ದಾವಣಗೆರೆ-ಬೆಂಗಳೂರು ಪ್ರಯಾಣಕ್ಕೆ ಎರಡೂವರೆ ಗಂಟೆ ಸಾಕು! ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗ ಮುಂದಿನ ವರ್ಷ ಸಿದ್ಧ

ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ರೈಲು ಮಾರ್ಗವು 2027ಕ್ಕೆ ವೇಳೆಗೆ ಪೂರ್ಣಗೊಳ್ಳಲಿದೆ. ಈ ಯೋಜನೆಯಿಂದ ದಾವಣಗೆರೆ-ಬೆಂಗಳೂರು ನಡುವಿನ ಪ್ರಯಾಣ ಕೇವಲ 2.5 ಗಂಟೆಗೆ ಇಳಿಯಲಿದೆ. ಮಧ್ಯ ಕರ್ನಾಟಕದ ಅಭಿವೃದ್ಧಿಗೆ ಇದು ಮಹತ್ವದ ತಿರುವು ನೀಡಲಿದ್ದು, ವ್ಯಾಪಾರ, ಶಿಕ್ಷಣ, ಉದ್ಯೋಗ ಕ್ಷೇತ್ರಗಳಿಗೆ ದೊಡ್ಡ ಉತ್ತೇಜನ ಸಿಗಲಿದೆ.

ದಾವಣಗೆರೆ-ಬೆಂಗಳೂರು ಪ್ರಯಾಣಕ್ಕೆ ಎರಡೂವರೆ ಗಂಟೆ ಸಾಕು! ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗ ಮುಂದಿನ ವರ್ಷ ಸಿದ್ಧ
ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗ ಮುಂದಿನ ವರ್ಷ ಸಿದ್ಧ
Image Credit source: tv9
Edited By:

Updated on: Feb 27, 2026 | 8:06 AM

ದಾವಣಗೆರೆ, ಫೆಬ್ರವರಿ 27: ಮಧ್ಯ ಕರ್ನಾಟಕದ ಜನತೆಯ ಬಹುಕಾಲದ ಕನಸು ಈಡೇರುವ ಹಂತಕ್ಕೆ ಬಂದಿದೆ. ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗದ ಕಾಮಗಾರಿ 2027ರ ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಭಾರತೀಯ ರೈಲ್ವೆ (Indian Railway) ಸ್ಪಷ್ಟಪಡಿಸಿದೆ. ಈ ಘೋಷಣೆಯಿಂದ ದಾವಣಗೆರೆ ಸೇರಿದಂತೆ ಮಧ್ಯ ಕರ್ನಾಟಕದ (Karnataka) ಜನರಲ್ಲಿ ಹರ್ಷ ವ್ಯಕ್ತವಾಗಿದೆ. ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ (V Somanna) ಗುರುವಾರ ದಾವಣಗೆರೆ ಜಿಲ್ಲೆಯ ತೋಳಹುಣಸೆಯಿಂದ ಚಿತ್ರದುರ್ಗ–ತುಮಕೂರು ನೇರ ರೈಲು ಮಾರ್ಗದ ಕಾಮಗಾರಿ ಪರಿಶೀಲನೆ ನಡೆಸಿದರು.

ತೋಳಹುಣಸೆಯಿಂದ ಆನಗೋಡು ರೈಲು ನಿಲ್ದಾಣದವರೆಗೆ ಮೋಟಾರ್ ಟ್ರಾಲಿಯಲ್ಲಿ ಸಂಚರಿಸಿ ಕಾಮಗಾರಿಯ ಪ್ರಗತಿಯನ್ನು ಸೋಮಣ್ಣ ಅವಲೋಕಿಸಿದರು. ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಇನ್ನೂ ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣವಾಗಿಲ್ಲವೆಂದು ತಿಳಿದುಬಂದಿದೆ. ಈ ವಿಳಂಬದ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿ, ಮಾರ್ಚ್ 31ರೊಳಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

20 ವರ್ಷಗಳ ಹಿಂದೆ ಆರಂಭಗೊಂಡಿದ್ದ ಯೋಜನೆ

ತುಮಕೂರು–ಚಿತ್ರದುರ್ಗ–ದಾವಣಗೆರೆ ರೈಲು ಮಾರ್ಗ ಯೋಜನೆ ಸುಮಾರು 20 ವರ್ಷಗಳ ಹಿಂದೆ ಪ್ರಾರಂಭಗೊಂಡಿತ್ತು. ಯೋಜನೆಗೆ ಒಟ್ಟು ಸುಮಾರು 1200 ಎಕರೆ ಜಮೀನು ಅಗತ್ಯವಿದ್ದು, ಇದರಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲೇ ಇನ್ನೂ ಸುಮಾರು 111 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾಗಿದೆ.

ಮೋಟಾರ್ ಟ್ರಾಲಿಯಲ್ಲಿ ಸಂಚರಿಸಿ ಕಾಮಗಾರಿ ಪ್ರಗತಿ ಪರಿಶೀಲಿಸಿದ ಸೋಮಣ್ಣ

ರೈಲ್ವೆ ಇಲಾಖೆಯ ಅಭಿವೃದ್ಧಿ ಕಾರ್ಯಗಳಿಗೆ ಈ ವರ್ಷ ದೇಶವ್ಯಾಪಿಯಾಗಿ 52,000 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕರ್ನಾಟಕದ ವಿವಿಧ ಯೋಜನೆಗಳಿಗೆ 7,800 ಕೋಟಿ ರೂ. ಮೀಸಲಾಗಿದೆ. ಜೊತೆಗೆ ರೈಲು ನಿಲ್ದಾಣಗಳ ಮೂಲಭೂತ ಸೌಕರ್ಯಗಳು ಹಾಗೂ ಶೌಚಾಲಯಗಳ ಅಭಿವೃದ್ಧಿಗಾಗಿ 2,093 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಸೋಮಣ್ಣ ತಿಳಿಸಿದರು.

ಹೊಸ ಮಾರ್ಗದಲ್ಲಿ ತೋಳಹುಣಸೆಯಿಂದ ಹೆಬ್ಬಾಳದವರೆಗೆ ಕಾಮಗಾರಿ ವೇಗವಾಗಿ ಸಾಗುತ್ತಿದೆ. ಭವಿಷ್ಯದ ಜನಸಂಖ್ಯೆ ಮತ್ತು ಪ್ರಯಾಣಿಕರ ಸಂಖ್ಯೆ ಗಮನದಲ್ಲಿಟ್ಟು ಕನಿಷ್ಠ 21 ಬೋಗಿಗಳ ರೈಲು ನಿಲುಗಡೆಗೊಳ್ಳುವಂತೆ ನಿಲ್ದಾಣಗಳನ್ನು ವಿಸ್ತರಿಸಲಾಗುತ್ತಿದೆ. ಆದರೆ ಕೆಲವೆಡೆ ಕಿಡಿಗೇಡಿಗಳು ಕಲ್ಲು ಎಸೆದು ಕಾಮಗಾರಿಗೆ ಅಡ್ಡಿಪಡಿಸುತ್ತಿರುವ ಬಗ್ಗೆ ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ವಂದೇ ಭಾರತ್ ರೈಲಿನ ವೇಳಾಪಟ್ಟಿ ಬದಲಾಯಿಸಲು ಆಗ್ರಹಿಸಿದರು. ಜೊತೆಗೆ ದಾವಣಗೆರೆ ಲಿಂಗೇಶ್ವರ ದೇವಸ್ಥಾನದ ಬಳಿ ಸೇವಾ ರಸ್ತೆ ನಿರ್ಮಾಣ, ದಾವಣಗೆರೆ–ಹುಬ್ಬಳ್ಳಿ–ಬೆಳಗಾವಿ ಮಾರ್ಗವಾಗಿ ಬೆಂಗಳೂರು–ಮುಂಬೈ ಸೂಪರ್ ಫಾಸ್ಟ್ ರೈಲು ಸಂಚಾರಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದರು. ಈ ಯೋಜನೆಯಿಂದ ಮುಂಬೈ ವ್ಯಾಪಾರಿಗಳಿಗೆ ಹಾಗೂ ಮಧ್ಯ ಕರ್ನಾಟಕದ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ದಾವಣಗೆರೆ-ಬೆಂಗಳೂರು ಪ್ರಯಾಣ ಸುಗಮ

ಪ್ರಸ್ತುತ ದಾವಣಗೆರೆಯಿಂದ ಬೆಂಗಳೂರಿಗೆ ಬಸ್ ಮೂಲಕ ಪ್ರಯಾಣಿಸಲು ಕನಿಷ್ಠ 4 ರಿಂದ 5 ಗಂಟೆ, ಕಾರಿನಲ್ಲಿ 3 ರಿಂದ 4 ಗಂಟೆ ಸಮಯ ಬೇಕಾಗುತ್ತದೆ. ಆದರೆ ಈ ನೂತನ ರೈಲು ಮಾರ್ಗ ಪೂರ್ಣಗೊಂಡ ಬಳಿಕ ಸುಮಾರು 2 ಗಂಟೆ 30 ನಿಮಿಷಗಳಲ್ಲಿ ಬೆಂಗಳೂರು ತಲುಪಲು ಸಾಧ್ಯವಾಗಲಿದೆ. ಹೀಗಾಗಿ ಈ ಯೋಜನೆ ಮಧ್ಯ ಕರ್ನಾಟಕದ ಸಾರಿಗೆ ವ್ಯವಸ್ಥೆಗೆ ಕ್ರಾಂತಿಕಾರಿ ಬದಲಾವಣೆ ತರುವುದರಲ್ಲಿ ಸಂಶಯವೇ ಇಲ್ಲ.

ಇದನ್ನೂ ಓದಿ: ಬೆಂಗಳೂರಿನಲ್ಲಿ ದೇಶದ ಅತಿದೊಡ್ಡ ರೈಲ್ವೆ ಮೆಗಾ ಕೋಚಿಂಗ್ ಸೆಂಟರ್: ವಿ ಸೋಮಣ್ಣ ಮಹತ್ವದ ಘೋಷಣೆ

ಒಟ್ಟಿನಲ್ಲಿ, ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗ ಪೂರ್ಣಗೊಂಡರೆ ದಾವಣಗೆರೆ–ಬೆಂಗಳೂರು ಸಂಪರ್ಕಕ್ಕೆ ಹೊಸ ವೇಗ ಸಿಗಲಿದ್ದು, ವ್ಯಾಪಾರ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಿಗೆ ಮಹತ್ತರ ಉತ್ತೇಜನ ದೊರೆಯಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:05 am, Fri, 27 February 26

Follow Us