ಮಂಗಳೂರು: ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ, ಆರೋಪಿಯ ತಯಾರಿ ಹೇಗಿತ್ತು ಗೊತ್ತಾ?

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸರ್ಕಾರಿ ಕಾಲೇಜಿನಲ್ಲಿ ಆ್ಯಸಿಡ್ ದಾಳಿಗೆ ಒಳಗಾದ ಮೂವರು ಪಿಯುಸಿ ವಿದ್ಯಾರ್ಥಿನಿಯರಿಗೆ ಮಂಗಳೂರು ನಗರದ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಮೂವರಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಮುಂದಿನ ಎರಡು ವಾರದ ನಂತರ ಪ್ಲ್ಯಾಸ್ಟಿಕ್ ಸರ್ಜರಿ ಮಾಡಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆರೋಪಿ ಯುವಕ ಅಬಿನ್ ಪ್ಲ್ಯಾಸ್ಟಿಕ್ ಬಾಟಲ್‌ನಲ್ಲಿ ಆ್ಯಸಿಡ್ ತಂದು ಯುವತಿಯರ ಮೇಲೆ ಎರಚಿದ್ದಾನೆ. ಆ್ಯಸಿಡ್ ದಾಳಿಗೂ ಮುನ್ನ ಆರೋಪಿ ಅಬಿನ್ ತಯಾರಿ ಹೇಗಿತ್ತು ಗೊತ್ತಾ? ಮಾಹಿತಿ ಇಲ್ಲಿದೆ ಓದಿ.

ಮಂಗಳೂರು: ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ, ಆರೋಪಿಯ ತಯಾರಿ ಹೇಗಿತ್ತು ಗೊತ್ತಾ?
ಆರೋಪಿ ಅಬಿನ್ ಚಲನ-ವಲನ ಸಿಸಿಟಿವಿಯಲ್ಲಿ ಸೆರೆ
Edited By:

Updated on: Mar 06, 2024 | 9:40 AM

ಮಂಗಳೂರು, ಮಾರ್ಚ್​.06: ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸರ್ಕಾರಿ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ನಡೆದ ಆ್ಯಸಿಡ್ ದಾಳಿ (Acid Attack) ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅಬಿನ್​ ಈ ಕೃತ್ಯ ಎಸಗಲು ಯಾವ ರೀತಿ ತಯಾರಿ ಮಾಡಿಕೊಂಡಿದ್ದ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಆರೋಪಿ ಕೃತ್ಯ ಎಸಗಲು ನಡೆಸಿದ್ದ ತಯಾರಿ, ಎಲ್ಲಿ ಆ್ಯಸಿಡ್ ಖರೀದಿಸಿದ್ದ ಹಾಗೂ ಕೇರಳದಿಂದ ಮಂಗಳೂರಿಗೆ ಬಂದು ಕೃತ್ಯ ಎಸಗಿದ್ದೇಗೆ ಎಂಬ ಬಗ್ಗೆ ತನಿಖೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಸದ್ಯ ಆರೋಪಿಯ ಸಂಚು ಬಯಲಾಗಿದೆ.

ಮಾರ್ಚ್ 4ರ ಸೋಮವಾರ ಬೆಳಗ್ಗೆ ಕಡಬಕ್ಕೆ ಆಗಮಿಸಿದ್ದ ಆರೋಪಿ ಅಬಿನ್, ಕಡಬದ ದುರ್ಗಾಂಬಿಕಾ ದೇವಸ್ಥಾನ ಪಕ್ಕದ ಮೂಕಾಂಬಿಕಾ ಬೇಕರಿಗೆ ಎಂಟ್ರಿ ಕೊಟ್ಟಿದ್ದ. ಅಲ್ಲಿ ಮೊಬೈಲ್ ಚಾರ್ಜ್​ಗೆ ಇಡುವ ನೆಪದಲ್ಲಿ ಬೇಕರಿಯ ಒಳಗೆ ಪ್ರವೇಶ ಮಾಡಿದ್ದ. ಬೇಕರಿಯ ವಾಷ್​ಬೇಸಿನ್ ಬಳಿ ಬ್ಯಾಗ್ ಇಟ್ಟು ಮೊಬೈಲ್ ಚಾರ್ಚ್​ಗೆ ಇಟ್ಟಿದ್ದ. ಬಳಿಕ ಬ್ಯಾಗ್​ನಲ್ಲಿದ್ದ ಌಸಿಡ್ ಬಾಟಲಿ ತೆಗೆದು ಪ್ಯಾಂಟ್​ ಜೇಬಿನಲ್ಲಿ ಹಾಕಿಕೊಂಡಿದ್ದ. ಇದಾದ ನಂತರ ಬೆಳಗ್ಗೆ 8.04ಕ್ಕೆ ಅಬಿನ್ ತನ್ನ ಬ್ಯಾಗ್, ಮೊಬೈಲ್ ಅನ್ನು ಬೇಕರಿಯಲ್ಲೇ ಬಿಟ್ಟು ಹೊರಹೋಗಿದ್ದ.

ಬಳಿಕ ಕಡಬ ತಾಲೂಕು ಕಚೇರಿ ಬಳಿ ಬಟ್ಟೆ ಬದಲಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ತಾನು ಹಾಕಿದ್ದ ಕಪ್ಪು ಬಟ್ಟೆ ಬಿಚ್ಚಿ ನೀಲಿ, ಬಿಳಿ ಬಣ್ಣದ ಸಮವಸ್ತ್ರ ಧರಿಸಿ ಕಾಲೇಜಿಗೆ ಹೋಗಿ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ಎರಚಿದ್ದಾನೆ. ಇನ್ನು ಆರೋಪಿ ಅಬಿನ್ ಭಾನುವಾರವೇ ಕೇಳರದಿಂದ ಮಂಗಳೂರಿಗೆ ರೈಲಿನಲ್ಲಿ ಬಂದಿದ್ದ ಎಂಬ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಮಂಗಳೂರು ಆ್ಯಸಿಡ್​ ದಾಳಿ, ಸಂತ್ರಸ್ತ ಮೂವರು ವಿದ್ಯಾರ್ಥಿನಿಯರಿಗೆ 4 ಲಕ್ಷ ರೂ. ಪರಿಹಾರ

ಕೇರಳದ ಮಲಪ್ಪುರಂ ಜಿಲ್ಲೆಯ ನಿಲಂಬೂರು ತಾಲೂಕು ನಿವಾಸಿ ಅಬಿನ್ ಭಾನುವಾರ ಮಧ್ಯಾಹ್ನ ರೈಲಿನ ಮೂಲಕ ನಿಲಂಬೂರಿನಿಂದ ಹೊರಟಿದ್ದ. ರಾತ್ರಿ ಮಂಗಳೂರು ರೈಲು ನಿಲ್ದಾಣ ತಲುಪಿದ್ದ. ಅಲ್ಲಿಯೇ ಬೆಳಿಗ್ಗೆಯವರೆಗೆ ಕಾಲ ಕಳೆದು ಬಳಿಕ ಮಂಗಳೂರಿನಿಂದ ಬಸ್​ನಲ್ಲಿ ಕಡಬಕ್ಕೆ ಆಗಮಿಸಿದ್ದ. ಬಸ್‌ ನಿಲ್ದಾಣದ ಬಳಿ ಇದ್ದ ಬೇಕರಿಯಲ್ಲಿ ತನ್ನಲ್ಲಿದ್ದ ಎರಡು ಮೊಬೈಲ್‌ ಫೋನ್​ಗಳನ್ನು ಚಾರ್ಜ್‌ಗಿಟ್ಟಿದ್ದ.

ಕಡಬ ಪೇಟೆಯ ಅಂಗಡಿಯೊಂದರಲ್ಲಿ ಆ್ಯಸಿಡ್ ಖರೀದಿ

ಆರೋಪಿ ಬಸ್​ ಮೂಲಕ ಕಡಬ ತಲುಪಿ ಬೆಳಗ್ಗೆ 7.30ರ ಸುಮಾರಿಗೆ ಕಡಬ ಪೇಟೆಯ ಅಂಗಡಿಯೊಂದರಲ್ಲಿ ಆ್ಯಸಿಡ್ ಖರೀದಿ ಮಾಡಿದ್ದ. ರಬ್ಬರ್ ಬೆಳೆಗಾರರು ಬಳಸುವ ಆ್ಯಸಿಡ್ ಖರೀದಿಸಿದ್ದ. ಆ್ಯಸಿಡ್​ ದಾಳಿಗೆ ಒಳಗಾದ ಸಂತ್ರಸ್ತೆಯನ್ನು ಕಳೆದ ಎರಡು ವರ್ಷಗಳಿಂದ ಆರೋಪಿ ಪೀತಿಸುತ್ತಿದ್ದ. ವಿದ್ಯಾರ್ಥಿನಿಯ ತಾಯಿ ಮೂಲತಃ ಕೇರಳದವರು. ಆರೋಪಿ ಅಬಿನ್ ಕೂಡಾ ಆಕೆಯ ಮನೆಯ ಹತ್ತಿರದ ನಿವಾಸಿ. ವಿದ್ಯಾರ್ಥಿನಿಯ ಸಂಬಂಧಿಕರು ಆರೋಪಿಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅವರ ಮುಖಾಂತರ ಸಂತ್ರಸ್ತ ವಿದ್ಯಾರ್ಥಿನಿಯ ಪರಿಚಯವಾಗಿ ಪ್ರೇಮಕ್ಕೆ ತಿರುಗಿತ್ತು. ಈ ವಿಚಾರ ಯುವತಿಯ ತಾಯಿಗೆ ಗೊತ್ತಾಗಿ ಇದನ್ನು ಆಕ್ಷೇಪಿಸಿದ್ದರು. ಇದೇ ಕಾರಣಕ್ಕೆ ಯುವತಿ ಈತನ ಪ್ರೀತಿಯನ್ನು ತಿರಸ್ಕರಿಸಿದ್ದಳು. ಇದರಿಂದ ಕೋಪಗೊಂಡ ಆರೋಪಿ ಆ್ಯಸಿಡ್ ದಾಳಿಯ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. ಸದ್ಯ ಆ್ಯಸಿಡ್ ದಾಳಿಗೂ ಮೊದಲಿನ ಸಿಸಿಟಿವಿ ದೃಶ್ಯಗಳು ಲಭ್ಯವಾಗಿವೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Ashok

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸುದ್ದಿಬಿಡುಗಡೆ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಪ್ರಜಾ ಟಿ.ವಿಯ ಉಡುಪಿ ಜಿಲ್ಲಾ ವರದಿಗಾರರಾಗಿ ಒಂದು ವರ್ಷ ಏಳು ತಿಂಗಳು ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ, ಒಂದು ವರ್ಷ ನಾಲ್ಕು ತಿಂಗಳಿನಿಂದ ಟಿ.ವಿ 9 ವಾಹಿನಿಯಲ್ಲಿ ದಕ್ಷಿಣಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ ಇಂಡಿಯಾ ಟೆಲಿವಿಷನ್​ . ಕಾಮ್​ 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
Follow Us