AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: ಇಬ್ಬರನ್ನು ಬಲಿಪಡೆದ ಕಾಡಾನೆ ಸೆರೆಗೆ ‘ಆಪರೇಷನ್ ಎಲಿಫೆಂಟ್’ ಕಾರ್ಯಾಚರಣೆ ಶುರು

ನಾಗರಹೊಳೆ ಹಾಗೂ ದುಬಾರೆ ಸಾಕಾನೆ ಶಿಬಿರದಿಂದ ಕಡಬಕ್ಕೆ ಐದು ಸಾಕಾನೆಗಳು ಆಗಮಿಸಿದ್ದು ಅಭಿಮನ್ಯು, ಪ್ರಶಾಂತ್, ಹರ್ಷ, ಕಂಜನ್, ಮಹೇಂದ್ರ ಹೆಸರಿನ ಆನೆಗಳು ಕಾಡಾನೆಗಾಗಿ ಫೀಲ್ಡ್​ಗೆ ಇಳಿದಿವೆ.

ಮಂಗಳೂರು: ಇಬ್ಬರನ್ನು ಬಲಿಪಡೆದ ಕಾಡಾನೆ ಸೆರೆಗೆ 'ಆಪರೇಷನ್ ಎಲಿಫೆಂಟ್' ಕಾರ್ಯಾಚರಣೆ ಶುರು
ಆಪರೇಷನ್ ಎಲಿಫೆಂಟ್
ಆಯೇಷಾ ಬಾನು
|

Updated on: Feb 21, 2023 | 11:09 AM

Share

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಮೀನಾಡಿ ಎಂಬಲ್ಲಿ ಕಾಡಾನೆ ದಾಳಿಗೆ(Elephant Attack) ಯುವತಿ ಸಹಿತ ಇಬ್ಬರು ಮೃತಪಟ್ಟಿದ್ದಾರೆ. ಈ ಘಟನೆ ಸಂಬಂಧ ನರಹಂತಕ ಕಾಡಾನೆ ಸೆರೆಗೆ ‘ಆಪರೇಷನ್ ಎಲಿಫೆಂಟ್(Operation Elephant)’ ಕಾರ್ಯಾಚರಣೆ ಆರಂಭಿಸಲಾಗಿದೆ. ಅರಣ್ಯ ಇಲಾಖೆ ಐದು ಸಾಕಾನೆಗಳಿಂದ ಕಾರ್ಯಾಚರಣೆ ಆರಂಭಿಸಿದೆ.

ನಾಗರಹೊಳೆ ಹಾಗೂ ದುಬಾರೆ ಸಾಕಾನೆ ಶಿಬಿರದಿಂದ ಕಡಬಕ್ಕೆ ಐದು ಸಾಕಾನೆಗಳು ಆಗಮಿಸಿದ್ದು ಅಭಿಮನ್ಯು, ಪ್ರಶಾಂತ್, ಹರ್ಷ, ಕಂಜನ್, ಮಹೇಂದ್ರ ಹೆಸರಿನ ಆನೆಗಳು ಕಾಡಾನೆಗಾಗಿ ಫೀಲ್ಡ್​ಗೆ ಇಳಿದಿವೆ. ಐದು ತಂಡಗಳ ನೇತೃತ್ವದಲ್ಲಿ ರೆಂಜಿಲಾಡಿ, ಕುಟ್ರುಪಾಡಿ ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿ ಕಾರ್ಯಚರಣೆ ನಡೆಸಲಾಗುತ್ತಿದೆ. ಮಂಗಳೂರು ವಿಭಾಗದ ಡಿಸಿಎಫ್ ಡಾ. ದಿನೇಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. 50 ಕ್ಕೂ ಹೆಚ್ಚು ಸಿಬ್ಬಂದಿ, ಮಾವುತರು, ಕಾವಾಡಿಗರು, ಸ್ಥಳೀಯರ ಮೂಲಕ ಕಾರ್ಯಾಚರಣೆ ಮುಂದುವರೆದಿದೆ. ಅಲ್ಲದೆ ಇದರಲ್ಲಿ ನಾಗರಹೊಳೆ ಹಾಗೂ ಮಂಗಳೂರಿನ ತಜ್ಞ ವೈದ್ಯಾಧಿಕಾರಿಗಳ ತಂಡವು ಭಾಗಿಯಾಗಿದೆ.

ಡ್ರೋನ್ ಕ್ಯಾಮೆರಾ ಮೂಲಕ ಕಾಡಾನೆಗಳ ಚಲನವಲನ ಟ್ರ್ಯಾಕ್ ಮಾಡಿ ಕಾಡಾನೆ ಸೆರೆಗೆ ಪ್ಲಾನ್ ಮಾಡಲಾಗಿದೆ. ಅರಣ್ಯ ಇಲಾಖೆಯ ಪ್ರಕಾರ ನಾಲ್ಕು ಕಾಡಾನೆ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ನಿನ್ನೆಯಷ್ಟೇ(ಫೆ. 20) ಎರಡು ಕಾಡಾನೆಗಳು ಕಾಣಿಸಿಕೊಂಡಿದ್ದವು. ಇದರ ಸಾಕಾನೆಗಳು ಕಾಡಾನೆಗಳನ್ನು ಹಿಡಿಯಲು ಕಾರ್ಯಾಚರಣೆಗೆ ಇಳಿದಿದೆ.

ಇದನ್ನೂ ಓದಿ: ಮಂಗಳೂರು: ಕಾಡಾನೆ ದಾಳಿಗೆ ಯುವತಿ ಸಹಿತ ಇಬ್ಬರು ಸಾವು; ಮೃತದೇಹ ಇಟ್ಟು ಗ್ರಾಮಸ್ಥರ ಪ್ರತಿಭಟನೆ

ಘಟನೆ ಹಿನ್ನೆಲೆ

ಪೇರಡ್ಕ ಸೊಸೈಟಿ ಸಿಬ್ಬಂದಿಯಾಗಿರುವ ರಂಜಿತಾ ಎಂದಿನಂತೆ ತನ್ನ ಕೆಲಸಕ್ಕೆ ಹೊರಟ್ಟಿದ್ದಳು. ಆದರೆ ಮಾರ್ಗಮಧ್ಯದಲ್ಲಿ ಎದುರಿಗೆ ಆನೆ ಪ್ರತ್ಯಕ್ಷವಾಗಿದೆ. ಇದರಿಂದ ಭಯಗೊಂಡ ರಂಜಿತಾ ಕಿರುಚುತ್ತಾ ಓಡಲು ಆರಂಭಿಸಿದ್ದಾರೆ. ಮನೆಯ ಸಮೀಪ ಯುವತಿ ಕಿರುಚುವ ಧ್ವನಿ ಕೇಳಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ರಮೇಶ್​ ರೈ ಕೂಡ ಮನೆಯಿಂದ ಹೊರ ಬಂದಿದ್ದಾರೆ. ಆದರೆ ಅಲ್ಲೇ ಇದ್ದ ಇನ್ನೊಂದು ಆನೆ ರಮೇಶ್​ ರೈನನ್ನು ಬೆನ್ನಟ್ಟಿದೆ. ಆನೆಯ ಅಟ್ಟಹಾಸಕ್ಕೆ ರಮೇಶ್​ ರೈ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ರೆ ಇತ್ತ ಆನೆ ದಾಳಿಗೆ ಒಳಗಾದ ರಂಜಿತಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದರು.

ಮೀನಾಡಿ ಪ್ರದೇಶ ಅರಣ್ಯ ಸಂರಕ್ಷಿತ ಪ್ರದೇಶವಲ್ಲದೇ ಇದ್ದರೂ ಸಹ ಕಳೆದ ಅನೇಕ ದಿನಗಳಿಂದ ಇಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದೆ. ಪ್ರತಿನಿತ್ಯ ವಿದ್ಯಾರ್ಥಿಗಳು ಓಡಾಡುವ ಈ ಮಾರ್ಗದಲ್ಲಿ ಸಾಕಷ್ಟು ಜನರಿಗೆ ಏಳೆಂಟು ಆನೆ ಕಾಣ ಸಿಕ್ಕಿದೆ. ಈ ಬಗ್ಗೆ ಬೇಸತ್ತಿದ್ದ ಜನರು ಅರಣ್ಯ ಇಲಾಖೆಗೆ ದೂರನ್ನೂ ನೀಡಿದ್ದರು. ಆದರೆ ಅರಣ್ಯ ಇಲಾಖೆಯ ಜಾಣ ಮೌನದಿಂದಾಗಿ ಇಬ್ಬರು ಅಮಾಯಕರು ಜೀವ ಹೋಗಿದೆ. ಈ ಘಟನೆ ಬೆಳಕಿಗೆ ಬರ್ತಿದ್ದಂತೆ ತಂಡೋಪತಂಡವಾಗಿ ಘಟನಾ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡುವವರೆಗೂ ನಾವು ಮೃತದೇಹ ತೆಗೆಯಲು ಬಿಡೋದಿಲ್ಲ ಅಂತಾ ಪ್ರತಿಭಟನೆ ನಡೆಸಿದ್ದರು.

ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿ ಕುಮಾರ್​ ಎಂ. ಆರ್​ ಹಾಗೂ ಡಿಎಫ್​ಓ ಭೇಟಿ ನೀಡಿದರು. ಸಂಜೆಯೊಳಗೆ ಕಾಡಾನೆಗಳನ್ನು ಸೆರೆ ಹಿಡಿಯುತ್ತೇವೆ ಎಂಬ ಡಿಎಫ್​ಓ ಅಭಯಕ್ಕೆ ಗ್ರಾಮಸ್ಥರು ನಮಗೆ ಲಿಖಿತ ರೂಪದಲ್ಲಿ ಈ ಆದೇಶವನ್ನು ಬರೆದುಕೊಡಿ ಅಂತಾ ಪಟ್ಟು ಹಿಡಿದರು. ಇತ್ತ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್ ಮೃತರ ಕುಟುಂಬಕ್ಕೆ ತಲಾ 15 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮೌಖಿಕ ಆದೇಶ ನೀಡಿದರು. ಜೊತೆಯಲ್ಲಿ ಮೃತ ರಂಜಿತಾ ಸಹೋದರಿಗೆ ಉದ್ಯೋಗದ ಭರವಸೆಯನ್ನೂ ನೀಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ