ದೀಪಾವಳಿಗೆ ಖಾಸಗಿ ಬಸ್‌ ದುಬಾರಿ: ಮಾಲೀಕರಿಗೆ ಸಾರಿಗೆ ಇಲಾಖೆಗೆ ಖಡಕ್ ಎಚ್ಚರಿಕೆ!

| Updated By: ರಮೇಶ್ ಬಿ. ಜವಳಗೇರಾ

Updated on: Oct 25, 2024 | 8:08 PM

ಈ ಬಾರಿ ದೀಪಾವಳಿ ಹಬ್ಬ ವಾರಾಂತ್ಯದ ವೇಳೆ ಬಂದಿರುವುದರಿಂದ ಸಾಲು ಸಾಲು ರಜೆಗಳಿವೆ. ಶುಕ್ರವಾರ ಕನ್ನಡ ರಾಜ್ಯೋತ್ಸವ ಸಹ ಇರುವುದರಿಂದ ಊರಿಗೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇನ್ನು ಖಾಸಗಿ ಬಸ್‌ ಮಾಲೀಕರು ಸಹ ಟಿಕೆಟ್​ ದರ ಹೆಚ್ಚಳ ಮಾಡಲಿದ್ದಾರೆ. ಇದರಿಂದ ಎಚ್ಚೆತ್ತ ಸಾರಿಗೆ ಇಲಾಖೆ, ಖಾಸಗಿ ಬಸ್ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದೆ. ಆದ್ರೆ, ಇದು ಹುಲಿ ಬಂತು ಹುಲಿ ಕಥೆಯಾಗದಿರಲಿ.

ದೀಪಾವಳಿಗೆ ಖಾಸಗಿ ಬಸ್‌ ದುಬಾರಿ: ಮಾಲೀಕರಿಗೆ ಸಾರಿಗೆ ಇಲಾಖೆಗೆ ಖಡಕ್ ಎಚ್ಚರಿಕೆ!
ಖಾಸಗಿ ಬಸ್​​ ಮಾಲೀಕರಿಗೆ ಎಚ್ಚರಿಕೆ
Follow us on

ಬೆಂಗಳೂರು, (ಅಕ್ಟೋಬರ್ 25): ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ತಿಂಗಳಾಂತ್ಯ ಹಾಗೂ ನವೆಂಬರ್‌ ಮೊದಲ ವಾರದಲ್ಲಿ ಸಾಲು ಸಾಲು ರಜೆಗಳಿದ್ದು, ಖಾಸಗಿ ಬಸ್‌ ಮಾಲೀಕರಿಗೆ ಹಬ್ಬವೋ ಹಬ್ಬ. ಯಾಕಂದ್ರೆ ಸಾಲು ಸಾಲು ರಜೆ ಇರುವುರಿಂದ ಟಿಕೆಟ್‌ ದರ ಹೆಚ್ಚಳದ ಚಿಂತನೆ ನಡೆಸಿದ್ದಾರೆ, ಆದ್ರೆ, ಇದೀಗ ಇದಕ್ಕೆ ರಾಜ್ಯ ಸಾರಿಗೆ ಇಲಾಖೆ ಕಡಿವಾಣ ಹಾಕಲು ಮುಂದಾಗಿದ್ದು, ದೀಪಾವಳಿ ಹಬ್ಬದ ಪ್ರಯುಕ್ತ  ಆನ್ ಲೈನ್ ಮೂಲಕ ಟಿಕೆಟ್ ದರವನ್ನು ಹೆಚ್ಚಿಸಿದ್ರೆ ಕಠಿಣ ಕ್ರಮಕೈಗೊಳ್ಳುವುದಾಗಿ ಖಾಸ್ ಬಸ್ ಮಾಲೀಕರಿಗೆ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ರಾಜ್ಯ ಸಾರಿಗೆ ಇಲಾಖೆ, ದೀಪಾವಳಿ ಹಬ್ಬದ ಆನ್ ಲೈನ್ ಮೂಲಕ ಪ್ರಯುಕ್ತ ಟಿಕೆಟ್ ದರವನ್ನು ಹೆಚ್ಚಿಸಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜನರಿಂದ ಸಾಮಾನ್ಯ ಟಿಕೆಟ್ ದರಕ್ಕಿಂತ ಹೆಚ್ಚು ಸಂಗ್ರಹಿಸಬಾರದು. ದುಪ್ಪಟ್ಟು ಹಣ ಸಂಗ್ರಹಿಸುವ ವಾಹನ ಮಾಲೀಕರ ಪರ್ಮಿಟ್ ಹಾಗೂ ನೋಂದಣಿ ಪತ್ರ ಅಮಾನತು ಮಾಡಲಾಗುವುದು ಎಂದು ಖಾಸಗಿ ಬಸ್ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Diwali Special Trains: ದೀಪಾವಳಿ ಸ್ಪೆಷಲ್, ಕರ್ನಾಟಕದ ಹಲವು ನಿಲ್ದಾಣಗಳಿಗೆ ವಿಶೇಷ ರೈಲು; ಇಲ್ಲಿದೆ ವಿವರ

ಅಲ್ಲದೇ ಸಾರ್ವಜನಿಕ ಸೇವಾ ವಾಹನಗಳಲ್ಲಿ ಸ್ಪೋಟಕ ಸಾಮಗ್ರಿಗಳ ಸಾಗಾಣಿಕೆಗೆ ‌ನಿಷೇಧಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿರುವ ಸಾರಿಗೆ ಇಲಾಖೆ, ಖಾಸಗಿ ಬಸ್ ಗಳು ಹೆಚ್ಚಿನ ಟಿಕೆಟ್ ದರ ಸಂಗ್ರಹಿಸಿದ್ರೆ ಸಾರ್ವಜನಿಕರು ದೂರು ನೀಡುವಂತೆ ಮನವಿ ಮಾಡಿದೆ. ನಿಯಂತ್ರಣ ಕೊಠಡಿ ಸಂಖ್ಯೆ-9449863429,9449863426 ಕೆರೆ ಮಾಡಿ ಸಾರ್ವಜನಿಕರು ದೂರು ಸಲ್ಲಿಸಬಹುದು ಎಂದು ರಾಜ್ಯ ಸಾರಿಗೆ ಇಲಾಖೆಯಿಂದ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ.

ಹುಲಿ ಬಂತು ಹುಲಿ ಕಥೆ

ಹಬ್ಬದ ಸಂದರ್ಭದಲ್ಲಿ ಬೇಕಾಬಿಟ್ಟಿ ದರ ಹೆಚ್ಚಿಸುವ ವಿಚಾರದಲ್ಲಿ ಸಾರಿಗೆ ಇಲಾಖೆಯು ಖಾಸಗಿ ಬಸ್‌ಗಳಿಗೆ ನೀಡುತ್ತಿರುವ ಎಚ್ಚರಿಕೆ ಹುಲಿ ಬಂತು ಹುಲಿ ಕಥೆಯಂತಾಗುತ್ತಿದೆ. ಪ್ರತಿ ಹಬ್ಬ ಬಂದಾಗಲೂ ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ಸುಲಿಗೆ ಮಾಡುತ್ತಿವೆ. ಅದಕ್ಕೆ ಬದಲಾಗಿ ಸಾರಿಗೆ ಇಲಾಖೆ ಕೆಲ ಬಸ್‌ಗಳನ್ನು ತಪಾಸಣೆ ನಡೆಸಿ ಅವುಗಳ ಮೇಲೆ ದಂಡ ವಿಧಿಸಿ ಸುಮ್ಮನಾಗುತ್ತಿದೆ. ಅಲ್ಲದೆ, ಬೇಕಾಬಿಟ್ಟಿಯಾಗಿ ದರ ಹೆಚ್ಚಳ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡುತ್ತಿದೆ. ಆದರೆ, ಖಾಸಗಿ ಬಸ್‌ಗಳು ಮಾತ್ರ ಸಾರಿಗೆ ಇಲಾಖೆ ಎಚ್ಚರಿಕೆಗೆ ಯಾವುದೇ ರೀತಿಯಲ್ಲೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಬದಲಿಗೆ ಇದೀಗ ದೀಪಾವಳಿ ಹಬ್ಬದ ಸಂದರ್ಭದಲ್ಲೂ ಮಾಮೂಲಿಗಿಂತ ಮೂರು ಪಟ್ಟು ಹೆಚ್ಚಿನ ಪ್ರಯಾಣ ದರ ವಸೂಲಿಗೆ ಮುಂದಾಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ