ನನ್ನ ಮಗಳು ಸಾಯಬೇಕು, ದೇವರಲ್ಲಿ ಇದೇ ನನ್ನ ಪ್ರಾರ್ಥನೆ; ಮಗಳ ಸ್ಥಿತಿಗೆ ನೊಂದ ತಾಯಿಯ ವಿಚಿತ್ರ ಆಸೆ

| Updated By: guruganesh bhat

Updated on: Sep 01, 2021 | 10:50 PM

ಸ್ಥಿತಿವಂತರ ಕಡೆ ದಾನ ಕೇಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆದರೆ ಸೂಕ್ತ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಸಕಾಲಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ಎದ್ದು ಓಡಾಡಬಹುದಿತ್ತು ಅಂತ ಸ್ವಪ್ನಾ ಸಹಾಯಕ್ಕಾಗಿ ಅಂಗಲಾಚಿದ್ದಾಳೆ.

ನನ್ನ ಮಗಳು ಸಾಯಬೇಕು, ದೇವರಲ್ಲಿ ಇದೇ ನನ್ನ ಪ್ರಾರ್ಥನೆ; ಮಗಳ ಸ್ಥಿತಿಗೆ ನೊಂದ ತಾಯಿಯ ವಿಚಿತ್ರ ಆಸೆ
ಅನಾರೋಗದಿಂದ ಬಳಲುತ್ತಿರುವ ಸ್ವಪ್ನಾ
Follow us on

ದಾವಣಗೆರೆ: ಕೆಲವೊಂದು ಕಷ್ಟಗಳು ಮನುಷ್ಯನ ಆಲೋಚನೆಯನ್ನು ಬದಲಾಯಿಸುತ್ತವೆ.ಅಂತಹುದೇ ಒಂದು ಕಷ್ಟಬಂದು ತಮ್ಮ ಮಗಳು ಸಾಯಬೇಕು ಅಂತ ದೇವರ ಬಳಿ ಪ್ರಾರ್ಥಿಸುವಷ್ಟು ಹೆತ್ತ ತಾಯಿ ನೊಂದು ಹೋಗಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ನಗರ ಮಹಿಳೆಯ ಕಣ್ಣೀರಿನ ಕಥೆ ಇದು. ಮಗಳ ಕೈ ಹಿಡಿದ ಅಳಿಯ ಮತ್ತೊಂದು ಮದುವೆಯಾಗಿದ್ದಾನೆ. ಅನಾರೋಗ್ಯದಿಂದ ಪತಿ ನಿಧನ ಹೊಂದಿದ್ದಾರೆ. ಉಳಿದ ಮೂರು ಹೆಣ್ಣು ಮಕ್ಕಳಲ್ಲಿ ಇಬ್ಬರಿಗೆ ಮದುವೆ ಮಾಡಿದ್ದಾರೆ. ಇನ್ನೊಬ್ಬಳು ಸಂಬಂಧಿಕರ ಆಸರೆಯಲ್ಲಿ ಓದುತ್ತಿದ್ದಾರೆ. ಕಳೆದ ಐದು ವರ್ಷದಿಂದ ಹಿರಿ ಮಗಳು ಜೀವಂತ ಶವವಾಗಿ ಹಾಸಿಗೆ ಹಿಡಿದ್ದಾಳೆ. ಮಗಳ ಸ್ಥಿತಿ ನೋಡಕ್ಕಾಗದ ವೃದ್ಧ ತಾಯಿ ನನ್ನ ಮಗಳು ಸಾವನ್ನಪ್ಪಲಿ ಎಂದು ಹಂಬಲಿಸಿದ್ದಾರೆ.

ಈ ಮಾತು ಕೇಳಿ ಆಶ್ಚರ್ಯವಾಗಬಹುದು. ಆದರೆ ಆಕೆ ನೊಂದಿರುವುದು ಬೆಟ್ಟದಷ್ಟು. ದಾವಣಗೆರೆ ಜಿಲ್ಲೆಯ ಹರಿಹರ ನಗರದ ಚಿನ್ನಪ್ಪ ಕಂಪೌಂಡ್ ನಿವಾಸಿ ಸ್ವಪ್ನಾ ಹಿರೇಮಠ ಎಂಬ ಮಹಿಳೆ ಕಳೆದ ಐದು ವರ್ಷಗಳಿಂದ ಮಾತೊಂದನ್ನು ಬಿಟ್ಟರೆ ಉಳಿದೆಲ್ಲದಕ್ಕೂ ಬೇರೆಯವರನ್ನೇ ಅವಲಂಬಿಸಿದ್ದಾರೆ. ಕೆಲ ವರ್ಷಗಳಿಂದ ಈಕೆಗೆ ಸೋರಿಯಾಸಿಸ್ ಖಾಯಿಲೆ ಇತ್ತು. ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದ ಬಳಿಕ ಸರಿ ಆಗಿತ್ತು. ನಂತರ ಮೂಳೆ ಸಂಬಂಧಿ ರೋಗ ಕಾಣಿಸಿಕೊಂಡಿತ್ತು. ಇದಕ್ಕಿದ್ದಂತೆ ಕೈ ಕಾಲುಗಳು, ಬೆರಳುಗಳು ಮಡಿಚಿಕೊಂಡಿವೆ. ಕಾಲು ನಡೆಯಲು ಬಾರದ ಸ್ಥಿತಿಗೆ ಬಂದಿದೆ. ಕೈಗಳು ಅಲ್ಲಾಡಿಸಲು ಕಷ್ಟಪಡಬೇಕು. ವಿಚಿತ್ರ ಖಾಯಿಲೆಗೆ ಸಿಕ್ಕ ಸ್ವಪ್ನಾ ಜೀವಂತ ಶವವಾಗಿದ್ದಾಳೆ.

ಸ್ಥಿತಿವಂತರ ಕಡೆ ದಾನ ಕೇಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆದರೆ ಸೂಕ್ತ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಸಕಾಲಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ಎದ್ದು ಓಡಾಡಬಹುದಿತ್ತು ಅಂತ ಸ್ವಪ್ನಾ ಅವರು ಸಹಾಯಕ್ಕಾಗಿ ಅಂಗಲಾಚಿದ್ದಾರೆ.

2011ರಲ್ಲಿ ಸ್ವಪ್ನಾ ಪ್ರೀತಿಸಿ ಮದುವೆ ಆಗಿದ್ದರು. ಎರಡರಿಂದ ಮೂರು ವರ್ಷ ಸಂಸಾರ ಕೂಡಾ ಚೆನ್ನಾಗಿ ಸಾಗಿತ್ತು. ಈ ನಡುವೆ ಸ್ವಪ್ನಾ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಅನಾರೋಗ್ಯ ಕಾಣಿಸಿಕೊಂಡಿದ್ದೆ ತಡ ಪತಿ ಕೈ ಬಿಟ್ಟು, ನಿನ್ನ ಚಿಕಿತ್ಸೆಗೆ ಹಣ ಕೊಡುತ್ತೇನೆ. ಜಮೀನು ಕೊಡುತ್ತೇನೆ ಎಂದು ನಂಬಿಸಿ ಇವಳಿಂದ ವಿಚ್ಚೇದನಕ್ಕೆ ಸಹಿ ಹಾಕಿಸಿಕೊಂಡು ಮತ್ತೊಂದು ಮದುವೆ ಆದ. ನಂತರ ಪ್ರೀತಿಸಿ ಕೈ ಹಿಡಿದ ಸ್ವಪ್ನಾರ ನಂಬರ್ ಕೂಡಾ ಬ್ಲಾಕ್ ಆಗಿದೆ.

ಸ್ವಪ್ನಾಗೆ ಮೂರು ಜನ ತಂಗಿಯರು. ಇವರೇ ಹಿರಿಯ ಮಗಳು. ಇಬ್ಬರ ಸಹೋದರಿಯರಿಗೆ ಮದುವೆ ಆಗಿದೆ. ಇನ್ನೊಬ್ಬಳು ಸಂಬಂಧಿಕರ ಆಸರೆಯಲ್ಲಿ ಓದುತ್ತಿದ್ದಾಳೆ. ತಂದೆ ಅನಾರೋಗ್ಯದಿಂದ ಬಹು ದಿನಗಳ ಹಿಂದೆಯೇ ಸಾವನ್ನಪ್ಪಿದ್ದಾರೆ. ಇವರ ಆರೈಕೆಯನ್ನು ವೃದ್ಧ ತಾಯಿ ಶಿವಲೀಲಾ ಮಾಡುತ್ತಾರೆ. ತಾಯಿಗೂ ಕಿಡ್ನಿ ಸಮಸ್ಯೆ ಇದೆ. ಮಗಳ ಕಷ್ಟ ನೋಡಿ ತಾಯಿ ಶಿವಲೀಲಾ ಪ್ರತಿದಿನ ಕಣ್ಣೀರು ಹಾಕುತ್ತಿದ್ದಾರೆ. ನೊಂದ ತಾಯಿ ನಾನು ಸತ್ತರೇ ನನ್ನ ಮಗಳ ಗತಿ ಏನು? ನನ್ನ ಕಣ್ಣು ಮುಂದೆಯೇ ನನ್ನ ಮಗಳು ಸಾಯಬೇಕು ಎಂದು ಜೀವ ಬಯಸುತ್ತಿದೆ.

ನಾನು ಬದುಕುತ್ತೇನೆ. ಪತಿ ಮಾಡಿದ ಮೋಸದಿಂದ ಈ ರೀತಿಯಾದೆ. ಅವರನ್ನು ನಂಬಿ ವಿಚ್ಚೇದನಕ್ಕೆ ಸಹಿ ಹಾಕಿದೆ. ಇದೇ ಸ್ಥಿತಿಯಲ್ಲಿ ವಾಹನ ತೆಗೆದುಕೊಂಡು ಪತಿಯನ್ನು ನೋಡಲು ಹೋದೆ. ಆದರೆ ಪತಿ ನಾಪತ್ತೆ ಆಗಿದ್ದರು. ಸದ್ಯ ಅಮ್ಮನಿಗೆ ವಿಧವಾ ವೇತನ, ನನಗೆ ಅಂಗವಿಕಲ ವೇತನ ಬರುತ್ತದೆ. ಇದರಲ್ಲಿಯೇ ಮನೆ ನಡೆಯುತ್ತಿದೆ. ತಾಯಿ ಆರೋಗ್ಯ ಹಾಳಾಗಿದೆ ಅಂತ ಸ್ವಪ್ನಾ ಕಣ್ಣೀರು ಹಾಕಿದ್ದಾರೆ. ನೆರವಿಗಾಗಿಹೂ ಹಂಬಲಿಸಿದ್ದಾರೆ.

ಸ್ವಪ್ನಾ ಅವರನ್ನು ಸಂಪರ್ಕ ಸಂಖ್ಯೆ: 9844863836,
ಸಹಾಯ ಮಾಡಲಿಚ್ಛಿಸುವ ದಾನಿಗಳು ಇದೇ ಸಂಖ್ಯೆಯಲ್ಲಿ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕವು ನೆರವು ನೀಡಬಹುದು

ಸ್ವಪ್ನಾ ಅವರ ಬ್ಯಾಂಕ್ ಖಾತೆಯ ವಿವರ

ಇದನ್ನೂ ಓದಿ

ಜಪಾನ್​ನಲ್ಲಿ ಗೃಹಿಣಿಯಾಗಿದ್ದ ಮಹಿಳೆಯರಿಗಿಲ್ಲ ಉದ್ಯೋಗ ಭಾಗ್ಯ

ಬೆಳಗಾವಿಯಲ್ಲಿ ಒಂದೂವರೆ ವರ್ಷದೊಳಗೆ ಸ್ಮಾರ್ಟ್ ಸಿಟಿ ಯೋಜನೆ ಪೂರ್ಣ: ಗೋವಿಂದ ಕಾರಜೋಳ

(mother cries over her daughter illness in davanagere)

Published On - 1:05 pm, Mon, 30 August 21