31 ಕೇಸ್ ಇದ್ದರೂ 9 ವರ್ಷಗಳಿಂದ ಕಣ್ಣಾಮುಚ್ಚಾಲೆ: ರಂಜಾನ್​​ಗೆಂದು ವಿದೇಶದಿಂದ ಬಂದು ಲಾಕ್​​ ಆದ ಆರೋಪಿ

31 ಕೇಸ್​ಗಳಿದ್ದ ಕುಖ್ಯಾತ ರೌಡಿಶೀಟರ್ ಓರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು 9 ವರ್ಷಗಳ ಬಳಿಕ ಬಂಧಿಸಿದ್ದಾರೆ. ಹೆಸರು ಬದಲಾಯಿಸಿಕೊಂಡು ವಿದೇಶದಲ್ಲಿದ್ದಆರೋಪಿ, ರಂಜಾನ್​​ ಹಿನ್ನೆಲೆ ದೇಶಕ್ಕೆ ಮರಳಿದ ಮಾಹಿತಿ ಆಧರಿಸಿ ಆಂಧ್ರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಬಂಧಿನ ಮೇಲೆ ಕೊಲೆ, ಗ್ಯಾಂಗ್ ರೇಪ್, ದರೋಡೆ ಸೇರಿದಂತೆ ಗಂಭೀರ ಪ್ರಕರಣಗಳಿದ್ದು, ಹಲವು ಠಾಣೆಗಳಲ್ಲಿ ಕೇಸ್​​ಗಳಿರುವ ಮಾಹಿತಿ ಇದೆ.

31 ಕೇಸ್ ಇದ್ದರೂ 9 ವರ್ಷಗಳಿಂದ ಕಣ್ಣಾಮುಚ್ಚಾಲೆ: ರಂಜಾನ್​​ಗೆಂದು ವಿದೇಶದಿಂದ ಬಂದು ಲಾಕ್​​ ಆದ ಆರೋಪಿ
ಬಂಧಿತ ಆರೋಪಿ
Image Credit source: Tv9 Kannada
Edited By:

Updated on: Feb 19, 2026 | 7:59 AM

ಮಂಗಳೂರು/ ರಾಮನಗರ, ಫೆಬ್ರವರಿ 19: ಆರೋಪಿಗಳು ಚಾಪೆ ಕೆಳಗೆ ತೂರಿದರೆ, ಪೊಲೀಸರು ರಂಗೋಲಿ ಕೆಳಗೆ ತೂರ್ತಾರೆ ಎನ್ನುವ ಮಾತು ಮತ್ತೊಮ್ಮೆ ಸಾಬೀತಾಗಿದೆ. ಒಂದೆರಡಲ್ಲ ಬರೋಬ್ಬರಿ 31 ಕೇಸ್​ಗಳಿದ್ದರು ಪೊಲೀಸರ ಕೈಗೆ ಸಿಗದೆ 9 ವರ್ಷಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ ಆರೋಪಿಯನ್ನ ಕೊನೆಗೂ ಖಾಕಿ ಬಂಧಿಸಿದೆ. ರೌಡಿಶೀಟರ್ ಸಫ್ವಾನ್ ಹುಸೈನ್ (42) ಅರೆಸ್ಟ್​​ ಆದ ಆರೋಪಿಯಾಗಿದ್ದು, ಹೆಸರು ಬದಲಿಸಿಕೊಂಡು ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದ. ರಂಜಾನ್​​ ಹಿನ್ನೆಲೆ ವಿದೇಶದಿಂದ ಈತ ಬಂದಿರುವ ಮಾಹಿತಿ ಆಧರಿಸಿ ಆಂಧ್ರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿರುವ ಮಂಗಳೂರು ಸಿಸಿಬಿ ಪೊಲೀಸರು ಈತನನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.

ಟಾರ್ಗೆಟ್ ಗ್ಯಾಂಗ್​​ನಲ್ಲಿ ಸಕ್ರಿಯನಾಗಿದ್ದ ರೌಡಿಶೀಟರ್ ಸಫ್ವಾನ್ ಹುಸೈನ್ ವಿರುದ್ಧ 2 ಕೊಲೆ, ಗ್ಯಾಂಗ್ ರೇಪ್, ಕೊಲೆಯತ್ನ, ದರೋಡೆ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 31 ಪ್ರಕರಣಗಳಿವೆ. ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ, ಕಳ್ಳತನ, ಸರಗಳ್ಳತನದಲ್ಲಿಯೂ ಈತ ಭಾಗಿಯಾಗಿದ್ದ ಎನ್ನಲಾಗಿದೆ. ನಕಲಿ ಹೆಸರಿನಲ್ಲಿ ಆಧಾರ್ ಮಾಡಿಸಿ ಆಂಧ್ರ ಪ್ರದೇಶದಲ್ಲಿ ಉಮ್ಮರ್ ಮೊಹಮ್ಮದ್ ನಾಸಿರ್ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದ ಆರೋಪಿ, 2018ರಲ್ಲಿ ವಿದೇಶಕ್ಕೆ ಪರಾರಿಯಾಗಿದ್ದ. ಆದರೆ ಹಬ್ಬದ ಹಿನ್ನೆಲೆ ಈತ ದೇಶಕ್ಕೆ ಮರಳಿ ಬಂದಿರುವ ಮಾಹಿತಿ ಆಧಾರದಲ್ಲಿ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ಆಂಧ್ರ ಪ್ರದೇಶದ ರಾಯ್ ಚೋಟೆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿರುವ ಮಂಗಳೂರು ಸಿಸಿಬಿ ಪೊಲೀಸರ ತಂಡ ಸಫ್ವಾನ್ ಹುಸೈನ್​​ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪರಾರಿ​​; ವಿದೇಶದಿಂದ ಬಂದ ತಂದೆ, ಮಗಳಿಗಾಗಿ ಕಣ್ಣೀರು

ಚಾಕುವಿನಿಂದ ಇರಿದು ಪತ್ನಿಯನ್ನು ಕೊಂದ ಪಾಪಿ ಪತಿ

ಪತ್ನಿಯನ್ನು ಪತಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದ ಯಾರಬ್​​ ನಗರದಲ್ಲಿ ನಡೆದಿದೆ. ಸೋಫಿಯಾ ಬಾನು(21) ಕೊಲೆಯಾದ ದುರ್ದೈವಿಯಾಗಿದ್ದು, ಆರೋಪಿ ಸಲ್ಮಾನ್(22) ಆರೋಪಿಯಾಗಿದ್ದಾನೆ. ಪತ್ನಿಯನ್ನು ಹತ್ಯೆ ಮಾಡಿ ಈತ ತಾನೇ ಪೊಲೀಸ್​​ ಠಾಣೆಗೆ ಹೋಗಿ ಶರಣಾಗಿದ್ದು, ಕೌಟುಂಬಿಕ ಕಲಹ ಅಥವಾ ಅನೈತಿಕ ಸಂಬಂಧ ಹಿನ್ನೆಲೆ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ರಾಮನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.