಕರಾವಳಿ ಜಿಲ್ಲೆಗಳಲ್ಲಿ ಜೂ.1ರಿಂದ ಜು.31ರ ವರೆಗೆ ಮೀನುಗಾರಿಕೆ ನಿಷೇಧ:  ಪ್ರತಿ ವರ್ಷ 2 ತಿಂಗಳು ಬಂದ್ ಆಗುವುದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಸಾಂದರ್ಭಿಕ ಚಿತ್ರ

Updated on: Jun 02, 2023 | 11:09 AM

ಮುಖ್ಯಾಂಶಗಳು

  • ಕರಾವಳಿ ಜಿಲ್ಲೆಗಳಲ್ಲಿ ಎರಡು ತಿಂಗಳು ಮೀನುಗಾರಿಕೆ ನಿಷೇಧ
  • ಜೂನ್​ 1ರಂದು ಜುಲೈ 31ರ ವರೆಗೆ 61 ದಿನಗಳ ಕಾಲ ಮೀನಿಗಾರಿಕೆಗೆ ನಿಷೇಧ
  • ಈ ಅವಧಿಯಲ್ಲಿ ಮೀನುಗಳು ಸಂತಾನೋತ್ಪತ್ತಿ ಮಾಡುವ ಸಮಯವಾಗಿದ್ದರಿಂದ ಮೀನುಗಾರಿಕೆ ಬಂದ್

ಮಂಗಳೂರು: ತಿಂಗಳುಗಟ್ಟಲೆ ಬಂಪರ್‌ ಮೀನು ದೊರೆತು, ಕಡಿಮೆ ದರದಲ್ಲಿ ಮೀನು ಕೈಗೆಟುಕುವ ಮೂಲಕ ಮೀನುಪ್ರಿಯರಿಗೆ ಹಬ್ಬದ ಕಾಲವಾಗಿದ್ದ ಈ ಮೀನುಗಾರಿಕಾ ಋುತು ಮುಕ್ತಾಯಗೊಂಡಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಾದ(Coastal Districts)  ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೀನುಗಾರಿಕೆ ಪ್ರಮುಖ ಉದ್ಯಮ. ಮೀನುಗಾರಿಕಾ ಋತುವಿನಲ್ಲಿ ಸಾವಿರಾರು ಕೋಟಿ ವಹಿವಾಟು ನಡೆಯುವ ಈ ಉದ್ಯಮದಲ್ಲಿ ವರ್ಷದಲ್ಲಿ ಎರಡು ತಿಂಗಳ ರಜಾ ಅವಧಿ ಇರುತ್ತದೆ. ಪ್ರತಿ ವರ್ಷ ಜೂನ್ ತಿಂಗಳು ಆರಂಭವಾದೊಡನೆ ಕರಾವಳಿಯಲ್ಲಿ ಸಮುದ್ರದಲ್ಲಿ ಮೀನಿಗಾರಿಕೆಗೆ ನಿಷೇಧ ಹೇರಲಾಗುತ್ತದೆ. ಅದರಂತೆ ಈ ವರ್ಷವೂ ಸಹ ಜೂನ್​ 1ರಂದು ಜುಲೈ 31ರ ವರೆಗೆ 61 ದಿನಗಳ ಕಾಲ ಮೀನಿಗಾರಿಕೆಗೆ(Fishing Ban) ನಿಷೇಧ ಇರಲಿದೆ.

ಪ್ರತಿ ವರ್ಷ 2 ತಿಂಗಳು ನಿಷೇಧಕ್ಕೆ ಕಾರವೇನು?

ಪ್ರತಿ‌ ವರ್ಷ ಪಶ್ಚಿಮ ಕರಾವಳಿಯಲ್ಲಿ ಜೂನ್ 1 ರಿಂದ ಜುಲೈ 31 ವರೆಗೆ ಎರಡು ತಿಂಗಳ ಕಾಲ ಮೀನುಗಾರಿಕೆಗೆ ನಿಷೇಧ ಹಾಕಲಾಗುತ್ತದೆ. ಮಳೆಗಾಲದ ಆರಂಭದ ಎರಡು ತಿಂಗಳ‌ ಈ ಅವಧಿಯಲ್ಲಿ ಮೀನುಗಳು ಸಂತಾನೋತ್ಪತ್ತಿ ಮಾಡುವ ಸಮಯ. ಮೀನುಗಳು‌ ಈ ಅವಧಿಯಲ್ಲಿ ಮೊಟ್ಟೆಯನ್ನಿಡುವ ಮೀನುಗಳಿಂದ ಮೀನುಗಳ ಸಂತತಿ ಹೆಚ್ಚಲಿದೆ. ಈ ಸಂದರ್ಭದಲ್ಲಿ ಮೀನುಗಾರಿಕೆ ನಡೆಸಿದರೆ ಮೀನುಗಳ ಸಂತತಿ ಕಡಿಮೆ ಆಗಿ ಮತ್ಸ್ಯಕ್ಷಾಮ ಆಗುವ ಸಾಧ್ಯತೆ ಇದೆ. ಮಳೆಗಾಲದ ಆರಂಭದ ಈ ಅವಧಿಯಲ್ಲಿ ಅರಬ್ಬಿ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಮೀನುಗಾರರಿಗೆ ಮತ್ತು ಮೀನುಗಾರಿಕೆ ಬೋಟ್ ಗಳಿಗೆ ಅಪಾಯ ಉಂಟು ಮಾಡುತ್ತದೆ. ಈ ಕಾರಣದಿಂದಾಗಿ ಪ್ರತಿ ವರ್ಷ ಜೂನ್​ ಆರಂಭದಿಂದಲೇ ಮೀನುಗಾರರು ಈ ಅವಧಿಯಲ್ಲಿ ಮೀನುಗಾರಿಕೆಗೆ ತೆರಳದೆ ರಜೆಯಲ್ಲಿ ಇರುತ್ತಾರೆ. ಇದನ್ನೇ ಅಧಿಕೃತವಾಗಿ ಸರ್ಕಾರ ನಿಷೇಧ ಎಂದು ಹೇಳಲಾಗುತ್ತದೆ.

ಮೀನಿನ ದರ ಗಗನಕ್ಕೇರುವ ಸಾಧ್ಯತೆ

ಮೀನುಗಾರಿಕಾ ನಿಷೇಧದ ಹಿನ್ನೆಲೆಯಲ್ಲಿ ಬಹುತೇಕ ಯಾಂತ್ರಿಕ ಬೋಟುಗಳು ಮಂಗಳೂರು ದಕ್ಕೆಯಲ್ಲಿ ಲಂಗರು ಹಾಕಿವೆ. ಇನ್ನು ಎರಡು ತಿಂಗಳ ಕಾಲ ಮೀನು ಪ್ರಿಯರಿಗೆ ‘ಕಹಿ’ಯೂಟ. ಈ ಅವಧಿಯಲ್ಲಿ  ಮೀನುಗಾರಿಕೆಗೆ ನಿಷೇಧ ಇರುವುದರಿಂದ ಮೀನು ಮಾರಾಟ ಕಡಿಮೆ. ಇನ್ನೊಂದೆಡೆ ಬೇಡಿಕೆ ಹೆಚ್ಚಾಗಿ ಪೂರೈಕೆ ಕಡಿಮೆ ಇರುವುದರಿಂದ ಮೀನಿನ ದರ ಗಗನಕ್ಕೇರುವ ಸಾಧ್ಯತೆಗಳಿವೆ.

ಪುಷ್ಕಳ ಮೀನೂಟದ ಋುತುಮಾನ: 2022-23ರ ಮೀನುಗಾರಿಕೆ ಋುತುವಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಪರ್‌ ಮೀನುಗಾರಿಕೆ ನಡೆದಿತ್ತು. ತತ್ಪರಿಣಾಮ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮೀನಿನ ದರ ತೀರ ಅಗ್ಗವಾಗಿತ್ತು. ಬಂಗುಡೆ ಮೀನಂತೂ ಯಥೇಚ್ಛವಾಗಿ ದೊರೆತಿದ್ದು, ನೂರು ರು.ಗೆ 20-30 ಮೀನು ದೊರೆಯುತ್ತಿತ್ತು. ಮೀನು ಗ್ರಾಹಕರಿಗೆ ಇದು ಹಬ್ಬದ ಸಮಯವಾದರೂ, ಮಾರುಕಟ್ಟೆಮೌಲ್ಯ ತೀರ ಕುಸಿದಿದ್ದರಿಂದ ಮೀನುಉದ್ಯಮ ನಷ್ಟಕ್ಕೆ ಒಳಗಾಗಿತ್ತು.

2020-21ನೇ ಸಾಲಿನಲ್ಲಿ 1924.51 ಕೋಟಿ ರು. ಮೊತ್ತದ 1,39,714.04 ಮೆಟ್ರಿಕ್‌ ಟನ್‌ ಮೀನು ಲಭ್ಯವಾಗಿದ್ದರೆ, 2021-22ನೇ ಸಾಲಿನಲ್ಲಿ 3801.60 ಕೋಟಿ ರು. ಮೊತ್ತದ 2,91,812 ಮೆಟ್ರಿಕ್‌ ಟನ್‌ ಮೀನುಗಾರಿಕೆ ನಡೆದಿತ್ತು. 2022-23ರಲ್ಲಿ 4154.80 ಕೋಟಿ ರು. ಮೊತ್ತದ 3,33,537.05 ಮೆಟ್ರಿಕ್‌ ಟನ್‌ ಮೀನುಗಾರಿಕೆ ನಡೆದಿದೆ.

Loading...
Unable to load recommendations.
Follow Us