ಜೆರೋಸಾ ಶಾಲೆ ಪ್ರಕರಣ: ತನಿಖಾಧಿಕಾರಿಗೆ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ವಿದ್ಯಾರ್ಥಿಗಳ ಲಿಖಿತ ಹೇಳಿಕೆ ಸಲ್ಲಿಕೆ

| Updated By: Digi Tech Desk

Updated on: Feb 19, 2024 | 5:27 PM

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಜೆರೋಸಾ ಶಾಲೆಯ ಶಿಕ್ಷಕಿ ಶ್ರೀರಾಮನಿಗೆ ಅಪಮಾನ ಮಾಡಿದ ಆರೋಪ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಅಪರ ಆಯುಕ್ತ ಡಾ.ಆಕಾಶ್.ಎಸ್ ಅವರು ತನಿಖೆ ಆರಂಭಿಸಿದ್ದು, ಘಟನೆ ಬಗ್ಗೆ ದಕ್ಷಿಣಕನ್ನಡ ಡಿಡಿಪಿಐ ವೆಂಕಟೇಶ ಸುಬ್ರಾಯ ಪಟಗಾರ ಅವರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಇದರ ಜೊತೆಗೆ, ದಾಖಲಿಸಲಾಗಿದ್ದ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮಕ್ಕಳು ಹಾಗೂ ಪೋಷಕರ ಲಿಖಿತ ಹೇಳಿಕೆಗಳನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಸಲ್ಲಿಸಿದ್ದಾರೆ.

ಜೆರೋಸಾ ಶಾಲೆ ಪ್ರಕರಣ: ತನಿಖಾಧಿಕಾರಿಗೆ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ವಿದ್ಯಾರ್ಥಿಗಳ ಲಿಖಿತ ಹೇಳಿಕೆ ಸಲ್ಲಿಕೆ
ಸಂತ ಜೆರೋಸಾ ಶಾಲೆ
Follow us on

ಮಂಗಳೂರು, ಫೆ.19: ದಕ್ಷಿಣ ಕನ್ನಡ ಜಿಲ್ಲೆಯ ಜೆರೋಸಾ ಶಾಲೆಯಲ್ಲಿ (Gerosa School) ಶಿಕ್ಷಕಿಯೊಬ್ಬರು ಶ್ರೀರಾಮನಿಗೆ ಅವಹೇಳನ ಮಾಡಿದ್ದಾರೆ ಎಂಬ ಆರೋಪದ ವಿಚಾರವಾಗಿ ರಾಜ್ಯ ಸರ್ಕಾರ ಸಮಗ್ರ ತನಿಖೆ ನಡೆಸಲು ಆದೇಶಿಸಿದ್ದು, ತನಿಖಾಧಿಕಾರಿಯಾಗಿ ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಅಪರ ಆಯುಕ್ತ ಡಾ.ಆಕಾಶ್.ಎಸ್ ಅವರನ್ನು ನೇಮಿಸಲಾಗಿತ್ತು. ಅದರಂತೆ, ಇಂದಿನಿಂದ ಆಕಾಶ್ ಅವರು ತನಿಖೆಯನ್ನು ಆರಂಭಿಸಿದ್ದು, ಘಟನೆ ಬಗ್ಗೆ ಮಂಗಳೂರಿನ (Mangaluru) ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿರುವ ಡಿಡಿಪಿಐ ವೆಂಕಟೇಶ ಸುಬ್ರಾಯ ಪಟಗಾರ ಅವರಿಂದ ಮಾಹಿತಿ ಸಂಗ್ರಹಿಸಿದ್ದಾರೆ.

ಜೆರೋಸಾ ಶಿಕ್ಷಣ ಸಂಸ್ಥೆ ಶಿಕ್ಷಕಿಯಿಂದ ಶ್ರೀರಾಮನ ಅವಹೇಳನ ಆರೋಪ ವಿಚಾರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಡಿಡಿಪಿಐ ವರದಿ ಮೇಲೆ ಪ್ರಾಥಮಿಕ ತನಿಖೆ ಮುಂದುವರಿದಿದೆ. ಶಾಲೆಯ ಏಳನೇ ತರಗತಿ ವಿದ್ಯಾರ್ಥಿಗಳು ಹಾಗೂ ಪೋಷಕರ ಹೇಳಿಕೆಗಳುನ್ನು ದಾಖಲಿಸಿಕೊಳ್ಳಲಾಗಿದೆ. ಅದೇ ಲಿಖಿತ ಹೇಳಿಕೆಗಳನ್ನು ಐಎಎಸ್ ಅಧಿಕಾರಿ ಡಾ.ಆಕಾಶ್.ಎಸ್​ ಅವರಿಗೆ ಶಿಕ್ಷಣ ಅಧಿಕಾರಿಗಳು ಸಲ್ಲಿಸಿದ್ದಾರೆ.

ಇದನ್ನೂ ಓದಿ: ವಿಧಾನಸಭೆಯಲ್ಲಿ ಜೆರೋಸಾ ಶಾಲೆ ಪ್ರಕರಣ ಸುದ್ದು; ಬಿಜೆಪಿ-ಕಾಂಗ್ರೆಸ್ ಸದಸ್ಯರ ಗದ್ದಲ, ಪರಮೇಶ್ವರ್ ಸ್ಪಷ್ಟನೆ

ಶಿಕ್ಷಣ ಇಲಾಖೆ ಅಧಿಕಾರಿಗಳು ಶಿಕ್ಷಕಿ ಸಿಸ್ಟರ್ ಪ್ರಭಾ ಬಗ್ಗೆ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಮಕ್ಕಳು ಹಾಗೂ ಪೋಷಕರ ನೀಡಿದ ಲಿಖಿತ ಹೇಳಿಕೆಗಳನ್ನು ಶನಿವಾರದಂದು ದಾಖಲಿಸಿದ್ದರು. ಆ ವರದಿ ಆಧರಿಸಿ ಶಾಲೆಯ ಕೆಲ ಶಿಕ್ಷಕರ ಹೇಳಿಕೆಗಳನ್ನೂ ದಾಖಲಿಸಿದ್ದಾರೆ. ಸದ್ಯ ಈ ಎಲ್ಲಾ ಹೇಳಿಕೆಗಳ ಮೇಲೆ ತನಿಖೆ ಮುಂದುವರಿಸಿದ್ದಾರೆ.

ತನಿಖೆ ಬಗ್ಗೆ ಮಾತನಾಡಿದ ತನಿಖಾಧಿಕಾರಿ ಡಾ.ಆಕಾಶ್.ಎಸ್, ಈ ಪ್ರಕರಣದ ಕುರಿತು ಸತ್ಯಾನೇಶ್ವನೆಗೆ, ತನಿಖೆ ಮಾಡೋದಕ್ಕೆ ಬಂದಿದ್ದೇನೆ. ತನಿಖೆ ಪ್ರಗತಿಯಲ್ಲಿದೆ. ಹಂತ ಹಂತವಾಗಿ ತನಿಖೆ ನಡೆಸುತ್ತೇನೆ. ನಮ್ಮ ಅಧಿಕಾರಿಗಳಿಂದಲೂ ಪ್ರಾಥಮಿಕ ಮಾಹಿತಿ ಪಡೆದಿದ್ದೇನೆ. ಇನ್ನು ಹೆಚ್ಚಿನ ದಾಖಲೆ, ಮಾಹಿತಿ ಪಡೆಯಬೇಕಿದೆ. ಇದಕ್ಕೆ ಬೇಕಾದ ಪ್ಲ್ಯಾನ್ ಮಾಡಿಕೊಂಡಿದ್ದೇನೆ ಎಂದರು.

ಈ ಹಂತದಲ್ಲಿ ವಿಚಾರಣೆ ಕುರಿತು ಏನೂ ಹೇಳಲ್ಲ. ಆದಷ್ಟು ಬೇಗ ಸರ್ಕಾರಕ್ಕೆ ತನಿಖಾ ವರದಿ‌ ಸಲ್ಲಿಸಬೇಕಿದೆ. ನಿರಂತರವಾಗಿ ವಿಚಾರಣೆ ನಡೆಯುತ್ತಿತ್ತು. ಎರಡು ದಿನ ಇಲ್ಲೇ ಇದ್ದು ತನಿಖೆ ಮುಂದುವರೆಸುತ್ತೇನೆ. ಈ ವಿಚಾರದಲ್ಲಿ ಪ್ರಾಮಾಣಿಕ ಪ್ರಯತ್ನ ಹಾಕಿ ನಿಷ್ಠೆಯಿಂದ ವಿಚಾರಣೆ ನಡೆಸಿ ಸರಿಯಾದ ವರದಿ‌ ಸಲ್ಲಿಸುತ್ತೇನೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:07 pm, Mon, 19 February 24