ಜೆರೋಸಾ ಶಾಲೆ ಪ್ರಕರಣ; ಮತ ಬ್ಯಾಂಕ್​ಗಾಗಿ ಕಾಂಗ್ರೆಸ್​ ಹೀನ ರಾಜಕಾರಣಕ್ಕಿಳಿದಿದೆ ಎಂದ ನಳಿನ್ ಕುಮಾರ್ ಕಟೀಲು

| Updated By: ಆಯೇಷಾ ಬಾನು

Updated on: Feb 15, 2024 | 12:07 PM

ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮತ ಬ್ಯಾಂಕ್​ಗಾಗಿ ಕಾಂಗ್ರೆಸ್​ ಹೀನ ರಾಜಕಾರಣಕ್ಕಿಳಿದಿದೆ. ಕಾಂಗ್ರೆಸ್ ದ್ವಿಮುಖ ನೀತಿ, ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಶಾಸಕರ ವಿರುದ್ಧ ಕೇಸ್​ ದಾಖಲಿಸಿದ್ದನ್ನ ನಾವು ಖಂಡಿಸ್ತೇವೆ ಎಂದು ಕಾಂಗ್ರೆಸ್ ವಿರುದ್ಧ ಕಟೀಲು ಕಿಡಿಕಾರಿದ್ದಾರೆ.

ಜೆರೋಸಾ ಶಾಲೆ ಪ್ರಕರಣ; ಮತ ಬ್ಯಾಂಕ್​ಗಾಗಿ ಕಾಂಗ್ರೆಸ್​ ಹೀನ ರಾಜಕಾರಣಕ್ಕಿಳಿದಿದೆ ಎಂದ ನಳಿನ್ ಕುಮಾರ್ ಕಟೀಲು
ನಳಿನ್ ಕುಮಾರ್ ಕಟೀಲು
Follow us on

ಮಂಗಳೂರು, ಫೆ.15: ಜೆರೋಸಾ ಶಾಲೆಯಲ್ಲಿ(Gerosa School) ಶಿಕ್ಷಕಿಯಿಂದ ಹಿಂದೂ ಧರ್ಮದ ಅವಹೇಳನದ ಆರೋಪ ಕೇಸ್​ ಸಂಬಂಧ ಪ್ರತಿಭಟನೆ ನಡೆಸಿದ ಇಬ್ಬರು ಬಿಜೆಪಿ ಶಾಸಕರ (BJP MLA) ಮೇಲೆ ಎಫ್​ಐಆರ್ ದಾಖಲಾಗಿದೆ. ಕೇಸ್ ದಾಖಲಿಸಿದ್ದಕ್ಕೆ ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲು (Nalin Kumar Kateel) ಗರಂ ಆಗಿದ್ದಾರೆ. ಕಾಂಗ್ರೆಸ್ ದ್ವಿಮುಖ ನೀತಿ, ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಕೋಮು ಭಾವನೆ ಕೆರಳಿಸಿದ ಶಿಕ್ಷಕಿ ಸಸ್ಪೆಂಡ್​ ಮಾಡಬೇಕಿತ್ತು. ಅದು ಬಿಟ್ಟು ಶಾಸಕರ ಮೇಲೆ ಕೇಸ್​ಗಳನ್ನ ದಾಖಲಿಸಲಾಗಿದೆ. ಮತ ಬ್ಯಾಂಕ್​ಗಾಗಿ ಕಾಂಗ್ರೆಸ್​ ಹೀನ ರಾಜಕಾರಣಕ್ಕಿಳಿದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನ ಜೆರೋಸಾ ಶಾಲೆಯಲ್ಲಿ ಹಿಂದೂ ಧರ್ಮದ ಅವಹೇಳನ ಪ್ರಕರಣ ಸಂಬಂಧ ಶಿಕ್ಷಕಿ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಮತ್ತು ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಭರತ್ ಶೆಟ್ಟಿ ವಿರುದ್ಧ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಈ ಸಂಬಂಧ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ದ್ವಿಮುಖ ನೀತಿ, ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಶಾಲೆಯಲ್ಲಿ ಕೋಮು ಭಾವನೆ ಕೆರಳಿಸಿದ ಶಿಕ್ಷಕಿಯನ್ನ ಅಮಾನತುಗೊಳಿಸುವುದು ಬಿಟ್ಟು, ಸಾರ್ವಜನಿಕರ ಹೋರಾಟಕ್ಕೆ ನೈತಿಕ ಬೆಂಬಲ ನೀಡಿದ ಶಾಸಕರ ಮೇಲೆ ಕೇಸು ದಾಖಲಿಸಿಲಾಗಿದೆ. ಕಾನೂನು ಕ್ರಮ ಕೈಗೊಂಡ ಶಿಕ್ಷಣಾಧಿಕಾರಿಯನ್ನ ವರ್ಗಾವಣೆ ಮಾಡಿದ್ದಾರೆ. ಮತ ಬ್ಯಾಂಕ್​ಗಾಗಿ ಕಾಂಗ್ರೆಸ್ ಹೀನ ರಾಜಕಾರಣ ಮಾಡುತ್ತಿದೆ.

ಇದನ್ನೂ ಓದಿ: ಜೆರೋಸಾ ಶಿಕ್ಷಣ ಸಂಸ್ಥೆ ವಿವಾದ ಬೆನ್ನಲ್ಲೇ ದಕ್ಷಿಣ ಕನ್ನಡ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ವರ್ಗಾವಣೆ

ಈ ಹಿಂದೆ ಜಿಲ್ಲೆಯಲ್ಲಿ ಸುಂದರ್ ರಾಮ್ ಶೆಟ್ಟಿ ರಸ್ತೆ ಪ್ರಕರಣ ನಡೆದಾಗ ಅಲೋಶಿಯಸ್ ಶಾಲೆಯ ವಿದ್ಯಾರ್ಥಿಗಳನ್ನ ರಸ್ತೆಯಲ್ಲಿ ಕೂರಿಸಿ ಪ್ರತಿಭಟನೆ ಮಾಡಿದ್ರು. ಆಗ ಯಾವ ಕೇಸು ಹಾಕಲಿಲ್ಲ. ಆದರೆ ಈಗ ಶಾಸಕರಾದ ಭರತ್ ಶೆಟ್ಟಿ ಹಾಗು ವೇದವ್ಯಾಸ್ ಕಾಮತ್ ವಿರುದ್ಧ ಕೇಸು ದಾಖಲಿಸಲಾಗಿದೆ. ಇದನ್ನ ನಾವು ಖಂಡಿಸುತ್ತೇವೆ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ. ನಾವು ಕಾಂಗ್ರೆಸ್ ಸರಕಾರದ ಎದುರು ಭಿಕ್ಷೆ ಬೇಡೋದಿಲ್ಲ. ಸಾರ್ವಜನಿಕವಾಗಿ ಹೋರಾಟ ಮಾಡುತ್ತೇವೆ. ಕಾಂಗ್ರೆಸ್​ನ ಹಿಂದೂ ವಿರೋಧಿ ನೀತಿ ವಿರುದ್ಧ ಹೋರಾಟ ಮಾಡುತ್ತೇವೆ. ಶಾಲೆಯಲ್ಲಿ ನಡೆದಿದ್ದು ಕಾಂಗ್ರೆಸ್ -ಬಿಜೆಪಿ ಅಥವಾ ಹಿಂದೂ -ಕ್ರೈಸ್ತರ ಹೋರಾಟ ಅಲ್ಲ. ತಮ್ಮ ಮಕ್ಕಳಿಗಾದ ಅನ್ಯಾಯದ ವಿರುದ್ಧ ಪೋಷಕರು ಪ್ರತಿಭಟಿಸಿದ್ದಾರೆ. ಆ ಹೋರಾಟಕ್ಕೆ ಬೆಂಬಲವಾಗಿ ಶಾಸಕರು ಬಂದಿದ್ದಾರೆ. ನಮ್ಮ ಎರಡು ಆಗ್ರಹಗಳಿವೆ. ಒಂದು ಅಧಿಕಾರಿಯನ್ನ ವಾಪಸ್ ಕರೆಸಿಕೊಳ್ಳಿ. ಮತ್ತೊಂದು ಶಾಸಕರ ಕೇಸ್ ವಾಪಸ್ ತೆಗೆದುಕೊಳ್ಳಿ ಎಂದು ಕಟೀಲು ಒತ್ತಾಯಿಸಿದರು.

ಇನ್ನು ಮಾತು ಮುಂದುವರೆಸಿದ ಕಟೀಲು, ಪೋಷಕರು ಹೋರಾಟವನ್ನ ಕೈಗೆತ್ತಿಕೊಂಡಿದ್ರು. ಹೋರಾಟ ಗಮನಕ್ಕೆ ಬಂದ ಮೇಲೆ ಜನಪ್ರತಿನಿಧಿಗಳ ಜವಾಬ್ದಾರಿ. ನಾನು ಇದ್ದಿದ್ರೆ ನಾನು ಹೋರಾಟಕ್ಕೆ ಹೋಗುತ್ತಿದ್ದೆ. ಜನರ ಸಮಸ್ಯೆ ಆಲಿಸಲು ಪರಿಹರಿಸಲು ಶಾಸಕರು ಹೋಗಿದ್ದಾರೆ. ಪಾಲಕರ ಒತ್ತಾಯವನ್ನ ಸರಕಾರದ ಗಮನಕ್ಕೆ ತಂದಿದ್ದಾರೆ. ಆ ಕೆಲಸ ತಪ್ಪು ಎಂದು ವಿದ್ಯಾರ್ಥಿಗಳು ಸಾರ್ವಜನಿಕರು ಹೇಳಿದ್ದಾರೆ. ರಾಮನನ್ನ ಅವಹೇಳನ ಮಾಡಿದ್ದಕ್ಕೆ ವಿದ್ಯಾರ್ಥಿಗಳಿಗೆ ದುಃಖವಾಗಿದೆ. ಇದನ್ನ ನಾವು ರಾಜಕೀಯಕ್ಕೆ ಬಳಸಿಕೊಂಡಿಲ್ಲ. ಇದರಲ್ಲಿ ರಾಜಕೀಯವನ್ನ ಮಾಡುವ ಕೆಲಸ ಕಾಂಗ್ರೆಸ್ ಮಾಡಿದೆ ಎಂದು ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ