ಯಕ್ಷಗಾನದ ಮೊದಲ ವೃತ್ತಿಪರ ಮಹಿಳಾ ಭಾಗವತ ಲೀಲಾವತಿ ಬೈಪಾಡಿತ್ತಾಯರಿಗೆ ರಾಜ್ಯೋತ್ಸವ ಪ್ರಶಸ್ತಿ

| Updated By: ಗಣಪತಿ ಶರ್ಮ

Updated on: Oct 31, 2023 | 8:57 PM

ಮಹಿಳೆಯರು ಯಕ್ಷಗಾನ ಪ್ರದರ್ಶನಗಳನ್ನು ವೀಕ್ಷಿಸಲು ಹೋಗುವುದಕ್ಕೂ ಅಡ್ಡಿ ಇದ್ದ, ಹಿಂಜರಿಕೆ ಪಡುತ್ತಿದ್ದ ಕಾಲದಲ್ಲಿ ಯಕ್ಷಗಾನ ಭಾಗವತಿಕೆ ಕಲಿತು ರಂಗವನ್ನೇರಿ ಸಾಧನೆ ಮಾಡಿದವರು ಲೀಲಾವತಿ ಬೈಪಾಡಿತ್ತಾಯರು. ಇವರು ವೃತ್ತಿಪರ ಯಕ್ಷಗಾನ ಮೇಳಗಳಲ್ಲಿ ತಿರುಗಾಟ ಮಾಡಿದ ಏಕೈಕ ಮಹಿಳೆಯೂ ಹೌದು. 40 ವರ್ಷಗಳಿಗೂ ಹೆಚ್ಚು ಕಾಲ ತಮ್ಮ ಹಾಡುಗಾರಿಕೆಯಿಂದ ಜನರನ್ನು ರಂಜಿಸಿದ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ.

ಯಕ್ಷಗಾನದ ಮೊದಲ ವೃತ್ತಿಪರ ಮಹಿಳಾ ಭಾಗವತ ಲೀಲಾವತಿ ಬೈಪಾಡಿತ್ತಾಯರಿಗೆ ರಾಜ್ಯೋತ್ಸವ ಪ್ರಶಸ್ತಿ
ಪತಿ ಹರಿನಾರಾಯಣ ಬೈಪಾಡಿತ್ತಾಯರ ಜತೆ ಮಹಿಳಾ ಭಾಗವತ ಲೀಲಾವತಿ ಬೈಪಾಡಿತ್ತಾಯರು
Follow us on

ಮಂಗಳೂರು, ಅಕ್ಟೋಬರ್ 31: ಕರಾವಳಿ ಕರ್ನಾಟಕದ ಪ್ರಸಿದ್ಧ ಕಲೆ ಯಕ್ಷಗಾನದ (Yakshagana) ಮೊತ್ತ ಮೊದಲ ವೃತ್ತಿಪರ ಮಹಿಳಾ ಭಾಗವತ ಲೀಲಾವತಿ ಬೈಪಾಡಿತ್ತಾಯರಿಗೆ (Leelavathi Baipadithaya) (ಇವರು ವೃತ್ತಿಪರ ಮೇಳಗಳಲ್ಲಿ ತಿರುಗಾಟ ಮಾಡಿದ ಏಕೈಕ ಮಹಿಳೆಯೂ ಹೌದು) 2023ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ (Kannada Rajyotsava Award) ಘೋಷಣೆಯಾಗಿದೆ. ಮಹಿಳೆಯರು ಯಕ್ಷಗಾನ ಪ್ರದರ್ಶನಗಳನ್ನು ವೀಕ್ಷಿಸಲು ಹೋಗುವುದಕ್ಕೂ ಅಡ್ಡಿ ಇದ್ದ, ಹಿಂಜರಿಕೆ ಪಡುತ್ತಿದ್ದ ಕಾಲದಲ್ಲಿ ತಮ್ಮ ಪತಿ, ಯಕ್ಷಗಾನದ ಖ್ಯಾತ ಮದ್ದಳೆಗಾರರಾದ ಹರಿನಾರಾಯಣ ಬೈಪಾಡಿತ್ತಾಯರಿಂದಲೇ ಭಾಗವತಿಕೆ ಕಲಿತು ರಂಗವನ್ನೇರಿದವರು ಲೀಲಾವತಿ ಬೈಪಾಡಿತ್ತಾಯರು.

ಕೇರಳದ ಕಾಸರಗೋಡು ಜಿಲ್ಲೆಯ ಮಧೂರಿನಲ್ಲಿ 1947ರ ಮೇ 23ರಂದು ಜನಿಸಿದ ಲೀಲಾವತಿ ಬೈಪಾಡಿತ್ತಾಯರು, ಮಧೂರು ಪದ್ಮನಾಭ ಸರಳಾಯರಲ್ಲಿ ಸುಮಾರು 7 ವರ್ಷಗಳ ಕಾಲ ಶಾಸ್ತ್ರೀಯ ಸಂಗೀತ ತರಬೇತಿ ಪಡೆದರು. ತೆಂಕುತಿಟ್ಟಿನ ಅಗ್ರಮಾನ್ಯ ಹಿಮ್ಮೇಳ ಗುರುಗಳಾದ ಹರಿನಾರಾಯಣ ಬೈಪಾಡಿತ್ತಾಯ ಅವರನ್ನು ವಿವಾಹವಾದ ಬಳಿಕ ಲೀಲಾವತಿ ಅವರ ಚಿತ್ತ ಯಕ್ಷಗಾನದತ್ತ ಆಕರ್ಷಿತವಾಯಿತು. ನಂತರ ಪತಿಯಿಂದಲೇ ಯಕ್ಷಗಾನ ಭಾಗವತಿಕೆ ಕಲಿತ ಅವರು, ಸುಮಾರು 40 ವರ್ಷಗಳಿಗೂ ಹೆಚ್ಚು ಕಾಲ ಯಕ್ಷರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ.

ಯಕ್ಷಗಾನ ಲೋಕದಲ್ಲಿ ಬೆಳಗಿ ಕಲೆಯನ್ನೂ ಬೆಳೆಸಿದ ಕೀರ್ತಿವಂತರಾದ ಶೇಣಿ ಗೋಪಾಲಕೃಷ್ಣ ಭಟ್, ಬಣ್ಣದ ಮಾಲಿಂಗ,ಹೊಸಹಿತ್ಲು ಮಹಾಲಿಂಗ ಭಟ್, ಪಡ್ರೆ ಚಂದು, ಪುತ್ತೂರು ನಾರಾಯಣ ಹೆಗ್ಡೆ, ಅಳಿಕೆ ರಾಮಯ್ಯ ರೈ, ಕೆ.ಗೋವಿಂದ ಭಟ್, ಪುತ್ತೂರು ಕೃಷ್ಣ ಭಟ್, ಕೋಳ್ಯೂರು ರಾಮಚಂದ್ರ ರಾವ್, ಎಂಪೆಕಟ್ಟೆ ರಾಮಯ್ಯ ರೈ, ಕುಂಬಳೆ ಸುಂದರ ರಾವ್, ಶಂಕರನಾರಾಯಣ ಸಾಮಗರು, ರಾಮದಾಸ ಸಾಮಗರು, ಎಂ.ಎಲ್.ಸಾಮಗರು, ತೆಕ್ಕಟ್ಟೆ ಆನಂದ ಮಾಸ್ತರ್, ಪ್ರಭಾಕರ ಜೋಷಿ ಮುಂತಾದ ಯಕ್ಷಲೋಕದ ಘಟಾನುಘಟಿ ದಿಗ್ಗಜರನ್ನು ತಾಳಮದ್ದಳೆಯಲ್ಲಿ, ಯಕ್ಷಗಾನ ಪ್ರದರ್ಶನಗಳಲ್ಲಿ ಕುಣಿಸಿದ, ಮಾತನಾಡಿಸಿದ ಅನುಭವ ಹಿರಿಯ ಭಾಗವತರಾದ ಲೀಲಾವತಿ ಬೈಪಾಡಿತ್ತಾಯ ಅವರದ್ದು.

ಬಲಿಪ ನಾರಾಯಣ ಭಾಗವತರು, ದಾಮೋದರ ಮಂಡೆಚ್ಚರು, ಕಡತೋಕ ಭಾಗವತರು, ನೆಡ್ಲೆ ನರಸಿಂಹ ಭಟ್, ಬಲ್ಲಾಳರು, ದಿವಾಣ ಭೀಮ ಭಟ್, ಅಡೂರು ವೆಂಕಟ ಮದ್ಲೆಗಾರರು ಮುಂತಾದ ಅಗ್ರಗಣ್ಯ ಹಿಮ್ಮೇಳ ಕಲಾವಿದರ ಸಲಹೆ, ಮಾರ್ಗದರ್ಶನಗಳಿಂದ ಪ್ರಬುದ್ಧ ಕಲಾವಿದಾರಿ ರೂಪುಗೊಂಡ ಲೀಲಾವತಿ ಬೈಪಾಡಿತ್ತಾಯ ಅವರ ಸಾಧನೆಗೆ ಈಗಾಗಲೇ ಅನೇಕ ಪ್ರಶಸ್ತಿ, ಸನ್ಮಾನಗಳು ಅರಸಿ ಬಂದಿವೆ.

ಇದನ್ನೂ ಓದಿ: Rajyotsava Award 2023 Winners List: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಇಲ್ಲಿದೆ ವಿಜೇತರ ಪಟ್ಟಿ

ಕರ್ನಾಟಕ ಸರ್ಕಾರದ ಸಾಧಕ ಹಿರಿಯ ನಾಗರಿಕ ಪ್ರಶಸ್ತಿ 2012, ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ 2010, ಮಂಗಳೂರು ವಿವಿ ಯಕ್ಷ ಮಂಗಳಾ ಪ್ರಶಸ್ತಿ 2015, ಆಳ್ವಾಸ್ ನುಡಿಸಿರಿ ಸಾಧಕ ಪ್ರಶಸ್ತಿ 2015, ಉಳ್ಳಾಲ ರಾಣಿ ಅಬ್ಬಕ್ಕ ಪ್ರಶಸ್ತಿ, ಕರಾವಳಿ ಲೇಖಕ, ವಾಚಕಿಯರ ಸಂಘ, ಅಗರಿ ಪ್ರಶಸ್ತಿ, ಉಡುಪಿಯ ಪೇಜಾವರ ಮಠದ ಪ್ರಶಸ್ತಿ ಹಾಗೂ ಇನ್ನೂ ಅನೇಕ ಸನ್ಮಾನ, ಗೌರವಗಳಿಗೆ ಲೀಲಾವತಿ ಬೈಪಾಡಿತ್ತಾಯ ಭಾಜನರಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ