
ಮಂಗಳೂರು, ಫೆಬ್ರವರಿ 14: ದಕ್ಷಿಣ ಕನ್ನಡದ (Dakshin Kannada) ಹೆಸರಾಂತ ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿಗಳ ಅಸಹಜ ಸಾವುಗಳು ಇದೀಗ ಗಂಭೀರ ಅನುಮಾನಗಳಿಗೆ ಕಾರಣವಾಗಿವೆ. ಕಳೆದ ನಾಲ್ಕು ವರ್ಷಗಳಿಂದ ಸುಮಾರು 150ಕ್ಕೂ ಹೆಚ್ಚು ವನ್ಯಜೀವಿಗಳು ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬಂದಿದ್ದು, ಈ ಘಟನೆಗಳಿಗೆ ವಿಷಪೂರಿತ ಆಹಾರವೇ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಇತ್ತೀಚೆಗೆ ಸಾವನ್ನಪ್ಪಿದ ಜಿಂಕೆಯೊಂದರ ಮರಣೋತ್ತರ ವರದಿಯಲ್ಲಿ ಪ್ರಾಣಿಯ ದೇಹದಲ್ಲಿ ಹೈಡ್ರೋಸೈನೇಡ್ ಹಾಗೂ ನೈಟ್ರೇಟ್ ಅಂಶಗಳು ಪತ್ತೆಯಾಗಿರುವುದು ಬೆಚ್ಚಿಬೀಳಿಸುವ ಸಂಗತಿಯಾಗಿದೆ.
ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಪ್ರಯೋಗಾಲಯದಿಂದ ಬಂದ ವರದಿ ಪ್ರಕಾರ, ಮೃಗಾಲಯದಲ್ಲಿ ಎಲೆಕೋಸು ಮತ್ತು ಹೂಕೋಸು ಬೆಳೆಗಳಲ್ಲಿ ಬಳಸುವ ಅತಿಯಾದ ಕೀಟನಾಶಕ ಅವಶೇಷಗಳನ್ನು ಸರಿಯಾಗಿ ಶುಚಿಗೊಳಿಸದೇ ಪ್ರಾಣಿಗಳಿಗೆ ನೀಡಲಾಗುತ್ತಿತ್ತು ಎನ್ನಲಾಗಿದೆ. ಈ ವಿಷಕಾರಿ ಅಂಶಗಳು ನಿಧಾನವಾಗಿ ದೇಹದಲ್ಲಿ ಸಂಗ್ರಹವಾಗಿ ‘ಸ್ಲೋ ಪಾಯಿಸನಿಂಗ್’ ಮೂಲಕ ಸಾವಿಗೆ ಕಾರಣವಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇತ್ತೀಚೆಗೆ ಹುಲಿ, ಜಿಂಕೆ, ಸಾಂಬಾರ್, ಕಾಡುಹಂದಿ ಸೇರಿದಂತೆ ಅನೇಕ ಪ್ರಾಣಿಗಳು ಮೃತಪಟ್ಟಿದ್ದು, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ನಿರ್ಲಕ್ಷ್ಯವೇ ಇದಕ್ಕೆ ಕಾರಣವೇ ಎಂಬ ಪ್ರಶ್ನೆ ಮೂಡಿದೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಾಮಾನ್ಯವಾಗಿ ಹೂಕೋಸು ಮತ್ತು ಎಲೆ ಕೋಸು ಬೆಳೆಯುವಾಗ ಅವುಗಳಿಗೆ ಯಾವುದೇ ರೋಗ ಬರಬಾರದೆಂಬ ಕಾರಣಕ್ಕೆ ಹೈಡೋ ಸೈನೇಡ್ ಮತ್ತು ನೈಟ್ರೇಟ್ ಮಾದರಿಗಳನ್ನು ಸಿಂಪಡಿಸಲಾಗುತ್ತದೆ. ಪ್ರಾಣಿಗಳಿಗೆ ಇವುಗಳನ್ನು ಆಹಾರವಾಗಿ ನೀಡುವ ಮೊದಲು ಸ್ವಚ್ಛಗೊಳಿಸುವುದು ಅಗತ್ಯ. ಆದರೆ ಪಿಲಿಕುಳ ಪ್ರಾಣಿ ಸಂಗ್ರಹಾಲಯದ ಪ್ರಾಣಿಗಳಿಗೆ ಕ್ಯಾಬೇಜ್, ಕಾಲಿಫ್ಲವರ್ ಎಲೆಗಳನ್ನು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ, ಹಸಿಯಾಗಿಯೇ ನೀಡಲಾಗುತ್ತಿದ್ದು, ಇದನ್ನು ತಿಂದ ಪ್ರಾಣಿಗಳು ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಲು ಕಾರಣ ಆಗುತ್ತಿದೆಯಾ ಎಂಬ ಶಂಕೆ ಮೂಡಿದೆ. ಪಿಲಿಕುಳದ ಪ್ರಾಣಿಗಳ ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗುತ್ತಿದ್ದಂತೆ ಕ್ಯಾಬೇಜ್, ಕ್ಯಾಲಿಫ್ಲವರ್ ಎಲೆಗಳನ್ನು ಆಹಾರವನ್ನಾಗಿ ನೀಡುವುದಕ್ಕೆ ಅಧಿಕಾರಿಗಳು ನಿಷೇಧ ಹೇರಿದ್ದಾರೆ.
ಇದನ್ನೂ ಓದಿ ಪಿಲಿಕುಳ ಝೂ ಅವ್ಯವಸ್ಥೆಗೆ ಹೈಕೋರ್ಟ್ ಗರಂ: ಆಗದಿದ್ರೆ ತಕ್ಷಣ ಬಂದ್ ಮಾಡಿ ಎಂದ ಪೀಠ
ಕೆಲ ದಿನಗಳ ಹಿಂದೆ ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿಗಳ ದಯನೀಯ ಸ್ಥಿತಿ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಅಲ್ಲಿ ಪ್ರಾಣಿಗಳು ಅನುಭವಿಸುತ್ತಿದ್ದ ದುಸ್ಥಿತಿಯನ್ನು ಗಮನಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಪ್ರಾಣಿಗಳ ಫೋಟೋಗಳನ್ನು ಪರಿಶೀಲಿಸಿದ ಬಳಿಕ, ಮೃಗಾಲಯವನ್ನು ತಕ್ಷಣ ಮುಚ್ಚಬೇಕು ಎಂದು ಸರ್ಕಾರಕ್ಕೆ ಕೋರ್ಟ್ ಎಚ್ಚರಿಕೆ ನೀಡಿತ್ತು. ಜಂಗು ಹಿಡಿದ ಪಿಂಜರಗಳು, ಅಸ್ವಚ್ಛ ಪರಿಸರ, ಸಮರ್ಪಕ ಸುರಕ್ಷತೆ ಮತ್ತು ಆರೈಕೆಯ ಕೊರತೆ ಬಗ್ಗೆ ನ್ಯಾಯಾಲಯ ಕಿಡಿಕಾರಿತ್ತು.
ಅಲ್ಲದೇ ಡಿಸೆಂಬರ್ 2025ರಲ್ಲಿ ಮೃಗಾಲಯದ ಪರವಾನಗಿ ಅವಧಿ ಮುಕ್ತಾಯಗೊಂಡಿದ್ದರೂ ನವೀಕರಣವಿಲ್ಲದೆ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಅನುಮಾನವನ್ನೂ ಕೋರ್ಟ್ ವ್ಯಕ್ತಪಡಿಸಿತ್ತು. ಆದರೂ ಇದೀಗ ಮೃತ ಜಿಂಕೆಯೊಂದರ ಮರಣೋತ್ತರ ಪರೀಕ್ಷೆಯಲ್ಲಿ ವಿಷಕಾರಿ ಅಂಶ ಪತ್ತೆಯಾಗಿರುವುದು ಆತಂಕ ಮೂಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.