
ಪುತ್ತೂರು, ಆ.24: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ದರ್ಬೆಯಲ್ಲಿರುವ ಡಿಜಿಟಲ್ ಸೇವಾ ಕೇಂದ್ರದಲ್ಲಿ ಆಗಸ್ಟ್ 21ರಂದು ಶುಕ್ರವಾರ ನಡೆದ ಗಲಾಟೆ ಹಾಗೂ ಆನಂತರದ ಬೆಳವಣಿಗೆಗಳನ್ನು ಖಂಡಿಸಿ, ಆಗಸ್ಟ್ 25ರ ಮಂಗಳವಾರದಂದು ಸ್ವಯಂಪ್ರೇರಿತ ‘ಪುತ್ತೂರು ಬಂದ್’ಗೆ ಹಿಂದೂ ಜಾಗರಣ ವೇದಿಕೆ (ಹಿಂಜಾವೇ) ಕರೆ ನೀಡಿದೆ. ಪೊಲೀಸ್ ಇಲಾಖೆಯ ವೈಫಲ್ಯ ಹಾಗೂ ನೈತಿಕ ಪೊಲೀಸ್ಗಿರಿ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳಲು ವಿಫಲವಾಗಿರುವುದನ್ನು ಖಂಡಿಸಿ ಈ ಬಂದ್ಗೆ ಕರೆ ನೀಡಲಾಗಿದೆ.
ನಗರದಲ್ಲಿ ವರ್ತಕರ ಹಿತರಕ್ಷಣೆ, ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಪುತ್ತೂರಿನ ಎಲ್ಲಾ ಸಮಾಜ ಬಾಂಧವರು ಮತ್ತು ನಾಗರಿಕರು ಆ.25ರ ಬಂದ್ಗೆ ಸಹಕರಿಸಬೇಕೆಂದು ಹಿಂಜಾವೇ ಜಿಲ್ಲಾ ಸಂಯೋಜಕ ಮೋಹನ್ ದಾಸ್ ಕಾಣಿಯೂರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ. ದರ್ಬೆಯ ಡಿಜಿಟಲ್ ಸೇವಾ ಕೇಂದ್ರದಲ್ಲಿ ನಡೆದ ಘಟನೆ ಹಾಗೂ ಪೊಲೀಸ್ ವಾಹನಕ್ಕೆ ಮುತ್ತಿಗೆ ಹಾಕಿದ ಪ್ರಕರಣಗಳ ಹಿಂದೆ ನಿಷೇಧಿತ PFI ಸಂಘಟನೆಯ ವ್ಯವಸ್ಥಿತ ಸಂಚಿದೆ ಎಂದು ಹಿಂಜಾವೇ ಆರೋಪಿಸಿದೆ. ಪೊಲೀಸ್ ಜೀಪ್ಗೆ ನುಗ್ಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದವರನ್ನು ಮತ್ತು ಸೇವಾ ಕೇಂದ್ರದ ಮಹಿಳೆಯ ಮೇಲೆ ಹಲ್ಲೆಗೆ ಯತ್ನಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಬಂಧಿಸಬೇಕು ಎಂದು ಆಗ್ರಹಿಸಲಾಗಿದೆ.
ಇದನ್ನೂ ಓದಿ; ಫುಟ್ಪಾತ್ ಮೇಲೆ ರೈಡಿಂಗ್ಗೆ ಬ್ರೇಕ್: 500 ರೂ. ದಂಡ 5,000 ರೂ.ಗೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ
ಸುಳ್ಯ ತಾಲೂಕಿನ ಜಾಲ್ಸೂರಿನ ಫಾತಿಮತ್ ಮಿಸ್ವಾನ (32) ಎಂಬವರು ತಮ್ಮ ಸಹೋದರ ಮತ್ತು ಸಹೋದರಿಯೊಂದಿಗೆ ದರ್ಬೆಯ ಡಿಜಿಟಲ್ ಸೇವಾ ಕೇಂದ್ರಕ್ಕೆ ದಾಖಲೆಗಳ ಲ್ಯಾಮಿನೇಷನ್ಗೆ ಬಂದಿದ್ದರು. ತಾಂತ್ರಿಕ ಕಾರಣದಿಂದ ದಾಖಲೆಯೊಂದು ಸುಟ್ಟು ಹೋಗಿದ್ದಕ್ಕೆ ಸಂಬಂಧಿಸಿದಂತೆ ಅಂಗಡಿ ಮಾಲೀಕರಾದ ಅಂಜನ ಪೈ, ಸುದರ್ಶನ್ ಪೈ ಹಾಗೂ ಗ್ರಾಹಕರ ನಡುವೆ ಮಾತಿನ ಚಕಮಕಿ ನಡೆದು ಹೊಡೆದಾಟಕ್ಕೆ ತಿರುಗಿತ್ತು. ಪ್ರಕರಣ ಸಂಬಂಧ ಪುತ್ತೂರು ನಗರ ಠಾಣೆ ಪೊಲೀಸರು ದೂರು-ಪ್ರತಿದೂರುಗಳನ್ನು ದಾಖಲಿಸಿಕೊಂಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:20 pm, Mon, 24 August 26