ನೀರಿನ ಬಿಲ್ ಕೇಳೋ ಅಧಿಕಾರಿಗಳು ಈಗ ಎಲ್ಲಿದ್ದಾರೆ?; ಮಂಗಳೂರಿನಲ್ಲಿ ಕಲುಷಿತ ನೀರು ಕುಡಿದು 100ಕ್ಕೂ ಹೆಚ್ಚು ಜನರಿಗೆ ವಾಂತಿ-ಭೇದಿ

ಮಂಗಳೂರು ಮಹಾನಗರ ಪಾಲಿಕೆಯ (MCC) ನಿರ್ಲಕ್ಷ್ಯದಿಂದ ನಗರದ ಬಿಜೈ, ಬಟ್ಟಗುಡ್ಡೆ ಭಾಗದಲ್ಲಿ ಕಲುಷಿತ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ನೂರಕ್ಕೂ ಹೆಚ್ಚು ಜನರಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ. ಲ್ಯಾಬ್ ವರದಿಯ ಪ್ರಕಾರ ನೀರು ಕುಡಿಯಲು ಯೋಗ್ಯವಲ್ಲ ಎಂದು ದೃಢಪಟ್ಟಿದೆ. ತೆರಿಗೆ ವಸೂಲಿಗೆ ಬರುವ ಅಧಿಕಾರಿಗಳು ಜನ ಗಂಭೀರ ಅನಾರೋಗ್ಯಕ್ಕೆ ಒಳಗಾಗಿದ್ದರೂ ನಿರ್ಲಕ್ಷಿಸುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀರಿನ ಬಿಲ್ ಕೇಳೋ ಅಧಿಕಾರಿಗಳು ಈಗ ಎಲ್ಲಿದ್ದಾರೆ?; ಮಂಗಳೂರಿನಲ್ಲಿ ಕಲುಷಿತ ನೀರು ಕುಡಿದು 100ಕ್ಕೂ ಹೆಚ್ಚು ಜನರಿಗೆ ವಾಂತಿ-ಭೇದಿ
ಮಹಾನಗರ ಪಾಲಿಕೆ ನಿರ್ಲಕ್ಷ್ಯ
Edited By:

Updated on: Jun 18, 2026 | 7:40 AM

ಮಂಗಳೂರು, ಜೂ.18: ಮಂಗಳೂರು ಮಹಾನಗರ ಪಾಲಿಕೆಯ (MCC) ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯಕ್ಕೆ ಕರಾವಳಿಯ ನಾಗರಿಕರು ಭಾರಿ ಬೆಲೆ ತೆರುವಂತಾಗಿದೆ. ಪಾಲಿಕೆಯಿಂದ ಸರಬರಾಜಾಗುತ್ತಿರುವ ಕಲುಷಿತ ಕುಡಿಯುವ ನೀರನ್ನು ಸೇವಿಸಿ ನಗರದ ನೂರಕ್ಕೂ ಹೆಚ್ಚು ಕುಟುಂಬಗಳ ಸದಸ್ಯರು ತೀವ್ರ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದಾರೆ. ಜನರ ಜೀವದ ಜೊತೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ ಎಂದು ಸಾರ್ವಜನಿಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರು ನಗರದ ಬಿಜೈ ನ್ಯೂರೋಡ್ ಹಾಗೂ ಬಟ್ಟಗುಡ್ಡೆ ಭಾಗದಲ್ಲಿ ಕಳೆದ ಮೂರು-ನಾಲ್ಕು ವಾರಗಳಿಂದ ಮನೆಯ ಟ್ಯಾಪ್‌ಗಳಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಈ ನೀರನ್ನು ಬಳಸಿದ ಹಿರಿಯ ನಾಗರಿಕರು ಮತ್ತು ಪುಟಾಣಿ ಮಕ್ಕಳು ತೀವ್ರವಾದ ವಾಂತಿ-ಭೇದಿಯಿಂದ ಬಳಲುತ್ತಿದ್ದಾರೆ. ಪ್ರಾರಂಭದಲ್ಲಿ ಇದು ಸಾಮಾನ್ಯ ಇನ್ಫೆಕ್ಷನ್ ಎಂದುಕೊಂಡಿದ್ದ ಜನರಿಗೆ, ಇಡೀ ಬಡಾವಣೆಯ ನೂರಕ್ಕೂ ಹೆಚ್ಚು ಮನೆಗಳಲ್ಲಿ ಇದೇ ಪರಿಸ್ಥಿತಿ ಇರುವುದು ಕಂಡುಬಂದಾಗ ಆತಂಕ ಮೂಡಿದೆ. ಇನ್ನು ಇದಕ್ಕಾಗಿ ಅನೇಕರು ಆ್ಯಂಟಿಬಯೋಟಿಕ್ ಮಾತ್ರೆಗಳನ್ನು ತೆಗೆದುಕೊಂಡರೂ ಆರೋಗ್ಯ ನಿಯಂತ್ರಣಕ್ಕೆ ಬಾರದೆ ಸುಸ್ತಾಗಿದ್ದಾರೆ.

ಅನಾರೋಗ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಸ್ಥಳೀಯ ನಾಗರಿಕರು, ಆರೋಗ್ಯ ಇಲಾಖೆಯ ಮೂಲಕ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಿದ್ದಾರೆ. ವರದಿಯಲ್ಲಿ ಬಂದಿರುವ ಸಂಗತಿ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಪಾಲಿಕೆ ಸರಬರಾಜು ಮಾಡುತ್ತಿರುವ ಈ ನೀರು ‘ಕುಡಿಯಲು ಯಾವುದೇ ಕಾರಣಕ್ಕೂ ಯೋಗ್ಯವಲ್ಲ’ ಎಂದು ಲ್ಯಾಬ್ ವರದಿಯಲ್ಲಿ ಅಧಿಕೃತವಾಗಿ ದೃಢಪಟ್ಟಿದೆ. ವರದಿ ಹೊರಬೀಳುತ್ತಿದ್ದಂತೆ ಕಂಗಾಲಾಗಿರುವ ಬಿಜೈ ನಿವಾಸಿಗಳು ಸದ್ಯ ದುಬಾರಿ ಹಣ ಕೊಟ್ಟು ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ (ಕ್ಯಾನ್ ನೀರು) ಖರೀದಿಸಿ ಬಳಸುತ್ತಿದ್ದಾರೆ.

ನಗರದ ಹಲವೆಡೆ ಕುಡಿಯುವ ನೀರಿನ ಪೈಪ್‌ಲೈನ್ ಹಾಗೂ ಒಳಚರಂಡಿ (ಡ್ರೈನೇಜ್) ಪೈಪ್‌ಲೈನ್‌ಗಳನ್ನು ಒಟ್ಟೊಟ್ಟಿಗೇ ಅಳವಡಿಸಲಾಗಿದೆ. ಇತ್ತೀಚೆಗೆ ನಡೆದ ಯಾವುದೋ ದುರಸ್ತಿ ಕಾಮಗಾರಿಗಳ ವೇಳೆ ಜೆಸಿಬಿ ತಗುಲಿ ಅಥವಾ ಪೈಪ್‌ಗಳು ಒಡೆದು ಹೋಗಿ, ಡ್ರೈನೇಜ್ ನೀರು ನೇರವಾಗಿ ಕುಡಿಯುವ ನೀರಿನ ಪೈಪ್‌ಲೈನ್‌ಗೆ ತೂರಿ ಮಿಶ್ರಣವಾಗಿರುವ ಬಲವಾದ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಪಾಲಿಕೆಯ ತಾಂತ್ರಿಕ ಇಂಜಿನಿಯರ್‌ಗಳು ತಕ್ಷಣವೇ ಪರಿಶೀಲನೆ ನಡೆಸಿ ಲೀಕೇಜ್ ಪತ್ತೆ ಹಚ್ಚಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋದ ‘ಬ್ಲೂ ಲೈನ್’ ಕಾಮಗಾರಿ ವಿಳಂಬಕ್ಕೆ ಕಾರಣ ಬಿಚ್ಚಿಟ್ಟ ಎಂಜಿನಿಯರ್‌

ಲಕ್ಷ ಸಂಬಳ ತಗೊಂಡು ಎಸಿ ರೂಮ್‌ನಲ್ಲಿ ಕೂರ್ತಾರೆ: ಟಿವಿ 9 ಮುಂದೆ ಜನರ ಅಳಲು

ಇಷ್ಟೆಲ್ಲಾ ಭೀಕರ ಪರಿಸ್ಥಿತಿ ನಿರ್ಮಾಣವಾಗಿ, ನೂರಾರು ಜನ ಆಸ್ಪತ್ರೆ ಸೇರುತ್ತಿದ್ದರೂ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಹೊರತುಪಡಿಸಿ ಮಹಾನಗರ ಪಾಲಿಕೆಯ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸಂತ್ರಸ್ತರು ಟಿವಿ 9 ಮುಂದೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ. “ತೆರಿಗೆ ಕಟ್ಟಿಲ್ಲ, ನೀರಿನ ಬಿಲ್ ಕಟ್ಟಿಲ್ಲ ಎಂದರೆ ಸಾಕು ಪಾಲಿಕೆ ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ನಿಲ್ಲುತ್ತಾರೆ. ಆದರೆ, ಇಷ್ಟೊಂದು ಜನ ವಾಂತಿ-ಬೇದಿಯಿಂದ ನರಳುತ್ತಿದ್ದರೂ ಯಾರೂ ಮುಖ ತೋರಿಸುತ್ತಿಲ್ಲ. ಇವರು ಲಕ್ಷಗಟ್ಟಲೆ ಸಂಬಳ ಪಡೆದು ಕೇವಲ ಎಸಿ ರೂಮ್‌ಗಳಲ್ಲಿ ಕೂರಲು ಇರೋದಾ? ಹೆಲ್ತ್ ಇನ್ಸ್‌ಪೆಕ್ಟರ್ ತಕ್ಷಣ ಬಂದು ಪ್ರತಿ ಮನೆಯ ಸ್ಯಾಂಪಲ್ ಪರಿಶೀಲಿಸಬೇಕು. ಪಾಲಿಕೆ ಅಧಿಕಾರಿಗಳು ಕೇವಲ ದುಡ್ಡು ಮಾಡುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ” ಎಂದು ಸಾರ್ವಜನಿಕರು ಮಾಧ್ಯಮಗಳ ಮುಂದೆ ಹಿಡಿಶಾಪ ಹಾಕಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

Follow Us