ಪರ್ಸೆಂಟೇಜ್​ ಯಾವ ಕಾಲದಲ್ಲಿ ಆಗಿದೆ ಮಾಹಿತಿ ಇಲ್ಲ, ಕಾಂಗ್ರೆಸ್ ಅವಧಿಯ ಟೆಂಡರೂ ತನಿಖೆ ಮಾಡಿಸ್ತೇವೆ: ಬೊಮ್ಮಾಯಿ ಘೋಷಣೆ

TV9 Digital Desk

| Edited By: ಸಾಧು ಶ್ರೀನಾಥ್​

Updated on:Nov 26, 2021 | 1:03 PM

ಗುತ್ತಿಗೆದಾರರು ಕೊಟ್ಟಿರುವ ಪತ್ರದಲ್ಲೇ ಸ್ಪಷ್ಟತೆ ಇಲ್ಲ. ಯಾವ ಕಾಲದಲ್ಲಿ ಆಗಿದೆ ಎಂಬ ಮಾಹಿತಿಯೂ ಪತ್ರದಲ್ಲಿಲ್ಲ. ಹಾಗಾಗಿ ಕಾಂಗ್ರೆಸ್ ಅವಧಿಯ ಟೆಂಡರುಗಳನ್ನು ತನಿಖೆ ಮಾಡಿಸುತ್ತೇವೆ ಎಂದು ಸಿಎಂ ಬೊಮ್ಮಾಯಿ ಗುಡುಗಿದರು.

ಪರ್ಸೆಂಟೇಜ್​ ಯಾವ ಕಾಲದಲ್ಲಿ ಆಗಿದೆ ಮಾಹಿತಿ ಇಲ್ಲ, ಕಾಂಗ್ರೆಸ್ ಅವಧಿಯ ಟೆಂಡರೂ ತನಿಖೆ ಮಾಡಿಸ್ತೇವೆ: ಬೊಮ್ಮಾಯಿ ಘೋಷಣೆ
ಸಿದ್ದರಾಮಯ್ಯ- ಬಸವರಾಜ ಬೊಮ್ಮಾಯಿ

ದಾವಣಗೆರೆ: ಗುತ್ತಿಗೆದಾರರ ಪತ್ರವನ್ನಿಟ್ಟುಕೊಂಡು ಕಾಂಗ್ರೆಸ್ ಮುಖಂಡರು ರಾಜ್ಯಪಾಲರಿಗೆ ನೀಡಿರುವ ದೂರು ಅತ್ಯಂತ ಹಾಸ್ಯಾಸ್ಪದ ಮನವಿಯಾಗಿದೆ ಎಂದು ದಾವಣಗೆರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದಾರೆ. ಕಾಂಟ್ರಕ್ಟರುಗಳಿಗೆ ಯಾವ ಅವಧಿಯಲ್ಲಿ ಪರ್ಸೆಂಟೇಜ್​ ಅನುಭವ ಆಗಿದೆ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿಲ್ಲ. ಪರ್ಸೆಂಟ್ ಜನಕರಿದ್ದರೇ ಅದು ಕಾಂಗ್ರೆಸ್ ನವರು. ಆ ಪರ್ಸೆಂಟ್ ಜಾಸ್ತಿಯಾಗಿದ್ದರೇ ಅದು ಕಾಂಗ್ರೆಸ್ ಕಾಲದಲ್ಲಿಯೇ. ಇತ್ತೀಚೆಗೆ ಪರ್ಸೆಂಟೇಜ್ ಬಗ್ಗೆ ಮಾತನಾಡಿದ ವಿಡಿಯೋ ಪ್ರಚಾರ ಆಗಿದ್ದು ಎಲ್ಲರಿಗೂ ಗೊತ್ತಿದೆ ಎಂದು ಅವರು ತಿರುಗೇಟು ನೀಡಿದ್ದಾರೆ.

ಗುತ್ತಿಗೆದಾರರು ಕೊಟ್ಟಿರುವ ಪತ್ರದಲ್ಲೇ ಸ್ಪಷ್ಟತೆ ಇಲ್ಲ. ಯಾವ ಕಾಲದಲ್ಲಿ ಆಗಿದೆ ಎಂಬ ಮಾಹಿತಿಯೂ ಪತ್ರದಲ್ಲಿಲ್ಲ. ಹಾಗಾಗಿ ಕಾಂಗ್ರೆಸ್ ಅವಧಿಯ ಟೆಂಡರುಗಳನ್ನು ತನಿಖೆ ಮಾಡಿಸುತ್ತೇವೆ ಎಂದು ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಇಂದು ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಯ ತುಂಗಭದ್ರ ಸಭಾಂಗಣದಲ್ಲಿ ನಡೆಯುತ್ತಿರುವ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಂವಿಧಾನದ ಪ್ರಸ್ತಾವನೆಯ ಭೋಧನೆ ಮೂಲಕ ಸಂವಿಧಾನ ದಿನ ಆಚರಣೆಗೆ ಅವರು ಚಾಲನೆ ನೀಡಿದರು.

‘ಸಂವಿಧಾನ ನನ್ನ ಧರ್ಮಗ್ರಂಥ ಎಂದು ಮೋದಿ ಹೇಳಿದ್ದಾರೆ’ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಸಿಎಂ ಬೊಮ್ಮಾಯಿ ಅವರು ಸಂವಿಧಾನ ಡಾ. ಅಂಬೇಡ್ಕರ್ ನೀಡಿದ ಶ್ರೇಷ್ಠ ಕೊಡುಗೆ. ಸಂವಿಧಾನ ಇಲ್ಲದಿದ್ದರೆ ಪರಿಸ್ಥಿತಿ ಏನಾಗ್ತಿತ್ತೆಂದು ಹೇಳಲಾಗಲ್ಲ. ಈ ದೇಶವನ್ನ ಒಗ್ಗೂಡಿಸಿದ್ದು ನಮ್ಮ ಸಂವಿಧಾನ. ನಮ್ಮ ದೇಶದ ಕಾನೂನು ಇಂಗ್ಲೆಂಡ್‌ಗಿಂತ ಶ್ರೇಷ್ಠವಾಗಿದೆ. ನಮ್ಮದು ಜೀವಂತ ಇರುವ ಸಂವಿಧಾನ. ಕಾಲಕ್ಕೆ ತಕ್ಕಂತೆ ತಿದ್ದುಪಡಿಗೆ ಅವಕಾಶವಿದೆ. ಭಾರತದ ಸಂವಿಧಾನ ಸರ್ವಶ್ರೇಷ್ಠವಾದದ್ದು ಎಂದರು.

ಹಕ್ಕುಗಳ ಜತೆಗೆ ಕರ್ತವ್ಯ ಬಗ್ಗೆ ಜನ ಚಿಂತನೆ ಮಾಡಬೇಕು. ಕರ್ತವ್ಯದ ಬಗ್ಗೆ ಚಿಂತನೆ ಮಾಡದಿದ್ದರೇ ಅರಾಜಕತೆ ಸೃಷ್ಟಿಯಾಗುತ್ತದೆ. ಡಾ. ಬಿ ಆರ್ ಅಂಬೇಡ್ಕರ್ ಆಧುನಿಕ ಭಾರತದ ಪಿತಾಮಹ. ಡಾ ಅಂಬೇಡ್ಕರ್ ಶೋಷಿತ ವರ್ಗಕ್ಕೆ ಧ್ವನಿ ಆಗಿದ್ದಾರೆ. ಸಂವಿಧಾನ ನನ್ನ ಧರ್ಮಗ್ರಂಥ ಎಂದು ಮೋದಿ ಹೇಳಿದ್ದಾರೆ ಎಂದು ದಾವಣಗೆರೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

CM Bommai

ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರ ಸಭಾಂಗಣದಲ್ಲಿ ನಡೆದ ಸಂವಿಧಾನ ದಿನ ಕಾರ್ಯಕ್ರಮ

ಈ ನಡುವೆ ಕರ್ನಾಟಕ ಬಿಜೆಪಿ‌ ಟ್ವೀಟ್ ಮಾಡಿದ್ದು, ಟ್ವೀಟ್​ ಸಾರಾಂಶ ಹೀಗಿದೆ:

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಮಯವದು. ಸಿದ್ದರಾಮಯ್ಯ ಬೆಂಬಲಿಗರು ನೈತಿಕತೆಯ ಹುಸಿ ಪಾಠ ಮಾಡುತ್ತ ಖಜಾನೆಯನ್ನು ಖಾಲಿ ಮಾಡುತ್ತಿದ್ದ ಭ್ರಷ್ಟಾಚಾರದ ಉಚ್ಛ್ರಾಯ ಕಾಲ. ಆಗ ಬಹಿರಂಗಗೊಂಡಿದ್ದೇ ಕಾಂಗ್ರೆಸ್ ಎಂಎಲ್‌ಸಿ ಗೋವಿಂದರಾಜು ಅವರ ಡೈರಿ. ಕಾಂಗ್ರೆಸಿಗರೇ, ಈ ಪ್ರಕರಣವನ್ನು ಒಮ್ಮೆ ನೆನಪಿಸಿಕೊಳ್ಳಿ.

ಗೋವಿಂದರಾಜು ಅವರ ಐಟಿ ದಾಳಿಯಲ್ಲಿ ಸಿದ್ದರಾಮಯ್ಯನವರ ಪರವಾಗಿ ಗೋವಿಂದರಾಜು ಕಾಂಗ್ರೆಸ್ ಹೈಕಮಾಂಡ್‌ಗೆ ಸಲ್ಲಿಸಿದ ಕಪ್ಪ ಕಾಣಿಕೆಯ ವಿವರವಿತ್ತು. ಕಾಂಗ್ರೆಸ್ ಹೈಕಮಾಂಡ್, ಎಪಿ, ಆರ್.ಜಿ, ಎಸ್.ಜಿ ಮೊದಲಾದ ಸಂಕೇತಾಕ್ಷರಗಳಿದ್ದವು. ಸಿದ್ದರಾಮಯ್ಯನವರೇ, ಇವು ಯಾರ ಹೆಸರನ್ನು ಸೂಚಿಸುತ್ತಿದ್ದವು ಎಂಬುದು ಸ್ವಲ್ಪ ವಿವರಿಸಿ.

ಡಿಕೆಶಿ ಅವರ ಮನೆ ಮೇಲೆ ಐಟಿ ದಾಳಿ ನಡೆದಾಗ ಅವರೊಂದಷ್ಟು ಕಾಗದಗಳನ್ನು ಹರಿದು ಹಾಕಿದ್ದರು. ಹಠ ಬಿಡದ ಐಟಿ ಅಧಿಕಾರಿಗಳು ಆ ಚೀಟಿಗಳನ್ನು ಜೋಡಿಸಿದಾಗಲೂ ಎಐಸಿಸಿ, ಎಪಿ, ಆರ್‌ಜಿ, ಎಸ್‌ಜಿ ಎಂಬ ಉಲ್ಲೇಖಗಳಿತ್ತು. ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿ ನಡೆದಾಗಲೆಲ್ಲ ಇದೇ ಕೆಲವು ರಹಸ್ಯಾಕ್ಷರಗಳು ಹೊರಬರುತ್ತವೆ. ಯಾರಿವರು?

ಪುರಾವೆಗಳೇ ಇಲ್ಲದ ಪತ್ರವನ್ನಿಟ್ಟುಕೊಂಡು ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಕಾಂಗ್ರೆಸ್ ರಾಜ್ಯಪಾಲರನ್ನು ಆಗ್ರಹಿಸಿದೆ. ಆಧಾರ ರಹಿತ ಪತ್ರದ ಆಧಾರದಲ್ಲಿ ಸರ್ಕಾರ ವಜಾಗೊಳಿಸಲು ಒತ್ತಾಯಿಸುವುದಾದರೆ, ಐಟಿ ದಾಳಿಯಲ್ಲಿ ಲಭಿಸಿದ ಅಧಿಕೃತ ದಾಖಲೆಗಳ ಪ್ರಕಾರ ಕಾಂಗ್ರೆಸ್ ಸರ್ಕಾರವನ್ನೂ ಅಂದು ವಜಾಗೊಳಿಸಬೇಕಿತ್ತಲ್ಲವೇ?

ನನ್ನ ಆತ್ಮಹತ್ಯೆಗೆ ಕೆ.ಜೆ. ಜಾರ್ಜ್ ಕಾರಣ ಎಂದು ಡಿವೈಎಸ್ಪಿ ಗಣಪತಿ ನೇರ ಆರೋಪ‌ ಮಾಡಿ ಆತ್ಮಹತ್ಯೆ ಮಾಡಿಕೊಂಡರು‌. ಆದರೆ ಕಾಂಗ್ರೆಸ್ ಅವರಿಗೆ ಮಾನಸಿಕ ರೋಗಿ ಎಂಬ ಪಟ್ಟಕಟ್ಟಿತು. ಕಾಂಗ್ರೆಸ್ಸಿಗರೇ, ನಿಮ್ಮ ಅಧಿಕಾರಾವಧಿಯಲ್ಲಿ ಸರ್ಕಾರವನ್ನು ವಜಾಮಾಡಲು ಸಾಕಷ್ಟು ಕಾರಣಗಳಿದ್ದವು, ನೆನಪಿಸಿಕೊಳ್ಳುವಿರಾ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada