ಮಗಳ ಜೊತೆ ಅನೈತಿಕ ಸಂಬಂಧ: ಯುವಕನನ್ನು ಕೊಂದು 24 ಗಂಟೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ತಂದೆ

ಒಟ್ಟಿಗೆ ಗಾರೆ ಕೆಲಸ ಮಾಡಿಕೊಂಡು ಇದ್ದ ಯುವಕನ್ನು ವ್ಯಕ್ತಿಯೋರ್ವ ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ 24 ಗಂಟೆಗಳಲ್ಲಿ ಕೊಲೆ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಷ್ಟಕ್ಕೂ ಕೊಲೆ ಆರೋಪಿ ಯುವಕನ್ನು ಕೊಲೆ ಮಾಡಿದ್ಯಾಕೆ? ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.

ಮಗಳ ಜೊತೆ ಅನೈತಿಕ ಸಂಬಂಧ: ಯುವಕನನ್ನು ಕೊಂದು 24 ಗಂಟೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ತಂದೆ
ಕೊಲೆಯಾದ ಮೌಲಾಲಿ
Edited By:

Updated on: Sep 28, 2023 | 3:03 PM

ಹುಬ್ಬಳ್ಳಿ, (ಸೆಪ್ಟೆಂಬರ್ 28): ತನ್ನ ಮಗಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಯುವಕನೋರ್ವನನ್ನು ಕೊಚ್ಚಿ ಕೊಂದ 24 ಗಂಟೆಯೊಳಗೆ ಆರೋಪಿ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರದ ನಿವಾಸಿ ಪರಸಪ್ಪ‌ ಆತ್ಮಹತ್ಯೆ ಮಾಡಿಕೊಂಡ ಆರೋಪಿ. ಪರಸಪ್ಪ ನಿನ್ನೆ(ಸೆಪ್ಟೆಂಬರ್ 27) ಹುಬ್ಬಳ್ಳಿಯ ಸಿಲ್ವರ್ ಟೌನ್‌‌ನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮೌಲಾಲಿ ಎನ್ನುವ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ. ಇದೀಗ ಪರಸಪ್ಪ, ಇಂದು (ಸೆ.29) ಹುಬ್ಬಳ್ಳಿ ಅಪೂರ್ವ ನಗರದ ಪ್ರಮುಖ ರಸ್ತೆಯಲ್ಲಿರುವ ಗಿಡಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ಇನ್ಸ್ಟಾಗ್ರಾಮ್​ನಲ್ಲಿ ಕಿತ್ತಾಟ: ಬೆಳಗಾವಿಯಲ್ಲಿ ಬಿತ್ತು ಬಾಲಕನ ಹೆಣ

ಮೌಲಾಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೊಡ ತಾಲೂಕಿನ ಮರಗಡಿ ನಿವಾಸಿಯಾಗಿದ್ದು, ಗಾರೆ ಕೆಲಸದ ನಿಮಿತ್ತವಾಗಿ ಹುಬ್ಬಳ್ಳಿಗೆ ಬಂದಿದ್ದ. ಮತ್ತೊಂದೆಡೆ ಆತ್ಮಹತ್ಯೆ ಮಾಡಿಕೊಂಡಿರುವ ಪರಸಪ್ಪ ಕುಟುಂಬ ಸಹ ಗಾರೆ ಕೆಲಸಕ್ಕೆಂದು ಹುಬ್ಬಳ್ಳಿಗೆ ಬಂದಿತ್ತು. ಹೀಗಾಗಿ ಮೌಲಾಲಿ ಸಹ ಪರಸಪ್ಪನ ಕುಟುಂಬದ ಜೊತೆ ಗಾರೆ ಕೆಲಸ ಮಾಡಿಕೊಂಡಿದ್ದ. ಎಲ್ಲರೂ ನಿರ್ಮಾಣ ಹಂತದಲ್ಲಿ ಕಟ್ಟಡದಲ್ಲಿ ವಾಸವಿದ್ದರು. ಆದ್ರೆ, ಮೌಲಾಲಿ, ಪರಸಪ್ಪ‌ನ ವಿವಾಹಿತ ಮಗಳ ಜೊತೆಗೆ ಅನೈತಿಕ ಸಂಬಂಧ ಬೆಳೆಸಿದ್ದ. ಇದು ಪರಸಪ್ಪನಿಗೆ ಗೊತ್ತಾಗಿದ್ದು, ಇದರಿಂದ ರೊಚ್ಚಿಗೆದ್ದು ನಿನ್ನೆ(ಬುಧವಾರ) ಅದೇ ನಿರ್ಮಾಣ ಹಂತದ ಕಟ್ಟಡದೊಳಗೆ ಮೌಲಾಲಿಯನ್ನು ಕೊಚ್ಚಿ ಕೊಂದಿದ್ದ. ವಿಷಯ ತಿಳಿದು ಸ್ಥಳಕ್ಕೆ ಗೋಕುಲ ರೋಡ್ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು. ಆದ್ರೆ, ಆರೋಪಿ ಸಹ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಕರ್ನಾಟಕ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ