AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Republic Day 2023: ಗಣರಾಜ್ಯೋತ್ಸವಕ್ಕೆ ಎರಡೇ ದಿನ -ಹೊಸ ನೀತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಹುಬ್ಬಳ್ಳಿ ಬೆಂಗೇರಿ ಖಾದಿ ಘಟಕಗಳಿಗೆ ಮೋದಿ ಸರ್ಕಾರ ನೆರವಾಗುವುದೇ?

Republic Day 2023: ಈ ಗಣರಾಜ್ಯೋತ್ಸವಕ್ಕೆ ತಿದ್ದುಪಡಿಯಾಗಿರುವ ಧ್ವಜ ನೀತಿಯನ್ನ ವಾಪಸ್ ಪಡೆಯಬೇಕಿದೆ. ಅಲ್ಲದೇ ವಾಪಸ್ ಪಡೆದು ರಾಷ್ಟ್ರಧ್ವಜದ ಗೌರವವನ್ನ ಹೆಚ್ಚಿಸುವ ಕೆಲಸಕ್ಕೆ ಪ್ರಧಾನಿ ನರೇಂದ್ರ ಮೋದಿ ಕೈಹಾಕಬೇಕಿದೆ ಎಂದು ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆ ಅಧ್ಯಕ್ಷ ಕೆ.ವಿ. ಪತ್ತಾರ ಆಗ್ರಹಿಸಿದ್ದಾರೆ.

Republic Day 2023: ಗಣರಾಜ್ಯೋತ್ಸವಕ್ಕೆ ಎರಡೇ ದಿನ -ಹೊಸ ನೀತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಹುಬ್ಬಳ್ಳಿ ಬೆಂಗೇರಿ ಖಾದಿ ಘಟಕಗಳಿಗೆ ಮೋದಿ ಸರ್ಕಾರ ನೆರವಾಗುವುದೇ?
ಹೊಸ ನೀತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಹುಬ್ಬಳ್ಳಿ ಬೆಂಗೇರಿ ಖಾದಿ ಧ್ವಜ ಘಟಕಗಳಿಗೆ ಮೋದಿ ಸರ್ಕಾರ ನೆರವಾಗುವುದೇ?
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 24, 2023 | 11:19 AM

ಹಳ್ಳಿಯಿಂದ ದಿಲ್ಲಿಯವರೆಗೆ ಬಾನಂಗಳದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವುದು ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗ ರಾಷ್ಟ್ರೀಯ ಧ್ವಜ. ಆದರೆ ಕೇಂದ್ರ ಸರ್ಕಾರದ ಹಾಗೂ ಕೇಂದ್ರ ಗೃಹ ಸಚಿವಾಲಯದ ಒಂದೇ ಒಂದು ನಿರ್ಧಾರ (Amendment to Flag Code) ಅಕ್ಷರಶಃ ಖಾದಿ ಗ್ರಾಮೋದ್ಯೋಗವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅಷ್ಟಕ್ಕೂ ಏನಿದು ನಿರ್ಧಾರ ಅಂತೀರಾ ಈ ಸ್ಟೋರಿ ನೋಡಿ.. ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಆಚರಿಸಲು ಧ್ವಜ ನೀತಿಯನ್ನು ತಿದ್ದುಪಡಿ ಮಾಡಿದ್ದ ಕೇಂದ್ರ ಗೃಹ ಇಲಾಖೆ. ಪಾಲಿಸ್ಟರ್ ಧ್ವಜಕ್ಕೆ ಅನುಮತಿ ನೀಡಿತ್ತು. ಈ ನಿಟ್ಟಿನಲ್ಲಿ ಖಾದಿ ಗ್ರಾಮೋದ್ಯೋಗ ಸಂಕಷ್ಟದ ಸುಳಿಯಲ್ಲಿ ಸಿಲುಕಿತು. ಈಗ ಆಜಾದಿ ಕಾ ಅಮೃತ ಮಹೋತ್ಸವ ಮುಗಿದಿದೆ. ತಿದ್ದುಪಡಿಯನ್ನ (National Flag Code) ವಾಪಸ್ ಪಡೆಯುತ್ತಾ ಕೇಂದ್ರ ಸರ್ಕಾರ ಎಂಬುವುದು ಖಾದಿ ಗ್ರಾಮೋದ್ಯೋಗದ ಪ್ರಶ್ನೆಯಾಗಿದೆ. ಹೌದು.. ಸ್ವಾತಂತ್ರ್ಯ ಪೂರ್ವ ಕಾಲದಿಂದ ಈ ವರೆಗೆ ಬರೀ ಖಾದಿ ಹಾಗೂ ರೇಷ್ಮೆ ಬಟ್ಟೆಯಿಂದ ರಾಷ್ಟ್ರಧ್ವಜ ತಯಾರಿಸಲಾಗುತ್ತಿತ್ತು. ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹರ ಘರ್​​ ತಿರಂಗಾ ಅಭಿಯಾನ ಮಾಡಿದ್ದ ಕೇಂದ್ರ ಸರ್ಕಾರ. ಈ ಅಭಿಯಾನ ಯಶಸ್ವಿ ಮಾಡಲು ‘ತಿರಂಗಾ’ ವನ್ನು ಪಾಲಿಸ್ಟರ್ ಬಟ್ಟೆಯಿಂದಲೂ ತಯಾರಿಸಲು ಅಸ್ತು ಎಂದಿತ್ತು. ತಿರಂಗಾ, ಪಾಲಿಸ್ಟರ್ ಬಟ್ಟೆ (Polyester) ಬಳಕೆಗೆ ಸಾಕಷ್ಟು ವಿರೋಧಿಗಳು ವ್ಯಕ್ತವಾಗಿದ್ದವು. ಅಲ್ಲದೆ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಕೂಡ ಹೊಸ ರಾಷ್ಟ್ರಧ್ವಜ ನೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಈಗ ಧ್ವಜ ನೀತಿ ಸಂಹಿತೆ ಹಿಂಪಡೆಯಲು ಸರ್ಕಾರ (Narendra Modi) ಮೀನಾಮೇಷ ಏಣಿಸುತ್ತಿದೆ.

ಇನ್ನು ಸಾಕಷ್ಟು ವಿರೋಧಗಳ ನಡುವೆಯೂ ತಿರಂಗಾವನ್ನು ಪಾಲಿಸ್ಟರ್ ಬಟ್ಟೆ ಬಳಕೆ, ಯಂತ್ರದಿಂದಲೂ ತಯಾರಿಸಲು ಕೇಂದ್ರ ಸರ್ಕಾರ ನಿಶಾನೆ ತೋರಿಸಿತ್ತು. ಈಗ ಅಮೃತ ಮಹೋತ್ಸವ ಮುಗಿದು ಆರು ತಿಂಗಳು ಕಳೆದಿದೆ. ಆರು ತಿಂಗಳು ಕಳೆದರೂ ರಾಷ್ಟ್ರಧ್ವಜ ನೀತಿ ಸಂಹಿತೆಯನ್ನ ಕೇಂದ್ರ ಸರ್ಕಾರ ವಾಪಸ್ ಪಡೆದಿಲ್ಲ. ನಾಳಿದ್ದೇ 74 ನೇ ಗಣರಾಜ್ಯೋತ್ಸವ. ಈ ಗಣರಾಜ್ಯೋತ್ಸವಕ್ಕೆ ತಿದ್ದುಪಡಿಯಾಗಿರುವ ಧ್ವಜ ನೀತಿಯನ್ನ ವಾಪಸ್ ಪಡೆಯಬೇಕಿದೆ. ಅಲ್ಲದೇ ವಾಪಸ್ ಪಡೆದು ರಾಷ್ಟ್ರಧ್ವಜದ ಗೌರವವನ್ನ ಹೆಚ್ಚಿಸುವ ಕೆಲಸಕ್ಕೆ ಪ್ರಧಾನಿ ನರೇಂದ್ರ ಮೋದಿ ಕೈಹಾಕಬೇಕಿದೆ ಎಂದು ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆ ಅಧ್ಯಕ್ಷ ಕೆ.ವಿ. ಪತ್ತಾರ ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಹುಬ್ಬಳ್ಳಿಯ ಬೆಂಗೇರಿಯ ಈ ಖಾದಿ ಕೇಂದ್ರ ರಾಷ್ಟ್ರಧ್ವಜ ತಯಾರಿಸುವ ರಾಷ್ಟ್ರದ ಏಕೈಕ ಅಧಿಕೃತ ಸಂಸ್ಥೆ. ಧ್ವಜಸಂಹಿತೆ ಅನುಸಾರವಾಗಿ ಅಗತ್ಯಕ್ಕೆ ತಕ್ಕಂತೆ ವಿವಿಧ ಅಳತೆಯ ತಿರಂಗಾ ಉತ್ಪಾದಿಸುತ್ತ ಬಂದಿದೆ. ಇದು ಕೈಮಗ್ಗ ನೇಯ್ಗೆಯಿಂದಲೇ ಧ್ವಜ ರೂಪಿಸುತ್ತಿದೆ. ಕೈಮಗ್ಗ, ಬಣ್ಣ ಹಾಕುವುದು, ಅಶೋಕ ಚಕ್ರ ಮುದ್ರಣ, ಹೊಲಿಗೆ, ಹಿಡಿಕೆ ಅಳವಡಿಕೆ ಇತ್ಯಾದಿ ಕೆಲಸ ಅವಲಂಬಿಸಿ ನೂರಾರು ಕುಟುಂಬಗಳಿವೆ. ಈ ನಿಟ್ಟಿನಲ್ಲಿ ಸರ್ಕಾರದ ಮಹತ್ವದ ನಿರ್ಧಾರವನ್ನು ಎದುರು ನೋಡುತ್ತಿವೆ.

ವರದಿ: ಶಿವಕುಮಾರ್​ ಪತ್ತಾರ್​, ಟಿವಿ9, ಹುಬ್ಬಳ್ಳಿ

Published On - 11:18 am, Tue, 24 January 23