ದಾವಣಗೆರೆ: ಸ್ನೇಹಿತನ ಜೊತೆ ಸೇರಿ ತನ್ನ ಮನೆಯಲ್ಲಿ ತಾನೇ ಕದ್ದು ಠಾಣೆಗೆ ದೂರು ನೀಡಿದ್ದ ಯುವತಿ; ಸಿಕ್ಕಿಬಿದ್ದಿದ್ದು ಹೇಗೆ?

| Updated By: ಆಯೇಷಾ ಬಾನು

Updated on: Oct 09, 2024 | 9:30 AM

ತನ್ನ ಮನೆಯಲ್ಲೇ ತಾನೇ ಕಳ್ಳತನ ಮಾಡಿ ಯಾರೋ ಅಪರಿಚಿತರು ಪ್ರಜ್ಞೆ ತಪ್ಪಿಸಿ ನಗದು, ಚಿನ್ನಾಭರಣ ಕದ್ದಿದ್ದಾರೆ ಎಂದು ಕಳ್ಳತನದ ಕಥೆ ಕಟ್ಟಿ ದೂರು ನೀಡಿದ್ದ ಯುವತಿ ಹಾಗೂ ಕಳ್ಳತನಕ್ಕೆ ಸಹಕರಿಸಿದ್ದ ಆಕೆಯ ಸ್ನೇಹಿತನನ್ನು ಪೊಲೀಸರು ಬಂಧಿಸಿರುವ ಘಟನೆ ದಾವಣಗೆರೆಯ ಚನ್ನಗಿರಿಯಲ್ಲಿ ನಡೆದಿದೆ.

ದಾವಣಗೆರೆ: ಸ್ನೇಹಿತನ ಜೊತೆ ಸೇರಿ ತನ್ನ ಮನೆಯಲ್ಲಿ ತಾನೇ ಕದ್ದು ಠಾಣೆಗೆ ದೂರು ನೀಡಿದ್ದ ಯುವತಿ; ಸಿಕ್ಕಿಬಿದ್ದಿದ್ದು ಹೇಗೆ?
ಬಂಧಿತರಿಂದ ವಶಕ್ಕೆ ಪಡೆದ ಚಿನ್ನಾಭರಣ ಹಾಗೂ ನಗದು
Follow us on

ದಾವಣಗೆರೆ, ಅ.09: ತನ್ನ ಮನೆಯಲ್ಲಿ ತಾನೇ ಕದ್ದು ಕಳ್ಳತನದ (Theft) ನಾಟಕವಾಡಿದ ಕಿಲಾಡಿ ಯುವತಿ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಗರಬನ್ನಿಹಟ್ಟಿ ಗ್ರಾಮದಲ್ಲಿ ನಡೆದಿದೆ. ತಸ್ಮೀಯ ಖಾನಂ(26) ಹಾಗೂ ಮುಜೀಬುಲ್ಲಾ ಶೇಖ್ ಬಂಧಿತ (Arrest) ಆರೋಪಿಗಳು. ಬಂಧಿತರಿಂದ 9.5 ಲಕ್ಷ ಮೌಲ್ಯದ 155 ಗ್ರಾಂ ಚಿನ್ನದ ಆಭರಣ ಹಾಗೂ 1.27 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ.

ಕಳೆದ ಸೆಪ್ಟೆಂಬರ್ 30ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಿವಮೊಗ್ಗದ ಇಲಿಯಾಜ್ ನಗರದ ನಿವಾಸಿ ಮುಜೀಬುಲ್ ಶೇಖ್ ಜೊತೆ ಸೇರಿ ತಸ್ಮೀಯ ಖಾನಂ ತನ್ನದೇ ಮನೆಯ ಕಳ್ಳತನ ಮಾಡಿದ್ದಳು. ಬಳಿಕ ಮನೆಯಲ್ಲಿ ತಾನು ಒಬ್ಬಳೇ ಇದ್ದಾಗ ಯಾರೋ ಬಂದು ಮುಖಕ್ಕೆ ಬೂದಿ ಹಾಗೂ ಕೆಮಿಕಲ್ ಹಾಕಿ ಪ್ರಜ್ಞೆ ತಪ್ಪಿಸಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರು ದಾಖಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಚನ್ನಗಿರಿ ಇನ್ಸ್ ಪೆಕ್ಟರ್ ಬಾಲಚಂದ್ರ ನಾಯ್ಕ ತಂಡ ಫೋನ್ ಕಾಲ್ ಮಾಹಿತಿ ಮೇಲೆ ಮುಜೀಬುಲ್​ನನ್ನು ವಶಕ್ಕೆ ಪಡೆದಿದ್ದರು. ನಂತರ ತಸ್ಮೀಯ ಖಾನಂ ತಾನು ಮಾಡಿದ ಕಳ್ಳತನವನ್ನು ಒಪ್ಪಿಕೊಂಡಿದ್ದಾರೆ. ಪ್ರಕರಣ ಪತ್ತೆ ಹಚ್ಚಿದ ಪೊಲೀಸ್ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್​ಗೆ ಓರ್ವ ಬಲಿ, ಕೋಲಾರದಲ್ಲಿ ತಾಯಿ-ಮಗ ಬಲಿ

ಕತ್ತು ಸೀಳಿಕೊಂಡು ವ್ಯಕ್ತಿ ಆತ್ಮಹತ್ಯೆ

ಬೆಂಗಳೂರಿನ ಅಮೃತಹಳ್ಳಿ ಠಾಣಾ ವ್ಯಾಪ್ತಿಯ ಜಕ್ಕೂರಿನ ಬಳಿ ಕತ್ತು ಸೀಳಿಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕತ್ತು ಸೀಳಿಕೊಂಡು ಮೋಹನ್​ ಕುಮಾರ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿನ್ನ ಕಳವು ಕೇಸ್​​ನಲ್ಲಿ ಮೋಹನ್​ ಸಂಬಂಧಿಯನ್ನ ಪೊಲೀಸರು ಬಂಧಿಸಿದ್ದರು. ಈ ವೇಳೆ ಬಂಧಿತ ಸಂಬಂಧಿ ಪೊಲೀಸರ ವಿಚಾರಣೆಯಲ್ಲಿ ಕದ್ದ ಚಿನ್ನವನ್ನು ಮೋಹನ್ ಮನೆಯಲ್ಲಿ ಇಟ್ಟಿರೋದಾಗಿ ಹೇಳಿಕೆ ನೀಡಿದ್ದ. ಬಳಿಕ ವಿವಿಪುರಂ ಠಾಣೆಯ ಪೊಲೀಸರು ಕದ್ದ ಚಿನ್ನವನ್ನು ಮೋಹನ್ ನಿವಾಸದಲ್ಲಿ ಜಪ್ತಿ ಮಾಡಿದ್ದರು.

ಮೋಹನ್ ನಿವಾಸದಲ್ಲಿ ಚಿನ್ನ ಇಟ್ಟಿರುವ ಕಾರಣ ವಶಕ್ಕೆ ಪಡೆದಿದ್ರು. ಇನ್ನು ಚಿನ್ನ ಕಳೆದುಕೊಂಡ ವ್ಯಕ್ತಿ ಸಹ ಮೋಹನ್ ಬಳಿ ಗಲಾಟೆ ಮಾಡಿದ್ದ. ಇದರಿಂದ ಮನನೊಂದು ಮೋಹನ್​ ಆತ್ಮಹತ್ಯೆಗೆ ಶರಣಾದ ಶಂಕೆ ವ್ಯಕ್ತವಾಗಿದೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ BNS 108 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ