ಪುತ್ತೂರಿನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ: ನಾಲ್ವರು ಯುವಕರ ಬಂಧನ

ನೈತಿಕ ಪೊಲೀಸ್‌ಗಿರಿ ಆರೋಪ ಹಿನ್ನೆಲೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ.

ಪುತ್ತೂರಿನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ: ನಾಲ್ವರು ಯುವಕರ ಬಂಧನ
ಪ್ರಾತಿನಿಧಿಕ ಚಿತ್ರ
Prajwal D'Souza Edited By:

Updated on: May 03, 2023 | 4:10 PM

ಮಂಗಳೂರು: ನೈತಿಕ ಪೊಲೀಸ್‌ಗಿರಿ ಶಂಕೆ ಹಿನ್ನೆಲೆ ಕರ್ನಾಟಕದ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರು ಯುವಕರನ್ನು ಬಂಧಿಸಲಾಗಿದೆ. ದಿನೇಶ್ ಗೌಡ (25) ಪ್ರಜ್ವಲ್​ (23) ನಿಶಾಂತ್ ಕುಮಾರ್​ (19) ಮತ್ತು ಪ್ರದೀಪ್​ (19) ಬಂಧಿತ ಆರೋಪಿಗಳಾಗಿದ್ದು, ಪುತ್ತೂರಿನವರು ಎಂದು ಕರ್ನಾಟಕ ಪೊಲೀಸ್ ಮೂಲಗಳು ನ್ಯೂಸ್ 9ಗೆ ತಿಳಿಸಿವೆ. ಪುತ್ತೂರು ತಾಲೂಕಿನಲ್ಲಿ ಮಂಗಳವಾರ ಮೇ 2ರಂದು ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಯುವತಿಯೊಂದಿಗೆ ಮಾತನಾಡಿದ ಮುಸ್ಲಿಂ ಯುವಕನಿಗೆ ಸ್ಥಳೀಯರು ಹಿಗ್ಗಾಮುಗ್ಗವಾಗಿ ಥಳಿಸಿದ್ದರು. ಮಹಮ್ಮದ್ ಫಾರಿಶ್ (18) ಥಳಿತಕ್ಕೊಳಗಾದ ಯುವಕ.

ಮಹಮ್ಮದ್ ಫಾರಿಶ್​ ತನ್ನ ಸಹಪಾಠಿಯೊಂದಿಗೆ ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪುತ್ತೂರು ಸಮೀಪದ ಕಬಕ ಸರಕಾರಿ ಪದವಿ ಪೂರ್ವ ಕಾಲೇಜಿನ ಬಳಿ ಜ್ಯೂಸ್​ ಪಾರ್ಲರ್​ನಲ್ಲಿದ್ದರು. ಸಹಪಾಠಿಗಳಲ್ಲಿ ಒಬ್ಬ ವಿಧ್ಯಾರ್ಥಿನಿ ಬೇರೆ ಧರ್ಮಕ್ಕೆ ಸೇರಿದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ವೇಳೆ ಸುಮಾರು 15 ಜನರ ಗುಂಪೊಂದು ಆಗಮಿಸಿ ಬಲವಂತವಾಗಿ ಕರೆದೊಯ್ದು ಹಲ್ಲೆ ನಡೆಸಿರುವುದಾಗಿ ಆರೋಪ ಮಾಡಲಾಗಿತ್ತು.

ಯುವಕನಿಗೆ ಹಿಗ್ಗಾಮುಗ್ಗ ಥಳಿತ 

ಆರೋಪಿ ದಿನೇಶ್ ಗೌಡ ನಗರದಲ್ಲಿ ಆಟೋರಿಕ್ಷಾ ನಡೆಸುತ್ತಿದ್ದರೆ, ಉಳಿದವರು ಕಾಲೇಜು ವಿದ್ಯಾರ್ಥಿಗಳು ಎಂದು ಮೂಲಗಳು ತಿಳಿಸಿವೆ. ಪುತ್ತೂರಿನ ಮರೀಲ್ ಕಾಡುಮನೆ ನಿವಾಸಿ ಕೆ.ಇಬ್ರಾಹಿಂ ಅವರ ದ್ವಿತೀಯ ಪುತ್ರನಾಗಿರುವ ಮಹಮ್ಮದ್ ಫಾರಿಶ್, ಅನ್ಯ ಕೋಮಿನ ಯುವತಿಯೊಂದಿಗೆ ಮಾತನಾಡುತ್ತಿದ್ದ. ಈ ವೇಳೆ ಸ್ಥಳೀಯ ಗುಂಪೊಂದು ಮಹಮ್ಮದ್ ಫಾರಿಶ್​ನನ್ನು ಪ್ರಶ್ನಿಸಿ ಹಿಗ್ಗಾಮುಗ್ಗವಾಗಿ ಥಳಿಸಿದ್ದರು. ಸದ್ಯ ವಿದ್ಯಾರ್ಥಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸರು ಮಹಮ್ಮದ್ ಫಾರಿಶ್​ನಿಂದ ಮಾಹಿತಿ ಕಲೆಹಾಕಿದ್ದಾರೆ.

ಇದನ್ನೂ ಓದಿ: ಮಹಿಳೆ ಮೇಲೆ ಹಲ್ಲೆ ನಡೆಸಿ ನಡು ರಸ್ತೆಯಲ್ಲಿ ಬಿಟ್ಟು ಹೋದ ಊಬರ್ ಚಾಲಕ ಅರೆಸ್ಟ್, ಬಯಲಾಯ್ತು ಮತ್ತೊಂದು ಅಕ್ರಮ

ದೂರಿನ ಆಧಾರದ ಮೇಲೆ ಪುತ್ತೂರು ನಗರ ಪೊಲೀಸರು ತನಿಖೆ ಆರಂಭಿಸಿ ಬುಧವಾರ ಬೆಳಿಗ್ಗೆ ನಾಲ್ವರನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 143 (ಕಾನೂನುಬಾಹಿರ), 147 (ಗಲಭೆ), 148 (ಮಾರಕಾಸ್ತ್ರದೊಂದಿಗೆ ಗಲಭೆ), 365 (ಅಪಹರಣ), 504 (ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶಪೂರ್ವಕ ಅವಮಾನ), 324 (ಅಪಾಯಕಾರಿ ಶಸ್ತ್ರಾಸ್ತ್ರಗಳು ಅಥವಾ ವಿಧಾನಗಳಿಂದ ಸ್ವಯಂಪ್ರೇರಣೆಯಿಂದ ನೋವುಂಟು ಮಾಡುವುದು), 506 (ಕ್ರಿಮಿನಲ್ ಬೆದರಿಕೆ) ಮತ್ತು 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಬೆಡ್​ ಸಿಗದೇ ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಹಾಸ್ಪಿಟಲ್​ಗೆ ಶಿಫ್ಟ್; ಆದರೂ ಬದುಕುಳಿಯಲಿಲ್ಲ, ಮೃತದೇಹ ಪಡೆದುಕೊಳ್ಳಲು ಹಣ ಕಟ್ಟಿದ ಪೊಲೀಸ್

ವಿದ್ಯಾರ್ಥಿನಿಯೊಂದಿಗೆ ತಿರುಗಾಟ: ಮುಸ್ಲಿಂ ಯುವಕ ವಿರುದ್ಧ ಪೋಕ್ಸೋ ಪ್ರಕರಣ ದಾಖಲು 

ಇತ್ತೀಚೆಗಷ್ಟೇ ಹಿಂದೂ ಹುಡುಗಿಯೊಂದಿಗೆ ತಿರುಗಾಡುತ್ತಿದ್ದ ಮುಸ್ಲಿಂ ಯುವಕನಿಗೆ ಥಳಿಸಿದ ಘಟನೆ ಜಿಲ್ಲೆಯ ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿತ್ತು. ವಿದ್ಯಾರ್ಥಿನಿಯೊಂದಿಗೆ ತಿರುಗಾಡುತ್ತಿದ್ದ ಬಗ್ಗೆ ಮಾಹಿತಿಯಿದ್ದು, ಕುಕ್ಕೆ ಸುಬ್ರಹ್ಮಣ್ಯ ಬಸ್​ಸ್ಟ್ಯಾಂಡ್​ನಲ್ಲಿ ಈ ಜೋಡಿ ಕಂಡು ಬಂದಿತ್ತು. ಬಳಿಕ ಕುಮಾರಧಾರ ಬಳಿ ಬಂದಾಗ ಗುಂಪೊಂದು ಯುವಕನಿಗೆ ಥಳಿಸಿದ್ದರು. ಯುವಕನ ದೂರಿನಂತೆ ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿದ್ದರು. ವಿದ್ಯಾರ್ಥಿನಿ ಅಪ್ರಾಪ್ತೆಯಾಗಿದ್ದು, ಆಕೆಯ ತಂದೆ ನೀಡಿದ ದೂರಿನ ಅನ್ವಯ ಯುವಕನ ವಿರುದ್ದ ಸುಬ್ರಹ್ಮಣ್ಯ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದರು.

ಮತ್ತಷ್ಟು ಕ್ರೈಂ ಸುದ್ದಿಗಳು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:08 pm, Wed, 3 May 23

Prajwal D'Souza

Prajwal is a reporter who covers the politics and current affairs of Karnataka. He is a co-host of Deccan Vahini, a live blogger and has expertise in writing explainers and long-form articles. Contact: prajwal.dsouza@tv9.com

Follow Us