ದಾವಣಗೆರೆ: ಗ್ಯಾಂಗ್ ರೇಪ್ ಆಗಿದೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ್ದ ವಿದ್ಯಾರ್ಥಿನಿಗೆ ಎಸ್​ಪಿ ಎಚ್ಚರಿಕೆ

ದಾವಣಗೆರೆಯ ನಿಟ್ಟುವಳ್ಳಿಯಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಾಕಿದ್ದ ಸುಳ್ಳು ಸುದ್ದಿಗೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸ್ಪಷ್ಟನೆ ನೀಡಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿದ್ದ ವಿದ್ಯಾರ್ಥಿನಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ದಾವಣಗೆರೆ: ಗ್ಯಾಂಗ್ ರೇಪ್ ಆಗಿದೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ್ದ ವಿದ್ಯಾರ್ಥಿನಿಗೆ ಎಸ್​ಪಿ ಎಚ್ಚರಿಕೆ
ಎಸ್​ಪಿ ಉಮಾ ಪ್ರಶಾಂತ್
Edited By: ವಿವೇಕ ಬಿರಾದಾರ

Updated on: Sep 10, 2024 | 3:21 PM

ದಾವಣಗೆರೆ, ಸೆಪ್ಟೆಂಬರ್​ 06: ದಾವಣಗೆರೆಯಲ್ಲಿ (Davangere) ಗ್ಯಾಂಗ್ ರೇಪ್ ಆಗಿದೆ ಅಂತ ಸಾಮಾಜಿಕ ಜಾಲತಾಣದಲ್ಲಿ (Social Media) ಹರಡಿದ್ದ ಸುಳ್ಳು ಸುದ್ದಿಗೆ ದಾವಣಗೆರೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸ್ಪಷ್ಟನೆ ನೀಡಿದ್ದಾರೆ. ದಾವಣಗೆರೆ ಮೂಲದ ವಿದ್ಯಾರ್ಥಿಯೊಬ್ಬಳು (Student) ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ “ದಾವಣಗೆರೆಯ ನಿಟ್ಟುವಳ್ಳಿಯಲ್ಲಿ ಓರ್ವ ವಿದ್ಯಾರ್ಥಿನಿ ಮೇಲೆ ಯುವಕರಿಂದ ಗ್ಯಾಂಗ್ ರೇಪ್ ಆಗಿದೆ.‌ ಹುಷಾರಾಗಿ ಓಡಾಡಿ.‌ ಒಬ್ಬಂಟಿಯಾಗಿ ಓಡಾಡಬೇಡಿ ಎಂದು ಪೋಸ್ಟ್​ ಹಾಕಿದ್ದಳು. ಇದು ರಾಜ್ಯಾದ್ಯಂತ ಹರಿದಾಡಿತ್ತು.

ಈ ವಿಚಾರವಾಗಿ ದಾವಣಗೆರೆ ಪೊಲೀಸರು ಪರಿಶೀಲನೆ ನಡೆಸಿದ್ದು, ಸುಳ್ಳು ಸುದ್ದಿ ಅಂತ ಸಾಬೀತಾಗಿದೆ. ಬಳಿಕ ಪೊಲೀಸರು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​​ ಮಾಡಿದ ವಿದ್ಯಾರ್ಥಿನಿ ಮತ್ತು ಆಕೆಯ ಪೋಷಕರನ್ನು ಕರೆಸಿ, ಇನ್ನೊಮ್ಮೆ ಈ ರೀತಿ ಪೋಸ್ಟ್​​ ಹಾಕದಂತೆ ತಾಕೀತು ಮಾಡಿದರು. ಇದು ಅಪರಾಧವಾಗಿದ್ದು, ಮರುಕಳಿಸಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಉಮಾ ಪ್ರಶಾಂತ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಯುವತಿಯ ಫೋಟೋ ಅಶ್ಲೀಲವಾಗಿ ಎಡಿಟ್​ ಮಾಡಿ ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್, ಕ್ರಮ ಕೈಗೊಳ್ಳದ ಪೊಲೀಸರು

ಇನ್​ಸ್ಟಾಗ್ರಾಂ ಸ್ಟಾರ್ ಯೂನೀಸ್ ಝರೂರಾ​​​ ಪೊಲೀಸ್​ ವಶಕ್ಕೆ

ಬೆಂಗಳೂರು: ನಡು ರಸ್ತೆಯಲ್ಲಿ ಜನರನ್ನು ಸೇರಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದ ಯೂನೀಸ್ ಝರೂರಾ ಎಂಬ ಇನ್​ಸ್ಟಾಗ್ರಾಂ ಸ್ಟಾರ್​ನನ್ನು ಅಶೋಕನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಯೂನೀಸ್ ಝರೂರಾ ಬೇರೆ ಬೇರೆ ದೇಶಗಳಿಗೆ ತೆರಳಿ ಇನ್​​ಸ್ಟಾಗ್ರಾಂ ವಿಡಿಯೋ ಮಾಡುತ್ತಿದ್ದನು. ತಾನು ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರೆ, ಗಿಫ್ಟ್​ಗಳನ್ನು ಕೊಡುತ್ತಿದ್ದನು.

ಯೂನೀಸ್ ಝರೂರಾ ಬೆಂಗಳೂರಿನ ಎಂಜಿ ರಸ್ತೆಗೂ ಬಂದಿದ್ದಾನೆ. ಈತ ಬಂದ ವಿಚಾರ ತಿಳಿದ ಜನರು ಗುಂಪು ಸೇರಿದ್ದಾರೆ. ಈ ಜನರಿಗೆ ಪ್ರಶ್ನೆಗಳನ್ನು ಕೇಳಿದ್ದು, ಸರಿಯಾದ ಉತ್ತರ ನೀಡಿದರೆ ಐಫೋನ್ ಗಿಫ್ಟ್ ಕೊಡುತ್ತೇನೆ ಎಂದು ಹೇಳಿದ್ದಾನೆ. ಇದೇ ವೇಳೆ ಎಂಜಿ ರಸ್ತೆಯಲ್ಲಿ ದಿ.ಪುನೀತ್ ರಾಜ್ ಕುಮಾರ್ ಅವರ ಫೋಟೋ ಅನಾವರಣ ಮಾಡಿದ್ದಾನೆ.

ನಡು ರಸ್ತೆಯಲ್ಲಿ ಗುಂಪು ಸೇರಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಅನುಮತಿ ಪಡೆಯದೆ ಜನರ ಗುಂಪು ಸೇರಿಸಿದ ಹಿನ್ನೆಲೆಯಲ್ಲಿ ಅಶೋಕನಗರ ಪೊಲೀಸರು ಯೂನೀಸ್ ಝರೂರಾನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ಯೂನೀಸ್ ಝರೂರಾನನ್ನು ಹೊಯ್ಸಳ ವಾಹನದ ಒಳಗೆ ಕೂಡಿಸಿದಾಗಲೂ, ವೀಡಿಯೋ ಮಾಡಿದ್ದಾನೆ. ಸ್ಟೇಷನ್ ಒಳಗಿನ ಫೋಟೋ ಇನ್​ಸ್ಟಾಗ್ರಾಂನಲ್ಲಿ ಹಾಕಿ, ನಾನು ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ ಎಂದು ಪೋಸ್ಟ್​​ ಹಾಕಿದ್ದಾನೆ. ಪೊಲೀಸರು ಯೂನೀಸ್ ಝರೂರಾಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:02 pm, Fri, 6 September 24

Basavaraj Doddamani

ಬಸವರಾಜ ದೊಡ್ಡಮನಿ ಟಿವಿ9 ಕನ್ನಡ ವರದಿಗಾರರಾಗಿದ್ದು, ವಿಶೇಷವಾಗಿ ದಾವಣಗೆರೆ ಜಿಲ್ಲಾ ಪ್ರಾದೇಶಿಕ ಸುದ್ದಿಗಳ ಮೇಲೆ ಕೇಂದ್ರೀಕರಿಸುತ್ತಾರೆ.

Read More
Follow Us