
ದಾವಣಗೆರೆ, ಸೆಪ್ಟೆಂಬರ್ 03: ಜಿಲ್ಲೆಯಲ್ಲಿ ನಾಟಿಕೋಳಿಗಳು ಸಾಲುಸಾಲಾಗಿ ಸಾವನ್ನಪ್ಪುತ್ತಿದ್ದು, ಸಾಕಾಣಿಕೆದಾರರಲ್ಲಿ ತೀವ್ರ ಆತಂಕ ಮೂಡಿಸಿದೆ. ಕಣ್ಣ ಮುಂದೆಯೇ ನೂರಾರು ಕೋಳಿಗಳು ಮಣ್ಣು ಪಾಲಾಗುತ್ತಿರುವುದನ್ನು ಕಂಡು ಅನ್ನದಾತರು ಕಂಗಾಲಾಗಿದ್ದಾರೆ. ಮೇಲ್ನೋಟಕ್ಕೆ ಇದು ಮಾರಣಾಂತಿಕ ‘ಕೊಕ್ಕರೆ ರೋಗ’ (ರಾಣಿಖೇತ್) ಎಂಬ ಸಂಶಯ ವ್ಯಕ್ತವಾಗಿದ್ದು, ರೋಗದ ದಾಳಿಗೆ ಇಡೀ ಫಾರ್ಮ್ಗಳೇ ಸರ್ವನಾಶವಾಗುತ್ತಿವೆ. ಇಷ್ಟೆಲ್ಲಾ ಅವಾಂತರ ನಡೆಯುತ್ತಿದ್ದರೂ ಸಕಾಲಕ್ಕೆ ಸ್ಪಂದಿಸದ ಪಶುವೈದ್ಯಾಧಿಕಾರಿಗಳ ವಿರುದ್ಧ ರೈತರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಜಗಳೂರು ತಾಲೂಕಿನ ತಮಲೇನಹಳ್ಳಿ ಗ್ರಾಮದ ತಿಮ್ಮೇಶ ಚೌಡಪ್ಪ ಎಂಬುವರ ಫಾರ್ಮ್ನಲ್ಲಿ ಕಳೆದ ನಾಲ್ಕು ದಿನಗಳಿಂದ ನಾಟಿಕೋಳಿಗಳು ಒಂದರ ಹಿಂದೆ ಒಂದರಂತೆ ಪ್ರಾಣ ಬಿಡುತ್ತಿವೆ. ಅತ್ತ ದಾವಣಗೆರೆ ತಾಲೂಕಿನ ರಾಮಗೊಂಡನಹಳ್ಳಿಯಲ್ಲಿ ಇತ್ತೀಚೆಗೆ ಒಂದೇ ದಿನ ಬರೋಬ್ಬರಿ 850 ಕೋಳಿಗಳು ಮೃತಪಟ್ಟ ಘಟನೆ ವರದಿಯಾಗಿತ್ತು. ಆದರೂ ಇಲಾಖಾ ಅಧಿಕಾರಿಗಳು ವೈಜ್ಞಾನಿಕ ಪರೀಕ್ಷೆ ನಡೆಸಿ ಸಾವಿಗೆ ನಿಖರ ಕಾರಣ ಬಹಿರಂಗಪಡಿಸಿಲ್ಲ. ಔಷಧಿ ಹಾಗೂ ಮಾರ್ಗದರ್ಶನಕ್ಕಾಗಿ ಕಚೇರಿಗಳಿಗೆ ಅಲೆದಾಡಿದರೂ ಪಶುವೈದ್ಯರು ಸರಿಯಾಗಿ ಸ್ಪಂದಿಸದೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ಕೋಳಿಗಳು ಬಲಿಯಾಗಿವೆ ಎಂದು ಸಾಕಾಣಿಕೆದಾರರು ಅಳಲು ತೋಡಿಕೊಂಡಿದ್ದಾರೆ.
ಕೊಕ್ಕರೆ ರೋಗವನ್ನು ವೈಜ್ಞಾನಿಕವಾಗಿ ‘ರಾಣಿಖೇತ್’ ಅಥವಾ ‘ನ್ಯೂಕ್ಯಾಸಲ್’ ಕಾಯಿಲೆ ಎಂದು ಕರೆಯಲಾಗುತ್ತದೆ. ‘ಪ್ಯಾರಾಮಿಕ್ಸೋವೈರಸ್’ ಎಂಬ ವೈರಾಣುವಿನಿಂದ ಹರಡುವ ಈ ಸೋಂಕು ಅತ್ಯಂತ ವೇಗವಾಗಿ ವ್ಯಾಪಿಸುವ ಗುಣ ಹೊಂದಿದ್ದು, ಒಂದು ಕೋಳಿಗೆ ಬಂದರೆ ಇಡೀ ಫಾರ್ಮ್ ಆವರಿಸಿಕೊಳ್ಳುತ್ತದೆ. 1926ರಲ್ಲಿ ಇಂಡೋನೇಷ್ಯಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಈ ರೋಗವನ್ನು ನ್ಯೂಕ್ಯಾಸಲ್ ಎನ್ನಲಾಯ್ತು. ಬಳಿಕ 1927ರಲ್ಲಿ ಭಾರತದ ಉತ್ತರಾಖಂಡದ ‘ರಾಣಿಖೇತ್’ ಗಿರಿಧಾಮದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಈ ಹೆಸರಿನಿಂದ ಕರೆಯಲಾಗುತ್ತಿದೆ.
ಈ ವೈರಾಣು ಸೋಂಕಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲದ ಕಾರಣ, ಮುನ್ನೆಚ್ಚರಿಕೆ ಹಾಗೂ ಸಮಯಕ್ಕೆ ಸರಿಯಾಗಿ ಲಸಿಕೆ ನೀಡುವುದೇ ಏಕೈಕ ಪರಿಹಾರವಾಗಿದೆ. ಕೋಳಿ ಮರಿಗಳಿಗೆ ಆರಂಭಿಕ ಹಂತದಲ್ಲೇ ಪಶುವೈದ್ಯರ ಸಲಹೆಯಂತೆ ‘ಎಫ್-1’ ಹಾಗೂ ‘ಲಸೋಟಾ’ ಲಸಿಕೆಗಳನ್ನು ತಪ್ಪದೇ ಹಾಕಿಸಬೇಕು.
ಇದನ್ನೂ ಓದಿ: ಹರಪನಹಳ್ಳಿ: ಒಂದೇ ಫಾರಂನಲ್ಲಿನ ಮೂರು ಸಾವಿರ ಕೋಳಿಗಳ ಸಾವು
ಫಾರ್ಮ್ಗಳನ್ನು ಸದಾ ಒಣದಾಗಿ ಹಾಗೂ ಶುಚಿಯಾಗಿಟ್ಟು, ಕ್ರಿಮಿನಾಶಕ ದ್ರಾವಣಗಳನ್ನು ಸಿಂಪಡಿಸಬೇಕು. ರೋಗದ ಲಕ್ಷಣ ಕಂಡ ತಕ್ಷಣ ಅಂತಹ ಕೋಳಿಗಳನ್ನು ಪ್ರತ್ಯೇಕಿಸಬೇಕು. ಮೃತಪಟ್ಟ ಕೋಳಿಗಳನ್ನು ಎಲ್ಲೆಂದರಲ್ಲಿ ಬಿಸಾಡದೆ, ಆಳವಾದ ಗುಂಡಿ ತೋಡಿ ಸುಣ್ಣ ಹಾಕಿ ಮುಚ್ಚಬೇಕು ಅಥವಾ ಸುಟ್ಟು ಹಾಕಬೇಕು. ರೋಗಲಕ್ಷಣಗಳು ಕಂಡುಬಂದ ತಕ್ಷಣ ರೈತರು ಸ್ಥಳೀಯ ಪಶು ಆಸ್ಪತ್ರೆಗಳನ್ನು ಸಂಪರ್ಕಿಸಿ ಮುಂಜಾಗ್ರತೆ ವಹಿಸುವುದು ಒಳ್ಳೆಯದು.
ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.