ವೃತ್ತಿಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ: ರೋಹಿಣಿ ಸಿಂಧೂರಿ–ರೂಪಾ ಕಲಹಕ್ಕೆ ಸುಪ್ರೀಂಕೋರ್ಟ್ ಬ್ರೇಕ್

ಕರ್ನಾಟಕದ ಇಬ್ಬರು ಪ್ರಭಾವಿ ಮಹಿಳಾ ಅಧಿಕಾರಿಗಳಾದ ಐಎಎಸ್ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಡಿ. ರೂಪಾ ಮೌದ್ಗಿಲ್ ನಡುವಿನ ಜಟಾಪಟಿಗೆ ಬ್ರೇಕ್ ಹಾಕಲು ಸುಪ್ರೀಂಕೋರ್ಟ್ ಮುಂದಾಗಿದೆ. ಕೆಲ ಕಿವಿ ಮಾತುಗಳನ್ನು ಹೇಳಿ ಇಬ್ಬರು ಅಧಿಕಾರಿಗಳ ಕಾನೂನು ಸಮರಕ್ಕೆ ಸುಪ್ರೀಂ ಕೋರ್ಟ್ ಈಗ ಸಂಧಾನದ ಹಾದಿ ತೋರಿಸಿದೆ. ಇದಕ್ಕೆ ಸಂಧಾನಕಾರರನ್ನ ಸಹ ನೇಮಕ ಮಾಡಲಾಗಿದೆ.

ವೃತ್ತಿಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ: ರೋಹಿಣಿ ಸಿಂಧೂರಿ–ರೂಪಾ ಕಲಹಕ್ಕೆ ಸುಪ್ರೀಂಕೋರ್ಟ್ ಬ್ರೇಕ್
ರೋಹಿಣಿ ಸಿಂಧೂರಿ, ಡಿ ರೂಪಾ
Edited By:

Updated on: Jun 12, 2026 | 9:07 PM

ನವದೆಹಲಿ, (ಜೂನ್ 12): ಕರ್ನಾಟಕದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (IAS Officer Rohini Sindhuri) ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್(IPS Officer Roopa D Moudgil) ನಡುವಿನ ದೀರ್ಘಕಾಲದ ಕಾನೂನು ಸಮರಕ್ಕೆ ಸುಪ್ರೀಂ ಕೋರ್ಟ್ (Supreme Court) ಈಗ ಸಂಧಾನದ ಹಾದಿ ತೋರಿಸಿದೆ. ಇಬ್ಬರು ಅಧಿಕಾರಿಗಳ ನಡುವಿನ ಮಾನಹಾನಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಗೆ (Mediation) ವಹಿಸಿದ್ದು, ಇಬ್ಬರೂ ಉನ್ನತ ಹುದ್ದೆಯಲ್ಲಿದ್ದು, ಸಾರ್ವಜನಿಕವಾಗಿ ಜಗಳವಾಡುವುದು ಸರಿಯಲ್ಲ ಎಂದು ಹೇಳಿ ಸಂಧಾನ ಮಾಡಿಕೊಳ್ಳುವಂತೆ ಕಿವಿ ಮಾತು ಹೇಳಿದೆ. ಅಲ್ಲದೇ ಮಾನನಷ್ಟ ಮೊಕದ್ದಮೆಯನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಿ ಎಂದು ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ (Retired Justice Kurian Joseph) ಅವರನ್ನು ಸಂಧಾನಕಾರರನ್ನಾಗಿ ನೇಮಕ ಮಾಡಿದೆ.

ಮುಖ್ಯಾಂಶಗಳು

  • IAS ರೋಹಿಣಿ ಸಿಂಧೂರಿ- IPS ಡಿ. ರೂಪಾ ನಡುವೆ ಜಟಾಪಟಿಗೆ ಬ್ರೇಕ್ ಹಾಕಲು ಮುಂದಾದ ಕೋರ್ಟ್
  • ಇಬ್ಬರ ನಡುವಿನ ಮಾನನಷ್ಟ ಮೊಕದ್ದಮೆ ಕೇಸ್‌ನಲ್ಲಿ ಸಂಧಾನಕ್ಕೆ ಸೂಚನೆ
  • ಕೋರ್ಟ್‌ನ ಹೊರಗಡೆ ಇಬ್ಬರೂ ಕುಳಿತು ಮಾತನಾಡಿ ವಿವಾದ ಬಗೆಹರಿಸಿಕೊಳ್ಳಿ ಎಂದು ಕಿವಿಮಾತು
  • ಇಬ್ಬರು ಮಹಿಳಾ ಅಧಿಕಾರಿಗಳ ನಡುವೆ ರಾಜಿಗೆ ನ್ಯಾಯಾಧೀಶರನ್ನು ನೇಮಿಸಿದ ಸುಪ್ರೀಂಕೋರ್ಟ್
  • ಸಂಧಾನಕಾರರಾಗಿ ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರನ್ನ ನೇಮಿಸಿದ ಸುಪ್ರೀಂ

ಸುಪ್ರೀಂ ಕೋರ್ಟ್ ಹೇಳಿದ್ದೇನು?

ಇಂದು (ಜೂನ್ 12) ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ಸಚ್‌ದೇವ್ ಅವರ ಪೀಠವು ,   ಇಬ್ಬರು ಉನ್ನತ ಅಧಿಕಾರಿಗಳ ನಡುವಿನ ಸುದೀರ್ಘ ಜಗಳದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಇಬ್ಬರೂ ಅತ್ಯುತ್ತಮ ಅಧಿಕಾರಿಗಳು. ಆದರೆ ಈ ರೀತಿ ನ್ಯಾಯಾಲಯದ ಮೆಟ್ಟಿಲೇರಿ ಜಗಳ ಮಾಡುವ ಮೂಲಕ ಪರಸ್ಪರ ಅವರ ವೃತ್ತಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಪ್ರಕರಣವನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಇಬ್ಬರ ಕಡೆ ವಕೀಲರಿಗೆ ಸೂಚಿಸಿದ್ದು, ಕೋರ್ಟ್‌ನ ಹೊರಗಡೆ ಇಬ್ಬರೂ ಕುಳಿತು ಮಾತನಾಡಿ ವಿವಾದ ಬಗೆಹರಿಸಿಕೊಳ್ಳಲು ಸಂಧಾನಕಾರರಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯಾಗಿರುವ ಕುರಿಯನ್ ಜೋಸೆಫ್ ಅವರನ್ನು ನೇಮಿಸಿದೆ.

ಇದನ್ನೂ ಓದಿ: ಜಡ್ಜ್​ ಮನವಿಗೂ ಬಗ್ಗದ IPS-IAS:ಸುಪ್ರೀಂಕೋರ್ಟ್​ನಲ್ಲಿ ಸಿಂಧೂರಿ-ರೂಪ ಪ್ರತಿಷ್ಠೆ ಜಿದ್ದು ಹೇಗಿತ್ತು ನೋಡಿ

ಈ ಹಿಂದೆ ರೋಹಿಣಿ ಸಿಂಧೂರಿ ಅವರು ಸಂಧಾನಕ್ಕೆ ಒಪ್ಪಿಕೊಂಡಿರಲಿಲ್ಲ. ಆದ್ರೆ, ಇಂದು ಸುಪ್ರೀಂಕೋರ್ಟ್ ಕೊಟ್ಟ ಕೆಲ ಸಲಹೆ ಸೂಚನೆಗಳ ಮೇರೆಗೆ ರೋಹಿಣಿ ಸಿಂಧೂರಿ ಈಗ ಸಂಧಾನಕ್ಕೆ ಒಪ್ಪಿಕೊಂಡಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಜೋಸೆಫ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಯುವ ಸಾಧ್ಯತೆ ಇದೆ.

ಪ್ರಕರಣದ ಹಿನ್ನೆಲೆ

2023ರಲ್ಲಿ ಡಿ. ರೂಪಾ ಅವರು ರೋಹಿಣಿ ಸಿಂಧೂರಿ ವಿರುದ್ಧ ಫೇಸ್‌ಬುಕ್‌ನಲ್ಲಿ ಸರಣಿ ಪೋಸ್ಟ್‌ಗಳನ್ನು ಹಾಕುವ ಮೂಲಕ ಈ ವಿವಾದ ಆರಂಭವಾಗಿತ್ತು. ರೋಹಿಣಿ ಸಿಂಧೂರಿ ಅವರು ಜಾಲಹಳ್ಳಿಯಲ್ಲಿ ಬೃಹತ್ ಬಂಗಲೆ ನಿರ್ಮಿಸಿದ್ದಾರೆ ಮತ್ತು ತಮ್ಮ ಆಸ್ತಿ ವಿವರದಲ್ಲಿ ಅದನ್ನು ಘೋಷಿಸಿಲ್ಲ ಎಂದು ರೂಪಾ ಆರೋಪಿಸಿದ್ದರು. ಅಲ್ಲದೆ ಅವರ ಕೆಲವು ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಆರೋಪ-ಪ್ರತ್ಯಾರೋಪಗಳು ಸಾರ್ವಜನಿಕವಾಗಿ ಭಾರಿ ಸದ್ದು ಮಾಡಿದ್ದವು. ಉನ್ನತ ಅಧಿಕಾರಿಗಳ ಈ ಜಗಳದಿಂದ ಆಡಳಿತದ ಮೇಲೂ ಪರಿಣಾಮ ಬೀರುತ್ತಿರುವುದನ್ನು ಗಮನಿಸಿದ ಅಂದಿನ ರಾಜ್ಯ ಸರ್ಕಾರ, ಇಬ್ಬರೂ ಅಧಿಕಾರಿಗಳಿಗೆ ಯಾವುದೇ ಹುದ್ದೆ ನೀಡದೆ ಎತ್ತಂಗಡಿ ಮಾಡಿತ್ತು.

ರೂಪಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದ ಸಿಂಧೂರಿ

ಇನ್ನು ರೂಪಾ ಅವರ ಆರೋಪಗಳಿಂದ ತಮ್ಮ ಘನತೆಗೆ ಧಕ್ಕೆಯಾಗಿದೆ ಮತ್ತು ಮಾನಸಿಕ ಕಿರುಕುಳವಾಗಿದೆ ಎಂದು ಆರೋಪಿಸಿ ರೋಹಿಣಿ ಸಿಂಧೂರಿ, ರೂಪಾ ಅವರಿಗೆ ಲೀಗಲ್ ನೋಟಿಸ್ ನೀಡಿದ್ದರು. ಬೇಷರತ್ ಕ್ಷಮೆಯಾಚಿಸಬೇಕು ಹಾಗೂ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದರು.

ಮಾರ್ಚ್ 2023 ರಲ್ಲಿ ಬೆಂಗಳೂರಿನ ನ್ಯಾಯಾಲಯವು ಸಿಂಧೂರಿ ಅವರ ದೂರನ್ನು ಪುರಸ್ಕರಿಸಿ ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿಕೊಂಡಿತ್ತು. ಬಳಿಕ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ರೂಪಾ ಹೈಕೋರ್ಟ್ ಮೆಟ್ಟಿಲೇರಿದ್ದರಾದರೂ, ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿ, ವಿಚಾರಣೆ ಎದುರಿಸುವಂತೆ ಸೂಚಿಸಿತ್ತು. ಇದೀಗ ಈ ಪ್ರಕರಣ ಮತ್ತೆ ಸುಪ್ರೀಂ ಕೋರ್ಟ್ ಮುಂದೆ ಬಂದಿದ್ದು, ಇಬ್ಬರ ವೃತ್ತಿಜೀವನದ ದೃಷ್ಟಿಯಿಂದ ಈ ಹಗೆತನವನ್ನು ಕೈಬಿಟ್ಟು, ನಿವೃತ್ತ ನ್ಯಾಯಮೂರ್ತಿಗಳ ಸಮ್ಮುಖದಲ್ಲಿ ರಾಜಿ ಮಾಡಿಕೊಳ್ಳುವಂತೆ ಸೂಚಿಸಿದೆ. ಈ ಮೂಲಕ ಕೋರ್ಟ್, ಹಲವು ವರ್ಷಗಳಿಂದ ಇಬ್ಬರು ಅಧಿಕಾರಿಗಳ ನಡುವಿನ ನಡೆಯುತ್ತಿದ್ದ ಜಟಾಪಟಿಗೆ ಬ್ರೇಕ್ ಹಾಕಲು ಮುಂದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:07 pm, Fri, 12 June 26

ಹರೀಶ್ ಜಿ.ಆರ್​.
Follow Us