
ಮಂಗಳೂರು, ಮಾರ್ಚ್ 27: ಉಡುಪಿ ಜಿಲ್ಲೆಯ ವಿವಿಧ ಮೀನುಗಾರರ ಸ್ವಸಹಾಯ ಗುಂಪುಗಳ ಹೆಸರಲ್ಲಿ ವಂಚನೆಯಿಂದ ಪಡೆದ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ, ಮಂಗಳೂರು ಉಪ ವಲಯ ಜಾರಿ ನಿರ್ದೇಶನಾಲಯವು (ED) 2002ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ, ಮೂಕಾಂಬಿಕಾ ಗ್ರಾಮೀಣಾಭಿವೃದ್ಧಿ ಟ್ರಸ್ಟ್, ಶ್ರೀಮತಿ ಬೇಬಿ, ಹರೀಶ್, ಪಿ. ರಾಮದಾಸ್ ಮತ್ತು ರಾಮಕೃಷ್ಣ ಪಿ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಾಲ ಮನ್ನಾ ಯೋಜನೆಯನ್ನು ಬಳಸಿಕೊಂಡು ಅನರ್ಹ ಮೀನುಗಾರರ ಸ್ವಸಹಾಯ ಗುಂಪುಗಳ ಸಾಲ ಮನ್ನಾ ಮಾಡಿದ್ದಕ್ಕಾಗಿ ಶ್ರೀಮತಿ ಬೇಬಿ ಕೊಟಾರಿ, ಹರೀಶ್ ಖಾರ್ವಿ, ರಾಮದಾಸ ಖ್ರಾವಿ ಮತ್ತು ರಾಮಕೃಷ್ಣ ದೇವಾಡಿಗ ವಿರುದ್ಧ ಇತ್ತೀಚೆಗೆ ಉಡುಪಿಯ ಬೈಂದೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ದಾಖಲಾಗಿದ್ದ ಎಫ್ಐಆರ್ ಆಧಾರದ ಮೇಲೆ ಇದೀಗ ಇಡಿ ತನಿಖೆ ಆರಂಭಿಸಿದೆ.
ED, Mangalore Sub Zonal Office has filed a Prosecution Complaint on 27.03.2026, under PMLA, 2002, before the Hon’ble Special Court for PMLA cases at Mangalore, against M/s. Mookambika Rural Development Trust, Smt. Baby, Harish, P. Ramdas and Ramakrishna P, in connection with the… pic.twitter.com/zQMJN8UyMi
— ED (@dir_ed) March 27, 2026
ಆರೋಪಿಗಳು 2017-18ರ ಹಣಕಾಸು ವರ್ಷದಲ್ಲಿ ಮೂಕಾಂಬಿಕಾ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಮೂಲಕ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ವಿವಿಧ ಸ್ವಸಹಾಯ ಗುಂಪುಗಳಿಗೆ ಸಾಲ ನೀಡಿದ್ದಾರೆ. ಸಾಲದ ಕಂತಿನ ಮೊತ್ತವನ್ನು ಬ್ಯಾಂಕಿನಲ್ಲಿ ಸಂಗ್ರಹಿಸಿಟ್ಟು ಬಳಿಕ ಮರುಪಾವತಿ ಮಾಡಲು ಸಹಾಯ ಮಾಡಿದ್ದರು ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: ಅಧಿಕಾರಿಗಳಿಗೆ ನಾನು ಬಂಟ್ವಾಳ ಶಾಸಕ ಎಂದೇ ಗೊತ್ತಿಲ್ಲ, ರಮಾನಾಥ್ ರೈರನ್ನೇ ಸಚಿವ ಎಂದೇ ಭಾವಿಸಿದ್ದಾರೆ: ರಾಜೇಶ್ ನಾಯಕ್ ಆಕ್ರೋಶ
ಆದಾಗ್ಯೂ, ಆರೋಪಿಗಳು ಸ್ವಸಹಾಯ ಗುಂಪುಗಳು ನೀಡಿದ ಸಂಪೂರ್ಣ ಮರುಪಾವತಿ ಮೊತ್ತವನ್ನು ಹಾಗೆಯೇ ಠೇವಣಿ ಇಡಲು ವಿಫಲರಾಗಿದ್ದು ಮತ್ತು ಕಂತುಗಳ ಒಂದು ಭಾಗದ ಮೊತ್ತವನ್ನು ವಿವಿಧ ಉದ್ದೇಶಗಳಿಗೆ ಬಳಸಿಕೊಳ್ಳುವ ಮೂಲಕ ಸ್ವಸಹಾಯ ಗುಂಪುಗಳಿಗೆ ಮೋಸ ಮಾಡಿದ್ದರು.
ಇನ್ನು ಈ ಸ್ವಸಹಾಯ ಗುಂಪುಗಳ ವಂಚನೆಯನ್ನು ಮುಚ್ಚಿಹಾಕಲು ಆರೋಪಿಗಳು ಯುಬಿಐ ಬ್ಯಾಂಕ್ ವ್ಯವಸ್ಥಾಪಕ ರಾಮಕೃಷ್ಣ ಪಿ ಸಹಭಾಗಿತ್ವದಲ್ಲಿ, ರಾಜ್ಯ ಸರ್ಕಾರ ಮೀನುಗಾರ ಸ್ವಸಹಾಯ ಗುಂಪುಗಳಿಗಾಗಿ ಪರಿಚಯಿಸಿದ ಸಾಲ ಮನ್ನಾ ಯೋಜನೆಯಡಿಯಲ್ಲಿ, ಸರಿಯಾದ ದಾಖಲೆಗಳಿಲ್ಲದೆ 58 ಅನರ್ಹ ಸ್ವಸಹಾಯ ಗುಂಪುಗಳಿಗೆ ಸಾಲ ಮನ್ನಾ ಅರ್ಜಿ ಸಲ್ಲಿಸಿದ್ದರು. ಆ ಮೂಲಕ ಆರೋಪಿಗಳು 1.66 ಕೋಟಿ ರೂ.ಗಳಷ್ಟು ಅಕ್ರಮ ಆದಾಯ ಗಳಿಸಿದ್ದರು ಮತ್ತು ಇದರ ಒಂದು ಭಾಗವನ್ನು ಅನರ್ಹ ಸ್ವಸಹಾಯ ಗುಂಪುಗಳ ಸಾಲಗಳನ್ನು ವಸೂಲಿ ಮಾಡಲು ಬಳಸಿಕೊಂಡಿದ್ದು, ಉಳಿದ ಹಣವನ್ನು ವಿವಿಧೋದ್ದೇಶಗಳಿಗೆ ಬಳಸಿಕೊಂಡಿದ್ದಾರೆ.
ಇದನ್ನೂ ಓದಿ: ಬಂಟ್ವಾಳ ಸಜಿಪನಡುವಿನಲ್ಲಿ ಮಸೀದಿ ವಿಚಾರಕ್ಕೆ ತಲವಾರು, ರಾಡ್ಗಳಿಂದ ಬಡಿದಾಡಿಕೊಂಡ ಗುಂಪು, ಉದ್ವಿಗ್ನ ಪರಿಸ್ಥಿತಿ!
ಸದ್ಯ ಆರೋಪಿಗಳ ವಿರುದ್ಧ 2002ರ ಸೆಕ್ಷನ್ 3ರ ಅಡಿಯಲ್ಲಿ ಮತ್ತು ಸೆಕ್ಷನ್ 4ರ ಅಡಿಯಲ್ಲಿ ಶಿಕ್ಷಾರ್ಹ ಹಣ ವರ್ಗಾವಣೆ ಆರೋಪಕ್ಕೆ ದೂರು ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:15 pm, Fri, 27 March 26