
ಬೆಂಗಳೂರು, (ಆಗಸ್ಟ್ 18): ಧರ್ಮಸ್ಥಳದಲ್ಲಿ (Dharmasthala Case) ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಅನಾಮಿಕ ವ್ಯಕ್ತಿಯೋರ್ವ ಹೇಳಿದ್ದು, ಅದರಂತೆ ಸರ್ಕಾರ ಎಸ್ಐಟಿ (SIT) ರಚಿಸಿದ್ದು, ತನಿಖೆ ತೀವ್ರಗೊಳಿಸಿದೆ. ಇದರೊಂದಿಗೆ ಈ ಧರ್ಮಸ್ಥಳ ಪ್ರಕರಣ ರಾಷ್ಟ್ರಮಟ್ಟದಲ್ಲಿ ಭಾರೀ ಸದ್ದು ಮಾಡಿದೆ. ಇನ್ನು ಮಾಸ್ಕ್ ಮ್ಯಾನ್ ಹೇಳಿದಂತೆ ಎಸ್ಐಟಿ ತನಿಖೆ ನಡೆಸಿದ್ದಾರೆ. ಇನ್ನು ಶವ ಹೂತಿರುವ ಸ್ಥಳಗಳಲ್ಲಿ ಅಗೆದು ಅಗೆದು ನೋಡಿದ್ದಾರೆ. ಸುಮಾರು ಹತ್ತಾರು ಸ್ಥಳಗಳಲ್ಲಿ ಅಗೆದು ಉತ್ಖನನ ನಡೆಸಿದ್ದು, ಈ ವೇಳೆ ಎರಡು ಜಾಗದಲ್ಲಿ ಅಸ್ಥಿಪಂಜರ, ಮಾನವನ ಮೂಳೆಗಳು ಪತ್ತೆಯಾಗಿವೆ. ಇನ್ನು ಈ ಸಂಬಂಧ ಗೃಹ ಸಚಿವ ಡಾ.ಜಿ ಪರಮೇಶ್ವರ್ (Dr G parameshwar) ಅವರು ಸದನದಲ್ಲಿ ಉತ್ತರ ನೀಡಿದ್ದು,ಇನ್ನೂ ತನಿಖೆ ಆರಂಭವಾಗಿಲ್ಲ, ಅನಾಲಿಸಿಸ್ ಬಂದ ಮೇಲೆ ತನಿಖೆ ಶುರುವಾಗುತ್ತೆ. ಇನ್ನು ಅಪರಿಚಿತ ಧರ್ಮಸ್ಥಳದ ಎಲ್ಲಾ ಕಡೆ ತೋರಿಸಿದರೆ ಅಗೆಯುವುದಿಲ್ಲ.ಉತ್ಖನನ ಸ್ಥಗಿತಗೊಳಿಸುವ ಬಗ್ಗೆ ಎಸ್ಐಟಿಯವರೇ ನಿರ್ಧರಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಧರ್ಮಸ್ಥಳದ ಬಗ್ಗೆ ಮಾಹಿತಿ ನೀಡುವಂತೆ ವಿಪಕ್ಷಗಳು ಪಟ್ಟು ಹಿಡಿದಿದ್ದು, ಇದಕ್ಕೆ ಇಂದು (ಆಗಸ್ಟ್ 18) ಗೃಹ ಸಚಿವ ಪರಮೇಶ್ವರ್ ಉತ್ತರ ನೀಡಿದ್ದಾರೆ. 25 ವರ್ಷಗಳಿಂದ ಧರ್ಮಸ್ಥಳದಲ್ಲಿ ಮಹಿಳೆಯರು ಕಾಣೆಯಾಗಿರುವ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷೆ ಪತ್ರ ಬರೆದಿದ್ದು, ಅದರಂತೆ ಜುಲೈ 19ರಂದು ಎಸ್ ಐ ಟಿ ರಚನೆ ಆಗಿದೆ. ಎಸ್ ಐಟಿಯಲ್ಲಿ ಡಾ. ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ಅನುಚೇತು, ಸೌಮ್ಯ ಲತಾ, ಜಿತೇಂದ್ರ ಕುಮಾರ್ ಎಸ್ಐಟಿ ತಂಡ ತನಿಖೆ ನಡೆಸಿದೆ. ಎಸ್ ಐ ಟಿಯವರು ಕರೆದು ಅನಾಮಿಕನನ್ನು 161 ಹೇಳಿಕೆ ತೆಗೆದುಕೊಂಡಿದ್ದಾರೆ. ಆ ವೇಳೆ ಅನಾಮಿಕ ವ್ಯಕ್ತಿ ಶವಗಳನ್ನ ಎಲ್ಲೆಲ್ಲಿ ಹೊತಿದ್ದೆನೆ ಎಂದು ಹೇಳಿದ್ದಾನೆ. ಆತ ಮಾಹಿತಿ ಆಧರಿಸಿ ಎಸ್ ಐ ಟಿ ತನಿಖೆ ಆರಂಭಿಸಿದೆ ಎಂದು ತಿಳಿಸಿದರು.
ಉತ್ಖನನಕ್ಕೂ ಮುನ್ನ ಅಪರಿಚಿತನಿಂದ ಎಸ್ಐಟಿ ಹೇಳಿಕೆ ಪಡೆದಿತ್ತು. ಅಪರಿಚಿತನಿಂದ ಹೇಳಿಕೆ ಪಡೆದ ಬಳಿಕ ಮ್ಯಾಪಿಂಗ್ ಮಾಡಲಾಗಿದ್ದು, ಉತ್ಖನನ ನಡೆಸಿದ ಪೈಕಿ 2 ಜಾಗದಲ್ಲಿ ಅಸ್ಥಿಪಂಜರ, ಮೂಳೆ, ಬುರುಡೆ ಪತ್ತೆಯಾಗಿದೆ. ಒಂದು ಜಾಗದಲ್ಲಿ ಅಸ್ಥಿಪಂಜರ ಸಿಕ್ಕರೆ, ಮತ್ತೊಂದು ಜಾಗದಲ್ಲಿ ಮೂಳೆ, ಬುರುಡೆ ಪತ್ತೆಯಾಗಿದ್ದು, ಅವುಗಳನ್ನು ಎಫ್ಎಸ್ಎಲ್ಗೆ ಕಳಿಸಲಾಗಿದೆ. ಹೀಗಾಗಿ ತನಿಖೆ ಇನ್ನೂ ಆರಂಭವಾಗಿಲ್ಲ. ಎಫ್ಎಸ್ಎಲ್ ವರದಿ ಬಂದ ಬಳಿಕ ಅಧಿಕರತವಾಗಿ ತನಿಖೆ ಆರಂಭವಾಗುತ್ತೆ. ಆದ್ರೆ, ಅಪರಿಚಿತ ಧರ್ಮಸ್ಥಳದ ಎಲ್ಲಾ ಕಡೆ ತೋರಿಸಿದರೆ ಅಗೆಯುವುದಿಲ್ಲ.ಉತ್ಖನನ ಸ್ಥಗಿತಗೊಳಿಸುವ ಬಗ್ಗೆ ಎಸ್ಐಟಿಯವರೇ ನಿರ್ಧರಿಸಿದ್ದಾರೆ ಎಂದು ಹೇಳಿದರು.
ಈವರೆಗೆ ಅಸ್ತಿಪಂಜರ ಸಿಕ್ಕಿದ ಜಾಗಗಳ ಹಾಗೂ ಮೂಳೆಗಳ ಬಗ್ಗೆ ವಿಶ್ಲೇಷಣೆ ಆಗಬೇಕಿದೆ. ಈವರೆಗೆ ತನಿಖೆಯೇ ಆರಂಭ ಆಗಿಲ್ಲ. ಇದೆಲ್ಲವೂ ತನಿಖೆಯ ಪೂರ್ವ ಭಾಗವಾಗಿದೆ. ಅಸ್ತಿಪಂಜರದ ವರದಿಗಳು, ಮಣ್ಣಿನ ಪರೀಕ್ಷಾ ವರದಿಗಳು ಹಾಗೂ ವಿಶ್ಲೇಷಣಾ ವರದಿಗಳು ಬಂದ ನಂತರವೇ ಅಸಲಿ ತನಿಖೆ ಆರಂಭ ಆಗಲಿದೆ. ಇನ್ನು ಮುಂದೆ ತನಿಖೆ ತುಂಬಾ ಗಂಭೀರವಾಗಿ ನಡೆಯುತ್ತದೆ. ಪಾರದರ್ಶಕವಾಗಿ, ಯಾರದೇ ಒತ್ತಡಕ್ಕೆ ಮಣಿಯದ ರೀತಿಯಲ್ಲಿ ತನಿಖೆಯ ದಿಕ್ಕನ್ನು ತಪ್ಪಿಸಲು ಅವಕಾಶ ಇಲ್ಲದ ರೀತಿಯಲ್ಲಿ ತನಿಖೆಯನ್ನು ನಡೆಸಲಾಗುತ್ತಿದೆ. ದೂರುದಾರ ವ್ಯಕ್ತಿ ತೋರಿಸಿದ ಕಡೆಗಳಲ್ಲಿ ಅಗಿಯಲಾಗುತ್ತದೆ. ಅವನು ಇಡೀ ಧರ್ಮಸ್ಥಳವನ್ನು ಅಗೆಯಲು ಹೇಳಿದರೆ ಅದನ್ನು ಮಾಡುವುದಿಲ್ಲ. ಆದರೆ, ಕೆಲವೊಂದು ಜಾಗಗಳಲ್ಲಿ ತೀರಾ ಅನುಮಾನ ಇದ್ದಲ್ಲಿ ಅಗೆದು ಶೋಧ ಮಾಡಲಾಗುತ್ತದೆ ಎಂದರು.
ಮಣ್ಣಿನ ಮಾದರಿಯನ್ನು ವಿಶ್ಲೇಷಣೆ ಮಾಡಿದಾಗ ರಾಸಾಯನಿಕ ಅಂಶಗಳಲ್ಲಿ ಮನುಷ್ಯನ ಮೂಳೆಗಳು ಕರಗಿರುವ ಬಗ್ಗೆ ವರದಿ ಇದೆಯೇ ಎಂಬುದನ್ನು ಕಾಯಬೇಕಿದೆ. ಆವರೆಗೆ ಎಸ್ಐಟಿ ತನಿಖೆಯನ್ನು ಸ್ಥಗಿತ ಮಾಡಲಾಗುತ್ತದೆ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದರು.
ಹೆಚ್ಚುವರಿ ಗೌರ್ಮೆಂಟ್ ಅಥಾರಿಟಿ ಹೇಳಿದ ಹಾಗೆ ತನಿಖೆ ಆಗುತ್ತಿದೆ. 164 ಹೇಳಿಕೆಯಲ್ಲಿ ಅವನು ಏನು ಹೇಳಿದ್ದಾನೆ ಗೊತ್ತಿಲ್ಲ. ಎಕ್ಸ್ಟ್ರಾ ಕಾನ್ಸ್ಟಿಟ್ಯೂಷನ್, ಹೆಚ್ಚಿನ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನುವುದು ಏನೂ ಇಲ್ಲ.ನಾನು ಗೃಹ ಸಚಿವನಾಗಿ ಇರುವವರೆಗೂ ಈ ಒಂದು ತನಿಕೆಯಲ್ಲಿ ಯಾವುದೇ ಎಕ್ಸ್ಟ್ರಾ ಕಾನ್ಸ್ಟಿಟ್ಯೂಷನ್ ಆಕ್ಟಿವಿಟಿ ಆಗಲು ಬಿಡುವುದಿಲ್ಲ. ಸತ್ಯ ಹೊರಗೆ ತರುತ್ತವೆ. ಪ್ರತಿಯೊಂದು ಷಡ್ಯಂತ್ರ ಇದ್ರೆ ಅದು ಆಚೆ ಬರುತ್ತದೆ . ತಪ್ಪು ಸುಳ್ಳು ಹೇಳಿದರೆ ಅದು ಆಚೆಗೆ ಬರುತ್ತದೆ. ಆತ (ಅನಾಮಿಕ ವ್ಯಕ್ತಿ ಮಾಸ್ಕ್ ಮ್ಯಾನ್) ತಪ್ಪು ಒಪ್ಪಿಕೊಂಡಿದ್ದಾನೆ ಎನ್ನುವ ಸುದ್ದಿ ಹರಿದಾಡುತ್ತಿರುವುದು ಸತ್ಯ ಅಲ್ಲ ಎಂದು ಸ್ಪಷ್ಟಪಡಿಸಿದರು.
ಮೇಲಿನ ಎಲ್ಲಾ ಅಂಶಗಳನ್ನು ಗೃಹ ಸಚಿವ ಪರಮೇಶ್ವರ್ ಅವರು ಸದನದ ಮುಂದೆ ತಿಳಿಸಿದರು. ಆದ್ರೆ, ಇದಕ್ಕೆ ಆಕ್ಷೇಪಸಿದ ವಿಪಕ್ಷ ನಾಯಕರು, ಸುಮ್ನೆ ಏನೇನೋ ಹೇಳಿದ್ದಾರೆ. ಎಸ್ಐಟಿ ತನಿಖೆಯ ಮಧ್ಯಂತರ ವರದಿ ಬಗ್ಗೆ ಮಾಹಿತಿ ನೀಡಬೇಕೆಂದು ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್ ಮಧ್ಯಂತರ ವರದಿ ಇನ್ನೂ ಬಂದಿಲ್ಲ ಎಂದು ಉತ್ತರಿಸಿದರು.
Published On - 4:33 pm, Mon, 18 August 25